Haveri Crime: ಸಿಕ್ಕ ಸಿಕ್ಕ ಕಡೆ ಕುರಿ ಕಳ್ಳತನ: ಅಡ್ಡ ಬಂದವರ ಪ್ರಾಣ ತೆಗೆಯುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

By Girish GoudarFirst Published May 14, 2022, 9:00 AM IST
Highlights

*   ಹಾವೇರಿ ಪೊಲೀಸರ ಸಾಧನೆಗೆ ಜನರ ಶಹಬ್ಬಾಸ್ ಗಿರಿ
*  ರಾತ್ರಿ ವೇಳೆಯೇ ಕಾರ್ಯಾಚರಣೆ
*  ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡ ರಚನೆ 

ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ 

ಹಾವೇರಿ(ಮೇ.14):  ಹಾವೇರಿ(Haveri) ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗಂಗಾಪುರದಲ್ಲಿ ಕುರಿ ಶೆಡ್ ಮಾಲೀಕನನ್ನು ಹತ್ಯೆ ಮಾಡಿ, 35 ಆಡುಗಳನ್ನು ಕಳ್ಳತನ(Theft) ಮಾಡಿದ ಪ್ರಕರಣ ಸೇರಿದಂತೆ ಒಟ್ಟು 12 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ. 

ವಿಜಯನಗರ(Vijayanagara) ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಡೊಂಬ್ರಹಳ್ಳಿಯ ದ್ಯಾಮಪ್ಪ ಲಮಾಣಿ, ಹರಪನಹಳ್ಳಿಯ ಹನುಮಂತಪ್ಪ ಕಾಶಪ್ಪನವರ, ಮಂಜುನಾಥ ಹನುಮಂತಪ್ಪ, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಉಪೇಂದ್ರ ಯಲ್ಲಪ್ಪ ಮೋಡಿಕಾರ, ಬ್ಯಾಡಗಿ ತಾಲೂಕಿನ ಕುಂಚಿಕೊರವರ ಗ್ರಾಮದವರಾದ ಮಂಜುನಾಥ ಕುಂಚಿಕೊರವರ, ನಾಗರಾಜ ಕುಂಚಿಕೊರವರ ಹಾಗೂ ಯಲ್ಲಪ್ಪ ಎಂಬ ಏಳು ಆರೋಪಿಗಳನ್ನು(Accused) ಬಂಧಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

Bengaluru Drug Bust: 500 ನೋಟು, ಸಿಗರೆಟ್‌ ಪ್ಯಾಕ್‌ನಲ್ಲಿ ಮಾದಕ ವಸ್ತು ಅಡಗಿಸಿಟ್ಟು ಮಾರಾಟ..!

ಗಂಗಾಪುರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ(Murder Case) ಸಂಬಂಧಿಸಿದಂತೆ ಏಳು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರ ಬಂಧಿಸಲು(Arrest) ಬಲೆ ಬೀಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಜೀಪ್‌, ಕಬ್ಬಿಣದ ರಾಡು, ಕಟರ್‌, ಹಗ್ಗ, ಬಿಯರ್‌ ಬಾಟಲಿಗಳು, ಕಾರದ ಪುಡಿ ಹಾಗೂ 6400 ನಗದನ್ನು ಜಪ್ತಿ ಮಾಡಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು. 

ಜಿಲ್ಲೆಯಲ್ಲಿ ಕುರಿ, ಆಡು, ಟಗರು ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪೊಲೀಸ್‌(Police) ತಂಡಗಳು ಗಸ್ತು ತಿರುಗುವ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದರು.

‘ರಾತ್ರಿ ಗಸ್ತು’ ಅನ್ನು ಚುರುಕುಗೊಳಿಸಿದ ಪರಿಣಾಮ ರಟ್ಟೀಹಳ್ಳಿ ತಾಲೂಕಿನಲ್ಲಿ ಕೃಷ್ಣಮೃಗ ಬೇಟೆಯಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು. ಆಡು ಮತ್ತು ಕುರಿ ಕಳ್ಳರನ್ನು ಹಿಡಿಯಲು ಕಾರ್ಯಾಚರಣೆ ನಡೆಸಿ, ಯಶಸ್ವಿಯಾದ ರಾಣೆಬೆನ್ನೂರು ಗ್ರಾಮೀಣ ಪೊಲೀಸ್‌ ಠಾಣೆ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. 

ಗರ್ಭಿಣಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಅತ್ಯಾಚಾರ!

ಪತ್ರಿಕಾಗೋಷ್ಠಿಯಲ್ಲಿ ರಾಣೆಬೆನ್ನೂರು ಡಿವೈಎಸ್ಪಿ ಸುರೇಶ್‌, ಡಿವೈಎಸ್ಪಿ (ಡಿಸಿಆರ್‌ಬಿ) ಎಂ.ಎಸ್‌.ಪಾಟೀಲ್‌, ಕುಮಾರಪಟ್ಟಣ ಇನ್‌ಸ್ಪೆಕ್ಟರ್‌ ಭಾಗ್ಯವತಿ ಬಂಕ್ತಿ, ರಾಣೆಬೆನ್ನೂರು ನಗರ ಠಾಣೆ ಇನ್‌ಸ್ಪೆಕ್ಟರ್‌ ಎಂ.ಐ. ಗೌಡಪ್ಪ ಗೌಡ, ಇನ್‌ಸ್ಪೆಕ್ಟರ್‌ ಮೋತಿಲಾಲ್‌ ಪವಾರ್‌ ಹಾಗೂ ಸಿಬ್ಬಂದಿ ಇದ್ದರು.

ರಾತ್ರಿ ವೇಳೆ ಕಾರ್ಯಾಚರಣೆ

ಈ ಎಲ್ಲ ಆರೋಪಿಗಳು ರೂಢಿಗತ ಅಪರಾಧಿಗಳಾಗಿದ್ದು, ಮದ್ಯ(Alcohol) ಸೇವನೆ ಮಾಡಿ ಬೊಲೆರೊ ವಾಹನದಲ್ಲಿ ಮಧ್ಯರಾತ್ರಿಯಿಂದ ಬೆಳಗಿನ ಜಾವದ ತನಕ ಕಾರ್ಯಾಚರಣೆ ನಡೆಸುತ್ತಿದ್ದರು. ಕುರಿ ಕಳ್ಳತನದ ಜತೆಗೆ ದಾರಿಹೋಕರನ್ನು ತಡೆದು ಕಳ್ಳತನ ಮಾಡುತ್ತಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇವರು ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು, ಬಳ್ಳಾರಿ, ಬೆಳಗಾವಿ ಸೇರಿದಂತೆ ರಾಜ್ಯದಾದ್ಯಂತ ಸಂಚಾರ ಮಾಡಿದ್ದಾರೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.
 

click me!