ರಾಜ್ಯ ಸರ್ಕಾರವು ಕೋವಿಡ್ ನಿರ್ವಹಣೆಗೆ ಭಾರೀ ಪ್ರಮಾಣದಲ್ಲಿ ವೈದ್ಯರು ಹಾಗೂ ಕರ್ತವ್ಯ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿದೆ. ಈಗಾಗಲೇ ಪ್ರಕ್ರಿಯೆ ಮುಗಿದು, ಅಧಿಸೂಚನೆಯನ್ನು ಹೊರಡಿಸಲಾಗುತ್ತಿದೆ. ಈ ಮೂಲಕ ಆಸ್ಪತ್ರೆಗಳ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ನಿವಾರಣೆ ಮಾಡಲಾಗುತ್ತಿದೆ.

ಕೋವಿಡ್ ಎರಡನೇ ಅಲೆ ಭೀಕರತೆ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಕ್ಷೇತ್ರದ ಮೇಲೆ ಸಿಕ್ಕಾಪಟ್ಟೆ ಒತ್ತಡ ಬಿದ್ದಿದೆ. ಸಾಕಷ್ಟು ವೈದ್ಯರು, ನರ್ಸು, ಸಿಬ್ಬಂದಿ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಬೃಹತ್ ಸಂಖ್ಯೆಯಲ್ಲಿ ವೈದ್ಯರನ್ನು ನೇಮಕ ಮಾಡಿಕೊಂಡಿದೆ.

Add Asianetnews Kannada as a Preferred SourcegooglePreferred

ವೈದ್ಯರ ನೇಮಕಾತಿಯ ವಿಷಯವನ್ನು ಸ್ವತಃ ಆರೋಗ್ಯ ಮತ್ತು ಶಿಕ್ಷಣ ಸಚಿವರಾಗಿರುವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು 1,763 ವೈದ್ಯರು ಮತ್ತು ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಆರ್ಥಿಕ ಬಿಕ್ಕಟ್ಟು ಇದೆಯಾ? ಈ ಸ್ಕಾಲರ್‌ಶಿಪ್‌ಗಳಿಗೆ ಅಪ್ಲೈ ಮಾಡಿ

ಇತ್ತೀಚಿನ ವರ್ಷಗಳಲ್ಲಿ ಏಕಕಾಲಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. 2015ರಲ್ಲಿ ಅತಿ ಹೆಚ್ಚು ಅಂದರೆ 1401 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆ ನಂತರ ಈಗಲೇ 1,763 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಯಾರೆಲ್ಲ ನೇಮಕ?
ಈಗಾಗಲೇ ವೈದ್ಯರ ನೇರ ನೇಮಕಾತಿ ಪ್ರಕ್ರಿಯೆ ಮುಗಿದು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಅತಿದೊಡ್ಡ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು 715 ತಜ್ಞ ವೈದ್ಯರು, 75 ಜನರಲ್ ಮೆಡಿಸಿನ್, 57 ಜನರಲ್ ಸರ್ಜನ್, 145 ಗೈನಾಕಾಲಜಿಸ್ಟ್, 40 ಇಎನ್‌ಟಿ, 35 ಚರ್ಮರೋಗ ತಜ್ಞರು, 142 ಅರವಳಿಕೆ ತಜ್ಞರು, 153 ಮಕ್ಕಳ ತಜ್ಞರು, 17 ರೇಡಿಯಾಲಜಿಸ್ಟ್ ಅವರನ್ನು ನೇರ ನೇಮಕಾತಿ ಮೂಲಕ ರಾಜ್ಯ ಸರ್ಕಾರವು ನೇಮಕ ಮಾಡಿಕೊಳ್ಳುತ್ತಿದೆ. ನೇಮಕಾತಿ ಸಂಬಂಧ ಅಧಿಸೂಚನೆಯನ್ನು ಹೊರಡಿಸಲಾಗುತ್ತಿದೆ.

ಇದರ ಜೊತೆಗೆ ಆರೋಗ್ಯ ಇಲಾಖೆಯು 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿಯನ್ನೂ ಆರೋಗ್ಯ ಸಚಿವರು ನೀಡಿದ್ದಾರೆ.

