Asianet Suvarna News Asianet Suvarna News

ಪತ್ರಕರ್ತ ಪಾಟೀಲ್ ಪುಟ್ಟಪ್ಪ (101) ಇನ್ನಿಲ್ಲ.  ಧರೆಗುರುಳಿದ ಮರ

ಹಿರಿಯ ಲೇಖಕ, ನಾಡೋಜ ಪಾಟೀಲ್ ಪುಟ್ಟಪ್ಪ ಇನ್ನಿಲ್ಲ/ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರು/ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು/ ಕರ್ನಾಟಕ ಏಕೀಕರಣದಲ್ಲಿಯೂ ತೊಡಗಿಸಿಕೊಂಡಿದ್ದ ನಾಯಕ

Patil Puttappa Veteran Kannada journalist dies at 101
Author
Bengaluru, First Published Mar 16, 2020, 10:47 PM IST

ಕನ್ನಡ ಪತ್ರಿಕೋದ್ಯಮದ ಹಿರಿಯ ಚೇತನ, ಹಿರಿಯ ಲೇಖಕ, ನಾಡೋಜ ಪಾಟೀಲ್ ಪುಟ್ಟಪ್ಪ(101) ನಿಧನರಾಗಿದ್ದಾರೆ. ಸುದೀರ್ಘ ಅವಧಿ ಪತ್ರಿಕಾರಂಗದಲ್ಲಿ ಕೆಲಸ ಮಾಡಿದ ಚೇತನ ಕನ್ನಡದ ಅಕ್ಷರಲೋಕವನ್ನು ಅಗಲಿದ್ದಾರೆ.

ಪ್ರಮುಖ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ ನಾಡೋಜ ಪಾಟೀಲ ಪುಟ್ಟಪ್ಪ ಪಾಪು ಎಂದೇ ಚಿರಪರಿಚಿತರು. ಕರ್ನಾಟಕ ಏಕೀಕರಣದಲ್ಲಿಯೂ ಕಾರ್ಯನಿರ್ವಹಿಸಿದ್ದ ಪಾಟೀಲ ಪುಟ್ಟಪ್ಪ ಕರ್ನಾಟಕ ಮತ್ತು ಕನ್ನಡ ನಾಡು ನುಡಿಯ ಕಾವಲುಗಾರರಾಗಿದ್ದರು.

ವಾಣಿಜ್ಯ ನಗರಿ ಹುಬ್ಬಳ್ಳಿಗೂ ಕರೋನಾ ಕಾಟ

ಗೋಕಾಕ ಚಳವಳಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ನಾಯಕ ವಯೋಸಹಜ ಅನಾರೋಗ್ಯದಿಂದ ಹುಬ್ಬಳ್ಳಿಯ ಕಿಮ್ಸ್  ಆಸ್ಪತ್ರೆಗೆ ದಾಖಲಾಗಿದ್ದರು. ಗೋವಾ ವಿಮೋಚನಾ ಚಳವಳಿ, ಉತ್ತರ ಕರ್ನಾಟಕ ಹೈಕೋರ್ಟ್ ಪೀಠ, ಕಾವೇರಿ, ಕೃಷ್ಣಾ ವಿಚಾರದಲ್ಲಿಯೂ ಪಾಪು ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. 

ಪಾಟೀಲ ಪುಟ್ಟಪ್ಪ ಜೀವನ ಸಾಧನೆ

ಜನನ: 14-1-1919 ರಂದು ಹಾವೇರಿ ಜಿಲ್ಲೆಯ ಕುರಬಗೊಂಡ ಗ್ರಾಮ.
ತಂದೆ: ಶ್ರೀ ಸಿದ್ಧಲಿಂಗಪ್ಪ
ತಾಯಿ: ಶ್ರೀಮತಿ ಮಲ್ಲಮ್ಮ.
ವಿದ್ಯಾಭ್ಯಾಸ: ಪ್ರಾಥಮಿಕ ಶಿಕ್ಷಣ, ಹಲಗೇರಿ.
ಇಂಗ್ಲಿಷ ವಿದ್ಯಾಭ್ಯಾಸ : ಬ್ಯಾಡಗಿ, ಹಾವೇರಿ ಹಾಗೂ ಧಾರವಾಡ.

