Asianet Suvarna News Asianet Suvarna News

JLF 2022: ಭಾರತ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರುವ ಶಕ್ತಿ ರೈತರಿಗಿದೆ

ಭಾರತೀಯ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರುವ ಶಕ್ತಿ ರೈತರಿಗಿದೆ. ಒಂದು ವರುಷದ ಸುದೀರ್ಘ ಪ್ರತಿಭಟನೆಯಿಂದ ರೈತ ಕಾಯಿದೆಯನ್ನು ಸರ್ಕಾರ ಹಿಂಪಡೆಯುವಂತೆ ಮಾಡಿದ್ದೇ ಅದಕ್ಕೆ ಸಾಕ್ಷಿ.

Farmers must be part of Agri Policies Discussion in Jaipur Literature Festival 2022
Author
Bangalore, First Published Mar 14, 2022, 5:30 AM IST

ಜೈಪುರ (ಮಾ.14): ಭಾರತೀಯ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರುವ ಶಕ್ತಿ ರೈತರಿಗಿದೆ. ಒಂದು ವರುಷದ ಸುದೀರ್ಘ ಪ್ರತಿಭಟನೆಯಿಂದ ರೈತ ಕಾಯಿದೆಯನ್ನು ಸರ್ಕಾರ ಹಿಂಪಡೆಯುವಂತೆ ಮಾಡಿದ್ದೇ ಅದಕ್ಕೆ ಸಾಕ್ಷಿ. ಇದರಿಂದಾಗಿ ಇಲ್ಲಿಯ ತನಕ ಕಡೆಗಣಿಸಲ್ಪಟ್ಟಿರುವ ರೈತ ಸಮುದಾಯದತ್ತ ರಾಜಕೀಯದ ಗಮನ ಹರಿದಿದೆ. ಇದು ಬದಲಾವಣೆಗೆ ಕಾರಣವಾಗಲಿದೆ ಎಂಬ ಅಭಿಪ್ರಾಯ ಜೈಪುರ ಸಾಹಿತ್ಯೋತ್ಸವದ 4ನ ದಿನ ನಡೆದ ರೈತ ಸಮುದಾಯದ ಕುರಿತ ಗೋಷ್ಠಿಯಲ್ಲಿ ವ್ಯಕ್ತವಾಯಿತು. ಲೇಖಕರಾದ ಮುಕುಲಿಕಾ ಬ್ಯಾನರ್ಜಿ, ಪತ್ರಕರ್ತೆ ನಮಿತಾ ವಾಯ್ಕರ್‌ ಹಾಗೂ ಲೇಖಕ ಬದರಿನಾರಾಯಣ್‌ ಈ ಕುರಿತು ಚರ್ಚಿಸಿದರು.

ದೇಶದಲ್ಲಿ ಮೈಮುರಿದು ದುಡಿಯುವವನು ರೈತ. ಎಲ್ಲರೂ ಅಷ್ಟೇ ಶ್ರದ್ಧೆಯಿಂದ ದುಡಿದರೆ ನಮ್ಮ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಮುಕುಲಿಕಾ ಬ್ಯಾನರ್ಜಿ ಅಭಿಪ್ರಾಯಪಟ್ಟರು. ಹೆಚ್ಚುತ್ತಿರುವ ನಗರೀಕರಣ ರೈತರನ್ನು ನಿರ್ಲಕ್ಷ್ಯ ಮಾಡುತ್ತಲೇ ಬರುತ್ತಿದೆ. ರೈತ ಚಳವಳಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಬದರಿನಾರಾಯಣ್‌ ಆಪಾದಿಸಿದರು.

