ಚಿದಂಬರಂ ಪುತ್ರ ಕಾರ್ತಿಗೆ ಕಾಂಗ್ರೆಸ್ ಟಿಕೆಟ್!
10 ಅಭ್ಯರ್ಥಿಗಳ ಪಟ್ಟಿಬಿಡುಗಡೆ| ಶಿವಗಂಗಾದಿಂದ ಚಿದು ಪುತ್ರನಿಗೆ ಕಾಂಗ್ರೆಸ್ ಟಿಕೆಟ್
ನವದೆಹಲಿ[ಮಾ.25]: ಕಾಂಗ್ರೆಸ್ ಪಕ್ಷ ಭಾನುವಾರ ಸಂಜೆ ಮತ್ತೆ 10 ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದ್ದು, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಟಿಕೆಟ್ ನೀಡಿದೆ.
ಚಿದಂಬರಂ ಅವರು ಶಿವಗಂಗಾ ಕ್ಷೇತ್ರವನ್ನು ಈ ಮುನ್ನ ಪ್ರತಿನಿಧಿಸುತ್ತಿದ್ದರು. ಆದರೆ 2014ರಲ್ಲಿ ಕ್ಷೇತ್ರ ಅಣ್ಣಾ ಡಿಎಂಕೆ ಪಾಲಾಗಿತ್ತು. ಈಗ ಈ ಕ್ಷೇತ್ರವನ್ನು ಮೈತ್ರಿಯ ಅನುಸಾರ ಬಿಜೆಪಿಗೆ ಬಿಟ್ಟುಕೊಡಲಾಗಿದ್ದು, ಹಿರಿಯ ಮುಖಂಡ ಎಚ್. ರಾಜಾ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಕಾರ್ತಿ ಚಿದಂಬರಂ ಸೆಣಸಲಿದ್ದಾರೆ. ಡಿಎಂಕೆ ಅಭ್ಯರ್ಥಿ ಘೋಷಣೆ ಇನ್ನೂ ಆಗಿಲ್ಲ.
ಕಾರ್ತಿ ಅವರು ಐಎನ್ಎಕ್ಸ್ ಮೀಡಿಯಾ ಹಗರಣ, ಏರ್ಸೆಲ್-ಮ್ಯಾಕ್ಸಿಸ್ ಹಗರಣದ ಆರೋಪಿಯಾಗಿದ್ದು, ಅವರಿಗೆ ಟಿಕೆಟ್ ಕೊಟ್ಟಿರುವುದು ಅನೇಕರ ಅಚ್ಚರಿಗೂ ಕಾರಣವಾಗಿದೆ.
ಇನ್ನುಳಿದಂತೆ 10 ಜನರ ಪಟ್ಟಿಯಲ್ಲಿ ತಾರೀಖ್ ಅನ್ವರ್ ಹೆಸರು ಪ್ರಮುಖವಾಗಿದ್ದು, ಅವರು ಬಿಹಾರದ ಕಟಿಹಾರ್ನಿಂದ ಸ್ಪರ್ಧಿಸಲಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...