ಡೆಡ್ಲೀ ವೈರಸ್‌ ವಿರುದ್ಧ ಹೋರಾಡಿ ಗೆದ್ದ ಪುಟ್ಟ ರಾಜ್ಯದ ಕಥೆ ಇದು..!

divya perla   | Asianet News
Published : Mar 30, 2020, 02:28 PM ISTUpdated : Mar 31, 2020, 10:10 AM IST
ಡೆಡ್ಲೀ ವೈರಸ್‌ ವಿರುದ್ಧ ಹೋರಾಡಿ ಗೆದ್ದ ಪುಟ್ಟ ರಾಜ್ಯದ ಕಥೆ ಇದು..!

ಸಾರಾಂಶ

ಔಷಧಿಯೇ ಕಂಡು ಹಿಡಿಯದ ರೋಗವೊಂದು ಹುಟ್ಟಿಕೊಂಡಾಗ ಪುಟ್ಟ ರಾಜ್ಯವೊಂದು ಅದನ್ನು ಹೇಗೆ ಎದುರಿಸುತ್ತದೆ, ಜನರನ್ನು ಹೇಗೆ ಸಂಭಾಳಿಸುತ್ತಾರೆ..? ವೈರಸ್‌ನ ಹುಟ್ಟಿನ ಬಗ್ಗೆಯೇ ತಲೆಬುಡ ಗೊತ್ತಿಲ್ಲದೆ, ಅದರ ಔಷಧಿ ಹೇಗೆ ಕಂಡು ಹಿಡಿಯುತ್ತಾರೆ..? ಇಷ್ಟೆಲ್ಲ ಗೊಂದಲಗಳ ನಡುವೆಯೂ ವೇಗವಾಗಿ ಹರಡುವ ರೋಗವನ್ನು ತಡೆಯುವುದು ಹೇಗೆ..? ಕಂಡು ಕೇಳರಿಯದ ರೋಗವನ್ನು ಪುಟ್ಟ ರಾಜ್ಯವೊಂದು ದಿಟ್ಟತನದಿಂದ ಎದುರಿಸಿ ಜಯಿಸುವುದೇ ಈ ಚಿತ್ರದ ಕಥಾ ಹಂದರ.  

-ದಿವ್ಯಾ ಪೆರ್ಲ

ಕೊರೋನಾ ವೈರಸ್‌ ಭೀತಿ ಎಲ್ಲೆಡೆ ಹರಡುತ್ತಿರುವಾಗಲೇ ತಮ್ಮ ಪದೇ ಪದೇ ಮೆಸೇಜ್ ಮಾಡಿ 'ವೈರಸ್‌' ಮೂವಿ ನೋಡು ಎಂದು ಹೇಳುತ್ತಲೇ ಇದ್ದ. ಒಂದು ವಾರ ಬಿಟ್ಟು ವೈರಸ್ ಎಂಬ ಮಲಯಾಳಂ ಸಿನಿಮಾ ನೋಡಿದೆ.

ಔಷಧಿಯೇ ಕಂಡು ಹಿಡಿಯದ ರೋಗವೊಂದು ಹುಟ್ಟಿಕೊಂಡಾಗ ಪುಟ್ಟ ರಾಜ್ಯವೊಂದು ಅದನ್ನು ಹೇಗೆ ಎದುರಿಸುತ್ತದೆ, ಜನರನ್ನು ಹೇಗೆ ಸಂಭಾಳಿಸುತ್ತಾರೆ..? ವೈರಸ್‌ನ ಹುಟ್ಟಿನ ಬಗ್ಗೆಯೇ ತಲೆಬುಡ ಗೊತ್ತಿಲ್ಲದೆ, ಅದರ ಔಷಧಿ ಹೇಗೆ ಕಂಡು ಹಿಡಿಯುತ್ತಾರೆ..? ಇಷ್ಟೆಲ್ಲ ಗೊಂದಲಗಳ ನಡುವೆಯೂ ವೇಗವಾಗಿ ಹರಡುವ ರೋಗವನ್ನು ತಡೆಯುವುದು ಹೇಗೆ..? ಜನರಿಗೆ ತಿಳುವಳಿಕೆ ಹೇಳುವುದು ಹೇಗೆ..? ವೈದ್ಯರನ್ನೂ, ದಾದಿಯರನ್ನೂ ಕರ್ತವ್ಯಕ್ಕೆ ಸಜ್ಜೊಗೊಳಿಸುವುದು, ನಿತ್ಯ ಬರುವ ರೋಗಿಗಳನ್ನೂ ಕಡೆಗಣಿಸುವಂತಿಲ್ಲ. ಇವೆಲ್ಲವನ್ನೂ ಸಂಭಾಳಿಸಿಕೊಂಡು ಡೆಡ್ಲೀ ವೈರಸ್‌ನ್ನು ದಿಟ್ಟತನದಿಂದ ಎದುರಿಸಿ ಜಯಿಸುವುದೇ ಈ ಚಿತ್ರದ ಕಥಾ ಹಂದರ.

