ಈ ದೇವಾಲಯಗಳ ಶ್ರೀಮಂತಿಕೆ ಕೇಳಿದ್ರೆ ಬೆರಗಾಗೋದು ಪಕ್ಕಾ!

By Suvarna NewsFirst Published May 6, 2020, 6:45 PM IST
Highlights

ಭಾರತದಲ್ಲಿ ನಂಬಿಕೆ, ಭಕ್ತಿ ಎಂಬುದು ಎಷ್ಟು ಆಳವಾಗಿ ಬೇರೂರಿದೆಯೋ ಅದಕ್ಕೆ ಪೂರಕವಾಗಿ ಶ್ರೀಮಂತವಾಗಿವೆ ಇಲ್ಲಿನ ದೇವಾಲಯಗಳು. ಹನಿ ಹನಿಗೂಡಿ ಹಳ್ಳ ಎಂಬಂತೆ ಭಕ್ತರ ಅಲ್ಪ ಕಾಣಿಕೆಗಳೇ ಒಟ್ಟಾಗಿ ವರ್ಷಾಂತ್ಯಕ್ಕೆ ದೇವಾಲಯದ ಆದಾಯ ಬೆರಗು ಹುಟ್ಟಿಸುವಷ್ಟಾಗಿರುತ್ತದೆ. 

ಭಾರತವು ಸಂಸ್ಕೃತಿ, ಪರಂಪರೆ, ಆಹಾರ ವೈವಿಧ್ಯ, ನಂಬಿಕೆಗಳು, ಕಲೆ, ಪ್ರವಾಸಿ ತಾಣಗಳು, ದೇವರು, ಭಕ್ತಿ ಎಲ್ಲದರಲ್ಲೂ ಶ್ರೀಮಂತ ದೇಶವೇ. ಇಂಥ ಶ್ರೀಮಂತಿಕೆಯಲ್ಲಿ ಭಾರತದ ದೇವಾಲಯಗಳೂ ಹಿಂದೆ ಬಿದ್ದಿಲ್ಲ. ಆಯಾ ದೇವಾಲಯಗಳ ಜನಪ್ರಿಯತೆ, ಭಕ್ತಗಣ, ವಾಸ್ತುಶಿಲ್ಪ, ಪವಾಡಗಳು, ನಂಬಿಕೆಗಳಿಗನುಗುಣವಾಗಿ ಅವುಗಳ ಆದಾಯವೂ ಹೆಚ್ಚಿರುತ್ತದೆ. ಭಕ್ತರ ಅಲ್ಪ ಕಾಣಿಕೆಗಳೇ ಬೃಹತ್ ಸಂಪತ್ತಾಗಿ ಬೆಳೆದು ಹಲವೆಡೆ ದೇವಾಲಯದ ಜೀರ್ಣೋದ್ಧಾರ, ಪ್ರತಿದಿನ ಅನ್ನ ದಾಸೋಹ, ವಿದ್ಯಾ ದಾಸೋಹ ಸೇರಿದಂತೆ ಇತರೆ ಸಮಾಜಮುಖಿ ಕಾರ್ಯಗಳಿಗೆ ಬಳಕೆಯಾಗುತ್ತವೆ. ಭಕ್ತರು ಕಾಣಿಕೆ ಎಂದು ಕೇವಲ ಹಣವಷ್ಟೇ ಅಲ್ಲದೆ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು, ಸೀರೆ, ಧಾನ್ಯ ಇತ್ಯಾದಿ ವಸ್ತುಗಳನ್ನೂ ನೀಡುತ್ತಾರೆ. ಅವೆಲ್ಲವೂ ದೇವಾಲಯದ ಟ್ರಸ್ಟ್‌ನ ಆಸ್ತಿಯಾಗಿ ಉಳಿಯುತ್ತವೆ. ಹೀಗೆ ವಾರ್ಷಿಕ ಕೋಟಿಗಟ್ಟಲೆ ಸಂಪತ್ತು ಸಂಗ್ರಹಿಸಿ ಭಾರತದ ಅತಿ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಲ ದದೇವಾಲಯಗಳಿವು. 

