Asianet Suvarna News Asianet Suvarna News

Bagalkot: ಕೊರೋನಾ ವಾರಿಯರ್ಸ್‌ ಸೇವೆಯಿಂದ ಏಕಾಏಕಿ ಬಿಡುಗಡೆ: ಅತಂತ್ರರಾದ ಕುಟುಂಬಗಳು

*  ಕೊರೋನಾ ವಾರಿಯರ್ಸ್‌ ಸೇವೆಯಿಂದ ಏಕಾಏಕಿ ಬಿಡುಗಡೆ
*  ಸರ್ಕಾರದ ಕ್ರಮಕ್ಕೆ ಶಾಕ್ ಆದ ಕೊರೋನಾ ವಾರಿಯರ್ಸ್‌ ಕುಟುಂಬಗಳು
*  ಕೋವಿಡ್ ಇದ್ದಾಗ ಸೇವೆ, ಕೋವಿಡ್ ಮುಗಿಯುತ್ತಲೇ ಸೇವೆಯಿಂದ ಬಿಡುಗಡೆ
 

ಬಾಗಲಕೋಟೆ(ಏ.07):  ಅವರೆಲ್ಲಾ ದೇಶ ಕೊರೋನಾ ಸಂಕಷ್ಟದಲ್ಲಿದ್ದಾಗ ರೋಗಿಗಳ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು, ಕಠಿಣ ಪರಿಸ್ಥಿತಿಯಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಅವರ ಸಂಬಂಧಿಗಳೇ ಇರದಿದ್ದಾಗಲೂ ಸಹ ಸಂಬಂಧಿಗಳಿಗಿಂತ ಹೆಚ್ಚು ಆರೈಕೆ ಮಾಡಿದವರು, ಆದ್ರೆ ಇದೀಗ ಅಂತಹ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರು ಬೀದಿಗೆ ಬರುವಂತಹ ಪರಿಸ್ಥಿತಿ ಉಂಟಾಗಿ, ಕುಟುಂಬಗಳು ಅತಂತ್ರವಾಗಿವೆ. ಹಾಗಾದ್ರೆ ಇಲ್ಲಾಗಿರೋದಾದ್ರೂ ಏನು? ಯಾಕೆ? ಅಂತೀರಾ. ಈ ಕುರಿತ ವರದಿ ಇಲ್ಲಿದೆ.

ಹೀಗೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿರೋ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರು, ಕುಟುಂಬದ ಸಮಸ್ಯೆಯನ್ನ ಹೇಳುತ್ತಾ ಆಕ್ರೋಶ ಹೊರ ಹಾಕುತ್ತಿರೋ ಮಹಿಳಾ ಸಿಬ್ಬಂದಿಗಳು, ಮೇಲಾಧಿಕಾರಿಗಳಿಗೆ ನಮ್ಮ ಸೇವೆ ಮುಂದುವರೆಸಿ ಅಂತ ಮನವಿ ಮಾಡ್ತಿರೋ ಹೊರ ಗುತ್ತಿಗೆ ನೌಕರರು. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಹೌದು. ಕಳೆದ ಎರಡು ವರ್ಷದ ಹಿಂದೆ ಕೊರೋನಾ ಅಟ್ಟಹಾಸ ಮೆರೆದ ಸಂದರ್ಭದಲ್ಲಿ ಕೋವಿಡ್ ಕೆಲ್ಸ ಮಾಡೋಕು ಹಿಂದೆ ಮುಂದೆ ನೋಡುವಂತಹ ಕಾಲವಿತ್ತು. ಆ ಸಮಯದಲ್ಲಿ ಸರ್ಕಾರ ಹೊರ ಗುತ್ತಿಗೆ ಮೂಲಕ ಆಹ್ವಾನ ನೀಡಿದ್ದಕ್ಕೆ ಅಂದು ಅರ್ಜಿ ಹಾಕಿ ವೈದ್ಯರು, ಶೂಶ್ರೂಷಾಧಿಕಾರಿಗಳು, ಪ್ರಯೋಗಶಾಲಾ ತಜ್ಞರು, ಕಿರಿಯ ಆರೋಗ್ಯ ಸಹಾಯಕರು, ಔಷಧಿ ವಿತರಕರು, ದತ್ತಾಂಶ ನಮೂದಕರು ಮತ್ತು ಗ್ರೂಪ್ ಡಿ ನೌಕರರು ಸೇರಿ ಜಿಲ್ಲೆಯಾದ್ಯಂತ ಅಂದಾಜು 170ಕ್ಕೂ ಆಧಿಕ ಜನ್ರು ನೇಮಕಾತಿಯಾಗಿದ್ರು. ಕೊರೋನಾ ಹಾವಳಿ ಅತಿಯಾದಾಗ ಮನೆ ಮಠ ಬಿಟ್ಟು ಬಂದು ಈ ಸಿಬ್ಬಂದಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಆರೈಕೆ ಸಹ ಮಾಡಿದ್ರು. ಎಷ್ಟೋ ರೋಗಿಗಳಿಗೆ ಸಂಬಂಧಿಗಳೇ ಇಲ್ಲದಾಗ ನರ್ಸಗಳೇ ಆಪ್ತರಾಗಿ ಪಾಲನೆ ಪೋಷಣೆ ಮಾಡಿದ್ರು. ಆದ್ರೆ ಕೊರೋನಾ ವಾರಿಯರ್ಸ ಆಗಿ ಕೆಲ್ಸ ಮಾಡಿದ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರನ್ನ ಇದೀಗ ಎರಡು ವರ್ಷ ದುಡಿಸಿಕೊಂಡು ಈಗ ಮಾರ್ಚ 31ಕ್ಕೆ ಏಕಾಏಕಿ ಸೇವೆಯಿಂದ ಬಿಡುಗಡೆ ಮಾಡಿದ್ದಕ್ಕೆ ಅವರ ಕುಟುಂಬಗಳೆಲ್ಲಾ ಬೀದಿಗೆ ಬಂದು ನಿಲ್ಲುವಂತಾಗಿದೆ. ಕೊರೋನಾ ವಾರಿಯರ್ಸ ಆಗಿ ಸೇವೆ ಸಲ್ಲಿಸಿದವರೇ ಇಂದು ಅತಂತ್ರರಾಗೋ ಪರಿಸ್ಥಿತಿ ಬಂದಿದೆ. ನಮ್ಮ ಸೇವೆಯನ್ನ ಮುಂದುವರೆಸಿ ನಮ್ಮ ಕುಟುಂಬಗಳ ಬದುಕಿಗೆ ಆಸರೆಯಾಗುವಂತೆ ಸರ್ಕಾರಕ್ಕೆ ಹೊರ ಗುತ್ತಿಗೆ ನೌಕರರು ಮನವಿ ಮಾಡಿದ್ದಾರೆ ಅಂತ ಹೊರ ಗುತ್ತಿಗೆ ನೌಕರಳು ಮಧುಶ್ರೀ ಹೊಸಮನಿ ಹೇಳಿದ್ದಾರೆ. 

