Asianet Suvarna News Asianet Suvarna News

'ಶೃಂಗೇರಿ ಬಾಲಕಿ ರೇಪ್ ಕೇಸ್ : ಕಾಮುಕರಿಗೆ ಗಲ್ಲು ನಿಶ್ಚಿತ'

ಶೃಂಗೇರಿಯಲ್ಲಿ ಕಲ್ಲು ಕ್ವಾರಿ ಕೆಲಸಕ್ಕೆ ಹೋಗುತ್ತಿದ್ದ ಅಪ್ರಾಪ್ತೆ ಮೇಲೆ 15 ಮಂದಿ ಅತ್ಯಾಚಾರ ಎಸಗಿದ್ದರು. ಇದೀಗ ಹಲವರನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರಿಗೆ ಶೊಧ ನಡೆಯುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. 

Sringeri Teen Girl Rape Case Culprits Will Get Death Punishment Says Basavaraj Bommai snr
Author
Bengaluru, First Published Feb 5, 2021, 8:55 AM IST

ಬೆಂಗಳೂರು (ಫೆ.05):   ಶೃಂಗೇರಿಯಲ್ಲಿ ಬಾಲಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರವು ಸಂಘಟಿತ, ವ್ಯವಸ್ಥಿತ ಹೇಯ ಕೃತ್ಯ. ನಾವೆಲ್ಲ ತಲೆ ತಗ್ಗಿಸುವಂತಹ ಘಟನೆ. ಇದರ ನೈತಿಕ ಹೊಣೆ ಹೊರುತ್ತೇನೆ. ಈ ಅಪರಾಧದಲ್ಲಿ ಭಾಗಿಯಾಗಿರುವವರಿಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಶೃಂಗೇರಿಯಲ್ಲಿ ಜಲ್ಲಿ ಕ್ರಷರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ 15ರ ಹರೆಯದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತು ಚರ್ಚೆಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ನನ್ನ ಮುಂದೆ ಎರಡು ಆಯ್ಕೆಗಳಿವೆ. ಘಟನೆ ಬಗ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವುದು ಹಾಗೂ ನೈತಿಕ ಜವಾಬ್ದಾರಿಯನ್ನು ನಿರ್ವಹಿಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುವುದು. ನಾನು ನನ್ನ ನೈತಿಕ ಜವಾಬ್ದಾರಿಯಿಂದ ವಿಮುಖನಾಗದೆ, ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುವಂತಹ ದೃಢ ಪ್ರಯತ್ನ ನಡೆಸುತ್ತೇನೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಇಂದಿನ ಚರ್ಚೆ, ನಿರ್ಣಯ ನಾಡಿನ ಎಲ್ಲಾ ಅಬಲೆಯರನ್ನು ತಲುಪಬೇಕು. ಪ್ರಜಾಪ್ರಭುತ್ವ ಎಂದರೆ ಸ್ವೇಚ್ಛಾಚಾರ ಎಂದುಕೊಂಡವರಿಗೆ ಎಚ್ಚರಿಕೆ ನೀಡುವಂತಹ ಸಂದೇಶ ನೀಡಿದ್ದೇವೆ. ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೂ ವಿಶ್ರಮಿಸಬಾರದು ಎಂದು ಸಂಕಲ್ಪ ಮಾಡಿದ್ದೇನೆ. ದೇಶಾದ್ಯಂತ ಅರಾಜಕತೆ, ಅನಾಗರಿಕತೆ, ಅಪರಾಧ ಹೆಚ್ಚಾಗುತ್ತಿದೆ. ಇಂತಹದ್ದನ್ನು ನಿಭಾಯಿಸುವ ನೈತಿಕ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕಿದೆ ಎಂದರು.

ಶೃಂಗೇರಿ ಬಾಲಕಿ ಮೇಲೆ 15 ಮಂದಿಯಿಂದ ರೇಪ್‌ : ಸಿಕ್ಕಿಬಿದ್ದರು 8 ಆರೋಪಿಗಳು ...