ಲಾಕ್‌ಡೌನ್: ಹಿಂದೂ ಸಹೋದರನ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಬಾಂಧವರು!

ಎಲ್ಲರಿಗೂ ಗೊತ್ತೇ ಇರುವಂತೆ ನಿಫಾ ವೈರಸ್ ದೇವರ ಸ್ವಂತ ನಾಡು ಕೇರಳದಲ್ಲಿ ರೌದ್ರ ತಾಂಡವ ಆಡಿತ್ತು. ಆದರೆ ಆ ವೈರಸ್‌ ಕೇರಳದಲ್ಲಿ ಕಾಣಿಸಿಕೊಳ್ಳವ ಮೊದಲೇ ಆ ಬಗ್ಗೆ ಹಲವು ಉಲ್ಲೇಖವಿತ್ತು. ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಾಗ ಅಲ್ಲಿನ ಸ್ಥಿತಿ ಹೇಗಿತ್ತು..? ಏನಾಗಿತ್ತು..? ಅಧಿಕಾರಿಗಳು ಏನು ಮಾಡಿದ್ರು..? ಇಂತಹ ನಿಜಘಟನೆಗಳನ್ನು ಆಧರಿಸಿಯೇ 'ವೈರಸ್' ಸಿನಿಮಾ ಮಾಡಲಾಗಿದೆ. ಹಾಗಾಗಿಯೇ ಈ ಸಿನಿಮಾದಲ್ಲಿ ಕಾಮಿಡಿಗೋ, ರೊಮ್ಯಾನ್ಸ್‌ಗೋ, ಕ್ಯೂಟ್‌ ಪ್ರಣಯ ಕಥೆಗೋ, ಮತ್ತೆ ಮತ್ತೆ ಗುನುಗುವಂತೆ ಮಾಡುವ ಹಾಡುಗಳಿಗೋ ಜಾಗವಿಲ್ಲ. ನಿರ್ದಿಷ್ಟ ಕಮರ್ಷಿಯಲ್ ಸಿನಿಮಾದ ಅವಧಿಯಲ್ಲೇ ರಾಜ್ಯವೊಂದು ಕಂಡು ಕೇಳರಿಯದ ವೈರಸ್ ಎದುರಿಸಿದ ಬಗೆಯನ್ನು ಸ್ವಷ್ಟವಾಗಿ ಮತ್ತು ನೇರವಾಗಿ ವಿವರಿಸಿದ ನಿರ್ದೇಶಕ ಆಶಿಕ್ ಅಬು ಅವರಿಗೆ ಹ್ಯಾಟ್ಸ್ಆಫ್ ಹೇಳಲೇಬೇಕು.