ರಾಷ್ಟ್ರೀಯ ಪ್ರಭಾವ: 1930 ರಲ್ಲಿ `ನಹಿ ರಖನಾ ನಹಿ ರಖನಾ ಅಂಗ್ರೇಜ ಸರಕಾರ’ ಎಂದು ಹೇಳುತ್ತಾ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಿದ್ದು, ಜವಾಹರಲಾಲ್ ನೆಹರೂ ಹುಬ್ಬಳ್ಳಿಗೆ ಬಂದಾಗ ಅವರನ್ನು ನೋಡಿ ಪ್ರಭಾವಿತರಾದದ್ದು. 1930 ರಿಂದ ಸಂಪೂರ್ಣ ಖಾದಿ ಧಾರಣೆ. 1934 ರಲ್ಲಿ ಮಹಾತ್ಮಾ ಗಾಂಧೀಜಿ ಹರಿಜನ ಪ್ರವಾಸ ಕೈಕೊಂಡು ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿದ್ದಾಗ ಅವರಿಂದ ಬೆನ್ನು ತಟ್ಟಿಸಿಕೊಂಡ ಅನುಭವ. 1937 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ. 
ಕಾಲೇಜು: ಕಾಲೇಜು ಶಿಕ್ಷಣ ಧಾರವಾಡದಲ್ಲಿ 1939. ಅದೇ ವರ್ಷ ಉಡುಪಿಯ `ಅಂತರಂಗ’ ಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಮೇಲೆ ಲೇಖನ. 1941 ರಲ್ಲಿ `ನಾನು ಮಾಸ್ತಿಯವರನ್ನು ಕಂಡೆ’ ಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ. ಕೆ. ವೆಂಕಟರಾಮಯ್ಯನವರ `ಅಬ್ರಾಹಂ ಲಿಂಕನ್’ ಕುರಿತು `ಜೀವನ’ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ. ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದರು. ಬೇಂದ್ರೆಯವರ ನಿಸರ್ಗ ಕವಿತೆಗಳು -ಜೀವನದಲ್ಲಿ ಸುದಿರ್ಘ ಲೇಖನ. ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿ 1942.

ಚಲೇಜಾವ್ ಚಳುವಳಿ: 1942 ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಘಟನೆ ಮಾಡಿದ `ಆಪಾದನೆಗಾಗಿ’ ಅವರನ್ನು ಕರ್ನಾಟಕ ಕಾಲೇಜಿನಿಂದ ಹೊರಹಾಕಿದರು. ಒಂದು ವರ್ಷ ಕಾಲ ಭೂಗತ ಕಾರ್ಯಕರ್ತರಾಗಿ ಕೆಲಸ. 

ಕಾನೂನು ಕಾಲೇಜು: 1943 ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆ. 1945 ರಲ್ಲಿ ಕಾನೂನು ಪದವೀಧರ. 

ಮದುವೆ: 1945 ರಲ್ಲಿ ನವೆಂಬರ್ 11 ರಂದು ವಿಜಾಪುರದ ಡಾ. ಬಿ. ಎಂ. ಪಾಟೀಲರ ಮಗಳು ಇಂದುಮತಿಯವರೊಡನೆ.

ಮಕ್ಕಳು: ಮುಂಜುಳಾ, ಶೈಲಜಾ, ಅಶೋಕ.

ಮುಂಬಯಿ ವಾಸ್ತವ್ಯ: 1945 ರಲ್ಲಿ ಆರಂಭಕ್ಕೆ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪ್ರಯಾಣ. ಅಲ್ಲಿ ನಿವೃತ್ತ ಜಸ್ಟೀಸ್ ಜಹಗೀರದಾರರ ಛೇಂಬರಿನಲ್ಲಿ, ಡಾ. ತೆಂಡೂಲಕರರು ಸರದಾರ ಪಟೇಲರ ಭೇಟಿ ಮಾಡಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಹೇಳಿದರು.

