BENGALURU
ಮೈತ್ರಿ ಸರ್ಕಾರವು ಸಿಲಿಕಾನ್ ಸಿಟಿ ನಾಗರಿಕರಿಗೆ ಹೊಸ ವರ್ಷದ ಕೊಡುಗೆಯನ್ನು ನೀಡಿದ್ದು, ಎರಡನೇ ಹಂತದ ಮೆಟ್ರೋ ಯೋಜನೆಗೆ ಅನುಮೋದನೆ ನೀಡಿದೆ.
ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರವು ಸಿಲಿಕಾನ್ ಸಿಟಿ ನಾಗರಿಕರಿಗೆ ಹೊಸ ವರ್ಷದ ಕೊಡುಗೆಯನ್ನು ನೀಡಿದ್ದು, ಎರಡನೇ ಹಂತದ ಮೆಟ್ರೋ ಯೋಜನೆಗೆ ಪರಿಷ್ಕೃತ ವೆಚ್ಚದೊಂದಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರವರೆಗೆ ಎರಡನೇ ಹಂತದ ಮೆಟ್ರೋ ಯೋಜನೆಯನ್ನು ಕೈಗೆತ್ತಿಗೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೇ, ನಾಗವಾರ- ಜಕ್ಕೂರು ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಪರಿಷ್ಕೃತಗೊಳಿಸಿ ನಾಗವಾರ- ಹೆಬ್ಬಾಳ- ಜಕ್ಕೂರು ಮೂಲಕ ಹಾದು ಹೋಗಲಿದೆ.
ವಿಧಾನಸೌಧದಲ್ಲಿ ಗುರುವಾರ ಸಚಿವ ಸಂಪುಟ ಸಭೆ ಬಳಿಕ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಈ ವಿಷಯ ತಿಳಿಸಿದರು.
ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರದವರೆಗೆ ಈ ಮೊದಲು .4202 ಕೋಟಿ ಅಂದಾಜಿಸಲಾಗಿತ್ತು. ಇದೀಗ ಪರಿಷ್ಕೃತ ವೆಚ್ಚವು .5,994 ಕೋಟಿ ಎಂದು ಅಂದಾಜಿಸಲಾಗಿದೆ. ದರದಲ್ಲಿನ ವ್ಯತ್ಯಾಸ ಮತ್ತು ಹೆಚ್ಚಿನ ಜಾಗದ ಅಗತ್ಯದಿಂದಾಗಿ ವೆಚ್ಚದಲ್ಲಿ ಹೆಚ್ಚಳವಾಗಿದೆ. ಅಲ್ಲದೇ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋವನ್ನು ನಾಗವಾರ- ಜಕ್ಕೂರು ಮೂಲಕ ಹಾದು ಹೋಗುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ, ಇದೀಗ ಮಾರ್ಗವನ್ನು ಪರಿಷ್ಕೃತಗೊಳಿಸಲಾಗಿದ್ದು, ನಾಗವಾರ- ಹೆಬ್ಬಾಳ- ಜಕ್ಕೂರು ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಈ ಮೊದಲು 29.1 ಕಿ.ಮೀ. ಇದ್ದು, ಈಗ ಒಟ್ಟು 38 ಕಿ.ಮೀ. ಉದ್ದ ಮಾರ್ಗವಾಗಲಿದೆ ಎಂದು ವಿವರಿಸಿದರು.
ಇನ್ನು ಚಲಘಟ್ಟದಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸಲು ಸಚಿವ ಸಂಪುಟ ಸಮ್ಮತಿ ನೀಡಿದೆ. .140 ಕೋಟಿ ವೆಚ್ಚದಲ್ಲಿ ಮೆಟ್ರೋ ನಿಲ್ದಾಣವನ್ನು ನಿರ್ಮಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.