Asianet Suvarna News Asianet Suvarna News

ಎಚ್‌ ನರಸಿಂಹಯ್ಯ ಶತಮಾನ ಸಂಭ್ರಮ: ಅವರ ಒಡನಾಡಿ ಕಂಡಂತೆ ಎಚ್ಚೆನ್

ಡಾ. ಎಚ್‌ ನರಸಿಂಹಯ್ಯ ಅಂದರೆ ಹಲವರಿಗೆ ನ್ಯಾಶನಲ್‌ ಕಾಲೇಜ್‌, ಅಲ್ಲಿ ಕಲಿತ ದಿನಗಳು ನೆನಪಾಗುತ್ತವೆ. ನ್ಯಾಶನಲ್‌ ಕಾಲೇಜು ಬಸವನ ಗುಡಿಯ ಬೆನ್ನೆಲುಬಾಗಿ ನಿಂತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಸುಂದರ ಭವಿಷ್ಯ ಕಟ್ಟಿಕೊಟ್ಟವರು ನರಸಿಂಹಯ್ಯ ಅವರು. ಸ್ವಾತಂತ್ರ್ಯ ಹೋರಾಟಗಾರರು, ಇದಕ್ಕಾಗಿ ಜೈಲುಶಿಕ್ಷೆಯನ್ನೂ ಅನುಭವಿಸಿದವರು. ಇವರ ಹೋರಾಟದ ಹಾದಿ ಇಂದಿಗೂ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿ. 

Dr H Narasimhaiah 100 th  birthday special
Author
Bengaluru, First Published Jun 6, 2020, 3:49 PM IST

ಡಾ. ಎಚ್‌ ನರಸಿಂಹಯ್ಯ ಅಂದರೆ ಹಲವರಿಗೆ ನ್ಯಾಶನಲ್‌ ಕಾಲೇಜ್‌, ಅಲ್ಲಿ ಕಲಿತ ದಿನಗಳು ನೆನಪಾಗುತ್ತವೆ. ನ್ಯಾಶನಲ್‌ ಕಾಲೇಜು ಬಸವನ ಗುಡಿಯ ಬೆನ್ನೆಲುಬಾಗಿ ನಿಂತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಸುಂದರ ಭವಿಷ್ಯ ಕಟ್ಟಿಕೊಟ್ಟವರು ನರಸಿಂಹಯ್ಯ ಅವರು. ಸ್ವಾತಂತ್ರ್ಯ ಹೋರಾಟಗಾರರು, ಇದಕ್ಕಾಗಿ ಜೈಲುಶಿಕ್ಷೆಯನ್ನೂ ಅನುಭವಿಸಿದವರು. ಇವರ ಹೋರಾಟದ ಹಾದಿ ಇಂದಿಗೂ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿ.

ಗಾಂಧೀಜಿ ಅವರು ಬೆಂಗಳೂರಿಗೆ ಬಂದಾಗ ಅವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆಗೊಳಿಸಿದವರು. ಅಮೆರಿಕಾದಲ್ಲಿ ಡಾಕ್ಟರೇಟ್‌ ಪಡೆದ ನಂತರವೂ ಅವರು ನ್ಯಾಶನಲ್‌ ಕಾಲೇಜಿನ ಮೇಷ್ಟ್ರರಾಗಿದ್ದದ್ದು, ಇಲ್ಲಿಯ ಹಾಸ್ಟೆಲ್‌ನಲ್ಲೇ ಸರಳ ಜೀವನ ನಡೆಸಿದ್ದು ಅವರ ಸರಳತನಕ್ಕೆ ಸಾಕ್ಷಿ. ಬೆಂಗಳೂರು ವಿವಿಯ ಉಪ ಕುಲಪತಿ, ಎಂಎಲ್‌ಸಿಯಾದರೂ ನ್ಯಾಶನಲ್‌ ಕಾಲೇಜು ನಂಟನ್ನು ಬಿಟ್ಟವರಲ್ಲ. ಜೂ.6 ಅವರ ನೂರನೇ ವರ್ಷದ ಜನ್ಮದಿನ. 2020 ಅವರ ಜನ್ಮ ಶತಮಾನೋತ್ಸವ ವರ್ಷ. ಈ ಹಿನ್ನೆಲೆಯಲ್ಲಿ ಎಚ್‌ಎನ್‌ ಅವರ ಒಡನಾಡಿ, ನ್ಯಾಶನಲ್‌ ಎಜುಕೇಶನ್‌ ಸೊಸೈಟಿ ಅಧ್ಯಕ್ಷ ಡಾ.ಎ ಎಚ್‌ ರಾಮರಾವ್‌ ಅವರ ಸಂದರ್ಶನ.

