ಕೈ ಮುಗೀತೀನಿ, ಜಾತಿ ರಾಜಕಾರಣಕ್ಕೆ ನನ್ನನ್ನು ಎಳೀಬೇಡಿ: ಮಾಯಾಗೆ ಮೋದಿ ತಿರುಗೇಟು
ಕೈ ಮುಗೀತೀನಿ, ಜಾತಿ ರಾಜಕಾರಣಕ್ಕೆ ನನ್ನನ್ನು ಮಾತ್ರ ಎಳೀಬೇಡಿ: ಮೋದಿ| ಮಾಯಾವತಿಗೆ ಪ್ರಧಾನಿ ತಿರುಗೇಟು| ಅಸಹಾಯಕ ಸರ್ಕಾರಕ್ಕಾಗಿ ಎಸ್ಪಿ, ಬಿಎಸ್ಪಿ ಅವಕಾಶವಾದಿ ಮೈತ್ರಿ| ಜಾತಿ-ಪಾತಿ ಹೆಸರೇಳಿ ಜನರ ಹಣ ಲೂಟಿ ಹೊಡೆವುದೇ ಅವರ ಮಂತ್ರ| ಉತ್ತರಪ್ರದೇಶದಲ್ಲಿ ಮೋದಿ ಅಬ್ಬರದ ಪ್ರಚಾರ
ಕನ್ನೌಜ್/ಹರ್ದೋಯಿ[ಏ.28]: ‘ನಾನು ಅತ್ಯಂತ ಹಿಂದುಳಿದ ವರ್ಗದವ. ಮಾಯಾವತಿ ಅವರೇ ಕೈ ಮುಗಿದು ಕೋರಿಕೊಳ್ಳುತ್ತೇನೆ. ನನ್ನನ್ನು ಈ ಜಾತಿ ರಾಜಕೀಯಕ್ಕೆ ಎಳೆಯಬೇಡಿ. 130 ಕೋಟಿ ಜನರೇ ನನ್ನ ಕುಟುಂಬ’ ಎಂದು ತಮ್ಮನ್ನು ನಕಲಿ ಒಬಿಸಿ ನಾಯಕ ಎಂದು ಹೀಯಾಳಿಸಿದ್ದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.
ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿರುವ, ಆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಸ್ಪರ್ಧಿಸಿರುವ ಉತ್ತರಪ್ರದೇಶದ ಕನ್ನೌಜ್ ಮತ್ತು ಹರ್ದೋಯಿ ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ ರಾರಯಲಿ ನಡೆಸಿದ ಮೋದಿ ಅವರು, ಮಹಾಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡರು.
ರಾಜಕೀಯ ಎದುರಾಳಿಗಳು ಟೀಕಿಸುವವರೆಗೆ ನನ್ನ ಜಾತಿ ಯಾವುದು ಎಂಬುದು ಈ ದೇಶದ ಜನರಿಗೆ ಗೊತ್ತಿರಲಿಲ್ಲ. ನನ್ನ ಜಾತಿ ಬಗ್ಗೆ ಮಾತನಾಡುತ್ತಿರುವ ಮಾಯಾವತಿ, ಅಖಿಲೇಶ್, ಕಾಂಗ್ರೆಸ್ ನಾಯಕರು ಹಾಗೂ ಇತರೆ ಮಹಾಕಲಬೆರಕೆ ಕೂಟದ ನಾಯಕರಿಗೆ ಧನ್ಯವಾದಗಳು. ಹಿಂದುಳಿದ ಸಮುದಾಯದಲ್ಲಿ ಜನಿಸಿರುವುದು ದೇಶ ಸೇವೆಗೆ ಸಿಕ್ಕಿರುವ ಅವಕಾಶ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.
ಎಸ್ಪಿ-ಬಿಎಸ್ಪಿ-ಆರ್ಎಲ್ಡಿಯದ್ದು ಅಸಹಾಯಕ ಸರ್ಕಾರವನ್ನು ಬಯಸುತ್ತಿರುವ ಅವಕಾಶವಾದಿಗಳ ಕೂಟ ಎಂದು ಜರಿದ ಅವರು, ‘ಜಾತ್ ಪಾತ್ ಜಪ್ನಾ; ಜನತಾ ಕಾ ಮಾಲ್ ಅಪ್ನಾ’ (ಜಾತಿ- ಪಾತಿ ಹೆಸರೇಳಿಕೊಂಡು ಜನರ ಹಣ ಲೂಟಿ ಹೊಡೆಯುವುದು) ಎಂಬ ಮಂತ್ರ ಈ ಪಕ್ಷಗಳದ್ದಾಗಿದೆ ಎಂದು ಹೇಳಿದರು.
ನಮ್ಮಿಂದ ಈಡೇರಿಸಲು ಆಗದ ಭರವಸೆಗಳನ್ನು ನಾವು ನೀಡುವುದಿಲ್ಲ. ಕೆಲವು ಬುದ್ಧಿವಂತ ನಾಯಕರು ಆಲೂಗಡ್ಡೆಯಿಂದ ಚಿನ್ನ ತೆಗೆಯುವ ಮಾತುಗಳನ್ನು ಆಡಿದರು. ನಾನಾಗಲೀ ಅಥವಾ ನನ್ನ ಪಕ್ಷವಾಗಲೀ ಅದನ್ನು ಮಾಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೆಸರೆತ್ತದೇ ಚಾಟಿ ಬೀಸಿದರು.