Asianet Suvarna News Asianet Suvarna News

Bidar: ಪ್ರತಿಷ್ಠಿತ ಆಸ್ಪತ್ರೆಗಳನ್ನೂ ಮೀರಿಸುತ್ತೇ ಇಲ್ಲಿನ ಸರಕಾರಿ ಆಯುರ್ವೇದ ಆಸ್ಪತ್ರೆ..!

*   ಭಾರತದಲ್ಲಿ ಆಯುರ್ವೇದ ಅಂದ್ರೆ ಅದರದ್ಧೇ ಆದ ಮಹತ್ವವಿದೆ
*   ಬೀದರ್‌ ತಾಲೂಕಿನ ಸಿರ್ಸಿ(ಎ) ಗ್ರಾಮದಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ
*   ಗಂಭೀರ ಕಾಯಿಲೆಗಳನ್ನು ಆಯುರ್ವೇದದಿಂದಲೇ ಗುಣಪಡಿಸಿದ ಹೆಗ್ಗಳಿಕೆ
 

First Published Feb 5, 2022, 11:58 AM IST | Last Updated Feb 5, 2022, 11:58 AM IST

ಬೀದರ್(ಫೆ.05): ಬೀದರ್‌ ತಾಲೂಕಿನ ಸಿರ್ಸಿ(ಎ) ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಎಲ್ಲಿ ನೋಡಿದರೂ ಬರಿ ಔಷಧಿ ಸಸ್ಯಗಳು ಮಾತ್ರ ಕಾಣುತ್ತವೆ. ಬಡರೋಗಿಗಳ ಅದೆಷ್ಟೋ ಕಾಯಿಲೆಗಳನ್ನು ಗುಣಪಡಿಸಿ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿರುವ ಸಿರ್ಸಿ ಆಯುರ್ವೇದ ಆಸ್ಪತ್ರೆ ಜಿಲ್ಲೆಗೆ ಮಾದರಿಯಾಗಿದೆ. ಅನೇಕ ಸುದೀರ್ಘ ಹಾಗೂ ಗಂಭೀರ ಕಾಯಿಲೆಗಳನ್ನು ಯಾವುದೇ ಶಸ್ತ್ರ ಚಿಕಿತ್ಸೆಯಿಲ್ಲದೇ ಗುಣಪಡಿಸಿದ ಉದಾಹರಣೆಗಳು ಆಸ್ಪತ್ರೆಯಲ್ಲಿ ಸಾಕಷ್ಟಿವೆ. ಸಂಧಿವಾತ, ನರರೋಗ, ಚರ್ಮ ರೋಗ, ಮೂಲವ್ಯಾಧಿ ರೋಗಗಳನ್ನು ಆಸ್ಪತ್ರೆಯಲ್ಲಿ ಗುಣಪಡಿಸಲಾಗಿದೆ. ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೆ ಹಣ ಸುರಿದರೂ ಕಡಿಮೆ ಆಗದ ರೋಗಗಳು ಆಯುರ್ವೇದ ಆಸ್ಪತ್ರೆಯಲ್ಲಿ ಗುಣಮುಖವಾಗಿವೆ. ಇಂಥದ್ದೊಂದು ಮಾದರಿ ಆಯುರ್ವೇದ ಆಸ್ಪತ್ರೆಗೆ ಡಾ. ವೈಶಾಲಿ ದೇವಪ್ಪ ಅವರ 20 ವರ್ಷದ ಸೇವೆ ಕಾರಣವಾಗಿದೆ. 

Nirantara Jyoti Scheme: ಅಕ್ರಮದ ಬಗ್ಗೆ ತನಿಖೆ ನಡೆಸಲು ಇಂಧನ ಸಚಿವರ ಆದೇಶ

ಸರ್ಕಾರದಿಂದ ದೊರೆತ ಔಷಧಿ ಹಾಗೂ ಆಸ್ಪತ್ರೆಯ ಒಳಾಂಗಣದಲ್ಲಿ ಬೆಳೆಸಿರುವ 50ಕ್ಕಿಂತಲೂ ಹೆಚ್ಚಿನ ಗಿಡಮೂಲಿಕೆ ಆಯುರ್ವೇದ ಔಷಧಿಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ ನೀಡುತ್ತಾರೆ. ಹಾಗೂ ಮನೆ ಮದ್ದು ಕಾರ್ಯಕ್ರಮ ಏರ್ಪಡಿಸಿ ಸಾರ್ವಜನಿಕರು ಮನೆಯಲ್ಲೇ ಔಷಧಿ ತಯಾರಿಸಿಕೊಳ್ಳುವಂತೆ ಮಾಹಿತಿ ನೀಡುತ್ತಾರೆ. ಅಲ್ಲದೆ ಆಯುರ್ವೇದ ಆಸ್ಪತ್ರೆಯಲ್ಲಿ ನಿತ್ಯವೂ ಗ್ರಾಮದ ಮಕ್ಕಳಿಗೆ ಯೋಗ ತರಬೇತಿ ಸಹ ನೀಡಲಾಗುತ್ತಿದೆ,. ಬಡ ಜನರಿಗೆ ಆಯುಷ್ ಇಲಾಖೆಯ ಕುರಿತು, ಆಯುರ್ವೇದದ ಮಹತ್ವದ ಕುರಿತು ಜನರಿಗೆ ಮನಮುಟ್ಟುವಂತೆ ಮಾಹಿತಿ ನೀಡಿ ಆಯುರ್ವೇದ ಔಷಧಿ ಬಳಸುವಂತೆ ಮಾಹಿತಿ ನೀಡುತ್ತಾರೆ. ನನಗೆ ಗ್ಯಾಸ್ಟ್ರಿಕ್ ಸಮಸ್ಯೆ ಇತ್ತು ನಾನು ಈ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮೇಲೆ ಗುಣಮುಖವಾಗಿದ್ದೇನೆ ಎನ್ನುತ್ತಾರೆ ಗ್ರಾಮದ ಮಹಿಳೆ.

ಒಟ್ಟಿನಲ್ಲಿ ಕ್ಷಣದಲ್ಲೇ ರೋಗಗಳು ಗುಣಮುಖವಾಗಬೇಕೆಂದು ಇಂದಿನ ದಿನಮಾನಗಳಲ್ಲಿ ಜನ ಅಲೋಪತಿ ಔಷಧಿ ಕಡೆ ಆಕರ್ಷಿತರಾಗೋದು ಕಾಮನ್ ಆಗಿದೆ, ಆದರೆ ಒಳ್ಳೆಯ ಆರೋಗ್ಯಕ್ಕಾಗಿ ಅಲೋಪತಿ ಬದಲಿಗೆ ಆಯುರ್ವೇದ ಬಹಳ ಉತ್ತಮ ಔಷಧಿ ಎಂದು ಜನರಲ್ಲಿ ಆಯುರ್ವೇದದ ಮಹತ್ವ ಸಾರುತ್ತಿದ್ದಾರೆ ಡಾ.ವೈಶಾಲಿ ದೇವಪ್ಪ ಅವರು ಅವರ ಕಾರ್ಯಕ್ಕೆ ಸಿರ್ಸಿ ಗ್ರಾಮ ಸೇರಿದಂತೆ ಜಿಲ್ಲೆಯಾದ್ಯಂತೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
 

Video Top Stories