Bengaluru: ಜೈಲಿಂದ ಬಿಡುಗಡೆಯಾಗಿ ಮನೆ ಸೇರುವ ಮುನ್ನವೇ ರೌಡಿ ಶೀಟರ್‌ ಬರ್ಬರ ಹತ್ಯೆ!

By Suvarna NewsFirst Published Aug 5, 2023, 8:49 AM IST
Highlights

ಹೊಸದಾಗಿ ಮದುವೆಯಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೆಂಡತಿಯನ್ನು ನೋಡಲು ಮನೆಗೆ ತೆರಳುತ್ತಿದ್ದ ವೇಳೆ  ರೌಡಿ ಶೀಟರ್ ಸಿದ್ದಾಪುರ ಮಹೇಶನನ್ನು ಹೊಸೂರು ಜಂಕ್ಷನ್‌ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಂಗಳೂರು (ಆ.5): ಹಳೇ ದ್ವೇಷದ ಹಿನ್ನೆಲೆಯಲ್ಲಿ ಜೈಲಿನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ರೌಡಿಯೊಬ್ಬನನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ರೌಡಿ ಶೀಟರ್ ಸಿದ್ದಾಪುರ ಮಹೇಶ (45) ಕೊಲೆಯಾದವನು. ಎರಡು ತಿಂಗಳ ಹಿಂದೆ ಕೊಲೆ ಯತ್ನ ಪ್ರಕರಣ ಸಂಬಂಧ ಜೈಲು ಸೇರಿದ್ದ ಮಹೇಶ್‌ ಶುಕ್ರವಾರ ಜಾಮೀನು ಪಡೆದು ಬಿಡುಗಡೆಗೊಂಡು ಮನೆಗೆ ಮರಳುತ್ತಿದ್ದ. ಆ ವೇಳೆ ಹೊಸೂರು ಜಂಕ್ಷನ್‌ ಬಳಿ ಆತನನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ. ಮೃತ ರೌಡಿ ಮಹೇಶ್‌ಗೆ ಶತ್ರುಗಳ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಆತನ ಕೊಲೆಗೆ ನಿಖರ ಕಾರಣ ಸ್ಪಷ್ಟವಾಗಿಲ್ಲ. ಆದರೆ 2019ರಲ್ಲಿ ಜಯನಗರದ ಮದನ್‌ ಕೊಲೆಗೆ ಮಹೇಶ್‌ ಮೇಲೆ ಪ್ರತೀಕಾರ ತೀರಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.  

ಸಿದ್ದಾಪುರ ಮಹೇಶನ ಕೊಲೆ ಹಿಂದೆ ವಿಲ್ಸನ್ ಗಾರ್ಡನ್ ನಾಗನ ಕೈವಾಡ?:
ಸಿದ್ದಾಪುರ ಮಹೇಶನ ಕೊಲೆ ಹಿಂದೆ ವಿಲ್ಸನ್ ಗಾರ್ಡನ್ ನಾಗನ ಕೈವಾಡ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ರೌಡೀಶೀಟರ್ ನಾಗ ಹಾಗೂ ಡಬಲ್ ಮೀಟರ್ ಮೋಹನ ಶಾಂತಿನಗರ ಲಿಂಗನ ಕೊಲೆ ಮಾಡಿದ್ದರು. ಈ ಲಿಂಗನ ಕೊಲೆಗೆ ಮದನ ಫಂಡಿಗ್ ಮಾಡಿದ್ದ. ಹೀಗಾಗಿ ಗುರುವಿನ ಕೊಲೆಯ ರಿವೇಂಜ್ ಗೆ ಸಿದ್ದಾಪುರ ಮಹೇಶ ಅಂಡ್ ಟೀಂ ಮದನನ್ನ ಕೊಲೆ ಮಾಡಿತ್ತು.

ಹೀಗಾಗಿ ಸಿದ್ದಾಪುರ ಮಹೇಶನ ಮೇಲೆ ವಿಲ್ಸನ್ ಗಾರ್ಡನ್ ನಾಗನಿಗೆ ಕಣ್ಣಿತ್ತು. ವಿಲ್ಸನ್ ಗಾರ್ಡನ್ ನಾಗನನ್ನ ಮುಗಿಸುವುದಾಗಿ ಕೊಲೆಯಾದ  ಸಿದ್ದಾಪುರ ಮಹೇಶ ಟೀಂ ಕಟ್ಟಿದ್ದ. ಇದು ನಾಗನಿಗೆ ತುಂಬಾ   ತಲೆನೋವಾಗಿತ್ತು. ಹೀಗಾಗಿ ಜೈಲಿನಿಂದ ರೀಲಿಸ್ ಆಗಿ ಮನೆಗೆ ತೆರಳುತ್ತಿದ್ದ ಸಿದ್ದಾಪುರ ಮಹೇಶನನ್ನು ಇನ್ನೊವಾ ಕಾರಿನಲ್ಲಿ ಬಂದಿದ್ದ  ವಿಲ್ಸನ್ ಗಾರ್ಡನ್ ನಾಗನ ಸಹಚರರು ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಜೈಲಿನಿಂದ ಬಿಡುಗಡೆಯಾಗ್ತಿದ್ದಂತೆ ರೌಡಿಶೀಟರ್‌ ಮರ್ಡರ್‌: ಸಿದ್ದಾಪುರ ಮಹೇಶ್‌ನನ್ನು ಕೊಚ್ಚಿ ಕೊಂದ ಹಂತಕರು