- ಹೆಚ್‌ ನರಸಿಂಹಯ್ಯನವರು ಅಂದರೆ ಮುಂದೆ ಬರೋ ಮಾತೇ ನ್ಯಾಶನಲ್‌ ಕಾಲೇಜ್‌. ಶಿಷ್ಯಕೋಟಿಯ ಪ್ರೀತಿಯ ಎಚ್‌ಎನ್‌ ಮತ್ತು ನ್ಯಾಶನಲ್‌ ಕಾಲೇಜ್‌ ಪರಸ್ಪರ ಬಿಡಿಸಲಾಗದ ಗಂಟಾದದ್ದು ಹೇಗೆ?

- ಇದನ್ನು ವಿವರಿಸುವ ಮೊದಲು ಎಚ್‌ ನರಸಿಂಹಯ್ಯ ಅವರು ನ್ಯಾಶನಲ್‌ ಕಾಲೇಜಿಗೆ ಬಂದದ್ದನ್ನು ಹೇಳಬೇಕು. 1932-1934ರ ಸುಮಾರು. ಗೌರಿಬಿದನೂರು ಪಕ್ಕದ ಹೊಸೂರಿನಲ್ಲಿದ್ದ ನರಸಿಂಹಯ್ಯ ಅವರ 8ನೇ ಕ್ಲಾಸ್‌ ಮುಗಿದು ಎರಡು ವರ್ಷ ಕಳೆದಿತ್ತು. ಇನ್ನೂ ಕಲಿಯೋದು ಇರುತ್ತೆ ಅನ್ನೋದು ಅವರಿಗೆ ಗೊತ್ತೇ ಇರಲಿಲ್ಲ. ಇವರಿಗೆ ಕಲಿಸುತ್ತಿದ್ದ ಮೇಷ್ಟಿ್ರಗೆ ಬೆಂಗಳೂರಿಗೆ ವರ್ಗವಾಯಿತು. ಮಹಾನ್‌ ಪ್ರತಿಭಾವಂತ ಹುಡುಗ ನರಸಿಂಹಯ್ಯ ಅವರನ್ನೂ ಆ ಮೇಷ್ಟು್ರ ಬೆಂಗಳೂರಿಗೆ ಕರೆತಂದು ಇಲ್ಲಿನ ನ್ಯಾಶನಲ್‌ ಹೈಸ್ಕೂಲ್‌ಗೆ ಸೇರಿಸಿದರು.

ಕಲಿಕೆಯಲ್ಲಿ ಪ್ರಚಂಡರಾಗಿದ್ದ ನರಸಿಂಹಯ್ಯ ಇಲ್ಲಿನ ಶಿಕ್ಷಕರ ಒತ್ತಾಸೆಯಲ್ಲಿ ಬೆಳೆಯುತ್ತಲೇ ಹೋದರು. ಮುಂದೊಮ್ಮೆ ಅವರು ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಿ ಡಾಕ್ಟರೇಟ್‌ ಪಡೆಯುತ್ತಿದ್ದಾಗ ಒಂದು ಮಾತು ಹೇಳಿದ್ದರಂತೆ. ನಮ್ಮ ನ್ಯಾಶನಲ್‌ ಹೈಸ್ಕೂಲ್‌ ಶಿಕ್ಷಕರು ಪ್ರಾತಃಸ್ಮರಣೀಯರು, ಅವರಿಗೆ ಅಮೆರಿಕಾದ ಟೀಚರ್ಸೂ ಸಮ ಅಲ್ಲ ಅಂತ. ನ್ಯಾಶನಲ್‌ ಹೈಸ್ಕೂಲ್‌ ಬಗ್ಗೆ ಅಂಥಾ ಅಭಿಮಾನ.

ಇಲ್ಲಿದೆ ಎಚ್‌ಎನ್ ಬದುಕಿನ ಪಯಣ

ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಿ ಡಾಕ್ಟರೇಟ್‌ ಪಡೆದ ಅವರಿಗೆ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಮುಖ್ಯ ಹುದ್ದೆಗೇರುವ ಅವಕಾಶವಿತ್ತು. ಆದರೆ ಹೆಚ್‌ಎನ್‌ ಅವರು ನೇರ ಬಂದದ್ದು ನ್ಯಾಶನಲ್‌ ಹೈಸ್ಕೂಲ್‌ಗೆ. ಇಲ್ಲಿ ದಶಕಗಳ ಕಾಲ ಇಲ್ಲಿ ಮೇಷ್ಟಾ್ರಗಿದ್ದು ಮಕ್ಕಳ ಭವಿಷ್ಯ ಬೆಳಗಿದರು. ಕೊನೆಯುಸಿರು ಇರುವವರೆಗೂ ಎನ್‌.ಇ.ಎಸ್‌ನ ಅಧ್ಯಕ್ಷರಾಗಿದ್ದರು.