ಅತ್ಯಾಚಾರ ಎಸಗಿದ ಎಲ್ಲಾ 30-40 ಮಂದಿಯನ್ನು ಬಂಧಿಸಲು ಹಾಗೂ ಕಠಿಣ ಶಿಕ್ಷೆಗೆ ಒಳಪಡಿಸುವ ಕಾನೂನು ಬಳಸಿ ಪ್ರಕರಣ ದಾಖಲಿಸಿದ್ದೇವೆ. ಪ್ರಕರಣದ ತನಿಖೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಡೆಸುತ್ತಿದ್ದು, ನಾಲ್ಕು ತನಿಖಾ ತಂಡಗಳನ್ನು ರಚಿಸಲಾಗಿದೆ. ಐಜಿಪಿ ಅವರಿಂದ ವರದಿ ತರಿಸಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲೇ ಎಲ್ಲ ಆರೋಪಿಗಳ ಬಂಧನ ಆಗಲಿದೆ ಎಂದು ಭರವಸೆ ನೀಡಿದರು.

ಘಟನೆಗೆ ಸಂಬಂಧಿಸಿದಂತೆ ಆ ವ್ಯಾಪ್ತಿಯ ಪೊಲೀಸ್‌ ಠಾಣೆಯ ಮೇಲ್ವಿಚಾರಕರನ್ನು ಕೂಡಲೇ ಅಮಾನತು ಮಾಡುವುದಾಗಿ ಭರವಸೆ ನೀಡುತ್ತೇನೆ. ಹಾಗೆಯೇ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಲೋಪವಾಗಿದ್ದರೆ ಆ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ, ಮನೆ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದರು. ಈ ವೇಳೆ, ಬಾಲಕಿಗೆ ಸರ್ಕಾರಿ ಉದ್ಯೋಗ ನೀಡಿ ಎಂದು ಪ್ರತಿಪಕ್ಷಗಳ ಸದಸ್ಯರು ಆಗ್ರಹಿಸಿದಾಗ, ಆಕೆ ಪ್ರಾಪ್ತ ವಯಸ್ಸಿಗೆ ಬಂದಾಗ ಸರ್ಕಾರ ಉದ್ಯೋಗ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಪ್ರಾಪ್ತೆ ಮೇಲೆ 15 ಜನರಿಂದ ಅತ್ಯಾಚಾರ, ಶೃಂಗೇರಿಯಲ್ಲಿ ಪೈಶಾಚಿಕ ಕೃತ್ಯ! ...

ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್‌, ಕಾಂಗ್ರೆಸ್‌ ಸದಸ್ಯ ನಾರಾಯಣಸ್ವಾಮಿ, ಬಿ.ಕೆ.ಹರಿಪ್ರಸಾದ್‌, ವೀಣಾ ಅಚ್ಚಯ್ಯ, ಆಡಳಿತ ಪಕ್ಷದ ತೇಜಸ್ವಿನಿ ಗೌಡ, ಭಾರತಿ ಶೆಟ್ಟಿ, ಆಯನೂರು ಮಂಜುನಾಥ್‌, ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಶೋಭಾ ನಡೆ ಬಗ್ಗೆ ಆಕ್ಷೇಪ :  ಚರ್ಚೆ ಆರಂಭಿಸಿದ ಕಾಂಗ್ರೆಸ್‌ ಸದಸ್ಯ ನಾರಾಯಣಸ್ವಾಮಿ, ಈ ಪ್ರಕರಣದಲ್ಲಿ ಚಿಕ್ಕಮಗಳೂರಿನ ಸಂಸದೆ ಮೌನವಹಿಸಿದ್ದಾರೆ ಎಂದು ಟೀಕಿಸಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಈ ಸದನದ ಸದಸ್ಯರಲ್ಲದವರ ಹೆಸರನ್ನು ಉಲ್ಲೇಖಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು. ಶೋಭಾ ಕರಂದ್ಲಾಜೆ ಅವರ ಹೆಸರಿನ ಬದಲು ‘ಆಯಮ್ಮ’ ಎಂದು ನಾರಾಯಣಸ್ವಾಮಿ ಹೇಳಿದ್ದನ್ನು ಬಿಜೆಪಿ ಸದಸ್ಯರು ಬಲವಾಗಿ ಖಂಡಿಸಿದರು.

Follow Us:
Download App:
  • android
  • ios