ತಿರುಪತಿ ತಿಮ್ಮಪ್ಪನೇ ಸಿರಿವಂತ

ಅನಂತ ಪದ್ಮನಾಭಸ್ವಾಮಿ ದೇವಾಲಯ, ತಿರುವನಂತಪುರಂ
ದೇಶದಲ್ಲೇ ಅತಿ ಶ್ರೀಮಂತ ದೇವಾಲಯವಿದು. ಸುಮಾರು 20 ಶತಕೋಟಿ ಡಾಲರ್‌ನಷ್ಟು ಮೊತ್ತದ ಚಿನ್ನ ಇಲ್ಲಿದೆ. ಇಲ್ಲಿನ ಮಹಾವಿಷ್ಣು ದೇವರ ವಿಗ್ರಹವೇ 500 ಕೋಟಿ ರುಪಾಯಿ ವೆಚ್ಚ ತೂಗುತ್ತದೆ. ಇಲ್ಲಿನ ದೇವಾಲಯದ ಆಸ್ತಿಯಲ್ಲಿ ಪ್ರಾಚೀನ ಚಿನ್ನದ ಒಡವೆಗಳು, ಬಂಗಾರದ ಕಿರೀಟಗಳು, ವಜ್ರದಿಂದ ತುಂಬಿದ ಚೀಲಗಳು, ವಜ್ರ ಹಾಗೂ ಇತರೆ ಮುತ್ತು ರತ್ನ ಹವಳ ಖಚಿತ ಒಡವೆಗಳಿವೆ. ವಿಷ್ಣುವಿನ ವಿಗ್ರಹಕ್ಕೆ ಚೆಂದ ತಂದುಕೊಟ್ಟಿರುವ ಬಂಗಾರದ ಸರವೇ 18 ಅಡಿ ಉದ್ದವಿದ್ದು, ಸುಮಾರು ಎರಡೂವರೆ ಕೆಜಿಯಷ್ಟು ತೂಕವಿದೆ. 

ತಿರುಪತಿ, ಆಂಧ್ರಪ್ರದೇಶ
ಕಳೆದ ದಶಕದವರೆಗೂ ತಿರುಪತಿ ದೇಶದ ಶ್ರೀಮಂತ ದೇವಾಲಯ ಎಂದು ನಂಬಲಾಗಿತ್ತು. ಆದರೆ, ನಂಬಲಸಾಧ್ಯವಾದ ಆಸ್ತಿ ಪದ್ಮನಾಭ ಸ್ವಾಮಿ ದೇವಾಯಲದಲ್ಲಿರುವುದು ಇತ್ತೀಚೆಗಷ್ಟೇ ತಿಳಿದುಬಂದ ನಂತರ ತಿರುಪತಿ ಎರಡನೇ ಶ್ರೀಮಂತ ದೇವಾಲಯ ಸ್ಥಾನಕ್ಕಿಳಿಯಿತು. ಪ್ರತಿದಿನ ಸುಮಾರು 60,000 ಭಕ್ತರು ತಿರುಪತಿಯ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ. ಈ ವೆಂಕಟೇಶ್ವರನ ಮೂರ್ತಿಯು 1000 ಕೆಜಿಯ ಚಿನ್ನದ ಆಭರಣಗಳನ್ನು ಹೊತ್ತು ನಿಂತಿದೆ. ಈ ದೇವಾಲಯದ ವಿಶೇಷ ಪ್ರಸಾದ ಲಾಡು ಮಾರಾಟವೊಂದರಿಂದಲೇ ವಾರ್ಷಿಕ 11 ದಶಲಕ್ಷ ಡಾಲರ್ ಆದಾಯ ಬರುತ್ತದೆ. ಪ್ರತಿವರ್ಷ 650 ಕೋಟಿ ರುಪಾಯಿಯಷ್ಟು ಡೊನೇಶನ್ ದೇವಾಲಯಕ್ಕೆ ಬರುತ್ತದೆ. 

ಧರ್ಮಸ್ಥಳದ ಅಣ್ಣಪ್ಪ ದೇವನ ಮಂದಿರದ ಮಹಿಮೆ

ಸಾಯಿಬಾಬಾ ದೇವಾಲಯ, ಶಿರಡಿ
ಧರ್ಮ ಯಾವುದದೇ ಇರಲಿ, ಭಾರತೀಯರಿಗೆ ಶಿರಡಿ ಸಾಯಿಬಾಬಾನ ಪವಾಡಗಳಲ್ಲಿ ನಂಬಿಕೆ ಹೆಚ್ಚು. ಹಾಗಾಗಿಯೇ ಈ ದೇವಾಲಯಕ್ಕೆ ಬರುವ ಡೊನೇಶನ್ ಕೂಡಾ ಹೆಚ್ಚು. ದೇಶದ ಮೂರನೇ ಶ್ರೀಮಂತ ದೇವಾಲಯ ಎನಿಸಿಕೊಂಡಿರುವ ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಎಲ್ಲ ಧರ್ಮೀಯರೂ ಭೇಟಿ ನೀಡುತ್ತಾರೆ. ದೇವಾಯಲದಲ್ಲಿ 32 ಕೋಟಿ ರುಪಾಯಿ ಮೊತ್ತಕ್ಕೂ ಹೆಚ್ಚಿನ ಬಂಗಾರ ಹಾಗೂ ಬೆಳ್ಳಿಯ ಆಭರಣಗಳಿವೆ. ಪ್ರತಿ ವರ್ಷ ಸುಮಾರು 360 ಕೋಟಿ ರೂಪಾಯಿಯಷ್ಟು ಕಾಣಿಕೆ ದೇವಾಲಯಕ್ಕೆ ಸಲ್ಲುತ್ತದೆ. 