ಮೊದ ಮೊದಲು ಬಡಮಕ್ಕಳಿದ್ದ ರೂಮ್‌ನಲ್ಲಿ ವಾಸ, ಆಮೇಲೆ ರಾಮಕೃಷ್ಣ ಆಶ್ರಮದಲ್ಲಿದ್ದರು. ಬಳಿಕ ನ್ಯಾಶನಲ್‌ ಕಾಲೇಜಿನ ಹಾಸ್ಟೆಲ್‌ನಲ್ಲೇ ಅವರ ವಾಸ್ತವ್ಯ. 85 ವರ್ಷದವರಾಗಿದ್ದಾಗಲೂ ಅವರಿದ್ದದ್ದು ಇದೇ ಹಾಸ್ಟೆಲ್‌ನಲ್ಲೇ. ಅಪ್ಪಟ ಗಾಂಧೀವಾದಿ, ವೈಜ್ಞಾನಿಕ ನಿಲುವು, ಬಹಳ ಸರಳ ಬದುಕು. ಅವರಿಗೆ ಎಲ್ಲವೂ ನ್ಯಾಶನಲ್‌ ಹೈಸ್ಕೂಲ್‌ ಅಥವಾ ನ್ಯಾಶನಲ್‌ ಕಾಲೇಜೇ ಆಗಿತ್ತು.

- ಎಚ್‌ ಎನ್‌ ಅವರ ಜನ್ಮಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನ್ಯಾಶನಲ್‌ ಎಜುಕೇಶನ್‌ ಸೊಸೈಟಿ ಏನಾದರೂ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆಯಾ?

- ಸಾಕಷ್ಟುಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್‌ ಕಾರಣಕ್ಕೆ ಕೆಲವೊಂದು ಆಚರಣೆ ಸಾಧ್ಯವಾಗುತ್ತಿಲ್ಲ.

1. ಈ ಜೂನ್‌ನಿಂದ ಮುಂದಿನ ಜೂನ್‌ವರೆಗೂ ನರಸಿಂಹಯ್ಯನವರ ಜನ್ಮಶತಮಾನೋತ್ಸವ ಆಚರಣೆ ಇದೆ. ವೈಜ್ಞಾನಿಕ ಚಿಂತನೆ, ವೈಜ್ಞಾನಿಕ ಮನೋಭಾವನೆ ಮತ್ತು ವೈಜ್ಞಾನಿಕ ಪ್ರಜ್ಞೆ ಅನ್ನುವ ಕಾಂಸೆಪ್ಟ್‌ನಲ್ಲಿ ಗೋಷ್ಠಿಗಳು, ಉಪನ್ಯಾಸಗಳು ಕೋವಿಡ್‌ ಬಳಿಕ ವರ್ಷಪೂರ್ತಿ ನಡೆಯಲಿವೆ. ಈಗ ಕೊರೋನಾ ಕಾರಣ ವಿಳಂಬವಾಗಿ ಶುರುವಾದರೂ ಮುಂದಿನ ವರ್ಷ ವಿಸ್ತರಿಸಲಿದೆ.

2. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ರೊಬಾಟಿಕ್‌ ಇಂಟೆಲಿಜೆನ್ಸ್‌, ಸೈಬರ್‌ ಫಿಸಿಕಲ್‌ ಸಿಸ್ಟಮ್‌ ಕಲಿಕೆಗೆ ಬಸವನಗುಡಿ ನ್ಯಾಶನಲ್‌ ಕಾಲೇಜ್‌ನಲ್ಲಿ ದೊಡ್ಡ ಲ್ಯಾಬ್‌ ಓಪನ್‌ ಮಾಡ್ತೀವಿ. ಒಂದನೇ ಕ್ಲಾಸ್‌ನಿಂದ ಆರಂಭವಾಗಿ ಹೈಸ್ಕೂಲ್‌, ಕಾಲೇಜು, ಮಾಸ್ಟರ್ಸ್‌ ಹೀಗೆ ಎಲ್ಲಾ ಕ್ಲಾಸ್‌ನವರಿಗೂ ಅಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ. ಇದರ ತಯಾರಿ ನಡೆದಿದೆ.

3. ನಮ್ಮ ಎಲ್ಲಾ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಡಿಜಿಟಲೈಸ್‌ ಮಾಡುವ ಪ್ರಸ್ತಾವನೆ ನಮ್ಮ ಮುಂದಿದೆ. ಆನ್‌ಲೈನ್‌ ತರಗತಿಗಳನ್ನು ಆರಂಭಿಸಬೇಕು. ಡೇಟಾ ಸೈನ್ಸ್‌ ಕೋರ್ಸ್‌ಅನ್ನು ಆನ್‌ಲೈನ್‌ನಲ್ಲಿ ಶುರು ಮಾಡಿದರೆ ಸಾವಿರಾರು ಮಕ್ಕಳು ಕಲಿಯಲು ಅವಕಾಶವಾಗುತ್ತೆ. ಈ ಯೋಜನೆ ಕಾರ್ಯಗತಗೊಳಿಸಲು ಜಯನಗರ ನ್ಯಾಶನಲ್‌ ಕಾಲೇಜ್‌ನಲ್ಲಿ ಮಲ್ಟಿಮೀಡಿಯಾ ಕಾನ್ಫರೆನ್ಸ್‌ ಹಾಲ್‌ ಈಗಾಗಲೇ ರೆಡಿಯಾಗಿದೆ.