ಎಫ್ ಐ ಆರ್ ದಾಖಲು: ರೌಡಿಶೀಟರ್ ಸಿದ್ಧಾಪುರ ಮಹೇಶ್ ಹತ್ಯೆ ವಿಚಾರಕ್ಕೆ ಸಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಐಪಿಸಿ 302,120b,143,147,148, 343,327,149 ಅಡಿಯಲ್ಲಿ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ, ಸಿದ್ಧಾಪುರ ಸುನೀಲ್ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

ಜೈಲಿನಿಂದ ಬಂದ ಮಹೇಶ್ ನನ್ನ ಮುಗಿಸಲು ನಡೆದಿತ್ತು ಬಿಗ್ ಪ್ಲಾನ್:
ರೌಡಿಶೀಟರ್ ಸಿದ್ಧಾಪುರ ಮಹೇಶ್ ನನ್ನು ಕೊಲ್ಲಲು  ಹಂತಕ ಪಡೆ ಮೂರು ಹಂತಗಳಲ್ಲಿ ಕಾದು ಕುಳಿತಿತ್ತು. ಪರಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಬೇಗೂರು ಬಳಿ ಸಿಗ್ನಲ್ ಗಳಲ್ಲೇ  ಟೀಂ ಕಾದು ನಿಂತಿತ್ತು. ಮಾತ್ರವಲ್ಲ ಇದಕ್ಕಾಗಿ 5 ತಂಡ ರಚಿಸಿ 45 ಕ್ಕೂ ಹೆಚ್ಚು ರಸ್ತೆಯಲ್ಲಿ ಹಂತಕರ ಪಡೆ ಕಾದು ಕುಳಿತಿತ್ತು. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಸಿದ್ಧಾಪುರದ ಮಾರ್ಗದವರೆಗೂ ತಂಡಗಳ‌ ನಿಯೋಜನೆ ಮಾಡಿತ್ತು. ಒಂದು ಕಡೆ ಮಿಸ್ ಆದ್ರೆ ಮತ್ತೊಂದು ಕಡೆ ಅಟ್ಯಾಕ್ ಮಾಡಲು ತಂಡಗಳನ್ನು ರಚನೆ ಮಾಡಲಾಗಿತ್ತು. ರಿಲೀಸ್ ಆದ ದಿನವೇ ಮುಗಿಸಲು ತೀರ್ಮಾನಿಸಿದ್ದ ಹಂತಕರ ತಂಡ. ಮಹೇಶ್ ನ ಕಾರ್ ಮೇಲೆ ನಿಗಾ ಇಡಲು ಹೊಸ ಹುಡುಗರ ತಂಡ ರಚಿಸಿ ಹೆಲ್ಮೆಟ್ ಧರಿಸಿದ್ದ  ಮೂರು ಬೈಕ್ ಗಳನ್ನು ನಿಯೋಜನೆ ಮಾಡಿತ್ತು.

ಮದುವೆಯಾಗಿ 1 ತಿಂಗಳು: ರೌಡಿಶೀಟರ್ ಸಿದ್ದಾಪುರ ಮಹೇಶ ಒಂದು ತಿಂಗಳ ಹಿಂದೆ ಮದುವೆಯಾಗಿದ್ದ. ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಕಳೆದ ತಿಂಗಳು ಮೊದಲನೇ ವಾರದಲ್ಲಿ 1 ವಾರ ಜೈಲಿನಿಂದ ಹೊರ ಬದಿದ್ದ ಸಿದ್ದಾಪುರ ಮಹೇಶ ಪ್ರೀತಿಸಿದ ಹುಡುಗಿಯನ್ನ ಮದುವೆಯಾಗುವ ಸಲುವಾಗಿ ಹೊರ ಬಂದಿದ್ದ. ಮದುವೆ ನಂತರ ಮತ್ತೆ 9 ನೇ ತಾರಿಖು ಜೈಲಿಗೆ ವಾಪಸ್ ಹೋಗಿದ್ದ. ಇದೇ ವಿಲ್ಸನ್ ಗಾರ್ಡನ್ ನಾಗನ ಭಯದಿಂದ ಮತ್ತೆ ಜೈಲು ಸೇರಿದ್ದ. ಹೆಂಡತಿಯನ್ನ ನೋಡುವ ಸಲುವಾಗಿ ಹೊರ ಬಂದಿದ್ದ. ಈ ವೇಳೆ  ವಿಲ್ಸನ್ ಗಾರ್ಡನ್ ನಾಗನ ಸಹಚರರಿಂದ ಅಟ್ಯಾಕ್ ನಡೆದಿದೆ.

