Kerala ನರಬಲಿ ಪ್ರಕರಣ ಆರೋಪಿ ವಿಕೃತ ಕಾಮಿ; ಇನ್ನೂ 19 ಮಹಿಳೆಯರು ಮಿಸ್ಸಿಂಗ್‌

By Kannadaprabha NewsFirst Published Oct 13, 2022, 11:52 AM IST
Highlights

ಕೇರಳದ ನರ ಬಲಿ ಪ್ರಕರಣದ ಮತ್ತಷ್ಟು ಘೋರ ಅಂಶ ಬೆಳಕಿಗೆ ಬಂದಿದ್ದು, ಯೌವನ ಕಾಪಾಡಿಕೊಳ್ಳಲು’ ಮಹಿಳೆಯರನ್ನು ಹತ್ಯೆ ಮಾಡಿ ಮಾಂಸ ಸೇವನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಂತ್ರವಾದಿ’ ಮಾತು ನಂಬಿ ಸಂಪತ್ತು ವೃದ್ಧಿಗಾಗಿ ಮಹಿಳೆಯರ ಹತ್ಯೆ ಮಾಡಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. 

ಕೊಚ್ಚಿ: ‘ಮಂತ್ರವಾದಿ’ಯ ಮಾತು ನಂಬಿ ಕೇರಳದಲ್ಲಿ (Kerala) ನಡೆಸಲಾದ ಇಬ್ಬರು ಮಹಿಳೆಯರ ನರಬಲಿ (Human Sacrifice) ಪ್ರಕರಣದ ಮತ್ತಷ್ಟು ಘೋರ ಅಂಶಗಳು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮಂತ್ರವಾದಿ ಎನ್ನಲಾದ ವಿಕೃತ ಕಾಮಿ ರಶೀದ್‌ನ ಮಾತು ನಂಬಿದ ಭಗವಾಲ್‌ ಸಿಂಗ್‌ ಮತ್ತು ಆತನ ಪತ್ನಿ ಲೈಲಾ, ಮೊದಲಿಗೆ ಹಣದಾಸೆಗಾಗಿ ಇಬ್ಬರು ಮಹಿಳೆಯರನ್ನು ಹತ್ಯೆಗೈದ ಬಳಿಕ ಅವರನ್ನು 56 ತುಂಡುಗಳಾಗಿ ಕತ್ತರಿಸಿದ್ದರು. ನಂತರ ‘ಯೌವನ (Youth) ಕಾಪಾಡಿಕೊಳ್ಳುವ ಸಲುವಾಗಿ’, ಹತ್ಯೆಯಾದ ಮಹಿಳೆಯರ ದೇಹದ ತುಂಡುಗಳನ್ನು ಬೇಯಿಸಿ ತಿಂದಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ನರಬಲಿ ಬಳಿಕ ಆರೋಪಿಗಳ ಮನೆಯಲ್ಲೇ ಹೂಳಲಾದ ಅವಶೇಗಳನ್ನು ಹೊರತೆಗೆಯಲಾಗಿದ್ದು, ಅದರಿಂದ ಸಾಕಷ್ಟು ಮಾಹಿತಿ ಹೊರಬಿದ್ದಿದೆ. ಈ ನಡುವೆ ಮೂವರೂ ಆರೋಪಿಗಳನ್ನು ಬುಧವಾರ ಎರ್ನಾಕುಲಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ವೇಳೆ ಆರೋಪಿಗಳನ್ನು ಅಕ್ಟೋಬರ್‌ 26ರವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿದೆ.

ಇದನ್ನು ಓದಿ: Human Sacrifice In Kerala: ಸುಶಿಕ್ಷಿತ ಕೇರಳದ ದೇವಸ್ಥಾನದಲ್ಲಿ ಎರಡು ಮಹಿಳೆಯರ ಬಲಿ!

ರಾಕ್ಷಸಿ ಕೃತ್ಯ:
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ‘ನರಬಲಿ ನೀಡಿದರೆ ಸಂಪತ್ತು ವೃದ್ಧಿಸುತ್ತದೆ’ ಎಂದು ಮಂತ್ರವಾದಿ ಎನ್ನಲಾದ ರಶೀದ್‌, ದಂಪತಿಗಳಾದ ಭಗವಾಲ್‌ ಮತ್ತು ಲೈಲಾಳನ್ನು ನಂಬಿಸಿದ್ದ. ಅದರಂತೆ ಪದ್ಮಾ ಮತ್ತು ರೋಸ್ಲೀನ್‌ಳನ್ನು ತಾನೇ ಭಗವಾಲ್‌ ಮನೆಗೆ ಕರೆ ತಂದಿದ್ದ. ಹೀಗೆ ಕರೆ ತಂದ ಬಳಿಕ ಸಂತ್ರಸ್ತೆ ಪದ್ಮಾಳನ್ನು ಆರೋಪಿಗಳು ಮೊದಲಿಗೆ ಕತ್ತು ಹಿಸುಕಿ ಹತ್ಯೆಗೈದಿದ್ದರು. 