ಯುವಕರ ತಂಡವೊಂದು ಆಟದಲ್ಲಿ ತಲ್ಲೀನರಾಗಿರುವ ಕ್ರೀಡಾ ಮೈದಾನದಿಂದ ಆರಂಭವಾಗುವ ಸಿನಿಮಾ ಸಣ್ಣ ಇಂಟ್ರೊಡಕ್ಷನ್ ಕೊಟ್ಟು ನೇರವಾಗಿ ಮೆಡಿಕಲ್ ಕಾಲೇಜು ಆವರಣಕ್ಕೆ ನಮ್ಮನ್ನು ತಲುಪಿಸುತ್ತದೆ. ನಂತರ ನಡೆಯುವ ಇಡೀ ಸಿನಿಮಾ ಈ ಮೆಡಿಕಲ್ ಕಾಲೇಜು ಮತ್ತು ಅದರ ಸುತ್ತಮುತ್ತಲೇ ಚಿತ್ರಿಸಲ್ಪಟ್ಟಿದೆ. ಜನ ಸಾಮಾನ್ಯರು ಬೆಳ್ಳಂಬೆಳಗ್ಗೆ ಎದ್ದು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ಕಾದು ನಿಲ್ಲುವುದನ್ನು ತೋರಿಸಿ, ವೈದ್ಯಕೀಯ ಕಾಲೇಜು ಎಷ್ಟು ಬ್ಯುಸಿಯಾಗಿರುತ್ತದೆ ಎಂದು ತೋರಿಸಲಾಗುತ್ತದೆ.

ಕೊರೋನಾ ಪೀಡಿತರ ಸಹಾಯಕ್ಕೆ ತಮ್ಮ ಪಿಗ್ಗಿ ಹಣವನ್ನು ನೀಡಿದ ಮಕ್ಕಳು!

ಕಾಲಿಡುವುದಕ್ಕೂ ಜಾಗವಿಲ್ಲದ ಆ ಆಸ್ಪತ್ರೆಯಲ್ಲಿ ಸಾವಿರ ರೋಗಿಗಳು, ನೂರಾರು ರೋಗಗಳು. ವಿಪರೀತ ಜ್ವರವಿರುವ ಯುವಕನೊಬ್ಬನನ್ನು ಅಲ್ಲಿಗೆ ಕರೆತರಲಾಗುತ್ತದೆ. ಉಸಿರಾಡಲೂ ಆಗದೆ, ವಿಪರೀತ ಕೆಮ್ಮಿನಿಂದ ಬಳಲುವ ಆತನನ್ನು ಸಾಮಾನ್ಯ ಜ್ವರದ ವ್ಯಕ್ತಿಯೆಂದೇ ಪರಿಗಣಿಸಲಾಗುತ್ತದೆ. ನಂತರದಲ್ಲಿ ಒಬ್ಬ ಅಖಿಲಾ ಎಂಬ ನರ್ಸ್ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆಕೆ ಸ್ವತಃ ನರ್ಸ್ ಆಗಿರುವುದರಿಂದಲೇ ತನಗೆ ಡೆಂಘೀ ಇಲ್ಲ, ರಕ್ತ ಪರೀಕ್ಷೆ ಮಾಡಿ ಆಗಿದೆ. ಇದು ಬೇರೇನೋ ಎಂದು ತನ್ನ ವಿಷಮ ಆರೋಗ್ಯ ಸ್ಥಿತಿಯಲ್ಲೂ ವೈದ್ಯರಿಗೆ ವಿವರಿಸಲು ಪ್ರಯತ್ನಿಸುತ್ತಾಳೆ.

ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿದ ಆಕೆಗೆ ಇದ್ಯಾವುದೋ ಹೊಸ ರೋಗ ಎಂಬಷ್ಟು ಅರಿವು ಬಂದಿರುತ್ತದೆ. ಆ ಬಗ್ಗೆ ಆಕೆ ಇನ್ನಷ್ಟು ತಿಳಿಯುವ ಮೊದಲೇ ಆಕೆಯನ್ನು ಆ ಅರಿಯದ ರೋಗ ಆವರಿಸಿಯಾಗಿರುತ್ತದೆ.  ನಂತರ ಒಂದೇ ಮನೆಯ ಮೂವರಿಗೆ ರೋಗ ಬಾಧಿಸಿದಾಗ ಅಲ್ಲಿನ ವೈದ್ಯರಿಗೆ ಈ ಬಗ್ಗೆ ಸಂದೇಹ ವ್ಯಕ್ತವಾಗುತ್ತದೆ. ರೋಗಿಯ ರಕ್ತ, ಯೂರಿನ್‌ಗಳನ್ನು ಟೆಸ್ಟ್‌ಗಾಗಿ ಮಣಿಪಾಲಕ್ಕೆ ಕಳುಹಿಸಲಾಗುತ್ತದೆ. ಪರೀಕ್ಷೆಯ ನಂತರ ಇದು ನಿಫಾ ವೈರಸ್ ಎಂಬುದು ತಿಳಿದು ಬರುತ್ತದೆ.