4. ನ್ಯಾಶನಲ್‌ ಕಾಲೇಜ್‌ ಜಯನಗರದಲ್ಲಿ ಎಚ್‌ ನರಸಿಂಹಯ್ಯನವರ ಹೆಸರಿನಲ್ಲಿ 3 ಕೋರ್ಸ್‌ ಓಪನ್‌ ಮಾಡಿದ್ದೀವಿ. ಡೇಟಾ ಸೈನ್ಸ್‌- ಹೀಗೊಂದು ಡಿಗ್ರಿಕೋರ್ಸ್‌ ದೇಶದಲ್ಲೇ ಮೊದಲು. ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೂ ಈ ಕೋರ್ಸ್‌ ಮಾಡಬಹುದು. ಜೊತೆಗೆ ಬಯೋ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌, ಇಂಟರ್‌ನೆಟ್‌ ಟೆಕ್ನಾಲಜಿ ಕೋರ್ಸ್‌ಗಳು ಆರಂಭವಾಗಲಿವೆ.

5. ಜಯನಗರದಲ್ಲಿ ಹೆಚ್‌ಎನ್‌ ಕಲಾಕ್ಷೇತ್ರ ಇದೆ. ಅದನ್ನು ಭವ್ಯವಾದ ಎಚ್‌ ನರಸಿಂಹಯ್ಯ ಕಲಾಕ್ಷೇತ್ರ ಮಾಡುತ್ತೀವಿ.

6. ನ್ಯಾಶನಲ್‌ ಎಜುಕೇಶನ್‌ ಸೊಸೈಟಿ ಕಟ್ಟಡಗಳ ಅಭಿವೃದ್ಧಿ ಕಾರ್ಯ.

7 . ಬಸವನಗುಡಿ, ಬೆಂಗಳೂರಿಗೆ ಸೀಮಿತವಾಗಿದ್ದ ನ್ಯಾಶನಲ್‌ ಕಾಲೇಜನ್ನು ಹಳ್ಳಿಗಳಿಗೂ ವಿಸ್ತರಿಸಿದವರು ನರಸಿಂಹಯ್ಯ ಅವರು. ಗೌರಿಬಿದನೂರಿನ ಹೊಸೂರು ನರಸಿಂಹಯ್ಯ ಅವರ ಹುಟ್ಟೂರು ಅಲ್ಲಿ ಹೈಸ್ಕೂಲ್‌ ಶುರುವಾಯ್ತು. ಆಮೇಲೆ ಗೌರಿಬಿದನೂರು, ಬಾಗೇಪಲ್ಲಿಯಲ್ಲಿ ಕಾಲೇಜು ಶುರು ಮಾಡಿದ್ರು. 60 ವರ್ಷ ಹಿಂದೆ ಇದೆಲ್ಲ ಮಾಡಿದ್ದು. ಆಗ ಸರ್ಕಾರಕ್ಕೂ ಅಂಥಾ ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್‌, ಕಾಲೇಜು ಓಪನ್‌ ಮಾಡುವ ಐಡಿಯಾ ಇರಲಿಲ್ಲ. ನರಸಿಂಹಯ್ಯನವರ ನೇತೃತ್ವದಲ್ಲಿ ನ್ಯಾಶನಲ್‌ ಎಜುಕೇಶನ್‌ ಸೊಸೈಟಿ ಆ ಕೆಲಸ ಮಾಡಿತ್ತು. ಈಗ ಅಲ್ಲಿಂದ 1000 ದಷ್ಟುವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ. ಇದು ಗ್ರೇಟ್‌ ಕಾಂಟ್ರಿಬ್ಯೂಶನ್‌. ಈ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಕಾರ್ಯವೂ ನಡೆಯುತ್ತಿದೆ.

ಮೂರೇ ವರ್ಷದಲ್ಲಿ 14 ಸರ್ಕಾರಿ ಹುದ್ದೆ ಪಡೆದ ಬೆಳಗಾವಿ ಯುವತಿ

- ನರಸಿಂಹಯ್ಯ ಅವರ ಶಿಕ್ಷಣ ದೂರದರ್ಶಿತ್ವವನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಹೇಗೆ?

ನರಸಿಂಹಯ್ಯ ಅವರದು ವೈಜ್ಞಾನಿಕ ಮನೋಭಾವ. 1962ರಲ್ಲೇ ಅವರು ಸೈನ್ಸ್‌ ಫೋರಮ್‌ಅನ್ನು ಆರಂಭಿಸಿದರು. ಎಳೆಯರಿಗೆ ವಿಜ್ಞಾನವನ್ನು ಗೆಳೆಯನನ್ನಾಗಿಸುವುದು ಇದರ ಉದ್ದೇಶ. ನೊಬೆಲ್‌ ಪುರಸ್ಕೃತ ವಿಜ್ಞಾನಿಗಳು, ರಾಯಲ್‌ ಸೊಸೈಟಿಯ ಸಹವರ್ತಿಗಳು, ವಿಜ್ಞಾನ ಅಕಾಡೆಮಿಗಳಲ್ಲಿರುವವರ 3000 ಕ್ಕೂ ಅಧಿಕ ಉಪನ್ಯಾಸಗಳು ನಡೆದಿವೆ. ಇಂದಿನವರೆಗೂ ಅದು ಮುಂದುವರಿದಿದೆ. ಈ ಮೂಲಕ ಎಚ್‌ ನರಸಿಂಹಯ್ಯ ಅವರ ಆಶಯವನ್ನು ಮುಂದಿನ ಪೀಳಿಗೆಗೂ ದಾಟಿಸುವ ಕೆಲಸ ಮಾಡುತ್ತಿದ್ದೇವೆ.

