Asianet Suvarna News Asianet Suvarna News

ಬೆಳಗಾವಿಯ ಬಿಜೆಪಿಗೆ ಯಾರೂ ದಿಕ್ಕಿಲ್ಲ ಎನಿಸುತ್ತಿದೆ, ಬೇರೆಯವರು ಇಲ್ಲಿ ಬರುವುದು ಸರಿಯಲ್ಲ: ಪ್ರಭಾಕರ ಕೋರೆ

ಜಗದೀಶ್ ಶೆಟ್ಟರ್ ಅಷ್ಟೇ ಅಲ್ಲ ಬಾಗಲಕೋಟೆ, ಚಿಕ್ಕೋಡಿಯವರೂ ಬೆಳಗಾವಿಗೆ ಬರಬೇಕು ಅಂತಾರೆ, ಹಾಗಾಗಬಾರದು. ರಾಜಕೀಯವಾಗಿ ಪ್ರಜ್ಞಾವಂತರು ಬೆಳಗಾವಿ ಜಿಲ್ಲೆಯಲ್ಲಿದ್ದಾರೆ ಎಂದು ಪ್ರಭಾಕರ ಕೋರೆ ಹೇಳಿದ್ದಾರೆ.

ಬೆಳಗಾವಿ: ಲೋಕಸಭೆ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagdish Shettar) ಸ್ಪರ್ಧೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ(Belagavi) ಬಿಜೆಪಿ ಹಿರಿಯ ನಾಯಕ ಡಾ. ಪ್ರಭಾಕರ ಕೋರೆ(Prabhakar Kore) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಬಿಜೆಪಿಗೆ ಯಾರೂ ದಿಕ್ಕಿಲ್ಲ ಎನಿಸುತ್ತಿದೆ. ಬೆಳಗಾವಿ ಜಿಲ್ಲೆ ರಾಜಕೀಯವಾಗಿ ಬಲಾಢ್ಯವಾಗಿದೆ. ರಾಜಕೀಯ ಜಾಗೃತಿ ಇರುವ ಪಕ್ಷ ನಮ್ಮದು. ಹೀಗಿದ್ದರೂ ಜಿಲ್ಲೆಯ ಒಬ್ಬರನ್ನೂ ನಾವು ಮುಖ್ಯಮಂತ್ರಿ ಮಾಡಲು ಸಾಧ್ಯವಾಗಿಲ್ಲ. ಧಾರವಾಡ ಜಿಲ್ಲೆಯ ಮೂವರು ಈವರೆಗೆ ಮುಖ್ಯಮಂತ್ರಿ ಆಗಿದ್ದಾರೆ. ವಿಜಯಪುರದ ಮೂವರು ಸಿಎಂ ಆಗಿದ್ದಾರೆ. ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಿಂದ ಒಬ್ಬರೂ ಸಿಎಂ ಆಗಲು ಸಾಧ್ಯವಾಗಿಲ್ಲ. ನಾಯಕತ್ವ ಇಲ್ಲದ ಕಾರಣಕ್ಕೆ ನಮ್ಮವರು ಸಿಎಂ ಆಗಲು ಸಾಧ್ಯವಾಗಿಲ್ಲ. ನಾಯಕತ್ವ ಇಲ್ಲವೆಂದು ಬೇರೆಯವರು ಇಲ್ಲಿ ಬರುವುದು ಸರಿಯಲ್ಲ. ನಮ್ಮಲ್ಲಿ ಲೀಡರ್ ಇಲ್ಲವೆಂದು ಹೊರಗಿನವರ ಹೆಸರು ಜಾಸ್ತಿ ಕೇಳಿ ಬರುತ್ತಿದೆ. ಜಗದೀಶ್ ಶೆಟ್ಟರ್ ಅಷ್ಟೇ ಅಲ್ಲ ಬಾಗಲಕೋಟೆ, ಚಿಕ್ಕೋಡಿಯವರೂ ಬೆಳಗಾವಿಗೆ ಬರಬೇಕು ಅಂತಾರೆ, ಹಾಗಾಗಬಾರದು. ರಾಜಕೀಯವಾಗಿ ಪ್ರಜ್ಞಾವಂತರು ಬೆಳಗಾವಿ ಜಿಲ್ಲೆಯಲ್ಲಿದ್ದಾರೆ, ಹೊರಗಿನವರನ್ನು ಒಪ್ಪಲ್ಲ ಎಂದು ಪ್ರಭಾಕರ ಕೋರೆ ಹೇಳಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ಹೊರಗಿನ ಅಭ್ಯರ್ಥಿಗಳು ಬೇಡವೆಂದೇ ನಿರ್ಣಯ ಕೈಗೊಂಡಿದ್ದಾರೆ. ಸ್ಥಳೀಯವಾಗಿ ನಮ್ಮಲ್ಲಿ ಯುವಕರಿದ್ದಾರೆ, ನಾಯಕರಿದ್ದಾರೆ ಅವರಿಗೆ ಅವಕಾಶ ಸಿಗಬೇಕು. ಬೆಳಗಾವಿ ಕ್ಷೇತ್ರದ ಜನರ ಭಾವನೆ ಹೊರಗಿನವರು ಬೇಡ ಎಂದಿದೆ. ಹೈಕಮಾಂಡ್‌ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಡಾ. ಪ್ರಭಾಕರ ಕೋರೆ ಮನವಿ ಮಾಡಿದರು.

ಇದನ್ನೂ ವೀಕ್ಷಿಸಿ:  ಕೇಸರಿ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ದೃಷ್ಟಿ..! ಹೇಗಿರಲಿದೆ ‘ಲೋಕ’ಲ್ ಫೈಟ್..?