ಕೊರೋನಾ ಯುದ್ಧಕ್ಕೆ ಅಕ್ಷಯ್ 25 ಕೋಟಿ ರೂ, ಮನ ಗೆದ್ದಿತು ಪತ್ನಿಗೆ ನೀಡಿದ ಉತ್ತರ

ಆರೋಗ್ಯ ಅಧಿಕಾರಿಗಳೂ, ಜಿಲ್ಲಾಧಿಕಾರಿಯೂ, ಪ್ರಮುಖ ಅಧಿಕಾರಿಗಳೂ ತಕ್ಷಣ ಸಭೆ ಸೇರುತ್ತಾರೆ. ಚರ್ಚಿಸುತ್ತಾರೆ. ರೋಗ, ಅದು ಹರಡುವ ಸಾಧ್ಯತೆ, ಹುಟ್ಟಿದ್ದೆಲ್ಲಿ? ಔಷಧಿ ಏನು ಎಂಬ ಸಾಲು ಸಾಲು ಸವಾಲುಗಳನ್ನು ಅವರು ಎದುರಿಸುತ್ತಾರೆ. ಕಣ್ಣಿಗೆ ಕಾಣಿಸದ ವೈರಸ್‌ ಜಾಡು ಹಿಡಿದು ಹೊರಡುತ್ತಾರೆ. ಅದರ ಜೊತೆಗೇ ವೈರಸ್ ಇನ್ನಷ್ಟು ಜನರಿಗೆ ಬಾಧಿಸದಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿಯೂ ಇರುತ್ತದೆ. ಈ ನಡುವೆಯೇ ಕೇಂದ್ರದ ಪ್ರತಿನಿಧಿಗಳೂ ರಾಜ್ಯದ ನೆರವಿಗೆ ಧಾವಿಸುತ್ತಾರೆ.

ವೈರಸ್ ಹೇಗೆ ಹುಟ್ಟಿತ್ತು, ಮೂಲವೇನು ಎಂದು ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರುವಾಗ, ಅಲ್ಲಿನ ಅಧಿಕಾರಿಗಳು ಒಗ್ಗಟ್ಟಾಗಿ ನಿಲ್ಲುವ ಪರಿ ಮಾದರಿಯಾಗಿ ಕಾಣಿಸುತ್ತದೆ. ವೈರಸ್‌ ಹರಡುವುದಕ್ಕೆ ಸರಿಯಾದ ಕಾರಣ ಸಿಗದಿದ್ದಾಗ, ಇದೊಂದು ಪೂರ್ವ ನಿಯೋಜಿತ ಕಾರ್ಯ, ಉದ್ದೇಶಪೂರ್ವಕವಾಗಿ ವೈರಸ್ ಹರಡಲಾಗಿದೆ. ನೀವು ವೈರಸ್ ಮೂಲ ಹುಡುಕದಿದ್ದರೆ, ಕೇಂದ್ರ ಸರ್ಕಾರ, ಭದ್ರತಾ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತದೆ ಎಂಬ ಒತ್ತಡವೂ ಅಧಿಕಾರಿಗಳ ಮೇಲೆ ಬೀಳುತ್ತದೆ.