- ನ್ಯಾಶನಲ್‌ ಕಾಲೇಜಿಗೆ ನರಸಿಂಹಯ್ಯನವರ ಕೊಡುಗೆಗಳನ್ನು ಸ್ಮರಿಸಬಹುದಾ?

ನ್ಯಾಶನಲ್‌ ಕಾಲೇಜ್‌ನಲ್ಲಿ ನರಸಿಂಹಯ್ಯನವರು ಇದ್ದಾಗ ಇಲ್ಲಿ ಮಧ್ಯಾಹ್ನದ ಊಟ ಇತ್ತು. ತಾಂತ್ರಿಕ ತರಬೇತಿ, ವ್ಯಾಯಾಮ, ಕಲೆ, ವೈದ್ಯಕೀಯ ಪರೀಕ್ಷೆ, ದೈಹಿಕ ಶಿಕ್ಷಣ ಎಲ್ಲವೂ ಇತ್ತು. ನರಸಿಂಹಯ್ಯನವರ ಈ ವ್ಯವಸ್ಥೆಯನ್ನು ಗಮನಿಸಿದ ಸರ್ಕಾರ ಇತರ ಶಾಲೆಗಳನ್ನೂ ಈ ವ್ಯವಸ್ಥೆ ಕಾರ್ಯಗತಗೊಳಿಸಲು ಚಿಂತನೆ ನಡೆಸಿತು.

- ಸ್ಕೂಲ್‌ ಮತ್ತು ಕಾಲೇಜ್‌ ಲೆವೆಲ್‌ನ ಸಂಗೀತ, ನೃತ್ಯ ಮತ್ತು ನಾಟಕ ಸ್ಪರ್ಧೆ, ಇಂಟರ್‌ಸ್ಕೂಲ್‌ ಕಾಂಪಿಟೇಶನ್‌ಗಳನ್ನು ಮೊದಲು ಅಂದರೆ 1945ರ ಸುಮಾರಿಗೇ ಪರಿಚಯಿಸಿದ್ದು ನರಸಿಂಹಯ್ಯನವರು. 1971ರಲ್ಲಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ ಯುನಿವರ್ಸಿಟಿಯಲ್ಲಿ ಡ್ಯಾನ್ಸ್‌, ಡ್ರಾಮಾ ಮತ್ತು ಮ್ಯೂಸಿಕ್‌ ಡಿವಿಜನ್‌ಗಳನ್ನು ತೆರೆದರು.

- ಬೆಂಗಳೂರು ಸೈನ್ಸ್‌ ಫಾರಮ್‌, ಬೆಂಗಳೂರು ಸೋಷಲ್‌ ಸೈನ್ಸ್‌ ಫಾರಮ್‌, ಬೆಂಗಳೂರು ಲಲಿತಕಲಾ ಪರಿಷತ್‌ ಆರಂಭಿಸಿದ್ದು ಅವರ ದೂರದರ್ಶಿತ್ವಕ್ಕೆ ಸಾಕ್ಷಿಯಾಗುತ್ತವೆ.

- ಈ ಸಮಾಜಕ್ಕೆ ಅವರ ಗುರುತರ ಕೊಡುಗೆ ಅಂದರೆ ಅದು ನ್ಯಾಶನಲ್‌ ಹೈಸ್ಕೂಲ್‌ ಮತ್ತು ಕಾಲೇಜು.