JLF 2022: ಜೈಪುರ ಸಾಹಿತ್ಯೋತ್ಸವ ಮೂರನೇ ದಿನದ ಸ್ವಾರಸ್ಯಗಳು

ದಿನದ ಇಪ್ಪತ್ನಾಲ್ಕು ಗಂಟೆಯೂ ಬಿಡುವಿಲ್ಲದೇ ದುಡಿಯುವ ರೈತರಿಗೆ ಮಹಾನಗರಗಳಲ್ಲಿ ಕುಳಿತು ಕಾಯಿದೆಗಳನ್ನು ರೂಪಿಸುವ ರಾಜಕಾರಣಿಗಳಿಂದ ವಿಪರೀತ ತೊಂದರೆಯಾಗುತ್ತಿದೆ. ರೈತರಿಗೆ ಸಂಬಂಧಿಸಿದ ಕಾಯಿದೆಗಳನ್ನು ಜಾರಿಗೆ ತರುವಾಗ ಕೂಡ ರೈತನ ಅಭಿಪ್ರಾಯವನ್ನು ಯಾರೂ ಕೇಳುವುದಿಲ್ಲ. ಏಕಪಕ್ಷೀಯವಾಗಿ ತೆಗೆದುಕೊಳ್ಳುವ ನಿರ್ಧಾರಗಳು ರೈತರ ಬದುಕನ್ನು ಹೈರಾಣಾಗಿಸಿವೆ ಎಂದು ನಮಿತಾ ಆಕ್ರೋಶ ವ್ಯಕ್ತಪಡಿಸಿದರು. ಗೋಹತ್ಯೆ ವಿರೋಧಿ ಕಾನೂನು ಜಾರಿಗೆ ಬಂದ ನಂತರ ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಬಿಡಾಡಿ ಹಸುಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಯಾರೂ ಗಮನಿಸುತ್ತಿಲ್ಲ ಎಂದು ನಮಿತಾ ವಾದಿಸಿದರು.

ರೈತರಲ್ಲಿ ಒಗ್ಗಟ್ಟಿಲ್ಲ ಎನ್ನುವುದಕ್ಕೆ ಉತ್ತರ ಪ್ರದೇಶ ಚುನಾವಣಾ ಫಲಿತಾಂಶವೇ ಸಾಕ್ಷಿ. ಒಂದು ವರುಷದ ಹೋರಾಟದ ನಂತರವೂ ಉತ್ತರಪ್ರದೇಶದಲ್ಲಿ ಜಾತಿ ಮೇಲುಗೈ ಕಂಡಿದೆ ಎಂಬುದು ಏನನ್ನು ಸೂಚಿಸುತ್ತದೆ ಎಂದು ಬದರಿನಾರಾಯಣ್‌ ಕೇಳಿದಾಗ, ರೈತರು ಒಗ್ಗಟ್ಟಾಗಿದ್ದಾರೆ. ರೈತ ಕಾಯಿದೆಯನ್ನು ಸರ್ಕಾರ ಮರಳಿ ಪಡೆದದ್ದೇ ರೈತರ ಗೆಲುವಿಗೆ ಸಾಕ್ಷಿ ಎಂದು ಮುಕುಲಿಕಾ ಉತ್ತರಿಸಿದರು.

ಪುಟ್ಟ ಬಾಲೆಯ ದೊಡ್ಡ ಮಾತು: ಜೈಪುರ ಸಾಹಿತ್ಯ ಉತ್ಸವ ಎರಡನೆಯ ದಿನದ ಸ್ವಾರಸ್ಯಗಳು

ಕನಿಷ್ಠ ಬೆಂಬಲ ಬೆಲೆಯ ಅಡಿಯಲ್ಲಿ 13 ಬೆಳೆಗಳು ಬರಬೇಕು. ಕೇವಲ ಭತ್ತ ಮತ್ತು ಗೋಧಿಗೆ ಮಾತ್ರ ಈಗ ಬೆಂಬಲ ಬೆಲೆ ಸಿಗುತ್ತಿದೆ. ಹೆಚ್ಚುತ್ತಿರುವ ಕೃಷಿ ವೆಚ್ಚ, ಬತ್ತುತ್ತಿರುವ ಅಂತರ್ಜಲ ಮತ್ತು ರಾಜಕೀಯ ನಿರ್ಲಕ್ಷ್ಯ ರೈತನನ್ನು ದುಸ್ಥಿತಿಗೆ ತಳ್ಳಿದೆ. ದೇಶದ ಕುರಿತಾದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಹೊತ್ತಲ್ಲಿ ರೈತನಿಗೂ ತನ್ನ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಇರಬೇಕು ಎಂಬ ಒಮ್ಮತದ ಅಭಿಪ್ರಾಯದೊಂದಿಗೆ ಗೋಷ್ಠಿ ಮುಕ್ತಾಯಗೊಂಡಿತು.
 

Follow Us:
Download App:
  • android
  • ios