ಫ್ರೀಪ್ರೆಸ್ ಜರ್ನಲ್. ಬಾಂಬೈ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ. ಕೆ. ಸದಾನಂದರು `ಫ್ರೀ ಪ್ರೆಸ್’ ಸೇರುವಂತೆ ಒತ್ತಾಯಪಡಿಸಿದರು. ಕೆ. ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸಬೇಕೆಂದ ಪತ್ರಿಕೆಗೆ ಸಂಪಾದಕನಾಗಬೇಕೆಂದು ಹೇಳಿದರು.

ಕನ್ನಡಿಗರ ಮಹಾಧಿವೇಶನ: ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಕೂಡಿಸುವ ಕಾರ್ಯ. ಕಾರ್ಯದರ್ಶಿಯಾಗಿ ಮಹಾಧಿವೇಶನ ಕೆಲಸ ಮಾಡಿದ್ದುದು, 1946 ಅಗಸ್ಟ್ ಮುಂಬಯಿ ಮಂತ್ರಿ ಎಂ. ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಮಂತ್ರಿ ಕೆ. ಆರ್. ಕಾರಂತರು ಉದ್ಘಾಟಕರಾಗಿದ್ದರು. 

ಪತ್ರಿಕೋದ್ಯಮ: ಹಾವೇರಿಯಲ್ಲಿ ಓದುತ್ತಿರುವಾಗ `ನಮ್ಮ ನಾಡು’ ಕೈ ಬರಹದ ಪತ್ರಿಕೆಯ ಪ್ರಕಟಣೆ 1936. ವಾರ ಪತ್ರಿಕೆ `ವಿಶಾಲ ಕರ್ನಾಟಕ’ದ ಸಂಪಾದಕತ್ವ ಅನಂತರ ಅದು ಅಗಸ್ಟ್ 9, 1947 ರಂದು ದಿನಪತ್ರಿಕೆಯಾಯಿತು. 

ಏಕೀಕರಣ: 1949 ರ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು ಮೈಸೂರು ಸಹಿತಿ ಕರ್ನಾಟಕವಾಗಬೇಕೆನ್ನುವ ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು. 

ಸರದಾರ ಪಟೇಲ ಪುಟ್ಟಪ್ಪ: ಬಿ. ಎನ್. ದಾತಾರ ನೇತೃತ್ವದಲ್ಲಿ ಮಂಗಳವೀಡು ಶ್ರೀನಿವಾಸರಾವ್, ಕೃಷ್ಣಕುಮಾರ ಕಲ್ಲೂರ, ವೆಂಕಟೇಶ ಮಾಗಡಿ, ವಿನೀತ ರಾಮಚಂದ್ರರಾವ್, ಪಾಟೀಲ ಪುಟ್ಟಪ್ಪ, ಕರ್ನಾಟಕ ಏಕೀಕರಣಕ್ಕೆ ಒತ್ತಾಯಿಸಲು ಮೈಸೂರಲ್ಲಿ ಸರದಾರ ಪಟೇಲರನ್ನು ಭೇಟಿ ಮಾಡಿದರು.

ಅಮೇರಿಕೆಗೆ ಪ್ರಯಾಣ: 1949 ರ ಕೊನೆಯಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ. ಅಮೇರಿಕೆಯಲ್ಲಿ ವಿಲ್ ಡುರ್ಯಾಂಟ್, ರಾಬರ್ಟ ಹಚಿನ್ಸ್, ಜಸ್ಟೀಸ್ ಫ್ರ್ಯಾಂಕ ಫರ್ಟರ್, ಐನ್‍ಸ್ಟಾಯಿನ್ ಮೊದಲಾದವರ ಭೇಟಿ. ಬರುವಾಗ ಹಡಗಿನಲ್ಲಿ ಸರ್ ಎಂಥನೀ ಈಡನ್‍ರ ಸಂದರ್ಶನ. 

