ಲೋಕಪಾಲ್ ಆಗ್ರಹಿಸಿ ಇಂದಿನಿಂದ ಅಣ್ಣಾ ಹಜಾರೆ ಉಪವಾಸ
2011ರಲ್ಲಿಯೂ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ಇದೇ ಮೈದಾನದಲ್ಲಿ ನಿರಶನ ಕೈಗೊಂಡಿದ್ದರು.
ನವದೆಹಲಿ(ಮಾ.23): ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಪಾಲ್ ರಚನೆ ಮಾಡದ ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಅವರು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಇಂದಿನಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಲೋಕಪಾಲ್ ರಚನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಾಗುವವರೆಗೂ ಹಜಾರೆ ಅವರ ನಿರಶನ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಲಾಗಿದೆ. ಸತ್ಯಾಗ್ರಹ ಆರಂಭಕ್ಕೂ ಮುನ್ನ ಹಜಾರೆ ಮತ್ತು ಅವರ ಬೆಂಬಲಿಗರು ರಾಜಘಾಟ್ಗೆ ತೆರಳಿ ಮಹಾತ್ಮ ಗಾಂಧೀಜಿ ಅವರು ಗೌರವ ಸಲ್ಲಿಸಲಿದ್ದಾರೆ. ಬಳಿಕ ರಾಮಲೀಲಾ ಮೈದಾನಕ್ಕೆ ಆಗಮಿಸಿ, ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಅಣ್ಣ ಹಜಾರೆಗೆ ಸಾಥ್ ನೀಡುವುದಾಗಿ ತಿಳಿಸಿದ್ದಾರೆ.
2011ರಲ್ಲಿಯೂ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ಇದೇ ಮೈದಾನದಲ್ಲಿ ನಿರಶನ ಕೈಗೊಂಡಿದ್ದರು. ಇದೀಗ 6 ವರ್ಷಗಳ ಬಳಿಕ ಹಜಾರೆ ಮತ್ತೊಮ್ಮೆ ಸತ್ಯಾಗ್ರಹ ಆರಂಭಿಸಿರುವುದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.