ಬಿಪಿಎಲ್‌ ಪಡಿತರ ಚೀಟಿ ವಾಪಾಸ್‌ ನೀಡಲು ಸೂಚನೆ

By Kannadaprabha NewsFirst Published Oct 18, 2019, 11:12 AM IST
Highlights

ಬಿಪಿಎಲ್ ಕಾರ್ಡುಗಳನ್ನು ಹಿಂದಿರುಗಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ನೀಡಿದೆ. 

 ಚಿಕ್ಕಮಗಳೂರು [ಅ.18]:  ಸರ್ಕಾರ, ಆರ್ಥಿಕವಾಗಿ ದುರ್ಬಲಗೊಂಡಿರುವ ಕುಟುಂಬಗಳಿಗೆ ಬಿಪಿಎಲ್‌ ಪಡಿತರ ಚೀಟಿಯನ್ನು ನೀಡುತ್ತಿದೆ. ಆದರೆ, ಕೆಲವು ಬಿಪಿಎಲ್‌ ಪಡಿತರ ಪಡೆಯುವುದಕ್ಕೆ ಅನರ್ಹರಾಗಿದ್ದರೂ ಸಹ ಸುಳ್ಳು ಮಾಹಿತಿ ನೀಡಿ, ಪಡಿತರ ಚೀಟಿಗಳನ್ನು ಪಡೆಯುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಅಂತಹ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗಳನ್ನು ತಾಲೂಕಿನ ಆಹಾರ ಇಲಾಖೆಗೆ ಹಿಂದಿರುಗಿಸಲು ಸೂಚಿಸಿದರೂ ಹಿಂದಿರುಗಿಸದೇ ಇರುವವರು ಕೂಡಲೇ ಸ್ವಯಂಪ್ರೇರಿತವಾಗಿ ಹಿಂದಿರುಗಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಇಲಾಖೆ ಪರಿಶೀಲನೆ ವೇಳೆ ಅನರ್ಹರ ಬಳಿ ಪಡಿತರ ಚೀಟಿ ಇರುವುದು ಪತ್ತೆಯಾದಲ್ಲಿ ಪಡಿತರ ಅಕ್ಕಿ ಪಡೆದಿರುವ ಬಗ್ಗೆ ಲೆಕ್ಕ ಮಾಡಿ ಅವರಿಂದ ಕೆ.ಜಿ.ಗೆ .35 ರಂತೆ ಹಣ ವಸೂಲಿ ಮಾಡುವುದರ ಜೊತೆಗೆ ಕಾನೂನು ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಡಿತರ ಚೀಟಿ ಪಡೆದಿರುವ ಕುಟುಂಬದಲ್ಲಿ ಸರ್ಕಾರಿ ನೌಕರಿ ಮಾಡುತ್ತಿರುವ ಕೆಲವರು ತಮ್ಮ ಹೆಸರನ್ನು ಹೊರತುಪಡಿಸಿ, ಕುಟುಂಬದ ಇತರರ ಹೆಸರಿನಲ್ಲಿ ಬಿಪಿಎಲ್‌ ಪಡೆದು ವಂಚನೆ ಮಾಡುತ್ತಿದ್ದಲ್ಲಿ ಅಥವಾ ನಿವೃತ್ತಿ ವೇತನ ಪಡೆಯುತ್ತಿರುವ ಕುಟುಂಬಗಳು, ಆದಾಯ ತೆರಿಗೆಯನ್ನು ಪಾವತಿಸುವ ಸದಸ್ಯರನ್ನು ಹೊಂದಿರುವ ಕುಟುಂಬಗಳು, ವೈದ್ಯರು, ಲೆಕ್ಕ ಪರಿಶೋಧಕರು, ವಕೀಲರು, ವಿಮಾ ಕಂಪನಿಯ ಏಜೆಂಟರು, ಖಾಸಗಿ ಸಂಸ್ಥೆ ನೌಕರರು ನೋಂದಾಯಿತ ಗುತ್ತಿಗೆದಾರರು, ಎಪಿಎಂಸಿ ಟ್ರೇಡ​ರ್‍ಸ್ನ ಮಾಲೀಕರು, ಕುಷನ್‌ ಏಜೆಂಟರು ಬಿಪಿಎಲ್‌ ಪಡಿತರ ಚೀಟಿಗೆ ಅರ್ಹತೆ ಹೊಂದಿರುವುದಿಲ್ಲ.

ಹೆಚ್ಚಿನ ಕಾಫಿತೋಟ, ಅಡಕೆ ತೋಟ, ತರಿ, ಖುಷ್ಕಿ ಜಮೀನು ಹೊಂದಿರುವವರು ಹಾಗೂ ನಗರ ಪ್ರದೇಶದಲ್ಲಿ ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕ ಮನೆಯನ್ನು ಹೊಂದಿರುವ ಕುಟುಂಬಗಳು ಹಾಗೂ ಬಾಡಿಗೆಗೆ ಮನೆ ನೀಡಿರುವ ಕುಟುಂಬಗಳು, ಜೆಸಿಬಿ, ಕಾರು, ಜೀಪು ಇತರೆ ಉಪಯುಕ್ತ ವಾಹನಗಳನ್ನು ಹೊಂದಿರುವವರಲ್ಲದೇ, ವಾರ್ಷಿಕ .1.20 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಪಡಿತರ ಚೀಟಿಗೆ ಅನರ್ಹರು. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಬಿಪಿಎಲ್‌ ಕಾರ್ಡ್‌ ಹೊಂದಿದವರ ಹಾಗೂ ಪಡಿತರ ಚೀಟಿಯ ಕುಟುಂಬದವರು ಬೇರೆ ವಾಸವಿದ್ದು ಅಥವಾ ಊರು ಬಿಟ್ಟು ಹೋದವರು ಹಾಗೂ ಮೃತರಾದವರ ಪಡಿತರ ಚೀಟಿಗಳು ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

click me!