Asianet Suvarna News Asianet Suvarna News

ಕರ್ನಾಟಕದಲ್ಲಿದ್ದು, ಕನ್ನಡ್ ಗೊತ್ತಿಲ್ಲ ಅನ್ನೋರಿಗೆ ಏನು ಮಾಡ್ಬೇಕು ಹೇಳ್ತಿದ್ದಾರೆ ಪೂಜಾ ಗಾಂಧಿ

ಕನ್ನಡ್ ಗೊತ್ತಿಲ್ಲವೆಂದು ಕನ್ನಡ ನಟಿಯರೇ ಪರ ಭಾಷಿಕರ ಮುಂದೆ ಹೇಳುತ್ತಿರುವಾ ಅನ್ಯ ಭಾಷಾ ನಟಿ ಪೂಜಾ ಗಾಂಧಿ ಕನ್ನಡ ಪರ ಕಾಳಜಿ ತೋರಿಸಿದ್ದು ಹೀಗೆ.

Kannada actress Pooja Gandhi talks about learning kannada language in school vcs
Author
First Published Jun 26, 2023, 11:15 AM IST | Last Updated Jun 26, 2023, 11:31 AM IST

ಪೂಜಾ ಗಾಂಧಿ

ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ. ಅನ್ಯರಾಜ್ಯಗಳಿಂದ ಬರುವವರು ಕನ್ನಡ ಭಾಷೆ ಕಲಿಯದೇ ಇರುವುದು, ಕನ್ನಡದ ಬಗ್ಗೆ ಅಸಡ್ಡೆ ತೋರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಾಗತೊಡಗಿದೆ. ಕನ್ನಡಿಗರು ಕನ್ನಡ ಬಾರದವರೊಂದಿಗೆ ಸಂವಹನ ನಡೆಸುವ ಪರಿ ಬೆಂಗಳೂರಿನಲ್ಲಿ ಕನ್ನಡ ಭಾಷಿಕರು ಕಡಿಮೆ ಆಗಲು ಪ್ರಮುಖ ಕಾರಣ ಅಂದರೆ ತಪ್ಪಲ್ಲ. ಅನ್ಯಭಾಷಿಕರಿಗೆ ಕನ್ನಡ ಕಲಿಯಲು ಇಷ್ಟವಿದ್ದರೂ ಕನ್ನಡ ಕಲಿಕಾ ಕೇಂದ್ರಗಳು ನಮ್ಮಲ್ಲಿ ಬೆರಳೆಣಿಕೆಗಿಂತಲೂ ಕಡಿಮೆ ಇರುವುದರಿಂದ ಕನ್ನಡದ ಬಳಕೆ ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿದೆ.

ಕೆಲ ದಿನಗಳ ಹಿಂದೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಮಾರಂಭವೊಂದರಲ್ಲಿ ಮಾತನಾಡುತ್ತಾ, ಬೆಂಗಳೂರಿನಲ್ಲಿರುವ ಶೇ.60ರಷ್ಟು ಜನರಿಗೆ ಕನ್ನಡ ಬಾರದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಯಾವುದೇ ನಗರ ಮಹಾನಗರವಾಗಿ ಪರಿವರ್ತನೆಯಾಗ ಬೇಕೆಂದರೆ, ಎಂಟು ದಿಕ್ಕುಗಳಿಂದ ತನ್ನೆಡೆಗೆ ಬರುವ ವೈವಿಧ್ಯಪೂರ್ಣ ಜನರನ್ನು, ಚಿಂತನೆಗಳನ್ನು, ವಿಜ್ಞಾನ-ತಂತ್ರಜ್ಞಾನಗಳನ್ನು, ಕಲೆ-ಸಾಹಿತ್ಯವನ್ನು, ಆಕರ್ಷಿಸುತ್ತಾ, ಅರಗಿಸಿಕೊಳ್ಳತ್ತಾ, ತನ್ನ ತನವನ್ನು ಉಳಿಸಿಕೊಳ್ಳುತ್ತಾ ಬೆಳೆಯಬೇಕು. ವಿಶ್ವದಲ್ಲೇ ಅತ್ಯಂತ ಪ್ರಮುಖ ನಗರಗಳಲ್ಲೊಂದಾಗಿ ಗುರುತಿಸಿ ಕೊಳ್ಳುವಲ್ಲಿ ಮತ್ತು ತನ್ನ ಆಕರ್ಷಣೆ ಉಳಿಸಿಕೊಳ್ಳುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ. ಆದರೆ ನಮ್ಮತನವನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ನಾಡು-ನುಡಿ, ಆಚಾರ-ವಿಚಾರ, ಸಾಹಿತ್ಯ-ಸಂಗೀತ-ಸಂಸ್ಕೃತಿ ಗಳನ್ನು ಅನ್ಯಭಾಷಿಕರಿಗೆ ಹಂಚುತ್ತಾ, ಪ್ರೀತಿಯಿಂದ ಉಣಿಸುತ್ತಾ, ಅವರನ್ನು ನಮ್ಮವರಾಗಿಸಿಕೊಳ್ಳುತ್ತಾ  ಮಂತರಾಗಬೇಕಾಗುತ್ತದೆ.

