Asianet Suvarna News Asianet Suvarna News

ಕಾಂಗ್ರೆಸ್‌ನಿಂದ ಬ್ಲಾಕ್‌ಮೇಲ್‌ ರಾಜಕೀಯ: ಸಂಸದ ಮುನಿಸ್ವಾಮಿ ಕಿಡಿ

ಸಿದ್ದರಾಮಯ್ಯ ಹಿರಿಯರಾಗಿದ್ದು, ಮುಖ್ಯಮಂತ್ರಿಯಾದ ಬಳಿಕ ಇತ್ತೀಚೆಗೆ ತನಿಖೆ ನೆಪದಲ್ಲಿ ವಿರೋಧ ಪಕ್ಷದವರನ್ನು ಬ್ಲಾಕ್‌ಮೇಲ್‌ ಮಾಡಿ ಬೆದರಿಕೆ ಹಾಕುತ್ತಿದ್ದು, ಅದನ್ನು ಬಿಟ್ಟು 5 ಗ್ಯಾರಂಟಿಗಳ ಜಾರಿಗೆ ಮುಂದಾಗುವುದು ಸೂಕ್ತ ಎಂದು ಸಂಸದ ಎಸ್‌.ಮುನಿಸ್ವಾಮಿ ಕಿಡಿಕಾರಿದರು. 

Blackmail politics by Congress Says MP S Muniswamy gvd
Author
First Published Jul 13, 2023, 1:55 PM IST

ಕೋಲಾರ (ಜು.13): ಸಿದ್ದರಾಮಯ್ಯ ಹಿರಿಯರಾಗಿದ್ದು, ಮುಖ್ಯಮಂತ್ರಿಯಾದ ಬಳಿಕ ಇತ್ತೀಚೆಗೆ ತನಿಖೆ ನೆಪದಲ್ಲಿ ವಿರೋಧ ಪಕ್ಷದವರನ್ನು ಬ್ಲಾಕ್‌ಮೇಲ್‌ ಮಾಡಿ ಬೆದರಿಕೆ ಹಾಕುತ್ತಿದ್ದು, ಅದನ್ನು ಬಿಟ್ಟು 5 ಗ್ಯಾರಂಟಿಗಳ ಜಾರಿಗೆ ಮುಂದಾಗುವುದು ಸೂಕ್ತ ಎಂದು ಸಂಸದ ಎಸ್‌.ಮುನಿಸ್ವಾಮಿ ಕಿಡಿಕಾರಿದರು. ನಗರ ಹೊರವಲಯದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅಲ್ಲದೆ ಆಪ್ತ ಸಚಿವ ಎಂ.ಬಿ.ಪಾಟೀಲ್‌ ಸೇರಿದಂತೆ ಮತ್ತಿತರರಿಂದಲೂ ಹೇಳಿಸುವುದಕ್ಕೆ ಆರಂಭಿಸಿದ್ದಾರೆ. ಯರಗೋಳ್‌ ಯೋಜನೆಯಾದರೂ ತನಿಖೆ ಮಾಡಲಿ, ಕೆಸಿವ್ಯಾಲಿ ಯೋಜನೆ, ಎತ್ತಿನಹೊಳೆ ಯೋಜನೆಯಾದರೂ ತನಿಖೆ ಮಾಡಲಿ ಬೇಡ ಎಂದು ನಾವು ಹೇಳುವುದಿಲ್ಲ.

ಬ್ಲಾಕ್‌ಮೇಲ್‌ ಮಾಡುವುದು, ಬೆದರಿಕೆ ಹಾಕವುದನ್ನು ಬಿಟ್ಟು ಜನತೆಗೆ ನೀಡಿರುವ 5 ಗ್ಯಾರಂಟಿಗಳ ಜಾರಿಗೆ ಮುಂದಾಗಬೇಕು. ಅದನ್ನು ಬಿಟ್ಟು ಜನರ ದೃಷ್ಠಿಯನ್ನು ಬೇರೆ ಕಡೆ ತಿರುಗಿಸಲು ಹೊರಟಿರುವುದು ಗ್ಯಾರಂಟಿಗಳಿಂದ ಎಸ್ಕೇಪ್‌ ಆಗುವುದಕ್ಕೆ ಹೂಡುತ್ತಿರುವ ಅಸ್ತ್ರದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು. ತನಿಖೆ ಮಾಡುವುದಾದರೆ ನೀವು ಹಿಂದೆ ಮುಖ್ಯಮಂತ್ರಿಗಳಾಗಿದ್ದ ವೇಳೆಯಿಂದಲೂ ಎಲ್ಲವೂ ತನಿಖೆಯಾಗಲಿ. ಸರಕಾರವನ್ನು ಸರಿಯಾಗಿ ನಡೆಸಲು ಸಾಧ್ಯವಾಗದೆ ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲದೆ ಈ ರೀತಿ ಮಾಡಿ ಜನರ ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ ಎಂದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರನ್ನು ಮುಂದಿಟ್ಟುಕೊಂಡು ನಮ್ಮ ಬಿಜೆಪಿ ಮೇಲೆ ಶೇ.40ರಷ್ಟುಸರಕಾರ ಎಂದು ಗೂಬೆ ಕೂರಿಸಿದ್ದೀರಿ, 

ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ: ಭವಿಷ್ಯ ನುಡಿದ ಶಾಸಕ ವಿಜಯೇಂದ್ರ

ಈಗ ಬಿಲ್‌ಗಳನ್ನು ಮಾಡದೆ ನಿಮ್ಮದು ಶೇ.60ರಷ್ಟು ಸರಕಾರ ಎಂದು ಹೇಳಿದ್ದಾರೆ. ಇನ್ನು ಸಚಿವರು ಬಕ ಪಕ್ಷಿಗಳಂತೆ ಕಾದಿದ್ದು, ವರ್ಗಾವಣೆ ದಂಧೆಯಲ್ಲಿ ತೊಡಗಿಸಿದ್ದಾರೆ ಎಂದು ಆರೋಪಿಸಿದರು. ಯಾವುದೇ ಕೆಲಸ ಕಾರ್ಯ ಮಾಡದೇ, ಹಿಂದೂ ಕಾರ್ಯಕರ್ತರ ಕೊಲೆಯಾಗಿರುವುದಕ್ಕೆ ಕ್ರಮ ಕೈಗೊಳ್ಳದೇ ಕೇವಲ 2 ತಿಂಗಳಲ್ಲಿಯೇ ನಿಮ್ಮ ಸರಕಾರ ವಿಫಲವಾಗಿದೆ. ಈ ಗ್ಯಾರಂಟಿಗಳನ್ನು ಪೂರ್ಣಗೊಳಿಸುವ ಜತೆಗೆ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳದಿದ್ದರೆ ಅಧಿಕಾರದಲ್ಲಿ ಇರಲು ನಿಮಗೆ ನೈತಿಕತೆ ಇಲ್ಲ. ಬ್ಲಾಕ್‌ಮೇಲ್‌, ಬೆದರಿಕೆ ಎನ್ನುವುದು ಹಳೆಯ ತುಕ್ಕು ಹಿಡಿದಿರುವಂತಹ ಅಸ್ತ್ರಗಳಾಗಿದ್ದು, ಅವುಗಳನ್ನು ಬಿಟ್ಟು ಹೊಸ ಬಾಣಗಳನ್ನು ಬಿಡಲು ಮುಂದಾಗಿ ಎಂದರು.

ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ವೇಳೆ ಕೆಜಿಎಫ್‌ ಬಳಿ 12,600 ಎಕರೆ ಜಾಗವಿದ್ದು, ಟೌನ್‌ಶಿಪ್‌ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಶಾಸಕಿ ರೂಪಕಲಾ ನಮ್ಮ ಜತೆಗಿದ್ದರು. ಕೇಂದ್ರ ಸಚಿವರಿಗೆ ಮನವಿ ನೀಡಿದಾಗ ಮನೆಗಳನ್ನು ಆ ಜಾಗದಲ್ಲಿ ಮಾಡಿಕೊಡಲು ನೋಟೀಸ್‌ಗಳನ್ನು ನೀಡಲಾಗಿದೆ. ಕೆಜಿಎಫ್‌ನಲ್ಲಿ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರಕಾರದಲ್ಲಿ ಆಗಿರುವುದೇ ಹೊರತು ಕಾಂಗ್ರೆಸ್‌ ಸರಕಾರದಲ್ಲಿ ಅಲ್ಲ. ಈಗ ನೋಡಿದರೆ ಶಾಸಕರು ನಾನು ಮಾಡಿರುವುದು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಕೆಜಿಎಫ್‌ನ 30 ಕಾರ್ಮಿಕರಿಗೆ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಪತ್ರಗಳನ್ನು ಕೊಡಿಸುವವರೆಗೂ ನಿರಂತರವಾಗಿ ಕೆಲಸ ಮಾಡುತ್ತೇವೆ ಎಂದರು.

ಬಿಜೆಪಿ ನೋಟಿಸ್‌ಗೆ ಉತ್ತರ ಕೊಡಲ್ಲ: ಮತ್ತೊಮ್ಮೆ ರೇಣುಕಾಚಾರ್ಯ ಗುಟುರು

ಲೋಕಸಭೆ ಚುನಾವಣೆಗೆ ಯಾರೂ ನಿರೀಕ್ಷಿಸಿರದಂತಹ ಅಭ್ಯರ್ಥಿಯನ್ನು ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿಸಲಾಗುವುದಾಗಿ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ಎಸ್‌ಎನ್‌ ಅವರೇ ಬಂದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಕ್ಕೆ ಹೇಳಿ. ಹೊಸ ಅಭ್ಯರ್ಥಿ ಎಂದರೆ ಯಾವ ಲೋಕದಿಂದ ತರುತ್ತಾರಂತೆ ಎಂದು ಪ್ರಶ್ನಿಸಿ ಲೇವಡಿ ಮಾಡಿದರು. ಎಸ್‌ಎನ್‌ ಆಗಲಿ, ಇನ್ನೊಬ್ಬರಾಗಲೀ, ಅವರ ಮಗನಾಗಲೀ, ಕೆ.ಎಚ್‌.ಮುನಿಯಪ್ಪ ಅವರ ಮಕ್ಕಳು ಸೇರಿದಂತೆ ಯಾರು ಬೇಕಾದರೂ ಸ್ಪರ್ಧಿಸಲಿ ನಮಗೆ ಭಯವಿಲ್ಲ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ತಪ್ಪು ಮಾಡಿರುವ ಕುರಿತು ಜನರಿಗೆ ಅರಿವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ಕೊಡಲಿದ್ದಾರೆ ಎನ್ನುವುದನ್ನು ಶಾಸಕರು ಅರ್ಥ ಮಾಡಿಕೊಳ್ಳಲಿ ಎಂದರು.

Follow Us:
Download App:
  • android
  • ios