Asianet Suvarna News Asianet Suvarna News

ಉತ್ತರಕನ್ನಡದಲ್ಲಿ ಬಲಿ ಚಕ್ರವರ್ತಿಯ ವಿಶಿಷ್ಟ ಆರಾಧನೆ: ಪ್ರಾದೇಶಿಕವಾಗಿ ಭಿನ್ನವಾಗಿ ಬೆಳಕಿನ ಹಬ್ಬ ಆಚರಣೆ

ದೀಪಗಳ ಹಬ್ಬ ದೀಪಾವಳಿ ನಾಡಿನೆಲ್ಲೆಡೆ ಆಚರಿಸಲಾಗುತ್ತೆ. ಆದ್ರೆ, ಹಬ್ಬದ ಆಚರಣೆಯ ಪದ್ಧತಿಗಳು ಮಾತ್ರ ಪ್ರಾದೇಶಿಕವಾಗಿ ಭಿನ್ನವಾಗಿರುತ್ತವೆ. ಉತ್ತರಕನ್ನಡ ಜಿಲ್ಲೆಯಲ್ಲಿ ದೀಪಾವಳಿ ದಿನ ಬಲಿ ಚಕ್ರವರ್ತಿಯನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. 
 

ದೀಪಾವಳಿ ಮಲೆನಾಡಿನ ಜನರಿಗೆ ದೊಡ್ಡ ಹಬ್ಬ. ಮಹಾವಿಷ್ಣುವಿನ ಪಾದದಿಂದ ಪಾತಾಳ ಸೇರಿದ ಬಲಿಚಕ್ರವರ್ತಿ(Bali)  ರೈತಾಪಿ ವರ್ಗದ ಆರಾಧ್ಯ ದೈವ. ಬಲಿಪಾಡ್ಯಮಿ ದಿನ ಬಲಿ ಚಕ್ರವರ್ತಿ ಮತ್ತೆ ಭೂಮಿಗೆ ಬರುತ್ತಾನೆ ಎಂಬುದು ಪ್ರತೀತಿ. ಆತನನ್ನು ಸ್ವಾಗತಿಸುವ ಸಂಭ್ರಮ ಮಲೆನಾಡಿನ ರೈತರದ್ದು(Farmers). ದೀಪಾವಳಿ ಹಬ್ಬದ(Deepavali festival) ಸಂದರ್ಭದಲ್ಲಿ ರೈತಾಪಿ ವರ್ಗದ ಆರಾಧ್ಯ ದೈವ ಬಲಿ ಚಕ್ರವರ್ತಿಯ ಆರಾಧನೆಯೇ ವಿಶೇಷ. ಉತ್ತರಕನ್ನಡ ಜಿಲ್ಲೆಯಲ್ಲಿ ಬಲಿ ಚಕ್ರವರ್ತಿಯನ್ನು ವಿಶಿಷ್ಠವಾಗಿ ಆರಾಧನೆ ನಡೆಸಲಾಗುತ್ತದೆ. ಬಲಿ ಚಕ್ರವರ್ತಿ ಭೂಮಿಯ ಒಡೆಯನಾಗಿದ್ದರಿಂದ ದೀಪಾವಳಿಯ ಸಂದರ್ಭ ಜೇಡಿ ಮಣ್ಣಿನಿಂದ ಬಲಿ‌ಚಕ್ರವರ್ತಿಯ ಮೂರ್ತಿ ನಿರ್ಮಾಣ ಮಾಡುತ್ತಾರೆ. ನರಕ ಚತುರ್ದಶಿ ಹಾಗೂ ಬಲಿ ಪಾಡ್ಯಮಿಯ ದಿನದಂದು ಬಲಿ ಚಕ್ರವರ್ತಿಯನ್ನು ವಿಶಿಷ್ಠ ರೀತಿಯಲ್ಲಿ ಪೂಜಿಸಲಾಗುತ್ತೆ. ದೀಪಾವಳಿಯ ಮೊದಲ ದಿನ ಬಲಿ ಚಕ್ರವರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಬಲಿಯ ಅಕ್ಕ ಪಕ್ಕ ಪ್ರತಿಷ್ಠಾಪಿಸಿದ ಮಣ್ಣಿನ ಮಡಕೆಯ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದು ರೂಢಿಯಲ್ಲಿದೆ. ಇನ್ನು ದೀಪಾವಳಿಯ ಬಳಿಕ ಬಲಿ ಮೂರ್ತಿ ವಿಸರ್ಜನೆಯಲ್ಲೂ ವಿಶೇಷತೆ ಇದೆ. ಸಾಮಾನ್ಯವಾಗಿ ಮಣ್ಣಿನ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದರೆ, ಬಲಿಯ ಮೂರ್ತಿಯನ್ನು ಆರಾಧನೆಯ ಬಳಿಕ ಹುಲ್ಲಿನ ಬಣವೆಯ ನಡುವೆ ಹುದುಗಿಸಿಡಲಾಗುತ್ತೆ. ತ್ರೇತಾಯುಗದಲ್ಲಿ ವಿಷ್ಣುವಿನ ಅವತಾರವೆತ್ತಿದ ವಾಮನನಿಂದ ಬಲಿ ಪಾತಾಳಕ್ಕೆ ತುಳಿಯಲ್ಪಟ್ಟಿದ್ದ.. ಇದರ ಸಂಕೇತವಾಗಿ ದೀಪಾವಳಿ ವೇಳೆ ಹಿಂಡಲ ಕಾಯಿಯನ್ನು ಎಡಗಾಲಿನಿಂದ ತುಳಿಯುತ್ತಾರೆ. ಬಳಿಕ ಆ ಕಾಯಿಯ ಕಹಿ ತಿಂದು ಎಡಗೈನಲ್ಲಿ ಮನೆಯ ಛಾವಣಿ ಮೇಲೆ ಎಸೆಯಲಾಗುತ್ತದೆ. ದೇವರು ದುಷ್ಟಶಕ್ತಿಯನ್ನು ಭೂಮಿಯಿಂದ ಅಳಿಸಿದ ಸಂಕೇತವಾಗಿ ಇಂದಿಗೂ ಈ ಆಚರಣೆ ನಡೆಯುತ್ತಿದೆ.

ಇದನ್ನೂ ವೀಕ್ಷಿಸಿ:  ಸರಿಗಮಪ ವೇದಿಕೆ ಮೇಲೆ ಕನ್ನಡ ಹಬ್ಬ..ಕನ್ನಡ ಹಾಡುಗಳ ರಸದೌತಣ