ನಾನು ಅನ್ಯಭಾಷಿಕಳಾಗಿ, ಅನ್ಯ ರಾಜ್ಯದವಳಾಗಿ ಕನ್ನಡವನ್ನು ಮಾತನಾಡಲು, ಬರೆಯಲು, ಓದಲು ಹಂತ ಹಂತವಾಗಿ ಕಲಿತ ಅನುಭವದ ಆಧಾರದ ಮೇಲೆ ಕರ್ನಾಟಕ ಸರ್ಕಾರ, ಕನ್ನಡ ಸಂಘಗಳು ಮತ್ತು ಕನ್ನಡ ಪ್ರೇಮಿಗಳ ಜೊತೆ ನನ್ನ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

Kannada actress Pooja Gandhi talks about learning kannada language in school vcs

ಕನ್ನಡ ಕಲಿಸಲು ಕೆಲ ಸಲಹೆಗಳು

1 ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪಟ್ಟಣಗಳ ವಸತಿ ಸಮುಚ್ಚಯಗಳ ಪಟ್ಟಿಯನ್ನು ಸಿದ್ಧಪಡಿಸುವುದು.
2 ವಸತಿ ಸಮುಚ್ಚಯ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪಟ್ಟಿಯನ್ನು ಸಿದ್ಧಪಡಿಸುವುದು.
3 ಬೆಂಗಳೂರು ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ, ಕನ್ನಡ ಸಂಸ್ಕೃತಿ ಮತ್ತು ಶಿಕ್ಷಣ ಸಚಿವರ ಸಹಯೋಗದಲ್ಲಿ, ಅಪಾರ್ಟ್‌ಮೆಂಟ್ ಸಂಘಗಳ ಪದಾಧಿಕಾರಿಗಳ ಸಮ್ಮೇಳನವನ್ನು ಆಯೋಜಿಸಬೇಕು.
4 ಪ್ರತಿ ಅಪಾರ್ಟ್‌ಮೆಂಟ್‌ನಲ್ಲಿ ಕನ್ನಡ ಮಾತನಾಡಲು ಗೊತ್ತಿಲ್ಲದ ಮತ್ತು ಓದಲು, ಬರೆಯಲು ಬಾರದವರ ಪಟ್ಟಿಯನ್ನು ಕಾಲಮಿತಿಯಲ್ಲಿ ಸಿದ್ಧಪಡಿಸುವಂತೆ ಕೋರಿಕೊಳ್ಳುವುದು.
5 ಅಪಾರ್ಟ್‌ಮೆಂಟ್ ಸಂಘಗಳಿಗೆ ಕನ್ನಡ ಕಲಿಯಲು ತಮ್ಮ ಸದಸ್ಯರುಗಳಿಗೆ ಪ್ರೇರೇಪಿಸುವಂತಹ ಗೋಷ್ಠಿಗಳನ್ನು ಮತ್ತು ಸಭೆಗಳನ್ನು ನಡೆಸಲು ಆದೇಶಿಸುವುದು.
7 ಪ್ರತಿ ಅಪಾರ್ಟ್‌ಮೆಂಟ್‌ನಲ್ಲಿ 5ಕ್ಕಿಂತ ಹೆಚ್ಚು ಪರಭಾಷಿಕರು ಕನ್ನಡ ಕಲಿಯಲು ಉತ್ಸುಕರಾಗಿದ್ದರೆ, ಭಾನುವಾರದಂದು ಎರಡು ಗಂಟೆಗಳ ಕಾಲ ಕನ್ನಡ ಶಿಕ್ಷಕರಿಂದ ಬೋಧನೆ
ಮಾಡಲು ಆಯೋಜಿಸುವುದು.