ಬಳಿಕ ಆಕೆಯ ದೇಹವನ್ನು ಶಫಿ 56 ತುಂಡುಗಳಾಗಿ ಕತ್ತರಿಸಿದ್ದ. ಹೀಗೆ ಕತ್ತರಿಸಿದ ಶವದ ಭಾಗಗಳನ್ನು ಬಕೆಟ್‌ನಲ್ಲಿ ಹಾಕಲಾಗಿತ್ತು. ಇನ್ನು ಮತ್ತೊಬ್ಬ ಸಂತ್ರಸ್ತೆ ರೋಸ್ಲಿನ್‌ಳ ದೇಹವನ್ನು ಲೈಲಾ ಕತ್ತರಿಸಿದ್ದಳು. ಜೊತೆಗೆ ಆಕೆಯ ಸ್ತನವನ್ನೂ ಕತ್ತರಿಸಲಾಗಿತ್ತು. ಈ ದೇಹದ ತುಂಡುಗಳನ್ನು ದಂಪತಿಗಳು ಬೇಯಿಸಿ ತಿಂದು ರಾಕ್ಷಸಿ ಮನಸ್ಥಿತಿ ಪ್ರದರ್ಶಿಸಿದ್ದರು.
 ‘ನರಮಾಂಸ ತಿಂದರೆ ಯೌವನ ಕಾಪಾಡಿಕೊಳ್ಳಬಹುದು’ ಎಂದು ರಶೀದ್‌ ನಂಬಿಸಿದ್ದ. ಹೀಗಾಗಿ ಈ ಕೃತ್ಯ ಎಸಗಿದ್ದರು’ ಎಂದಿದ್ದಾರೆ. ಅಲ್ಲದೆ, ‘ಇಬ್ಬರು ಸಂತ್ರಸ್ತೆಯರ ಪೈಕಿ ಒಬ್ಬಳಿಗೆ ಕತ್ತಿಯಿಂದ ಭೀಕರವಾಗಿ ಹಿಂಸೆ ಮಾಡಿದ್ದ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kerala Human Sacrifice Case: ಕೊಂದ ನಂತರ ಮಾನವ ಶವದ ಮಾಂಸ ಬೇಯಿಸಿ ತಿಂದ ಆರೋಪಿಗಳು

ರೋಸ್ಲೀನ್‌ಳನ್ನು ಕಳೆದ ಜೂನ್‌ ತಿಂಗಳಲ್ಲಿ ಹತ್ಯೆ ಮಾಡಿದ್ದರೆ, ಪದ್ಮಾಳನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಪದ್ಮಾ ನಾಪತ್ತೆಯಾದ ಬಗ್ಗೆ ದಾಖಲಾದ ದೂರಿನ ತನಿಖೆ ವೇಳೆ ಆಕೆಯನ್ನು ರಶೀದ್‌ ಕರೆದುಕೊಂಡು ಹೋಗಿದ್ದ ವಿಷಯವನ್ನು ಆಕೆಯ ಗೆಳತಿ ಬಹಿರಂಗಪಡಿಸಿದ್ದಳು. ಆ ಹಿನ್ನೆಲೆಯಲ್ಲಿ ಪದ್ಮಾಳ ಮೊಬೈಲ್‌ ಲೊಕೇಷನ್‌ ಕಡೆಯ ಬಾರಿಗೆ ಪತ್ತೆಯಾದ ಸ್ಥಳವನ್ನು ಆಧರಿಸಿ ಪೊಲೀಸರು ಪ್ರಕರಣ ಬಯಲಿಗೆಳೆದಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಮೂವರೂ ಆರೋಪಿಗಳು ಕಳೆದ ಜೂನ್‌ನಲ್ಲಿ ರೋಸ್ಲೀನ್‌ಳನ್ನೂ ನರಬಲಿ ಕೊಟ್ಟ ವಿಚಾರ ಬೆಳಕಿಗೆ ಬಂದಿತ್ತು. 

click me!