ನವಯುಗ ಪತ್ರಿಕೆ ಸಂಪಾದಕತ್ವ: 1953 ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ `ನವಯುಗ’ ದಿನಪತ್ರಿಕೆಯ ಸಂಪಾದಕತ್ವ. ಸಂಪಾದಕತ್ವ. ಏಕೀಕರಣ ವಿಚಾರಕ್ಕೆ ಬಹುದೊಡ್ಡ ಚಾಲನೆ ಒದಗಿಸಿದರು. ಅದರಗುಂಚಿ ಶಂಕರಗೌಡರ ಉಪವಾಸ, ಹುಬ್ಬಳ್ಳಿಯಲ್ಲಿ ಗೋಲಿಬಾರ ಸುದ್ದಿ ಅಮೇರಿಕೆಯ ನ್ಯೂಯಾರ್ಕ್ ಟೈಮ್ಸ್‍ದಲ್ಲಿ ಬಂದಿತು. 

ಪ್ರಪಂಚ’ದ ಆರಂಭ: 1954 ಮಾರ್ಚ 10 ರಂದು ಬಂಡವಾಳ ಯಾವುದೂ ಇಲ್ಲದೆ ಕೇವಲ ಲೆಕ್ಕಣಿಕೆಯಿಂದ `ಪ್ರಪಂಚ’ ವಾರ ಪತ್ರಿಕೆಯ ಆರಂಭ. ಡಿವಿಜಿ. ಆಗ ಕಳಿಸಿದ ಸಂದೇಶದಲ್ಲಿ ಹೇಳಿದರು `ನೀವು ಜೀವಂತ ತಂತಿ ಯಾವುದನ್ನಾದರೂ ಆಕರ್ಷಕವಾಗಿ ಬರೆಯಬಲ್ಲಿರಿ’ 

ಪ್ರಥಮ ಕನ್ನಡ ಡೈಜಿಸ್ಟ್: 1956 ಅಗಸ್ಟ್ ನೂತನ ಪ್ರಥಮ ಡೈಜಿಸ್ಟ್ `ಸಂಗಮ’ ಪ್ರಕಟಿಸಿದರು. ಜನರಲ್ ಕಾರಿಯಪ್ಪ ಡೈಜಿಸ್ಟ್ ಅವರಿಂದ ಬಿಡುಗಡೆ

ಕರ್ನಾಟಕ ಮೆಡಿಕಲ್: ಹುಬ್ಬಳ್ಳಿ ಸರಕಾರಿ ವೈದ್ಯಕೀಯ ಕಾಲೇಜಿಗೆ `ಕರ್ನಾಟಕ ಮೆಡಿಕಲ್ ಕಾಲೇಜು’ ಎಂದು ಕಾಲೇಜು ಹೆಸರು ಕೊಡಿಸಿದುದು 1958.

ವಿಶ್ವವಾಣಿ ದಿನಪತ್ರಿಕೆ : `ವಿಶ್ವವಾಣಿ’ ಪತ್ರಿಕೆಯನ್ನು ಅಗಸ್ಟ್ 31, 1959 ರಲ್ಲಿ ಆರಂಭಿಸಿದರು. 

ಕ.ವಿ.ವಿ. ಸಿಂಡಿಕೇಟ್ ಸದಸ್ಯರು: 1961 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆ.

ರಾಜ್ಯಸಭೆಯ ಸದಸ್ಯತ್ವ: 1962 ಮಾರ್ಚನಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. ಸದಸ್ಯತ್ವ 1974ರವರೆಗೆ ಇತ್ತು.

ಕ.ವಿ.ವ.ಸಂಘದ ಅಧ್ಯಕ್ಷ: ಕರ್ನಾಟಕದ ಪ್ರಥಮ ಹಾಗೂ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಧಾರವಾಡದ ಕರ್ನಾಟಕ ಅಧ್ಯಕ್ಷತೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1967 ರಲ್ಲಿ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ ಸತತವಾಗಿ ಅಧ್ಯಕ್ಷರಾಗಿದ್ದಾರೆ. 

ವಿದೇಶ ಯಾತ್ರೆ: ಪಶ್ಚಿಮ ಜರ್ಮನಿ, ಬ್ರಿಟಿಶ್ ಸರಕಾರಗಳ ಆಮಂತ್ರಣದ ಮೇರೆಗೆ 1965 ರಲ್ಲಿ ಆ ದೇಶಗಳಿಗೆ ಸಂದರ್ಶನ. 1988 ರಲ್ಲಿ ಸೋವಿಯತ್ ಸರಕಾರದ ಆಮಂತ್ರಣದ ಮೇರೆಗೆ ರಷ್ಯಾಕ್ಕೆ ಭೇಟಿ.
 
ಗೋಕಾಕ ವರದಿ: 1982 ರಲ್ಲಿ ಗೋಕಾಕ ವರದಿಯ ಬಗೆಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ. ಆಂದೋಲನ, ಸಂಘಟನೆ, ಸರಕಾರ ಗೋಕಾಕ ವರದಿಯನ್ನು ಒಪ್ಪುವಂತೆ ಮಾಡಿದರು. 

ಕನ್ನಡ ಕಾವಲು: 1985 ರಲ್ಲಿ ಕರ್ನಾಟಕ ಸರಕಾರವು ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿಯನ್ನು ಸಮಿತಿ. ರಚಿಸಿ, ಅಧ್ಯಕ್ಷರನ್ನಾಗಿ ಮಾಡಿದರು. ಕಛೇರಿಗಳಲ್ಲಿ ಕನ್ನಡ ತರುವ ಪ್ರಯತ್ನಕ್ಕೆ ಭಾರೀ ಯಶಸ್ಸು. 

ಬರೆದ ಪುಸ್ತಕಗಳು ಪುಸ್ತಕಗಳು: `ನನ್ನದು ಈ ಕನ್ನಡ ನಾಡು’ `ನಮ್ಮದು ಈ ಭರತ ಭೂಮಿ’ `ಕರ್ನಾಟಕದ ಕಥೆ’ `ಸೋವಿಯತ್ ದೇಶ ಕಂಡೆ’ `ಸಾವಿನ ಮೇಜವಾನಿ’ ` ಗವಾಕ್ಷ ತೆರೆಯಿತು’ ` ಶಿಲಾಬಾಲಿಕೆ ನುಡಿದಳು’ `ಕಲಾ ಸಂಗಮ’ `ಬೆಳೆದ ಬದುಕು’ ` ಭಾರತದ ಬೆಳಕು’ `ನೆಲದ ನಕ್ಷತ್ರಗಳು’ `ಸರ್ ಸಾಹೇಬರು’ `ಹೊಸಮನಿ ಸಿದ್ದಪ್ಪ’ `ಪ್ರಪಂಚ ಪಟುಗಳು’ `ನಮ್ಮ ಜನ ನಮ್ಮ ದೇಶ’ `ಈಗ ಹೊಸದನ್ನು ಕಟ್ಟೋಣ’ `ಪಾಪು ಪ್ರಪಂಚ’ `ಬದುಕುವ ಮಾತು’ `ಅಮೃತವಾಹಿನಿ’ `ವ್ಯಕ್ತಿ ಪ್ರಪಂಚ’ `ಸುವರ್ಣ ಕರ್ನಾಟಕ’ ಮುಂತಾದ 50 ಕ್ಕಿಂತ ಹೆಚ್ಚು ಕೃತಿಗಳು.

ಸಂದ ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ 1976, ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ, ಹಂಪಿ ವಿಶ್ವವಿದ್ಯಾಲಯದ `ನಾಡೋಜ’ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ವಜ್ರಕುಮಾರ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ಭಾಲ್ಕಿ ಚೆನ್ನಬಸವೇಶ್ವರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ ಹಾಗೂ ನೃಪತುಂಗ ಪ್ರಶಸ್ತಿ ಪುರಸ್ಕೃತರು.

Follow Us:
Download App:
  • android
  • ios