Asianet Suvarna News Asianet Suvarna News

'ಕಾಂಗ್ರೆಸ್ ಬಿಟ್ ಕಾಯಿನ್ ಪ್ರಸ್ತಾಪ ಮಾಡ್ತಿದ್ದಂತೆ ದಲಿತ ವಿರೋಧಿ ವಿಚಾರ ಹೊರಕ್ಕೆ'

* ಸಿದ್ದರಾಮಯ್ಯ ಅವರ ವಿರುದ್ಧ ದಲಿತ ವಿರೋಧಿ ವಿಚಾರ
* ಬಿಜೆಪಿ ನಾಯಕರು ವಿರುದ್ಧ ಕಿರಿಕಾರಿದ ರಾಮಲಿಂಗರೆಡ್ಡಿ
* ವಿಷಯಾಂತರ ಮಾಡಲು ಈ ವಿಚಾರವನ್ನು ಬಿಜೆಪಿ ಪ್ರಸ್ತಾಪ ಮಾಡ್ತಿದೆ ಎಂದ ರಾಮಲಿಂಗರೆಡ್ಡಿ

KPCC Working President Ramalinga Reddy Hits Back at BJP Leader Over  allegation on Siddu rbj
Author
Bengaluru, First Published Nov 6, 2021, 10:13 PM IST

ಬೆಂಗಳೂರು, (ನ.6): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು "ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ' ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು (ಶನಿವಾರ) ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಬಿಜೆಪಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ದಲಿತರಿಗೆ ಬಿಟ್ಟುಕೊಡಲಿ ಎಂದು ತಿರುಗೇಟು ನೀಡಿದರು.

ಬಿಜೆಪಿ ದಲಿತರ ಹೋರಾಟಕ್ಕೆ ಸಿದ್ದರಾಮಯ್ಯ ಆಕ್ರೋಶ

ಬಿಟ್ ಕಾಯಿನ್ ಸುದ್ದಿ ಕಾವು ಪಡೆದುಕೊಳ್ಳುತ್ತಿದ್ದಂತೆ ಜನರ ಗಮನ ಬೇರೆಡೆ ಸೆಳೆಯಲು ಸಿದ್ದರಾಮಯ್ಯ ಅವರ ವಿರುದ್ಧ ದಲಿತ ವಿರೋಧಿ ಎಂಬ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ನಾಯಕರು ಹಾಗೂ ಹಿಂದುಳಿದ ವರ್ಗಗಳ ಘಟಕ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಬಗ್ಗೆ ವಿನಾಕಾರಣ ಟೀಕೆ, ಅಪಪ್ರಚಾರ ಮಾಡುತ್ತಿದ್ದಾರೆ. ಅಧಿಕಾರಕ್ಕೋಸ್ಕರ ಕೆಲವರು ಬಿಜೆಪಿಗೆ ಹೋಗಿದ್ದಾರೆ ಎಂದರೇ ಹೊರತು ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಬಿಜೆಪಿಯವರು ವಿಚಾರಗಳನ್ನು ತಿರುಚುವುದರಲ್ಲಿ ನಿಪುಣರು. ಸುಳ್ಳು, ವಿಷಯಾಂತರ ಮಾಡುವುದು ಬಿಜೆಪಿ ಹುಟ್ಟುಗುಣ. ರಾಜ್ಯ ಹಾಗೂ ದೇಶದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ವಿಷಯಾಂತರ ಮಾಡಿಕೊಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಂಗನಾಥ್, ರಾಥೋಡ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಬಿಜೆಪಿಯವರು ಎಷ್ಟು ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ? ಅವರಿಗೆ ದಲಿತರ ಮೇಲೆ ನಿಜವಾಗಲೂ ಪ್ರೀತಿ ಇದ್ದರೆ ದಲಿತರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡಲಿ ಎಂದು ಸವಾಲು ಹಾಕಿದರು. 

