Asianet Suvarna News Asianet Suvarna News

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ರಂಗೇರಿದ ಚುನಾವಣಾ ಕಣ: ಗೆಲುವಿಗಾಗಿ ಅಭ್ಯರ್ಥಿಗಳ ರಣತಂತ್ರ..!

ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಸಲು ‌ಆಯೋಗ ದಿನಾಂಕ ಪ್ರಕಟಿಸಿದೆ. ಅದರಂತೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ‌ನಡೆಯಲಿದ್ದು, ಅದಕ್ಕಾಗಿ ಚುನಾವಣೆ ಆಯೋಗ ಸಿಬ್ಬಂದಿಗೆ ನಾನಾ ರೀತಿಯ ತರಬೇತಿ ಚುನಾವಣೆಗೆ ರೆಡಿ ಮಾಡಿದೆ.

Candidates Strategy for Victory at Raichur in Lok Sabha Election 2024 grg
Author
First Published Apr 11, 2024, 11:24 AM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಏ.11): ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉರಿ ಬಿಸಿಲಿನಲ್ಲಿ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಸಭೆ- ಸಮಾರಂಭದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಚುನಾವಣೆ ಆಯೋಗವು ಸಹ ಲೋಕಸಭಾ ಚುನಾವಣೆ ‌ಶಾಂತ ರೀತಿಯಿಂದ ನಡೆಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ಚುನಾವಣೆ ವೇಳೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು‌ ನಡೆಯಬಾರದು ಎಂದು ನೀತಿ ಸಂಹಿತೆ ಜಾರಿ ಮಾಡಿ ಚೆಕ್ ಪೋಸ್ಟ್ ಗಳನ್ನ ನಿರ್ಮಿಸಿ ತಪಾಸಣೆ ‌ಮಾಡಲಾಗುತ್ತಿದೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಸಲು ‌ಆಯೋಗ ದಿನಾಂಕ ಪ್ರಕಟಿಸಿದೆ. ಅದರಂತೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ‌ನಡೆಯಲಿದ್ದು, ಅದಕ್ಕಾಗಿ ಚುನಾವಣೆ ಆಯೋಗ ಸಿಬ್ಬಂದಿಗೆ ನಾನಾ ರೀತಿಯ ತರಬೇತಿ ಚುನಾವಣೆಗೆ ರೆಡಿ ಮಾಡಿದೆ.

ರಾಯಚೂರು: ರಾಜಕೀಯ ಹಾವು-ಏಣಿ ಆಟಕ್ಕೆ ಬಲಿ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಅತಂತ್ರರಾದ 'ನಾಯಕ'..!

ರಾಯಚೂರು ಲೋಕಸಭಾ ಕ್ಷೇತ್ರದ ಪರಿಚಯ:

ರಾಯಚೂರು ಲೋಕಸಭಾ ಕ್ಷೇತ್ರವೂ ಎಸ್ ಟಿ ( ಪರಿಶಿಷ್ಟ ಪಂಗಡ) ಮೀಸಲು ಕ್ಷೇತ್ರವಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಯಾದಗಿರಿ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳು ಹಾಗೂ ರಾಯಚೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳು ಒಳಗೊಂಡು ರಾಯಚೂರು ಲೋಕಸಭಾ ಕ್ಷೇತ್ರವಾಗಿದೆ.  ಶೋರಾಪುರ( ಸುರಪುರ)- ವಿಧಾನಸಭಾ ಕ್ಷೇತ್ರದಲ್ಲಿ 317 ಮತಗಟ್ಟೆಗಳು, ಶಹಾಪೂರ ವಿಧಾನಸಭಾ ಕ್ಷೇತ್ರದಲ್ಲಿ 265 ಮತಗಟ್ಟೆಗಳು, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ 268, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 275, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 250, ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ 276, ದೇವದುರ್ಗದಲ್ಲಿ 267 ಹಾಗೂ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ 285 ಮತಗಟ್ಟೆಗಳು ಬರಲಿವೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2203 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಚುನಾವಣಾ ಆಯೋಗ
ಬಿಸಿಲುನಾಡು ಎಂದು ಕರೆಸಿಕೊಳ್ಳುವ ರಾಯಚೂರಿನಲ್ಲಿ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ಅದರಂತೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದರಿಂದ ಬಿರುಬಿಸಿಲಿನಲ್ಲಿಯೂ ಚುನಾವಣೆಗಾಗಿ ಸಕಲ ರೀತಿಯ ಸಿದ್ಧತೆಗಳು ‌ನಡೆದಿವೆ. 

ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳು

ರಾಯಚೂರು ಲೋಕಸಭಾ ಚುನಾವಣೆ ಎರಡನೇ ಹಂತದಲ್ಲಿ ಬರುವ ಚುನಾವಣೆ ಆಗಿದೆ. ಏಪ್ರಿಲ್ 12ರಂದು ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಾಗುವುದು. ಏಪ್ರಿಲ್ 12ರಿಂದ ಅಭ್ಯರ್ಥಿಗಳು ಏಪ್ರಿಲ್ 19ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಏಪ್ರಿಲ್ 20ರಂದು ಸಲ್ಲಿಕೆ ಮಾಡಿದ ನಾಮಪತ್ರದಲ್ಲಿ ಏನಾದರೂ ತಪ್ಪುಗಳು ಇದ್ರೆ ಪರಿಶೀಲನೆ ಮಾಡಿಕೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಏಪ್ರಿಲ್ 22ರಂದು ಅಭ್ಯರ್ಥಿಗಳು ತಾವು ಸಲ್ಲಿಕೆ ಮಾಡಿದ ನಾಮಪತ್ರ ವಾಪಸು ಪಡೆಯಲು ಸಹ ಅವಕಾಶವಿದೆ. ನಾಮಪತ್ರ ಸಲ್ಲಿಕೆ ಮಾಡಲು ಸಹ ಚುನಾವಣೆ ಆಯೋಗ ಹತ್ತಾರು ರೀತಿಯ ನಿಯಮಗಳು ಜಾರಿಗೆ ತಂದಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3ಗಂಟೆವರೆಗೆ ನಾಮಪತ್ರ ಸಲ್ಲಿಕೆ ಮಾಡಬೇಕು. ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿ ಜೊತೆಗೆ 4 ಜನರಿಗೆ ಮಾತ್ರ ಪ್ರವೇಶವಿದೆ. ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರ ಸಲ್ಲಿಕೆಗೆ ಚುನಾವಣಾ ಆಯೋಗ ಅವಕಾಶ ನೀಡಿದೆ. ನಾಮಪತ್ರ ಸಲ್ಲಿಕೆ ವೇಳೆ ಮೂರು ವಾಹನಗಳಿಗೆ ಮಾತ್ರ ಒಳಗಡೆ ಪ್ರವೇಶ ಇರುತ್ತೆ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯೂ 90 ಲಕ್ಷದವರೆಗೆ ಮಾತ್ರ ಚುನಾವಣೆ ವೆಚ್ವ ಮಾಡಲು ಮಿತಿಗೊಳಿಸಿದೆ. ಒಂದು ವೇಳೆ 90 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ ಅಭ್ಯರ್ಥಿಗಳ ವಿರುದ್ಧ ಕೇಸ್ ಸಹ ಬುಕ್ ಆಗಬಹುದು. ಅಲ್ಲದೆ ನಾಮಪತ್ರ ಸಲ್ಲಿಕೆ ಆದ ಬಳಿಕ ಪ್ರಚಾರಕ್ಕೆ ಬಳಕೆ ಆಗುವ ಪ್ರತಿಯೊಂದು ವಸ್ತುಗಳ ಅನುಮತಿ ಪಡೆದು ಚುನಾವಣೆ ಪ್ರಚಾರ ಮಾಡಬೇಕು.
ಅಭ್ಯರ್ಥಿಗಳು ಅಥವಾ ಪಕ್ಷದ ಮುಖಂಡರು ಮಾದರಿ ‌ನೀತಿ ಸಂಹಿತೆ ‌ಉಲ್ಲಂಘನೆ ಮಾಡಿದ್ರೆ ಸಾರ್ವಜನಿಕರು ಸಹ ದೂರು ನೀಡಲು ಚುನಾವಣೆ ಆಯೋಗ ‌ಅವಕಾಶ‌ ನೀಡಿದೆ. ಟೋಲ್ ಫ್ರೀ 1950ಗೆ ದೂರು ನೀಡಬಹುದು ಅಥವಾ ಸಿ- ವಿಜಿಲ್ ಮುಖಾಂತರ ದೂರು ನೀಡಲು ಪ್ರಕಟಣೆಯಲ್ಲಿ ‌ತಿಳಿಸಿದೆ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರದೇ ದರ್ಬಾರ್