- 1960ರ ಸುಮಾರಿಗೆ ನ್ಯಾಶನಲ್‌ ಕಾಲೇಜ್‌ನಲ್ಲಿ ಕೇವಲ ಹುಡುಗರಿಗೆ ಮಾತ್ರ ಶಿಕ್ಷಣ ಸಿಗುತ್ತಿತ್ತು. ಇದು ನರಸಿಂಹಯ್ಯನವರಿಗೆ ಸರಿ ಬರುತ್ತಿರಲಿಲ್ಲ. ಜನಸಂಖ್ಯೆಯ ಶೇ.50ರಷ್ಟುಮಂದಿಗೆ ವಿದ್ಯಾಭ್ಯಾಸವೇ ಸಿಗುತ್ತಿಲ್ಲವಲ್ಲ ಅನ್ನುವುದು ಅವರ ಕೊರಗು. ಆಗ ಅವರು ಪ್ರಿನ್ಸಿಪಾಲ್‌ ಆಗಿದ್ದರು. ಕಮಿಟಿ ಮೀಟಿಂಗ್‌ನಲ್ಲಿ ನ್ಯಾಶನಲ್‌ ಎಜುಕೇಶನ್‌ ಸೊಸೈಟಿಯಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೂ ಅವಕಾಶ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರು. ಸುದೀರ್ಘ ಚರ್ಚೆ ನಡೆಯಿತು. ಪರ ಇದ್ದವರಷ್ಟೇ ವಿರೋಧಿಸುವವರೂ ಇದ್ದರು. ಕೊನೆಗೆ ಇದನ್ನು ಓಟಿಂಗ್‌ಗೆ ಹಾಕಲಾಯ್ತು. ಅದನ್ನು ಲೆಕ್ಕ ಹಾಕುವಾಗ 61 ಜನರಲ್ಲಿ 30 ಜನ ಇದನ್ನು ವಿರೋಧಿಸಿದ್ದರು. 31 ಜನ ನರಸಿಂಹಯ್ಯಅವರ ನಿಲುವನ್ನು ಸ್ವಾಗತಿಸಿದರು. ಆ ವರ್ಷವೇ ನ್ಯಾಶನಲ್‌ ಕಾಲೇಜಿನಲ್ಲಿ ಹೆಣ್ಣು,ಗಂಡುಗಳಿಬ್ಬರಿಗೂ ಸಮಾನ ಶಿಕ್ಷಣ ಆರಂಭವಾಯ್ತು.

ಎಕ್ಸಾ ಟೈಮಲ್ಲಿ ವೈರಲ್ ಆಗ್ತಿರೋ ಪ್ರಿನ್ಸಿಪಲ್ ಪತ್ರ

- ನಾನು ಅಮೆರಿಕಾಕ್ಕೆ ಹೋಗಿದ್ದಾಗ ಗಮನಿಸಿದ್ದು, ಕ್ಯಾರ್ಲಿಫೋನಿಯಾದಲ್ಲಿರುವ ಭಾರತೀಯರ ಪೈಕಿ ಶೇ.50ರಷ್ಟುಮಂದಿ ಬಸವನಗುಡಿಯ ನ್ಯಾಶನಲ್‌ ಕಾಲೇಜ್‌ನ ಪ್ರತಿಭಾನ್ವಿತ ವಿದ್ಯಾರ್ಥಿಗಳು. ಇದು ನರಸಿಂಹಯ್ಯ ಅವರ ದೂರದರ್ಶಿತ್ವಕ್ಕೆ ಸಾಕ್ಷಿ.

- ಅವರು ನ್ಯಾಶನಲ್‌ ಎಜುಕೇಶನ್‌ ಸೊಸೈಟಿಯನ್ನು ಹಳ್ಳಿಗಳಿಗೂ ವಿಸ್ತರಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದದ್ದು ಮಹತ್ವದ ಕೊಡುಗೆ.

ಹೀಗೆ ಹೇಳುತ್ತಾ ಹೋದರೆ ಎಣಿಕೆಗೆ ಸಿಗದಷ್ಟುಅವರ ಕೊಡುಗೆಗಳು ನೆನಪಾಗುತ್ತಾ ಹೋಗುತ್ತದೆ.

- ವಿದ್ಯಾರ್ಥಿಗಳ ಮೂಲಕ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿದವರು ಎಚ್‌ಎನ್‌. ಅದನ್ನು ನಾವೆಲ್ಲರೂ ಅನುಸರಿಸಿದರೆ ದೇಶ ಇನ್ನಷ್ಟುಬೆಳವಣಿಗೆ ಸಾಧಿಸುತ್ತೆ.

ವಿದ್ಯಾರ್ಥಿಗಳು ಎಚ್‌ಎನ್‌ ಅವರನ್ನು ಹೇಗೆ ಸ್ಮರಿಸುತ್ತಾರೆ?

