ಒಂದೇ ಜಾಗ.. ಒಂದೇ ವಾರದಲ್ಲಿ ಕೃಷ್ಣ ನದಿಗೆ ಬಿದ್ದ ಮೂರು ಕಾರುಗಳು.. ಬಾಗಲಕೋಟೆಯ ಈ ಜಾಗದಲ್ಲಿ ಏನೋ ಸಮಸ್ಯೆ..

Published : Aug 11, 2026, 10:58 PM IST
bagalakote accident

ಸಾರಾಂಶ

ಬಾಗಲಕೋಟೆಯ ಗಲಗಲಿ-ರಬಕವಿ ರಸ್ತೆಯಲ್ಲಿ ನಿರ್ಲಕ್ಷ್ಯದ ಕಾಮಗಾರಿಯಿಂದಾಗಿ ಒಂದೇ ವಾರದಲ್ಲಿ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿವೆ. ಅಧಿಕಾರಿಗಳ ವಿರುದ್ಧ ದೂರು ನೀಡಲು ಹೋದರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಮತ್ತು ರಬಕವಿ ಗ್ರಾಮಗಳ ಮಧ್ಯೆ ಇರುವ ರಸ್ತೆಯೊಂದು ಈಗ ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಇಲ್ಲಿ ಒಂದೇ ವಾರದಲ್ಲಿ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದು ಯಾವುದೋ ದೈವಿಕ ಶಾಪವಲ್ಲ, ಬದಲಿಗೆ ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದ ಪರಾಕಾಷ್ಠೆ ಎಂಬುದು ಬಯಲಾಗಿದೆ.

ಇಂದು ಬೀಳಗಿ ತಾಲೂಕಿನ ಕೋಲೂರು ಗ್ರಾಮದ ನಿವಾಸಿ ಈರಣ್ಣ ಅಂಬಿಗೇರ ಎಂಬುವವರು ತಮ್ಮ ಕಾರಿನಲ್ಲಿ ಗಲಗಲಿ-ರಬಕವಿ ರಸ್ತೆಯ ಮೂಲಕ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ರಸ್ತೆಯ ಮೇಲಿದ್ದ ಅವೈಜ್ಞಾನಿಕ ಜಲ್ಲಿಕಲ್ಲುಗಳಿಂದಾಗಿ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಕೃಷ್ಣಾ ನದಿಗೆ ಉರುಳಿದೆ. ಕಾರು ನದಿಗೆ ಬೀಳುತ್ತಿದ್ದಂತೆ ಎಚ್ಚೆತ್ತ ಈರಣ್ಣ, ಕಾರಿನ ಡೋರ್ ಅನ್ನು ಒದ್ದು ಹೊರಗೆ ಬಂದಿದ್ದಾರೆ. ಕೂಡಲೇ ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರು ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಬಳಸಿ ಕಾರನ್ನು ನದಿಯಿಂದ ಹೊರತೆಗೆಯಲಾಗಿದೆ.

ವಾರದಲ್ಲಿ ಮೂರು ಕಾರುಗಳು ನದಿಪಾಲು!

ಈ ಸ್ಥಳದಲ್ಲಿ ಕಳೆದ ಒಂದು ವಾರದಲ್ಲಿ ಇದು ಮೂರನೇ ಅಪಘಾತವಾಗಿದೆ. ಈ ರಸ್ತೆಯಲ್ಲಿ ಈಗಾಗಲೇ ಮೂರು ಕಾರುಗಳು ನದಿಗೆ ಬಿದ್ದಿವೆ. ಅಷ್ಟೇ ಅಲ್ಲದೆ, ಓರ್ವ ಬೈಕ್ ಸವಾರ ಕೂಡ ರಸ್ತೆ ನಿಯಂತ್ರಣ ತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಸರಣಿ ಅಪಘಾತಗಳನ್ನು ಗಮನಿಸಿದರೆ ಈ ಜಾಗದಲ್ಲಿ ಏನೋ ದೊಡ್ಡ ಸಮಸ್ಯೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಸರಣಿ ಅವಘಡಗಳಿಗೆ ರಸ್ತೆ ಕಾಮಗಾರಿಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಸೂಚನಾ ಫಲಕಗಳಿಲ್ಲ

ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ನಾಮಫಲಕ ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ. ರಸ್ತೆ ಮೇಲೆ ಹಾಕಲಾಗಿರುವ ಜಲ್ಲಿಯನ್ನು ಸಮತಟ್ಟಾಗಿ ಹರಡದೆ, ಬೇಕಾಬಿಟ್ಟಿಯಾಗಿ ಹಾಕಲಾಗಿದೆ. ಇದರಿಂದ ವಾಹನಗಳು ಸ್ಕಿಡ್ ಆಗಿ ನೇರವಾಗಿ ನದಿಗೆ ಬೀಳುತ್ತಿವೆ. ಸಂತ್ರಸ್ತ ಈರಣ್ಣ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ದೂರು ನೀಡಲು ಬೀಳಗಿ ಪೊಲೀಸ್ ಠಾಣೆಗೆ ತೆರಳಿದ್ದರೂ, ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಾರ್ವಜನಿಕರ ಆಗ್ರಹವೇನು?

ಒಂದೇ ವಾರದಲ್ಲಿ ಮೂರು ಕಾರುಗಳು ನದಿಗೆ ಬಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಮತ್ತು ರಸ್ತೆಯನ್ನು ಸರಿಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗಲಗಲಿ-ರಬಕವಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಬಾಗಲಕೋಟೆ: ಹೃದಯಾಘಾತದ ಮುನ್ನ ಇತರರ ಜೀವ ಉಳಿಸಿ ಪ್ರಾಣ ಬಿಟ್ಟ ಲಾರಿ ಡ್ರೈವರ್
ಅಪ್ಪಾ ದುಡ್ಡು ಬೇಡ, ಬಡವರ ಸೇವೆ ಮಾಡು: ತಂದೆ ವಿಜಯಾನಂದ ಕಾಶಪ್ಪನವರಿಗೆ ಮಗಳ ಮಾತು