ದೇಶದ ತುಂಬಾ ಲೋಕಸಭೆ ಚುನಾವಣೆ ಪ್ರಚಾರ ಜೋರಾಗಿ ನಡೆದಿದೆ. ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಮತದಾರರ ಪಟ್ಟಿ ಹಿಡಿದುಕೊಂಡು ‌ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ. ಅದರಂತೆ ರಾಯಚೂರು ಲೋಕಸಭಾ ಕ್ಷೇತ್ರದ ವಿಚಾರಕ್ಕೆ  ಬಂದ್ರೆ 8 ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು 19, 93,755 ಮತದಾರರು ಇದ್ದಾರೆ. ಅದರಲ್ಲಿ ಪುರುಷರು 9,85,675 ಮತದಾರರು ಇದ್ರೆ, ಮಹಿಳಾ ಮತದಾರರು 10,05,242 ಇದ್ದಾರೆ. ಹೀಗಾಗಿ ಅಭ್ಯರ್ಥಿಗಳು ‌ಮಹಿಳಾ ಮತದಾರ ಮನಸೆಳೆಯುವ ‌ಕಸರತ್ತು ಶುರು ಮಾಡಿದ್ದಾರೆ. 8 ವಿಧಾನಸಭಾ ‌ಕ್ಷೇತ್ರದಲ್ಲಿ ಸುರಪುರ ಕ್ಷೇತ್ರ ಹೊರತುಪಡಿಸಿ ‌ಇನ್ನುಳಿದ 7 ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. 

ಹಿರಿಯ ನಾಗರಿಕರು ‌ಮತ್ತು ವಿಕಲಚೇತನರಿಗೆ ಮನೆಯಲ್ಲಿ ಮತದಾನಕ್ಕೆ ವ್ಯವಸ್ಥೆ

ಚುನಾವಣೆ ಆಯೋಗ ‌ಮತದಾನ ಹೆಚ್ಚಳಕ್ಕೆ ಸಕಲ ರೀತಿಯ ಪ್ರಚಾರ ಶುರು ಮಾಡಿದೆ. ಸ್ವೀಪ್ ಸಮಿತಿ ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಮತದಾನದ ಮಹತ್ವದ ಕುರಿತು ಪ್ರಚಾರ ಶುರು ಮಾಡಿದೆ. ಅಲ್ಲದೇ ವಿವಿಫ್ಯಾಡ್ ಮಾದರಿ ವಾಹನವೊಂದು ರೆಡಿ ಮಾಡಿ ಕಡಿಮೆ ಮತದಾನ ಆಗಿರುವ ವಿಧಾನಸಭಾ ‌ಕ್ಷೇತ್ರದಲ್ಲಿ ಮತದಾನದ ಮಹತ್ವ ‌ಕುರಿತು ಜಾಗೃತಿ ಮೂಡಿಸಲು‌‌ ಮುಂದಾಗಿದೆ. ಅಲ್ಲದೆ ಚುನಾವಣೆ ಆಯೋಗ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಪಟ್ಟಿ ಮಾಡಿದ್ದು ಅವರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ ವಿಕಲಚೇತನರು ಸಹ ಅಂಚೆ ಮತ ಚಲಾಯಿಸಬಹುದಾಗಿದೆ.

ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳು:

ಪ್ರಜಾಪ್ರಭುತ್ವ ಹಬ್ಬ ಮತದಾನ, ಇಂತಹ ‌ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲು ಚುನಾವಣಾ ಆಯೋಗ ಸಕಲ ರೀತಿಯ ವ್ಯವಸ್ಥೆಗೆ ಮುಂದಾಗಿದೆ. ರಾಯಚೂರು ‌ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2203 ಮತಗಟ್ಟೆಗಳು ಇದ್ದು, ಅದರಲ್ಲಿ 423 ಮತಗಟ್ಟೆಗಳು ಸೂಕ್ಷ್ಮ ಮತ್ತು 46 ಮತಗಟ್ಟೆಗಳು ಅತೀ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಅಲ್ಲದೇ ಚುನಾವಣೆ ಕಾರ್ಯಕ್ಕಾಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ತಂಡಗಳ 16ನೋಡಲ್  ಆಫೀಸರ್ ಗಳನ್ನ ನೇಮಕ ಮಾಡಲಾಗಿದೆ. ಎಫ್ ಎಸ್ ಟಿ, ಎಸ್ ಎಸ್ ಟಿ, ವಿಎಸ್ ಟಿ, ವಿವಿಟಿ ಸದಸ್ಯರು, ಎಸ್ ಒ, ಎಇಒ ಮತ್ತು ಎಟಿ ಹೀಗೆ ವಿವಿಧ ತಂಡದಲ್ಲಿ ಒಟ್ಟು 340 ಸಿಬ್ಬಂದಿಯನ್ನ ನಿಯೋಜನೆ ‌ಮಾಡಲಾಗಿದೆ.

ನಮ್ಮದು ನಿನ್ನೆ ಮೊನ್ನೆ ಬಂದ ಮನೆತನ ಅಲ್ಲ; ಸುಳ್ಳು ಜಾತಿ ಪ್ರಮಾಣಪತ್ರ ಆರೋಪಕ್ಕೆ ರಾಜಾ ಅಮರೇಶ್ವರ ನಾಯಕ ತಿರುಗೇಟು!

ಲೋಕಸಭಾ ಚುನಾವಣೆಗಾಗಿ 10ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

ರಾಯಚೂರು ‌ಲೋಕಸಭಾ ಕ್ಷೇತ್ರವೂ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಗಡಿ ಹೊಂದಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆಸುವುದು ಚುನಾವಣಾ ಅಧಿಕಾರಿಗೆ ದೊಡ್ಡ ಸವಾಲ್ ಆಗಿದೆ. ಹೀಗಾಗಿ ನೀತಿ ಸಂಹಿತೆ ಜಾರಿ ಆಗುತ್ತಿದ್ದಂತೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 23 ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಿದೆ. 5 ಅಂತರ ರಾಜ್ಯ 9 ಅಂತರ ಜಿಲ್ಲೆ ಹಾಗೂ ‌9 ಜಿಲ್ಲೆಯೊಳಗೆ ಚೆಕ್ ಪೋಸ್ಟ್ ‌ಮಾಡಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿದ್ದು, ದಿನದ 24 ಗಂಟೆಗಳ ಕಾಲ ನಿಗಾವಹಿಸಿ ಸಿಬ್ಬಂದಿ ‌ನಿಯೋಜನೆ ಮಾಡಿ ಪ್ರತಿಯೊಂದು ವಾಹನಗಳ  ತಪಾಸಣೆ ‌ಮಾಡಲಾಗುತ್ತಿದೆ. ಅಲ್ಲದೇ ಅಕ್ರಮಗಳಿಗೆ ಬ್ರೇಕ್ ಹಾಕುವ ದೃಷ್ಟಿಯಿಂದ ಅಂತರ ರಾಜ್ಯಗಳಾದ ಆಂಧ್ರ ‌ಮತ್ತು ತೆಲಂಗಾಣದ ಅಧಿಕಾರಿಗಳ ಜೊತೆಗೆ ಅಂತರ ರಾಜ್ಯ ಗಡಿ ಸಭೆ ಕೂಡ ಮಾಡಲಾಗಿದೆ. ಸಭೆಯಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕ್ರಮಕೈಗೊಳುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ‌ಕೈಗೊಳ್ಳಲಾಗಿದೆ. 

ಒಟ್ಟಾರೆ ಲೋಕಸಭಾ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಗಳು ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಏಪ್ರಿಲ್ 12ರಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದ್ದು, ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios