Asianet Suvarna News Asianet Suvarna News

ಚುನಾವಣಾ ಬಾಂಡ್: ನಿರ್ಮಲಾ ಸೀತಾರಾಮನ್ ಸೇರಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್!

ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿದ ಆರೋಪದ ಪ್ರಕರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಹಲವರ ವಿರುದ್ಧ  ತಿಲಕನಗರ ಪೊಲೀಸ್ ಠಾಣೆಯಲ್ಲಿ  ಎಫ್ಐಆರ್ ದಾಖಲಾಗಿದೆ.

electoral bonds  case FIR against Nirmala Sitharaman in  Bengaluru gow
Author
First Published Sep 28, 2024, 4:43 PM IST | Last Updated Sep 28, 2024, 4:54 PM IST

ಬೆಂಗಳೂರು (ಸೆ.28): ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿದ ಆರೋಪದ ಪ್ರಕರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ದಾಖಲಿಸಲು  ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯ ಆದೇಶಿಸಿದೆ. ಇದರ ಬೆನ್ನಲ್ಲೇ ತಿಲಕನಗರ ಪೊಲೀಸ್ ಠಾಣೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ , ಇಡಿ, ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ ಮತ್ತು ಇತರರ ವಿರುದ್ದ  ಎಫ್ಐಆರ್ ದಾಖಲು ಮಾಡಲಾಗಿದೆ.

ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ) ಸಹ ಅಧ್ಯಕ್ಷ ಆದರ್ಶ ಅಯ್ಯರ್ ನೀಡಿದ ಖಾಸಗಿ ದೂರಿನ ಅನ್ವಯ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ದೂರಿನ ಪ್ರತಿ ಮತ್ತು ದಾಖಲೆ ಠಾಣೆಗೆ ಕಳುಹಿಸಲು ಸೂಚಿಸಿ ಆದೇಶ ನೀಡಿತ್ತು. ಇದೀಗ ಈ ಪ್ರಕರಣದಲ್ಲಿ ಎ1 ಆರೋಪಿಯಾಗಿ ನಿರ್ಮಲ ಸೀತಾರಾಮನ್, ಎ2 ಇಡಿ ಆಫೀಸರ್ಸ್, ಎ3 ನ್ಯಾಷನಲ್ ಜನತಾ ಪಾರ್ಟಿ ಅಫೀಸ್ , ಎ4 ನಳೀನ್ ಕುಮಾರ್ ಕಟೀಲ್, ಎ5 ಬಿವೈ ವಿಜಯೇಂದ್ರ, ಎ6 ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಯ ನಿರ್ವಹಣೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಅಣ್ಣಾವ್ರು ಅಪ್ಪು ಊಟ ಮಾಡುವ ಅಪರೂಪದ ಫೋಟೋ ಹಂಚಿಕೊಂಡ ಜಮೀರ್ ಅಹ್ಮದ್‌!

ಐಪಿಸಿ 384, ಐಪಿಸಿ 120 ಬಿ, ಐಪಿಸಿ 34 ಅಡಿ ಎಫ್ ಐ ಆರ್, ಐಪಿಸಿ 34 -  ಸಮಾನ ಉದ್ದೇಶ, ಐಪಿಸಿ 384 - ಸುಲಿಗೆ, 120 b- ಒಳಸಂಚು ಸೆಕ್ಷನ್‌ಗಳ ಆಧಾರದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ್ದು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಲಾಗಿದೆ.

ದೂರುದಾರ ಆದರ್ಶ್ ಅಯ್ಯರ್ ಹೇಳಿಕೆ ನೀಡಿ, ಚುನಾವಣಾ ಬಾಂಡ್ ಹೆಸ್ರಲ್ಲಿ ಸುಲಿಗೆ ಬಗ್ಗೆ ದೂರು ಕೊಟ್ಟಿದ್ವಿ, ಯಾವುದೇ ಕ್ರಮವಾಗಿರಲಿಲ್ಲ. ಏಪ್ರಿಲ್ ನಲ್ಲಿ 42 ಎಸಿಎಂನಲ್ಲಿ ಪಿಸಿಆರ್ ಹಾಕಿದ್ದೆವು. ಇಷ್ಟು ದಿನವಾದ್ಮೇಲೆ ನಿನ್ನೆ ನ್ಯಾಯೋಚಿತವಾದ ಆದೇಶ ಬಂದಿದೆ. ಚುನಾವಣಾ ಬಾಂಡ್ ನಲ್ಲಿ ನಿರ್ಮಲ ಸೀತಾರಾಮನ್ ರವರು ಇಡಿ ಅಫೀಸರ್ಸ್ ಬಳಸಿಕೊಂಡು ಸುಲಿಗೆ ಮಾಡಿದ್ದಾರೆ. ತುಂಬಾ ಸ್ಟಡಿ ಮಾಡಿ ಯಾವ ಕಂಪನಿಯಲ್ಲಿ ಏನೆಲ್ಲಾ ಆಗಿದೆ ಅದನ್ನು ಪತ್ತೆ ಮಾಡಿದ್ದೇವೆ. ಕೋರ್ಟ್ ಆದೇಶ ಹಿನ್ನಲೆ ಈಗ ಎಫ್  ಐ ಆರ್ ಮಾಡಲಾಗಿದೆ. ಎಂಟು ಸಾವಿರ ಕೋಟಿ ಹಣ ಬಳಕೆಯಾಗಿದೆ. ಅರವಿಂದ್ ಕೇಜ್ರಿವಾಲ್ ವಿರುದ್ದವೂ ಇದೇ ಆಗಿದೆ. ಇಡಿ ಅಫೀಸರ್ಸ್ ಬಿಟ್ಟು ಬೆದರಿಕೆ ಹಾಕಿ ದುಡ್ಡ ಪಡೆದಿದ್ದಾರೆ. ಸುಪ್ರಿಂ ಕೋರ್ಟ್ ನಲ್ಲಿ ಆದೇಶವಾಯ್ತೋ ಆಗ ಇದೆಲ್ಲ ಹೊರಗಡೆ ಬಂದಿದೆ ಎಂದರು.

ಏನಿದು ಚುನಾವಣಾ ಬಾಂಡ್?
ಚುನಾವಣಾ ಬಾಂಡ್ ಗಳನ್ನು 2018ರ ಬಜೆಟ್ ನಲ್ಲಿ ಉಲ್ಲೇಖಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ಕಪ್ಪು ಹಣ ಹರಿದುಬರುವುದನ್ನು ತಡೆಯಲು ಹಾಗೂ ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಗಳಿಗೆ ಒಂದು ಹೊಣೆಗಾರಿಕೆಯನ್ನಾಗಿಸುವ ಸಲುವಾಗಿ ಚುನಾವಣಾ ಬಾಂಡ್ ಗಳನ್ನು ಕೇಂದ್ರ ಸರ್ಕಾರ 2018ರಲ್ಲಿ ಜಾರಿಗೊಳಿಸಲಾಗಿತ್ತು.  ಅದಾದ ಬಳಿಕ ಬಾಂಡ್ ಗಳು ಸಾರ್ವಜನಿಕವಾಗಿ ಬಳಕೆಗೆ ಬಂದವು. ನಿಗದಿತ ಬ್ಯಾಂಕ್ ಶಾಖೆಗಳಲ್ಲಿ ಈ ಬಾಂಡ್ ಗಳನ್ನು ಹಣ ಕೊಟ್ಟು ಖರೀದಿ, ಯಾವುದೇ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಲು ಅವಕಾಶ ನೀಡಲಾಗಿತ್ತು. ಆ ಮೂಲಕ ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆ ಪಾರದರ್ಶಕವಾಗಿಸುವ ಪ್ರಯತ್ನ ಅದಾಗಿತ್ತು. ದೇಣಿಗೆ ನೀಡಿದವರ ಹೆಸರು ಬಹಿರಂಗಪಡಿಸಲು ಬ್ಯಾಂಕುಗಳು ನಿರಾಕರಿಸಿದ್ದವು. ದೇಣಿಗೆ ರೂಪದಲ್ಲಿ ಸಾವಿರಾರು ಕೋಟಿ ಪಕ್ಷಕ್ಕೆ ಸಂದಾಯವಾಗಿದೆ ಎಂಬುವುದು ಬೆಳಕಿಗೆ ಬಂದಿತ್ತು. ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗಿತ್ತು.2018ರಲ್ಲಿ ಕೇಂದ್ರ ಸರ್ಕಾರ ಜಾರಿ ತಂದ ಚುನಾವಣಾ ಬಾಂಡ್‌ ಯೋಜನೆಯನ್ನು ಕಾನೂನು ಬಾಹಿರ ಎಂದು ಕಳೆದ ಫೆ.15ರ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ರದ್ದುಗೊಳಿಸಿತ್ತು.

ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ಐ‌ಟಿ ದಿಢೀರ್ ದಾಳಿ: ಮಹತ್ವದ ದಾಖಲೆ ವಶಕ್ಕೆ

ಇದೇ ವರ್ಷ ಸುಪ್ರೀಂ ಕೋರ್ಟ್ ಗೆ ಎಸ್ ಬಿಐ ಸಲ್ಲಿಸಿದ ದತ್ತಾಂಶದ ಪ್ರಕಾರ, 2018ರಿಂದ 2022ರವರೆಗೆ ದೇಶಾದ್ಯಂತ ಒಟ್ಟು 9,208 ಚುನಾವಣಾ ಬಾಂಡ್ ಗಳನ್ನು ಖರೀದಿಸಲಾಗಿತ್ತು.  ಇದರಲ್ಲಿ ಶೇ. 58ರಷ್ಟು ದೇಣಿಗೆಯು ಬಿಜೆಪಿಗೆ ಹರಿದುಬಂದಿರುವುದನ್ನು ದತ್ತಾಂಶಗಳು ಹೇಳಿದವು. ಇದು ಈ ಚುನಾವಣಾ ಬಾಂಡ್‌ ನಲ್ಲಿ ಅಕ್ರಮ ನಡೆದಿದೆ ಎಂದು ವಾದಿಸಿದ್ದವರ ಆರೋಪಕ್ಕೆ ಸತ್ಯವಾಗಿತ್ತು.

2024ರ ಮಾರ್ಚ್ 15ರಂದು ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಬಹಿರಂಗವಾದ ಚುನಾವಣಾ ಬಾಂಡ್‌ ನಲ್ಲಿ ಆಡಳಿತಾರೂಢ ಬಿಜೆಪಿಯು 6,986.5 ಕೋಟಿ ರೂ. ದೇಣಿಗೆ ಪಡೆದು ಟಾಪ್‌  ನಲ್ಲಿತ್ತು.  ಇದಕ್ಕೂ ಮುನ್ನ ದೇಣಿಗೆ ಮೊತ್ತ 6,566 ಕೋಟಿ ರೂ. ಆಗಿತ್ತು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 2ನೇ ಸ್ಥಾನದಲ್ಲಿದ್ದು, 1,397 ಕೋಟಿ ರೂ. ದೇಣಿಗೆ ಪಡೆದುಕೊಂಡಿತ್ತು. 1,334.35 ಕೋಟಿ ರೂ. ದೇಣಿಗೆ ಪಡೆದ ಕಾಂಗ್ರೆಸ್‌ ಮೂರನೇ ಸ್ಥಾನದಲ್ಲಿದೆ. ಇದಕ್ಕೂ ಮುನ್ನ ಕಾಂಗ್ರೆಸ್‌ ಪಡೆದ ದೇಣಿಗೆ ಮೊತ್ತ 1,123 ಕೋಟಿ ರೂ. ಆಗಿದೆ. ಇನ್ನು ಪ್ರದೇಶಿಕ ಪಕ್ಷ ಜೆಡಿಎಸ್‌ 89.75 ಕೋಟಿ ರೂ. ದೇಣಿಗೆ ಪಡೆದಿದ್ದು, ಇದರಲ್ಲಿ ಮೇಘಾ ಎಂಜಿನಿಯರಿಂಗ್‌ ಪಾಲು 50 ಕೋಟಿ ರೂ. ಇದೆ. 

Latest Videos
Follow Us:
Download App:
  • android
  • ios