- ವಿದ್ಯಾರ್ಥಿಗಳನ್ನು ನರಸಿಂಹಯ್ಯ ಅವರು ಹೇಗೆ ಪ್ರಭಾವಿಸುತ್ತಿದ್ದರು ಅಂದರೆ ವಿದ್ಯಾರ್ಥಿಗಳಿಗೆ ಅವರನ್ನು ನೋಡಿದರೆ ತಾನು ಅವರಂತಾಗಬೇಕು ಅಂತನಿಸುತ್ತಿತ್ತು. ಅಂಥಾ ಪಾಸಿಟಿವ್‌ ಎನರ್ಜಿ ಅವರದು. ವಿದ್ಯಾರ್ಥಿಗಳ ಮನಸ್ಸಲ್ಲಿ ಅವರು ಅಮರರಾಗಿ ಉಳಿದಿದ್ದಾರೆ. ಹಳೆ ವಿದ್ಯಾರ್ಥಿಗಳು ಕಾಲೇಜಿಗೆ ಸಾಕಷ್ಟುಡೊನೇಶನ್‌ಗಳನ್ನೂ ಕೊಡುತ್ತಿರುತ್ತಾರೆ. ಹೊಟೇಲ್‌ ಉದ್ಯಮಿ ಸದಾನಂದ ಮಯ್ಯಅವರು ಎಚ್‌ಎನ್‌ ಹಾಗೂ ನನ್ನ ವಿದ್ಯಾರ್ಥಿ. ಅವರು 60 ಸಾವಿರ ಚದರ ಅಡಿಯ ಬಿಲ್ಡಿಂಗ್‌ಅನ್ನು ಜಯನಗರ ನ್ಯಾಶನಲ್‌ ಕಾಲೇಜ್‌ಗೆ ನೀಡಿದ್ದಾರೆ. ಇಡೀ ಪಿಯುಸಿ ಕಾಲೇಜ್‌ ಅಲ್ಲಿ ನಡೆಯುತ್ತದೆ. ಬಿವಿ ಜಗದೀಶ್‌ ಅಂತ ಇನ್ನೊಬ್ಬ ವಿದ್ಯಾರ್ಥಿ ಅಮೆರಿಕಾದಲ್ಲಿದ್ದಾರೆ. ಬಿವಿ ಜಗದೀಶ್‌ ಸೈನ್ಸ್‌ ಸೆಂಟರ್‌ ಅವರ ಕೊಡುಗೆ. ಹೆಚ್‌ಎನ್‌ ಅವರ ವಿದ್ಯಾರ್ಥಿಗಳು ವಿಶ್ವಾದ್ಯಂತ ಅನೇಕ ಉನ್ನತ ಹುದ್ದೆಗಳಲ್ಲಿದ್ದಾರೆ.

ಅವರ ಹಾದಿಯಲ್ಲೇ ನಡೆಯುತ್ತಿರುವೆ : ಎ ಆರ್‌ ರಾಮರಾವ್‌

ನನಗಾಗ 14 ವರ್ಷ. ನಾನು ಪಿಯುಸಿಗೆ ಬಸವನಗುಡಿ ನ್ಯಾಶನಲ್‌ ಕಾಲೇಜ್‌ಗೆ ಬಂದದ್ದು. ನನ್ನ ತಂದೆಯೂ ಮೇಷ್ಟು್ರ. ಎಚ್‌ಎನ್‌ ಅವರಿಗೆ ಶಿಕ್ಷಕರನ್ನು ಕಂಡರೆ ಬಹಳ ಗೌರವ. ‘ಮೇಷ್ಟೆ್ರೕ, ಈ ಹುಡುಗನನ್ನು ನನ್ನ ಕೈಯಲ್ಲಿಟ್ಟು ಹೋಗಿ. ಅವನು ಮೇಲಕ್ಕೆ ಬರುತ್ತಾನೆ’ ಅನ್ನೋ ಮಾತನ್ನು ನನ್ನ ತಂದೆಗೆ ಹೇಳಿದರು. ಅವರ ಮಾರ್ಗದರ್ಶನದ ಫಲವಾಗಿ ಅವರ ಜಾಗದಲ್ಲೇ ನಾನೀಗ ಕೂತಿದ್ದೇನೆ. ನರಸಿಂಹಯ್ಯ ನ್ಯಾಶನಲ್‌ ಎಜುಕೇಶನ್‌ ಸೊಸೈಟಿಯ ಪ್ರೆಸಿಡೆಂಟ್‌ ಆಗಿದ್ದಾಗ ನಾನು ಯಾವತ್ತೂ ಸೆಕ್ರೆಟರಿ. ಅವರು ಆರಂಭದಲ್ಲಿ ನನ್ನನ್ನು ಹುಡುಗನಾಗಿ ಟ್ರೀಟ್‌ ಮಾಡಿದರು. ನಾನು ಶಿಕ್ಷಕನಾದ ಮೇಲೆ ನಾವಿಬ್ಬರೂ ಸಹೋದ್ಯೋಗಿಗಳಾದೆವು. ನಮ್ಮಿಬ್ಬರದೂ ಫಿಸಿಕ್ಸ್‌ ಡಿಪಾರ್ಟ್‌ಮೆಂಟ್‌. ನರಸಿಂಹಯ್ಯ ಅವರ ಬಳಿಕ ಕಳೆದ ಹದಿನೈದು ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ. ಅವರು ನನ್ನನ್ನು ಎಎಚ್‌ಆರ್‌ ಅಂತಲೇ ಕರೆಯುತ್ತಿದ್ದದ್ದು. ಅವರು ವಿಧಾನಸೌದಕ್ಕೆ ಹೋಗ್ತಿದ್ರೂ, ಹಳ್ಳಿಗೆ ಹೋಗ್ತಿದ್ರೂ ಜೊತೆಗೆ ನನ್ನನ್ನು ಕರೆದೊಯ್ಯುತ್ತಿದ್ದರು. ಈ ಮೂಲಕ ನನಗೆ ಸಂಪೂರ್ಣ ಮಾರ್ಗದರ್ಶನ ನೀಡಿದರು.