ವೈಷ್ಣೋದೇವಿ ದೇವಾಲಯ, ಜಮ್ಮು
ದೇಶದ ಅತಿ ಪುರಾತನ ದೇವಾಲಯಗಳಲ್ಲೊಂದಾಗಿರುವ ವೈಷ್ಣೋ ದೇವಿಗೆ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರಿದ್ದಾರೆ. ಹಿಂದೂಗಳ ಧಾರ್ಮಿಕ ನಂಬಿಕೆಗಳ ಕೇಂದ್ರಬಿಂದುವಿನಂತಿರುವ ಈ ದೇವಾಲಯಕ್ಕೆ ವಾರ್ಷಿಕ 500 ಕೋಟಿಯಷ್ಟು ಆದಾಯ ಭಕ್ತರಿಂದ ಬರುತ್ತದೆ. ಪ್ರತಿ ವರ್ಷ ಸುಮಾರು 80 ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ತಿರುಪತಿಯ ನಂತರ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯವಾಗಿ ಇದು ಗುರುತಿಸಿಕೊಂಡಿದೆ. 

ಶಿರಡಿ ಸಾಬಿಬಾಬ ಮಂದಿರಕ್ಕೆ ನಿತ್ಯ ಬರುತ್ತಾನಂತೆ ಹನುಮಂತ

ಸಿದ್ಧಿವಿನಾಯಕ ದೇವಾಲಯ, ಮುಂಬೈ
ಈ ದೇವಾಲಯದಲ್ಲಿ ಕಪ್ಪು ಶಿಲೆಯ ಗಣೇಶ ವಿಗ್ರಹವಿದ್ದು, ಇದು ಸುಮಾರು 200 ವರ್ಷಗಳಷ್ಟು ಪುರಾತನವಾದದ್ದು. 1990ರಲ್ಲಿ 6 ಮಹಡಿ ಕಟ್ಟಡವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ಪ್ರತಿದಿನ 25 ಸಾವಿರದಿಂದ 2 ಲಕ್ಷದವರೆಗೂ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯದ ವಾರ್ಷಿಕ ಆದಾಯ 48 ಕೋಟಿಯಿಂದ 125 ಕೋಟಿಯಷ್ಟು ಇದೆ. ಇಲ್ಲಿನ ಮುಖ್ಯ ದೇವಾಲಯದ ಗುಮ್ಮಟಕ್ಕೆ 3.5 ಕೆಜಿಯ ಬಂಗಾರದ ಕೋಟ್ ಮಾಡಲಾಗಿದೆ. 

ಗೋಲ್ಡನ್ ಟೆಂಪಲ್, ಅಮೃತಸರ
ಸಿಖ್ ಸಮುದಾಯದ ಅತಿ ಪ್ರಮುಖವಾದ ಹಾಗೂ ಅಷ್ಟೇ ಜನಪ್ರಿಯವಾದ ದೇವಾಲಯ ಹರ್‌ಮಂದಿರ್ ಸಾಹಿಬ್ ಅಥವಾ ಅಮೃತಸರದ ಗೋಲ್ಡನ್ ಟೆಂಪಲ್. ಇದರ ಅತ್ಯುತ್ಕೃಷ್ಟ ವಾಸ್ತುಶಿಲ್ಪ ಹಾಗೂ ಚಿನ್ನ ಹಾಗೂ ಬೆಳ್ಳಿಯ ಬಣ್ಣದ ಅಲಂಕಾರದಿಂದಾಗಿ ಕಣ್ಮನ ಸೆಳೆವ ಸೌಂದರ್ಯ ಹೊಂದಿದೆ. ಇಂಡೋ ಇಸ್ಲಾಮಿಕ್ ಹಾಗೂ ಇಂಡೋ ಯೂರೋಪಿಯನ್ ಶೈಲಿ ದೇವಾಲಯಕ್ಕೆ ವಿಶಿಷ್ಠ ಆಕರ್ಷಣೆ ತಂದಿದೆ. ಪ್ರತಿದಿನ ಇಲ್ಲಿಗೆ ಸುಮಾರು 40,000 ಭಕ್ತರು ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ. 

click me!