ರಮ್ಯಾ ಯಾಕಿಷ್ಟ ಆಗ್ತಾರೆ ಎಂದು ಕನ್ನಡದಲ್ಲೇ ಪತ್ರ ಬರೆದ ನಟಿ ಪೂಜಾ ಗಾಂಧಿ

8 ಪ್ರತಿ ಅಪಾರ್ಟ್‌ಮೆಂಟ್‌ನ ಹೊರಗೆ ಕನ್ನಡ ಮತ್ತು ಆಂಗ್ಲ ಭಾಷೆಯ ಭಿತ್ತಿ-ಲಕಗಳ ಮೂಲಕ ತರಗತಿ ನಡೆಯುವ ವಾರಗಳ ಬಗ್ಗೆ ಪ್ರಚಾರ ನಡೆಸುವುದು.
9 ಅಕ್ಕಪಕ್ಕದ ರಸ್ತೆಗಳಲ್ಲಿರುವ ನಾಗರಿಕರು ತರಗತಿಗಳಿಗೆ ಬರಲಿಚ್ಛಿಸಿದರೆ, ಭಾನುವಾರದ ಆ ಅವಧಿಗಳಲ್ಲಿ, ತರಗತಿ ನಡೆಯುವ ಸ್ಥಳಕ್ಕೆ ಹಾಜರಾಗಲು ಅನುಮತಿ ನೀಡುವುದು.
10 ತರಗತಿಗಳ ಅವಽಯಲ್ಲಿ ಕಾಫಿ ಮತ್ತು ತಿಂಡಿಯ ವ್ಯವಸ್ಥೆಯನ್ನು ಮತ್ತು ಅದರ ವೆಚ್ಚವನ್ನು ಸಂಘದ ವತಿಯಿಂದ ಭರಿಸುವುದು.
11 ಕನ್ನಡ ಶಿಕ್ಷಕರ ಖರ್ಚು ಮತ್ತು ಭತ್ಯೆಗಳನ್ನು ಸರ್ಕಾರದಿಂದ ಪಾವತಿಯಾಗುವಂತೆ ನೋಡಿಕೊಳ್ಳುವುದು.
12 ಕಲಿಕೆಯನ್ನು ಮಾತು ಮತ್ತು ಓದು ಬರಹ ಎಂಬ ಎರಡು ಹಂತಗಳನ್ನಾಗಿ ವಿಂಗಡಿಸುವುದು.
13 ಪ್ರತಿ ಮೂರು ತಿಂಗಳಿಗೊಮ್ಮೆ, ಭಾನುವಾರದಂದು ನಿಗದಿತ ಸರ್ಕಾರಿ ಶಾಲೆಗಳ ಆವರಣದಲ್ಲಿ ಪರೀಕ್ಷೆಗಳನ್ನು ಆಯೋಜಿಸುವುದು.
14 ಕನ್ನಡ ಮಾತನಾಡಲು ಕಲಿತವರಿಗೆ ಕೆಂಪು ಕಾರ್ಡ್‌ಗಳನ್ನು ವಿತರಿಸುವುದು.
15 ಓದಲು ಮತ್ತು ಬರೆಯಲು ಕಲಿತು, ಪರೀಕ್ಷೆಯಲ್ಲಿ ಉತ್ತೀರ್ಣ ರಾದವರಿಗೆ ಹಳದಿ ಕಾರ್ಡನ್ನು ವಿತರಿಸುವುದು.
16 ಶಿಕ್ಷಕರು, ಅಪಾರ್ಟ್‌ಮೆಂಟ್ ಸಂಘಗಳು ನೋಂದಾಯಿಸಿ ಕೊಳ್ಳಲು ಹಾಗೂ ಕೆಂಪು/ಹಳದಿ ಕಾರ್ಡ್‌ಗಳನ್ನು ವಿತರಿಸಲು ಪೋರ್ಟಲ್ ಸ್ಥಾಪಿಸುವುದು.