ಮಧ್ಯಮ ವರ್ಗದ ಕುಟುಂಬ ಮೇಲೆ ಹೀಗೆ ಸೀದಾ ಸೀದಾ ಆರೋಪ ಹೊರಿಸುವುದನ್ನು ಅಲ್ಲಿನ ಸ್ಥಳೀಯ ಮುಖಂಡರು ಒಪ್ಪುವುದಿಲ್ಲ. ಈ ನಡುವೆಯೇ ಸೋಂಕಿತರೊಬ್ಬರು ಮೃತಪಟ್ಟಾಗ ಅವರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿಯೂ ಧಾರ್ಮಿಕ ಅಡೆತಡೆಗಳುಂಟಾಗಿತ್ತವೆ. ವ್ಯಕ್ತಿಯ ಮೃತದೇಹವನ್ನು ದಹನ ಮಾಡುವ ಅಗತ್ಯವಿದ್ದರೂ, ಅದನ್ನು ಮೃತ ವ್ಯಕ್ತಿಯ ಕುಟುಂಬ ವಿರೋಧಿಸುತ್ತದೆ. ಕೊನೆಗೆ ಅಧಿಕಾರಿಗಳು ಡೀಪ್ ಬರಿಯಲ್ ಎಂಬ ಕ್ರಮವನ್ನು ಅನುಸರಿಸಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಸೋಂಕಿತರು ಮೃತಪಟ್ಟಾಗ ಅವರ ಅಂತ್ಯಕ್ರಿಯೆ ಮಾಡಲೂ ಕಷ್ಟಪಡುತ್ತಾರೆ. ಎಲ್ಲೇ ಹೋದರೂ ಗ್ರಾಮಸ್ಥರೂ, ಓಹ್ ನಿಫಾ ಅಲ್ವಾ..? ನಮ್ಮೂರಲ್ಲಿ ಬೇಡ ಎಂದು ರಸ್ತೆ ತಡೆಯುತ್ತಿರುತ್ತಾರೆ.

ಜನರ ಭಾವನೆಗಳೂ, ಆರೋಗ್ಯ ಸುರಕ್ಷತೆಯೂ, ಕೇಂದ್ರದ ಒತ್ತಡದ ನಡುವೆ ವೈರಸ್ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ವ್ಯಕ್ತಿಯೊಬ್ಬನ ಪ್ರಾಣಿ ಪ್ರೀಯಿತಿಂದ ವೈರಸ್ ಹೇಗೆ ಸೋಂಕಿತು, ಹೇಗೆ ಹರಡಿತು ಎಂಬುವನ್ನು ಬಹಳ ಸೂಕ್ಷ್ಮವಾಗಿ ತೋರಿಸಲಾಗುತ್ತದೆ. ಕೊನೆಗೂ ಇಬ್ಬರು ನಿಫಾ ವೈರಸ್‌ ಸೋಂಕಿತರು ಯಶಸ್ವಿಯಾಗಿ ಗುಣಮುಖರಾಗುವುದರೊಂದಿಗೆ ಸಿನಿಮಾ ಕೊನೆಯಾಗುತ್ತದೆ.

ಬರೀ ವೈರಸ್ ಬಗ್ಗೆ ಹೇಳುತ್ತಾ ಹೋಗಿದ್ದರೆ ಸಿನಿಮಾ ಬೋರ್ ಎನಿಸುತ್ತಿತ್ತೇನೋ, ಆದರೆ ನರ್ದೇಶಕರು ಹಾಗೆ ಮಾಡಿಲ್ಲ. ಇರುವ ಸಮಯದಲ್ಲಿಯೇ ವೈರಸ್ ಬಾಧಿಸಿದ ಅಷ್ಟೂ ಪಾತ್ರಗಳ ಖಾಸಗಿ ಬದುಕಿನ ಸಣ್ಣ ಚಿತ್ರಣವನ್ನು ಕೊಡುತ್ತಾ ಹೋಗಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಎಮೋಷನಲ್ ಟಚ್ ಕೂಡಾ ಸಿಗುತ್ತದೆ. ನಿಫಾ ಎಂಬ ವೈರಸ್ ಜನರನ್ನು ಕಂಗೆಡಿಸಿದಾಗ ಅಲ್ಲಿ ಉಂಟಾದ ವಾಸ್ತವ ಸ್ಥಿತಿಯನ್ನು ನೀಟಾಗಿ ಪರದೆಯ ಮೇಲೆ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?