ಶಿಕ್ಷಣ ಸಾಲ ಪಡೆಯುವ ಮುನ್ನ ಈ ಸಂಗತಿಗಳ ಬಗ್ಗೆ ತಿಳಿದಿರಲಿ..!

ಉತ್ತರ ಕರ್ನಾಟಕ್ಕಕೆ ಹೆಚ್ಚು ಪ್ರಯೋಜನ
ರಾಜ್ಯ ಸರ್ಕಾರವು ಮಾಡಿಕೊಳ್ಳುತ್ತಿರುವ ಬೃಹತ್ ವೈದ್ಯರ ನೇಮಕದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ. ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವೈದ್ಯರ ಕೊರತೆಯ ಸಮಸ್ಯೆ ನೀಗಲಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಗದಗ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು ಸೇರಿ ಇತರ ಜಿಲ್ಲೆಗಳಿಗೆ ಮೊದಲ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ. ನೇಮಕಗೊಂಡ ವೈದ್ಯರಿಗೆ ಶೀಘ್ರವೇ ಸ್ಥಳ ನಿಯೋಜನೆಯನ್ನು ಆರೋಗ್ಯ ಇಲಾಖೆಯ ಮಾಡಲಿದೆ.

ಕೋವಿಡ್ ಕಾಲದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ವೈದ್ಯರು, ನರ್ಸುಗಳು ಹಾಗೂ ಡಿ ದರ್ಜೆ ನೌಕರರಿಗೆ ಸರ್ಕಾರವು ರಿಸ್ಕ್ ಭತ್ಯೆಯನ್ನು ನೀಡಲಿದೆ. ಈ ವಿಷಯವನ್ನೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ 10 ಸಾವಿರ ರೂಪಾಯಿ, ನರ್ಸಿಂಗ್ ಸಿಬ್ಬಂದಿಗೆ 8 ಸಾವಿರ ರೂಪಾಯಿ, ಗ್ರೂಪ್ ಡಿ ಸಿಬ್ಬಂದಿಗೆ 10 ಸಾವಿರ ರೂಪಾಯಿ ರಿಸ್ಕ್ ಭತ್ಯೆಯನ್ನು ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ನೀಡಲು ಸರ್ಕಾರವು ಆದೇಶ ಮಾಡಿದೆ.

ಫೇಕ್ ಕೋವಿಡ್ ವ್ಯಾಕ್ಸಿನೇಷನ್ ರಿಜಿಸ್ಟ್ರೇಷನ್ ಆ್ಯಪ್ಸ್ ಇವೆ! ಕಂಡು ಹಿಡಿಯೋದ್ಹೇಗೆ?

ಒಂದು ತಿಂಗಳಿಂದ ಭಾರಿ ಏರುಗತಿಯಲ್ಲಿ ಕೋವಿಡ್ ಪ್ರಕರಣಗಳು ನಿಧಾನವಾಗಿ ಇಳಿಕೆಯಲ್ಲಿದ್ದರೂ ಆಸ್ಪತ್ರಗಳ ಮೇಲಿನ ಒತ್ತಡವೇನೂ ತಗ್ಗಿಲ್ಲ. ಈ ಹಂತದಲ್ಲಿ ರಾಜ್ಯ ಸರ್ಕಾರವು ತ್ವರಿತವಾಗಿ ನೇರ ನೇಮಕದ ಮೂಲಕ ವೈದ್ಯರನ್ನು ನೇಮಕ ಮಾಡುವುದರಿಂದ ಪರಿಸ್ಥಿತಿ ಕೊಂಚವಾದರೂ ಸುಧಾರಿಸಲಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ವೈದ್ಯರ ನೇಮಕಾತಿಯೂ ಹೆಚ್ಚ ಪ್ರಯೋಜನವನ್ನು ತಂದುಕೊಡಲಿದೆ. ಸಾವಿರ ಲೆಕ್ಕದಲ್ಲಿ ವೈದ್ಯರು ಮತ್ತು ವಿಶೇಷ ತಜ್ಞರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.