
ಬೆಂಗಳೂರು (ಆ.28): ಕೋವಿಡ್ ಮತ್ತು ಪ್ರವಾಹದಿಂದಾಗಿ ರಾಜ್ಯದ ಆರ್ಥಿಕ ಪ್ರಗತಿ ಸಾಧಿಸಲು ಕಷ್ಟವಾಗುತ್ತಿದ್ದು, ಕಳೆದ ನಾಲ್ಕು ತಿಂಗಳ ಜಿಎಸ್ಟಿ ಪರಿಹಾರ 13,764 ಕೋಟಿ ರು. ಸಂದಾಯ ಮಾಡುವಂತೆ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕೇಂದ್ರವನ್ನು ರಾಜ್ಯ ಸರ್ಕಾರ ಒತ್ತಾಯಿಸಿದೆ.
ರಾಜ್ಯದ ಒಟ್ಟು ತೆರಿಗೆ ರಾಜಸ್ವ 1.86 ಲಕ್ಷ ಕೋಟಿ ರು. ಎಂದು ಅಂದಾಜಿಸಲಾಗಿದೆ. ಆದರೆ, ಕೋವಿಡ್ ಮತ್ತು ಪ್ರವಾಹದಿಂದ ರಾಜಸ್ವದ ಕೊರತೆಯಾಗಿ ಇದರಿಂದ ಆರ್ಥಿಕ ಪ್ರಗತಿ ಸಾಧಿಸಲು ಕಷ್ಟವಾಗುತ್ತದೆ, ಜತೆಗೆ ಕೋವಿಡ್ ಎದುರಿಸಲು ಹೆಚ್ಚುವರಿ ಹಣಕಾಸಿನ ಅವಶ್ಯಕತೆ ಇದೆ. ಸಂವಿಧಾನದ 101ರ ತಿದ್ದುಪಡಿಯ ವಿಧಿ 18ರ ಪ್ರಕಾರ ಜಿಎಸ್ಟಿ ಕೌನ್ಸಿಲ್ ರಾಜ್ಯಗಳಿಗೆ ತೆರಿಗೆ ಸಂಗ್ರಹದ ಕೊರತೆಯನ್ನು ನೀಗಿಸುವುದಾಗಿ ಸ್ಪಷ್ಟವಾಗಿ ಹೇಳಲಾಗಿದೆ. ಅದರಂತೆ ತಕ್ಷಣ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದೆ.
GST ನಷ್ಟ ಭರ್ತಿಗೆ ಸಾಲ ಪಡೆಯಿರಿ: ರಾಜ್ಯಕ್ಕೆ ಕೇಂದ್ರದ ಉಚಿತ ಸಲಹೆ...
ಕೋವಿಡ್ ಇದ್ದರೂ ಕಳೆದ ನಾಲ್ಕು ತಿಂಗಳ ಜಿಎಸ್ಟಿ ತೆರಿಗೆ ಸಂಗ್ರಹ ಶೇ.71.61ರಷ್ಟುಸಾಧಿಸಲಾಗಿದೆ. ಇದು ಇತರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಜಿಎಸ್ಟಿ ಪರಿಹಾರ 13,764 ಕೋಟಿ ರು. ಆಗಿದ್ದು, ಇದರ ಸಂದಾಯ ರಾಜ್ಯದ ಆರ್ಥಿಕತೆಗೆ ಅವಶ್ಯಕತೆ ಇದೆ. ತೆರಿಗೆ ಪರಿಹಾರಕ್ಕಾಗಿ ವಿಧಿಸುವ ಸೆಸ್ ಕೇಂದ್ರ ಸರ್ಕಾರದ ಪರಿಹಾರದ ಖಾತೆಗೆ ನೇರವಾಗಿ ಜಮೆಯಾಗುವುದರಿಂದ ರಾಜ್ಯಗಳು ಸಾಲ ಪಡೆಯಲು ಕಷ್ಟವಾಗುತ್ತದೆ ಮತ್ತು ಈ ಸಾಲ ಮರುಪಾವತಿಸಲು ಕೇಂದ್ರ ಸರ್ಕಾರ ವಿಶೇಷ ತೆರಿಗೆ ವಿಧಿಸುವ ಅಧಿಕಾರ ಇದೆ. 2023ರ ನಂತರ ಅದರ ಅವಧಿಯನ್ನು ಅಧಿಕಾರ ಇದೆ. ಅದಕ್ಕಾಗಿ ಕೇಂದ್ರ ಸರ್ಕಾರ ಸಾಲವನ್ನು ಪಡೆದು ತೆರಿಗೆ ಪರಿಹಾರವನ್ನು ಕೊಡುವುದು ಸೂಕ್ತ ಎಂದು ಪ್ರತಿಪಾದಿಸಲಾಯಿತು.
ಇದಲ್ಲದೇ ಸಭೆಯಲ್ಲಿ ಐಷಾರಾಮಿ ವಸ್ತುಗಳ ಮೇಲೆ ಮತ್ತು ತಂಬಾಕು, ಪಾನ್ ಮಸಾಲಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವಂತೆ ರಾಜ್ಯ ಸರ್ಕಾರ ಸಲಹೆ ನೀಡಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಈಗಿರುವ ಆರ್ಥಿಕ ಸಂಕಷ್ಟದ ಪರಿಹಾರ ಕಂಡುಕೊಳ್ಳುವುದು ಒಕ್ಕೂಟ ವ್ಯವಸ್ಥೆಯಲ್ಲಿ ಅನಿವಾರ್ಯ ಮತ್ತು ಅವಶ್ಯಕವಾಗಿರುತ್ತದೆ. ಕರ್ನಾಟಕ ಕೇಂದ್ರದ ಜತೆಗೆ ಎಲ್ಲ ಸಹಕಾರ ನೀಡುವುದಾಗಿ ಸಭೆಯಲ್ಲಿ ತಿಳಿಸಲಾಯಿತು.
ಮತ್ತೆ ಎರಡು ಸಾವಿರ ರೂ ನೋಟು ಬ್ಯಾನ್?: ಸೆಂಟ್ರಲ್ ಬ್ಯಾಂಕ್ ಬಿಚ್ಚಿಟ್ಟ ಅಚ್ಚರಿಯ ಸಂಗತಿ!...
ಈ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ರಾಜ್ಯಗಳಿಗೆ ಯಾವುದೇ ಹೊರೆ ಇಲ್ಲದೆ ಸಾಲವನ್ನು ಪಡೆಯುವ ವ್ಯವಸ್ಥೆಯನ್ನು ಮಾಡುತ್ತದೆ. ಈ ಸಾಲವನ್ನು ಮೂರು ವರ್ಷ ಪರಿಹಾರ ಸೆಸ್ ಅನ್ನು ವಿಸ್ತರಿಸುವ ಮೂಲಕ ಸಾಲವನ್ನು ಮರುಪಾವತಿಸಲಾಗುತ್ತದೆ ಎಂದು ಪ್ರಸ್ತಾವನೆ ಮಂಡಿಸಿದರು. ರಾಜ್ಯಗಳಿಗೆ ಈ ಬಗ್ಗೆ ಒಪ್ಪಿಗೆ ಸೂಚಿಸಲು 7 ದಿನಗಳ ಸಮಯವನ್ನು ನೀಡಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.