Bengaluru: ಕ್ರಶ್ ಹುಟ್ಟಿದ ದಿನಾಂಕ ಹೇಳದ್ದಕ್ಕೆ ಸೀನಿಯರ್ ಎಳೆದೊಯ್ದು ಹಲ್ಲೆ

ಪಾತಕಲೋಕದಲ್ಲಿ ಮಹೇಶ್‌ ಹಾವಳಿ: ಹಲವು ವರ್ಷಗಳಿಂದ ಪಾತಕಲೋಕದಲ್ಲಿ ಮಹೇಶ್‌ ಸಕ್ರಿಯವಾಗಿದ್ದು, ಆತನ ಮೇಲೆ ತಲಘಟ್ಟಪುರ, ಸಿದ್ದಾಪುರ, ಜಯನಗರ, ವಿಲ್ಸನ್‌ ಗಾರ್ಡನ್‌ ಹಾಗೂ ಜೆ.ಪಿ.ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಹಾಗೂ ಜೀವ ಬೆದರಿಕೆ ಸೇರಿ ಇನ್ನಿತರೆ ಪ್ರಕರಣಗಳು ದಾಖಲಾಗಿವೆ. ಈ ಹಿನ್ನಲೆಯಲ್ಲಿ ಸಿದ್ದಾಪುರ ಠಾಣೆಯಲ್ಲಿ ಆತನ ಮೇಲೆ ರೌಡಿಪಟ್ಟಿ ತೆರೆಯಲಾಗಿತ್ತು. ಮೊದಲು ವಿಲ್ಸನ್‌ ಗಾರ್ಡನ್‌ನಲ್ಲಿ ನೆಲೆಸಿದ್ದ ಮಹೇಶ್‌, ಶತ್ರುಗಳು ಹೆಚ್ಚಾದ ಬಳಿಕ ತನ್ನ ಕುಟುಂಬದ ಜತೆ ಆನೇಕಲ್‌ನಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ರಿಯಲ್‌ ಎಸ್ಟೇಟ್‌ ಏಜೆಂಟ್‌ ಜಯನಗರದ ಮದನ್‌ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಮಹೇಶ್‌, ಬಳಿಕ ಜಾಮೀನು ಪಡೆದು ಹೊರಬಂದ ಮತ್ತೆ ಪಾತಕಲೋಕದಲ್ಲಿ ಸಕ್ರಿಯವಾಗಿದ್ದ. ಹೀಗಿರುವಾಗ ಹಳೇ ಕೊಲೆ ಯತ್ನ ಪ್ರಕರಣದ ವಿಚಾರಣೆಗೆ ಗೈರಾಗಿದ್ದ ಕಾರಣಕ್ಕೆ ಮಹೇಶ್‌ ಮೇಲೆ ನ್ಯಾಯಾಲಯವು ವಾರೆಂಟ್‌ ಜಾರಿಗೊಳಿಸಿತ್ತು. ಈ ವಾರೆಂಟ್‌ ಹಿನ್ನಲೆಯಲ್ಲಿ ಕಳೆದ ಜೂನ್‌ನಲ್ಲಿ ಆತನನ್ನು ಬಂಧಿಸಿ ಜೈಲಿಗೆ ತಲಘಟ್ಟಪುರ ಠಾಣೆ ಪೊಲೀಸರು ಅಟ್ಟಿದ್ದರು. ಅಂತೆಯೇ ಎರಡು ತಿಂಗಳಿಂದ ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿನಲ್ಲಿದ್ದ ಮಹೇಶ್‌, ಜಾಮೀನು ಪಡೆದು ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಜೈಲಿನಿಂದ ಹೊರಬಂದಿದ್ದಾನೆ. ಅಲ್ಲಿಂದ ಆನೇಕಲ್‌ನಲ್ಲಿರುವ ತನ್ನ ಮನೆಗೆ ಕಾರಿನಲ್ಲಿ ತೆರಳುವಾಗ ಆತನನ್ನು ಹೊಸೂರು ಜಂಕ್ಷನ್‌ ಬಳಿ ಅಡ್ಡಗಟ್ಟಿ ದುಷ್ಕರ್ಮಿಗಳು ಕೊಂದಿದ್ದಾರೆ.

click me!