17 ೧೦ನೇ ತರಗತಿಯಲ್ಲಿ ಕನ್ನಡವನ್ನು ಭಾಷೆಯಾಗಿ ಸ್ವೀಕರಿಸಿ, ಉತ್ತೀರ್ಣ ಹೊಂದಿದವರಿಗೆ, ಪೋರ್ಟಲ್‌ನಲ್ಲಿ ಅಂಕಪಟ್ಟಿಯನ್ನು ಅಪ್ಲೋಡ್ ಮಾಡಿ ಹಳದಿ ಕಾರ್ಡ್ ಪಡೆದುಕೊಳ್ಳಲು
ಅವಕಾಶ ನೀಡುವುದು.
18 ಕೆಂಪು ಮತ್ತು ಹಳದಿ ಕಾರ್ಡ್‌ಗಳನ್ನು ಹೊಂದಲು ಅಭಿಮಾನ ಬರುವಂತೆ ಕುತೂಹಲಕಾರಿ, ಮನಮೋಹಕ ಮತ್ತು ಹೆಮ್ಮೆಯ ಜಾಹೀರಾತುಗಳಿಂದ ವ್ಯಾಪಕ ಪ್ರಚಾರ ನೀಡುವುದು.
19 ಅಮೆರಿಕದ ಹಸಿರು ಕಾರ್ಡ್‌ಗೆ ಸರಿಸಮಾನವಾದ ಹೆಮ್ಮೆ, ಘನತೆ ಮತ್ತು ಮಾನ್ಯತೆ, ಹಳದಿ ಕಾರ್ಡ್ ಹೊಂದಿದವರಿಗೆ ಇದೆಯೆಂಬ ಭಾವನೆ ಸೃಷ್ಟಿಸುವುದು.
20 ಹಳದಿ ಕಾರ್ಡ್ ಹೊಂದಿದವರು ಕನ್ನಡಿಗರೆಂದು ಯಾವುದೇ ಕಾಲಮಿತಿಯಿಲ್ಲದೇ ಮನ್ನಣೆ ಪಡೆಯಬಹುದೇ ಎಂಬುದರ ಬಗ್ಗೆ ಸರ್ಕಾರ ಮರು ಪರಿಶೀಲನೆ ನಡೆಸುವುದು.
21 ಸರೋಜಿನಿ ಮಹಿಷಿ ವರದಿಯ ಕಾಲದಿಂದಲೂ ನೆನೆಗುದಿಯಲ್ಲಿರುವ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿಯ ವಿಷಯದಲ್ಲಿ ಈ ಕಾಲಕ್ಕೆ ಸರಿಹೊಂದುವಂತಹ ಬದಲಾವಣೆಗಳನ್ನು ಮಾಡಿ, ಧೃಡ ನಿಶ್ಚಯದೊಂದಿಗೆ ಅನುಷ್ಠಾನಗೊಳಿಸುವುದು. ಹಳದಿ ಕಾರ್ಡ್ ಹೊಂದಿದವರಿಗೆ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗ ಅವಕಾಶಗಳಲ್ಲಿ ಮನ್ನಣೆಯನ್ನು ನೀಡಬಹುದಾದ ಸಾಧ್ಯತೆಗಳ ಬಗ್ಗೆ ಪ್ರಚಾರ ಮಾಡುವುದು.