ಬಿಜೆಪಿ ಸರ್ಕಾರದಲ್ಲಿ 35 ಮಂತ್ರಿಗಳಿದ್ದಾರೆ. ಅದರಲ್ಲಿ ಮೂಲ ಬಿಜೆಪಿಗರು 7 ಜನ ಮಾತ್ರ. ಉಳಿದ 28 ಜನ ಕಾಂಗ್ರೆಸ್, ಜೆಡಿಎಸ್ ನಿಂದ ವಲಸೆ ಹೋದವರೇ ಆಗಿದ್ದಾರೆ. ಮೂಲ ಬಿಜೆಪಿಯವರ ಕಥೆ ಏನಾಗಿದೆ? ನಮ್ಮಲ್ಲಿ ಶೇ.80ರಷ್ಟು ಜನ ಮೂಲ ಕಾಂಗ್ರೆಸಿಗರಾದರೆ, ಶೇ.20ರಷ್ಟು ಜನ ನಮ್ಮ ಪಕ್ಷಕ್ಕೆ ಇತರೆ ಪಕ್ಷಗಳಿಂದ ಬಂದು ಸೇರಿಕೊಂಡವರಿದ್ದಾರೆ. ಪ್ರಸ್ತುತ ಕೇಂದ್ರದಲ್ಲಿ ಸಚಿವರಾಗಿರುವ ನಾರಾಯಣ ಸ್ವಾಮಿ ಸಹ ಮೊದಲು ಕಾಂಗ್ರೆಸ್‌ನಲ್ಲೇ ಇದ್ದರು. ಆರಂಭದಿಂದಲೂ ತುಳಿತಕ್ಕೆ ಒಳಗಾದ ಸಮಾಜದವರಿಗೆ ನಮ್ಮ ಪಕ್ಷ ಆದ್ಯತೆ ನೀಡುತ್ತಾ ಬಂದಿದೆ. ಅಂಬೇಡ್ಕರ್ ಅವರು ದಲಿತರಿಗೆ ಮೀಸಲಾತಿ ತಂದರೆ ಅದನ್ನು ಕಾಂಗ್ರೆಸ್ ಪಾಲಿಸಿಕೊಂಡು ಬಂದಿದೆ ಎಂದರು.

ಬಿಟ್ ಕಾಯಿನ್ ಆನ್‌ಲೈನ್ ಮೂಲಕ ನಡೆಯುವ ಡಿಜಿಟಲ್ ಕರೆನ್ಸಿ ವ್ಯವಹಾರ. ಇದರಲ್ಲಿ ಅನೇಕರು ಬಂಡವಾಳ ಹೂಡುತ್ತಿದ್ದಾರೆ. ಆದರೆ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆದರ್ ಲೆಂಡ್, ಮಲೇಷ್ಯಾ, ಅಮೆರಿಕ ಬೇರೆ ಬೇರೆ ದೇಶಗಳಲ್ಲಿ ಹ್ಯಾಕ್ ಮಾಡಿ ಸಾವಿರಾರು ಕೋಟಿ ಹಣ ಮಾಡಿರುವುದು ಅಪರಾಧವಾಗಿದೆ. ಹ್ಯಾಕ್ ಮಾಡಿರುವ ವ್ಯಕ್ತಿಗೆ ಪ್ರಭಾವಿ ನಾಯಕರ ಸಂಪರ್ಕವಿದೆ. ಆಡಳಿತ ಪಕ್ಷದಲ್ಲಿರುವವರು ಪ್ರಭಾವಿನಾಯಕರಾಗಿರುತ್ತಾರೆಯೇ ಹೊರತು ವಿರೋಧ ಪಕ್ಷದವರು ಪ್ರಭಾವಿ ನಾಯಕರಾಗಿರುವುದಿಲ್ಲ. ಇದರಲ್ಲಿ ಪ್ರಭಾವಿ ನಾಯಕರ ಮಗ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಊಹಾಪೋಹವಿದೆ ಎಂದು ಹೇಳಿದರು.

ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿಬಿಐಗೆ ಪ್ರಕರಣ ಹೋದಮೇಲೆ ಸರ್ಕಾರಿ ಗೆಜೆಟ್ ಆಗಿರಬೇಕಲ್ಲವೇ? ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪವಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಸರ್ಕಾರ ಯಾವಾಗ ಇದರ ತನಿಖೆಯನ್ನು ಸಿಬಿಐ, ಇಡಿಗೆ ನೀಡಿದೆ ಎಂದು ತಿಳಿಸಲಿ. ಇಲ್ಲವಾದರೆ ಈ ಪ್ರಕರಣವನ್ನು ಮುಚ್ಚಿಹಾಕಲಾಗುತ್ತದೆ ಎಂಬ ಸುದ್ದಿ ಇದೆ. ನಿಷ್ಪಕ್ಷಪಾತ ತನಿಖೆಯಾದರೆ ಸರ್ಕಾರಕ್ಕೆ ಕಂಟಕ ಇದೆ ಎಂದು ಹೇಳುತ್ತಿದ್ದಾರೆ. ಈ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ಮಾಡಬೇಕು. ಕೇಂದ್ರ ಸರ್ಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ಮಾತ್ರ ಇದರಲ್ಲಿ ಸತ್ಯಾಂಶ ಹೊರಬರುತ್ತದೆ ಅಭಿಪ್ರಾಯಟ್ಟರು.

Follow Us:
Download App:
  • android
  • ios