
ಸಾವಳಗಿ(ಅ.19): ಜಮಖಂಡಿಯಿಂದ ಜಂಬಗಿ-ಸಾವಳಗಿ ಮೂಲಕ ಬಸ್ ಸಂಚಾರ ಆರಂಭಿಸಬೇಕೆಂದು ಆಗ್ರಹಿಸಿ ಸಾವಳಗಿ ಗ್ರಾಮದ ಹಿರಿಯರು ಜಮಖಂಡಿ ಸಾರಿಗೆ ಘಟಕ ಸಿಬ್ಬಂದಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಬಿ.ಡಿ.ಬಾಗೇವಾಡಿ, ವಾಯವ್ಯ ರಸ್ತೆ ಸಾರಿಗೆ ಬಸ್ಗಳು ಕೇವಲ ಆದಾಯವನ್ನೇ ನೋಡದೆ ಹಲವೆಡೆ ಸಾರ್ವಜನಿಕರಿಗೂ ಅನುಕೂಲ ಕಲ್ಪಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ನಮ್ಮ ಭಾಗದಲ್ಲೂ ಸಾರಿಗೆ ಬಸ್ಗಳನ್ನು ಓಡಿಸಲು ಅಧಿಕಾರಿಗಳು ಮುಂದಾಗಬೇಕಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಚಿಕ್ಕಪಡಸಲಗಿ ಸೇತುವೆ ಪ್ರವಾಹದ ಹೊಡೆತಕ್ಕೆ ವಿಜಯಪುರ-ಜಮಖಂಡಿ ಮಾರ್ಗ ಸ್ಥಗಿತವಾಗಿತ್ತು. ಎಲ್ಲ ಸಾರಿಗೆ ಬಸ್ಗಳು, ದೊಡ್ಡ ಟ್ರಕ್, ಟಂಟ, ಕಾರ್, ಕ್ರೂಸರ್ ಸೇರಿದಂತೆ ಅನೇಕ ಸಾರಿಗೆ ಸಂಪರ್ಕಗಳು ಜಂಬಗಿಯಿಂದ ಸಾವಳಗಿ ಮುಖಾಂತರ ಹೋಗಬೇಕು ಎಂದು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು ಗಮನಾರ್ಹ. ಸಾರ್ವಜನಿಕರಿಗೂ ಇದರಿಂದ ತುಂಬಾ ಅನುಕೂಲವಾಗಿತ್ತು.
ಈಗ ಚಿಕ್ಕಪಡಸಲಗಿ ಬ್ರಿಡ್ಜ್ ಪುನರ್ ನಿರ್ಮಾಣ ಕೈಗೊಂಡು ಎಲ್ಲ ಬಸ್ಗಳನ್ನು ಸೇತುವೆ ಮೂಲಕವೇ ಹೋಗುತ್ತಿವೆ. ಇದರಿಂದ ನಮ್ಮ ಭಾಗದ ಜನರಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಜಮಖಂಡಿ ಮತ್ತು ಮುಧೋಳ ಘಟಕದಿಂದ ವಿಜಯಪುರ ಮಾರ್ಗವಾಗಿ ಸೋಲ್ಹಾಪೂರ, ಪಂಡರಪೂರ, ಗುಲಬರ್ಗಾ, ಜೇವರ್ಗಿ, ಯಾದಗಿರಿ, ಮುದ್ದೇಬಿಹಾಳ, ಹೈದರಾಬಾದಗಳಂತಹ ದೂರದ ಊರುಗಳಿಗೆ ಪ್ರಯಾಣಿಸುವ ಬಸ್ಗಳನ್ನು ಜಂಬಗಿ-ಸಾವಳಗಿ ಮಾರ್ಗವಾಗಿ ಸಂಚರಿಸಲು ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ವೇಳೆ ನಿಂಗೋಂಡ ಬಿರಾದಾರ, ಚಂದ್ರಗುಪ್ತ ಬೆಳಗಲಿ ಅನೇಕರು ಇದ್ದರು.