Kiccha Sudeep: ಕಿಚ್ಚನಿಗಾಗಿ 14 ದಿನ, 600 ಕಿಲೋಮೀಟರ್‌ ನಡೆದು ಬಂದ ಫ್ಯಾನ್ಸ್!

ಇನ್ನು ಈ ಮೊದಲಿದ್ದ ಆಸ್ಪತ್ರೆಗಳಲ್ಲಿ ಕೆಲ್ಸ ಮಾಡುತ್ತಿದ್ದ ಅನೇಕ ಸ್ಟಾಫ್ ನರ್ಸ್ ಸೇರಿದಂತೆ, ಅನೇಕ ಹುದ್ದೆಯಲ್ಲಿದ್ದವರೂ ಸಹ ಸರ್ಕಾರದ ಕರೆ ಮಾಡಿದ್ದಕ್ಕೆ ಬಂದು ಮೆರಿಟ್ ಪ್ರಕಾರ ಹೊರ ಗುತ್ತಿಗೆ ನೌಕರರಾಗಿ ಕೆಲ್ಸಕ್ಕೆ ಸೇರಿಕೊಂಡಿದ್ದರು. ಮೊದಲು 6 ತಿಂಗಳಿಗೊಮ್ಮೆ ನವೀಕರಣ ಮಾಡಿ, ಇದೀಗ ಏಕಾಏಕಿ ಸೇವೆಯಿಂದ ಬಿಡುಗಡೆಗೊಳಿಸಿರೋದು 175 ಜನ ಕುಟುಂಬಗಳು ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ಆಗಿದೆ. ಇವರನ್ನೇ ನಂಬಿ ಕೂತಿದ್ದ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಆರೋಗ್ಯ ಇಲಾಖೆಯ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತೇ, ಆದ್ರೆ ಇಂದು ಹೊರ ಗುತ್ತಿಗೆ ನೌಕರರನ್ನ ಮುಂದುವರೆಸೋಕೆ ಆಗದೇ ಇರೋದು ಬಹಳಷ್ಟು ದುರದೃಷ್ಟಕರ. ಕೂಡಲೇ ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಸಚಿವ ಸುಧಾಕರ ಅವರು ಗಮನ ಹರಿಸಿ, ಮತ್ತೇ ನಮ್ಮ ಸೇವೆಯನ್ನ ಮುಂದುವರೆಸಲು ಅವಕಾಶ ಕೊಡಬೇಕೆಂದು ಬಾಗಲಕೋಟೆ ಜಿಲ್ಲಾ ಕೋವಿಡ್ 19 ವಾರಿಯರ್ಸ ಗುತ್ತಿಗೆ ನೌಕರರ ಸಂಘದಿಂದ ಮನವಿ ಮಾಡಿದ್ದಾರೆ ಅಂತ ಹೊರ ಗುತ್ತಿಗೆ ಸ್ಟಾಫ್‌ ನರ್ಸ್‌ಮಂಜುಳಾ ಮಾದರ ತಿಳಿಸಿದ್ದಾರೆ. 

ಒಟ್ಟಿನಲ್ಲಿ ಕೊರೋನಾ ಸಂಕಷ್ಟ ಸಮಯದಲ್ಲಿ ಕೆಲ್ಸ ಮಾಡೋಕೆ ಹಿಂದೆ ಮುಂದೆ ನೋಡೋ ಕಾಲದಲ್ಲಿ ಸೇವೆಗೆಂದು ಬಂದ ಅದೆಷ್ಟೋ ಹೊರ ಗುತ್ತಿಗೆ ನೌಕರರನ್ನ ಕೆಲ್ಸದಿಂದ ಸರ್ಕಾರ ತೆಗೆದು ಹಾಕಿದ್ದು, ಅವರು ಕೊರೋನಾ ಸಂಕಷ್ಟದಲ್ಲಿ ಮಾಡಿದ ಕೆಲ್ಸವನ್ನ ಆಧರಿಸಿ ಅವರನ್ನ ಮತ್ತೇ ಮುಂದುವರೆಸೋ ನಿಟ್ಟಿನಲ್ಲಿ ಸರ್ಕಾರ  ಆರೋಗ್ಯ ಇಲಾಖೆ ಮೂಲಕ ಕ್ರಮ ಕೈಗೊಳ್ಳುತ್ತಾ ಅಂತ ಕಾದು ನೋಡಬೇಕಿದೆ.