ಮನೆಯಾಚೆಯ ಅಮ್ಮ ಅಂಗನವಾಡಿ ಟೀಚರ್‌: ಪೂಜಾ ಗಾಂಧಿ

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ

1  ಬೆಂಗಳೂರು ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ಶಿಕ್ಷಣ ಸಚಿವರ ಮುಂದಾಳತ್ವದಲ್ಲಿ ಆಂಗ್ಲ ಮಾಧ್ಯಮ ಮತ್ತು ಅಂತಾರಾಷ್ಟ್ರೀಯ ಶಾಲೆಗಳ ಪಟ್ಟಿ ಸಿದ್ಧಪಡಿಸುವುದು.
2  ಶಾಲೆಗಳಿಗೆ ಭೇಟಿ ನೀಡಿ ಮಾದರಿ ಪರೀಕ್ಷೆಗಳನ್ನು ನಡೆಸಲು ಮೇಲ್ವಿಚಾರಣೆ ಸಮಿತಿಯನ್ನು ರಚಿಸುವುದು.
3  ಪ್ರತಿ ಆಂಗ್ಲ ಮತ್ತು ಅಂತಾರಾಷ್ಟ್ರೀಯ ಶಾಲೆಯೂ, ಅಗತ್ಯವಿರುವಷ್ಟು ಸಂಖ್ಯೆಯ ಮತ್ತು ಅಗತ್ಯ ಗುಣಮಟ್ಟದ ಕನ್ನಡ ಶಿಕ್ಷಕರನ್ನು ನೇಮಿಸಿದ್ದಾರೆಯೇ ಎಂದು ಪರಿಶೀಲಿಸುವುದು.
4  ಈ ಶಾಲೆಗಳಲ್ಲಿ ಮಕ್ಕಳು ಕನ್ನಡವನ್ನು ಒಂದು ಭಾಷೆಯನ್ನಾಗಿ ಉತ್ತಮ ರೀತಿಯಲ್ಲಿ ಕಲಿಯುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಮೈಲಿಗಲ್ಲು ಮತ್ತು ಮಾಪಕಗಳನ್ನು
ಪೂರ್ವನಿರ್ಧರಿಸುವುದು.
5  ಪ್ರತಿ ಆರು ತಿಂಗಳಿಗೊಮ್ಮೆ, ಈ ಶಾಲೆಗಳಲ್ಲಿನ ಕನ್ನಡ ಕಲಿಕೆಗೆ ಬೇಕಾಗುವ ಪೂರಕ ವ್ಯವಸ್ಥೆಗಳಿಗೆ ಆಗಿರುವ ಬೆಳವಣಿಗೆಗಳ ಬಗ್ಗೆ ದಾಖಲಿಸುವುದು ಮತ್ತು ಸಾರ್ವಜನಿಕರಿಗೆ ಲಭ್ಯಗೊಳಿಸುವುದು.

ಕೊನೆಯ ಮಾತು

ಭಾಷೆ, ನೆಲ, ಜಲ ವಿಷಯಗಳು ಹೆಮ್ಮೆ, ಅಭಿಮಾನದ ಹಂತವನ್ನು ದಾಟಿ ಅತಿರೇಕ, ಹಿಂಸೆ, ಪ್ರಚೋದನೆಗಳಿಗೆ ವಾಲುವ ಸಾಧ್ಯತೆಗಳು ಅತ್ಯಂತ ಸರಳವಾಗಿರುತ್ತದೆ. ಯಾವುದೇ ಕಾರಣಕ್ಕೂ ನಮ್ಮ ಕನ್ನಡ ಯಜ್ಞ ಅಂತಹ ಅತಿರೇಕದ ಗಡಿಯನ್ನು ದಾಟದಂತೆ ಸದಾ ಎಚ್ಚರ ವಹಿಸುವುದು ಕೂಡ ಮುಖ್ಯವಾಗುತ್ತದೆ. ಕರ್ನಾಟಕದ ಬೇರುಗುಣಗಳಾದ ಶಾಂತಿಪ್ರಿಯತೆ, ಪ್ರೀತಿ
ವಾತ್ಸಲ್ಯ ಮತ್ತು ಅತಿಥಿ ಸತ್ಕಾರಗಳಂತಹ ಸಂಸ್ಕಾರಗಳನ್ನು ಗಟ್ಟಿಗೊಳಿಸುತ್ತಾ, ವಿಶ್ವದೆಲ್ಲೆಡೆಯಿಂದ ನಮ್ಮಲ್ಲಿಗೆ ಬರುವವರ ಮನದಲ್ಲಿ ಕನ್ನಡದ ಕಂಪನ್ನು ಅರಳಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕಿದೆ.

Latest Videos
Follow Us:
Download App:
  • android
  • ios