
ಬೆಂಗಳೂರು (ಡಿ.26): ಚಿತ್ರದುರ್ಗ ಬಸ್ ಅಪಘಾತದಲ್ಲಿ ಪವಾಡಸದೃಶ್ಯವಾಗಿ ಪಾರಾಗಿರುವ ಬೆಂಗಳೂರಿನ ಗಗನಶ್ರೀ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಗಗನಶ್ರೀ, ರಕ್ಷಿತಾ ಹಾಗೂ ರಶ್ಮಿ ಪ್ರಯಾಣ ಮಾಡುತ್ತಿದ್ದರು. ಇವರ ಪೈಕಿ ರಶ್ಮಿ ಮಹಾಲೆ ಸಾವು ಕಂಡಿದ್ದರೆ, ಗಗನಶ್ರೀ ಹಾಗೂ ರಕ್ಷಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಗನಶ್ರೀ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಬೆನ್ನುಮೂಳೆ ಮುರಿದಿದ್ದು, ವೈದ್ಯರು ಕೆಲ ತಿಂಗಳು ಬೆಡ್ರೆಸ್ಟ್ಗೆ ಹೇಳಿದ್ದಾರೆ. ಇನ್ನು ಕಣ್ಣೆದುರೇ ಸ್ನೇಹಿತೆಯ ಸಾವು ಕಂಡು ಮಗಳು ಶಾಕ್ನಲ್ಲಿದ್ದಾಳೆ ಎಂದು ತಂದೆ ಸಿದ್ದರಾಜು ಹೇಳಿದ್ದಾರೆ.
'ನನ್ನ ಮಗಳು 24 ನೇ ತಾರೀಖು ರಾತ್ರಿ ಪ್ರಯಾಣ ಶುರುಮಾಡಿದ್ದರು. ನಮ್ಮ ಮಗಳು ಎಂಟು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಳು. ಅಲ್ಲಿ ನನ್ನ ಮಗಳು ಗಗನ ಶ್ರೀ, ರಶ್ಮಿ, ಹಾಗೂ ರಕ್ಷಿತ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ರಜೆ ಇದ್ದ ಕಾರಣ ಎಲ್ಲರೂ ಒಟ್ಟಿಗೆ ಗೋಕರ್ಣಕ್ಕೆ ಹೋಗಿ ವಾಪಸ್ ಬರುವ ಪ್ಲ್ಯಾನ್ ಮಾಡಿದ್ದರು. ಆದರೆ, ರಶ್ಮಿ ಮುರುಡೇಶ್ವರದವರಾಗಿದ್ದು ಅಲ್ಲಿಯೇ ಉಳಿಯುವ ಪ್ಲಾನ್ ನಲ್ಲಿ ಪ್ರಯಾಣ ಶುರು ಮಾಡಿದ್ದರು' ಎಂದು ತಿಳಿಸಿದ್ದಾರೆ.
ರಾತ್ರಿ ಎರಡು ಗಂಟೆ ಸಮಯದಲ್ಲಿ ಟ್ಯಾಂಕರ್ ಬಂದು ಗುದ್ದಿ ಆಕ್ಸಿಡೆಂಟ್ ಆಗಿದೆ. ನನ್ನ ಮಗಳು ಅಪರ್ ಬರ್ತ್ ಸೀಟ್ನಲ್ಲಿದ್ದಳು. ತಕ್ಷಣ ಆ್ಯಕ್ಸಿಡೆಂಟ್ ಆಗಿದೆ ಬಸ್ ನಿಂದ ಜಿಗಿಯಿರಿ ಎಂದು ಕೂಗಿಕೊಂಡಿದ್ದಾಳೆ. ನನ್ನ ಮಗಳು ಅಪರ್ ಬರ್ತ್ ಹಾಗೂ ರಕ್ಷಿತಾ ಲೋಯರ್ ಬರ್ತ್ ನಿಂದ ಬಸ್ ನಿಂದ ಹೊರಗೆ ಹಾರಿದ್ದಾರೆ. ಆದರೆ, ರಶ್ಮಿಗೆ ಹೊರ ಹಾರಲು ಆಗಿಲ್ಲ. ಕ್ಷಣ ಮಾತ್ರದಲ್ಲಿ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಕಣ್ಣ ಎದುರಲ್ಲೇ ಸ್ನೇಹಿತೆ ಸಾವು ನೋಡಿ ಮಗಳು ಗಾಬರಿಯಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಬಸ್ ನಿಂದ ಹೊರ ಹಾರಿದರಿದ್ದತಿಂದ ಗಗನಶ್ರೀ ಸ್ಪೈನಲ್ ಕಾರ್ಡ್ಗೆ ಪೆಟ್ಟಾಗಿದೆ. ಜೊತೆಗೆ ಕಾಲಿಗೆ ಕಾಜಿನ ಚೂರುಗಳು ಚುಚ್ಚಿದ್ದು ನಡೆಯಲು ಆಗುತ್ತಿಲ್ಲ. ಸಂಪೂರ್ಣವಾಗಿ ರೆಸ್ಟ್ ನಲ್ಲಿರುವಂತೆ ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದರು.
ಬಸ್ ನಲ್ಲಿ ಟೈಲ್ಸ್ ಕ್ಲೀನಿಂಗ್ ಹಾಗೂ ಅಗ್ನಿ ಹೊತ್ತಲು ಪೂರಕವಾಗಿರುವಂತ ಸ್ಫೋಟಕ ವಸ್ತುಗಳನ್ನು ತುಂಬಲಾಗಿತ್ತು. ಇದನ್ನು ಆರ್ ಟಿಓ ಅವರು ಯಾಕೆ ಕೇಳೋದಿಲ್ಲ. ಲಗೇಜ್ ಇಡೋದಕ್ಕೆ ಸಾಧ್ಯವಾಗದಷ್ಟು ಕೆಮಿಕಲ್ ರೀತಿಯ ಬೇರೆ ಬೇರೆ ಲಗೇಜ್ ಪಾರ್ಸಲ್ ಗಳನ್ನುಇರಿಸಲಾಗಿತ್ತು. ಸರ್ಕಾರ ಸರಿಯಾಗಿ ಕ್ರಮ ತೆಗೆದುಕೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಬಸ್ ಕಿಟಕಿಗಳು ಓಪನ್ ಆಗಲಿಲ್ಲ. ಸರಿಯಾಗಿ ಕಿಟಕಿ ಓಪನ್ ಆಗಿದ್ದರೆ ಎಲ್ಲರೂ ಬದುಕುತ್ತಿದ್ದರು ಎಂದು ಸಿದ್ದರಾಜು ಹೇಳಿದ್ದಾರೆ.