ಮುಂಡರಗಿ: ವಸತಿ ರಹಿತರಿಗೆ ನಿವೇಶನಕ್ಕೆ ಆಗ್ರಹಿಸಿ ಮನವಿ
ಪುರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ವಸತಿ ರಹಿತರಿಗೆ ನಿವೇಶನ ಮತ್ತು ಆಶ್ರಯ ಮನೆಗಳ ಸೌಲಭ್ಯ ಇಲ್ಲ| ನಿವೇಶನದ ಜತೆಗೆ ಮನೆ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿ ಮನವಿ ಸಲ್ಲಿಕೆ| ಕಳೆದ 15 ವರ್ಷಗಳಿಂದ ನಿವೇಶನ ಮತ್ತು ಮನೆಗಳ ನಿರ್ಮಾಣ ಇಲ್ಲದೆ ಒಂದೇ ಮನೆಯಲ್ಲಿ ಹಲವು ಕುಟುಂಬಗಳು ವಾಸಿಸುವಂತಾಗಿದೆ| 2 ವರ್ಷದ ಹಿಂದೆ 2 ಕೋಟಿ 25 ಲಕ್ಷ ಖರ್ಚು ಮಾಡಿ ನಿವೇಶನ ಹಂಚಿಕೆಗೆ ಜಮೀನು ಖರೀದಿಸಲಾಗಿದೆ| ಇದುವರೆಗೆ ಒಂದೇ ಒಂದು ನಿವೇಶನ ಹಂಚಿಕೆಯಾಗಿಲ್ಲ|
ಮುಂಡರಗಿ(ಅ.20): ಪುರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ವಸತಿ ರಹಿತರಿಗೆ ನಿವೇಶನ ಮತ್ತು ಆಶ್ರಯ ಮನೆಗಳ ಸೌಲಭ್ಯ ಇಲ್ಲ ಹೀಗಾಗಿ ಕೂಡಲೇ ನಿವೇಶನದ ಜತೆಗೆ ಮನೆ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆ ಜಂಟಿ ಕ್ರಿಯಾ ಸಮಿತಿ ಹಾಗೂ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಆಶ್ರಯದಲ್ಲಿ ಶನಿವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿ ತಾಲೂಕಾಧ್ಯಕ್ಷ ಮಂಜುನಾಥ ಕಾಗನೂರಮಠ ಪುರಸಭೆ ವ್ಯಾಪ್ತಿಯಲ್ಲಿ ರೈತರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೂಲಿಕಾರರು, ಬಡವರು, ಹಮಾಲರು ಎಪಿಎಂಸಿ ಕಾರ್ಮಿಕರು, ಎಕ್ಕಾ ಗಾಡಿ ಕಾರ್ಮಿಕರು ಇದ್ದಾರೆ. ಇವರು ಕಳೆದ 15 ವರ್ಷಗಳಿಂದ ನಿವೇಶನ ಮತ್ತು ಮನೆಗಳ ನಿರ್ಮಾಣ ಇಲ್ಲದೆ ಒಂದೇ ಮನೆಯಲ್ಲಿ ಹಲವು ಕುಟುಂಬಗಳು ವಾಸಿಸುವಂತಾಗಿದೆ. 2 ವರ್ಷದ ಹಿಂದೆ 2 ಕೋಟಿ 25 ಲಕ್ಷ ಖರ್ಚು ಮಾಡಿ ನಿವೇಶನ ಹಂಚಿಕೆಗೆ ಜಮೀನು ಖರೀದಿಸಲಾಗಿದೆ. ಇದುವರೆಗೆ ಒಂದೇ ಒಂದು ನಿವೇಶನ ಹಂಚಿಕೆಯಾಗಿಲ್ಲ. ಹೀಗಾಗಿ ಪುರಸಭೆ ಈ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕು ಎಂದ ಅವರು ಮನವಿಗೆ ಸ್ಪಂದನೆ ಸಿಗದಿದ್ದರೆ ಅ. 24ರಂದು ಬೆಳಗ್ಗೆ 11ಕ್ಕೆ ಸತ್ಯಾಗ್ರಹ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ನಿವೇಶನ ಮನೆ ನಿರ್ಮಾಣ ಜತೆಗೆ ಪುರಸಭೆ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಂತವ್ವ ಮಲ್ಲಮ್ಮ ಗೌರಾದೇವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ತಹಸೀಲ್ದಾರ ಪರವಾಗಿ ಶಿರಸ್ತೇದಾರ ಡೊಂಬರ ಮನವಿ ಸ್ವೀಕರಿಸಿದರು.