Asianet Suvarna News Asianet Suvarna News

News Hour: ಪರ-ವಿರೋಧದ ನಡುವೆ ನಾಳೆ ಸಿದ್ಧರಾಮೋತ್ಸವ!

ಕಾಂಗ್ರೆಸ್‌ನಲ್ಲಿ ಸಾಕಷ್ಟು ಪರ-ವಿರೋಧಗಳಿಗೆ ಚರ್ಚೆಯ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ದಾವಣಗೆರೆಯಲ್ಲಿ ಬುಧವಾರ ಸಿದ್ಧರಾಮೋತ್ಸವ ನಡೆಯಲಿದೆ. ಇದಕ್ಕಾಗಿ ರಾಜ್ಯ ಕಾಂಗ್ರೆಸ್‌ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ಬೆಂಗಳೂರು (ಆ.2): ಸಿದ್ದರಾಮಯ್ಯ ಬರ್ತಡೇ ಸಂಭ್ರಮ, ಸಿದ್ದರಾಮೋತ್ಸವಕ್ಕೆ ಕೌಂಟ್‌ ಡೌನ್‌ ಶುರುವಾಗಿದೆ. ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ರಂಗೇರಿದ್ದು, ರಾಹುಲ್ ಗಾಂಧಿ ಸಾಕ್ಷಿಯಾಗಲಿದ್ದಾರೆ.  8 ಲಕ್ಷಕ್ಕೂ ಅಧಿಕ ಕಾಯರ್ಕರ್ತರಿಗೆ, 50 ಎಕರೆ ಪ್ರದೇಶದಲ್ಲಿ ಸಕಲವೂ ಸಿದ್ಧವಾಗಿದೆ. ಹುಬ್ಬಳ್ಳಿ ವಿಮಾನನಿಲ್ದಾಣಕ್ಕೆ ಅಗಮಿಸಿದ ರಾಹುಲ್‌ ಗಾಂಧಿಗೆ ಭರ್ಜರಿ ಸ್ವಾಗತವನ್ನೂ ನೀಡಲಾಗಿದೆ.

ಸಿದ್ದು ಜಾತ್ರೆಗಾಗಿ ದಾವಣಗೆರೆಯ ಶ್ಯಾಮನೂರು ಪ್ಯಾಲೇಸ್ ಗ್ರೌಂಡ್ ವಧುವಿನಂತೆ ಕಂಗೊಳಿಸುತ್ತಿದೆ. ಎಲ್ಲಿ ನೋಡಿದ್ರೂ ಸಿದ್ದರಾಮಯ್ಯರ ಕಟೌಟ್, ಬ್ಯಾನರ್ಗಳು ರಾರಾಜಿಸುತ್ತಿವೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯರ 100 ಅಡಿ ಎತ್ತರದ ಕಟೌಟ್ ತಲೆ ಎತ್ತಿದೆ. 

ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ಓರ್ವ ಸಾವು, ಸಿದ್ದರಾಮಯ್ಯ ಸಂತಾಪ

ಸಿದ್ಧರಾಮಯ್ಯ ಉತ್ಸವಕ್ಕಾಗಿ ಆಗಮಿಸೋ ಕಾರ್ಯಕರ್ತರಿಗೆ ಭರ್ಜರಿ ಭೋಜನ ರೆಡಿಯಾಗುತ್ತಿದೆ. ಅನ್ನದಾಸೋಹಕ್ಕಾಗಿ 80 ಟನ್ ಅಕ್ಕಿ, 15 ಟನ್ ತೊಗರಿ ಬೇಳೆ, 8 ಟನ್ ಟೊಮೊಟೊ, 8 ಲಕ್ಷ ನೀರಿನ ಬಾಟಲ್ ರೆಡಿಯಾಗಿದೆ. 7ರಿಂದ 8 ಲಕ್ಷ ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.  6 ಲಕ್ಷ ಮೈಸೂರು ಪಾಕ್ ಸಿದ್ಧವಾಗಿದೆ. 2,500 ಬಾಣಸಿಗರು ಎರಡು ಬ್ಯಾಚ್ನಲ್ಲಿ ಅಡುಗೆ ಮಾಡಲಿದ್ದಾರೆ. 3 ಭಾಗಗಳಲ್ಲಿ 400 ಕೌಂಟರ್ಗಳಲ್ಲಿ ಊಟ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.