ನಮ್‌ ಹುಡುಗ ಬೌಲ್‌ ಮಾಡ್ತಿದ್ರೆ ನೋಡದೇ ಇರಕ್ಕಾಗುತ್ತಾ ಅಂದಿದ್ರು ಎಚ್‌ಎನ್‌

ನಮ್‌ ಕಾಲೇಜು ಕ್ರಿಕೆಟ್‌ಗೆ ಬಹಳ ಫೇಮಸ್ಸು. ಕ್ರಿಕೆಟರ್‌ ಇ ಎ ಎಸ್‌ ಪ್ರಸನ್ನ, ಜಿ ವಿಶ್ವನಾಥ್‌ ಎಲ್ಲ ನಮ್ಮ ವಿದ್ಯಾರ್ಥಿಗಳು. ಎಚ್‌ಎನ್‌ ಅವರಿಗೆ ಕ್ರಿಕೆಟ್‌ ಅಷ್ಟಾಗಿ ಆಗಿ ಬರುತ್ತಿರಲಿಲ್ಲ. ಕ್ರಿಕೆಟ್‌ಗೆ ಹೆಚ್ಚು ಟೈಮ್‌ ವೇಸ್ಟ್‌ ಮಾಡ್ಬೇಡ್ರೋ, ಓದ್ಕೊಳಿ ಅಂತ ಹೇಳ್ತಿದ್ರು, ಕೆಲವೊಮ್ಮೆ ಗದರಿಸುತ್ತಿದ್ದರು. ಹಾಸ್ಟೆಲ್‌ನಲ್ಲಿ ಒಂದು ಟಿವಿ ಇತ್ತು. ಅದರಲ್ಲಿ ಒಮ್ಮೆ ಕಾಮೆಂಟರಿ ಬರುತ್ತಿತ್ತು. ಅಲ್ಲಿಯವರೆಗೂ ಕ್ರಿಕೆಟ್‌ ಬೇಡ, ಕಾಮೆಂಟರಿ ನೋಡ್ಬೇಡಿ ಅಂತಿದ್ದ ಎಚ್‌ಎನ್‌ ಅವರು ಅವತ್ತು ಟಿವಿ ಹಾಕಿ ಅದರಲ್ಲಿ ಕ್ರಿಕೆಟ್‌ ನೋಡ್ತಾ ಇದ್ದಾರೆ! ಮಕ್ಕಳಿಗೆಲ್ಲ ಆಶ್ಚರ್ಯ. ಯಾಕೆ ಅಂತ ಹುಡುಗನೊಬ್ಬ ಕೇಳಿದ್ರೆ, ‘ನಮ್‌ ನ್ಯಾಶನಲ್‌ ಹೈಸ್ಕೂಲ್‌ ಸ್ಟೂಡೆಂಟ್‌ ಅನಿಲ್‌ ಕುಂಬ್ಳೆ ಬೌಲಿಂಗ್‌ ಮಾಡ್ತಿದ್ರೆ ನೋಡದೇ ಇರಕ್ಕಾಗುತ್ತೇನಯ್ಯಾ’ ಅಂತ ನಕ್ಕರಂತೆ. ಕ್ರಿಕೆಟಿಗ ಅನಿಲ್‌ ಕುಂಬ್ಳೆ ನ್ಯಾಶನಲ್‌ ಹೈಸ್ಕೂಲ್‌ ವಿದ್ಯಾರ್ಥಿ.

ಗ್ರಹಣ ಟೈಮ್‌ನಲ್ಲಿ ಬಾಳೆಹಣ್ಣು ಕೊಡ್ತಿದ್ರು

ವೈಜ್ಞಾನಿಕತೆಗೆ ಬಹಳ ಒತ್ತು ಕೊಡುತ್ತಿದ್ದ ಎಚ್‌ಎನ್‌ ಗ್ರಹಣ ಟೈಮ್‌ನಲ್ಲಿ ಏನೂ ತಿನ್ನಬಾರದು ಅನ್ನೋದನ್ನೆಲ್ಲ ಒಪ್ಪುತ್ತಿರಲಿಲ್ಲ. ಆ ಟೈಮ್‌ನಲ್ಲಿ ಮಕ್ಕಳನ್ನು ಕರೆದು ಗ್ರಹಣವಾಗುವ ವೈಜ್ಞಾನಿಕ ಪ್ರಕ್ರಿಯೆ ವಿವರಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು, ಕಳ್ಳೆಪುರಿ ಕೊಟ್ಟು,‘ತಿನ್ರೋ, ಅದೇನಾಗುತ್ತೆ ನೋಡೋಣ’ ಅನ್ನುವವರು. ಆ ಮೂಲಕ ಗ್ರಹಣ ಕಾಲದಲ್ಲಿ ತಿಂದರೆ ಏನೋ ಆಗುತ್ತೆ ಅನ್ನೋದೆಲ್ಲ ಮೂಢನಂಬಿಕೆ ಅಂತ ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದರು.

 

Follow Us:
Download App:
  • android
  • ios