Asianet Suvarna News Asianet Suvarna News

ಯಲಬುರ್ಗಾ: ಕೊರೋನಾ ಭಯದಿಂದ ಮಾವು ಖರೀದಿಗೆ ಹಿಂದೇಟು

ಪ್ರತಿ ವರ್ಷ ಮಾವು ಖರೀದಿಸಿ ರುಚಿ ಸವಿಯುತ್ತಿದ್ದ ಗ್ರಾಹಕರು| ಮಾರುಕಟ್ಟೆಯಲ್ಲಿ ಅಪೂಸ್‌, ಮಲ್ಲಿಕಾ, ಮಲಗೋವಾ, ರಸಪುರಿ ಹಾಗೂ ಬಾದಾಮಿ ಹೀಗೆ ವಿವಿಧ ಜಾತಿಯ ಹಣ್ಣು ಲಭ್ಯ| ಬಾದಾಮಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಇಳುವರಿ ಮತ್ತು ಫಸಲು ತೀರಾ ಕಡಿಮೆ ಆಗಿದೆ. ಆದರೆ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ|

People not Interest to Purchase Mango due to Coronavirus Panic in Yelburga in Koppal District
Author
Bengaluru, First Published May 30, 2020, 8:14 AM IST

ಶಿವಮೂರ್ತಿ ಇಟಗಿ

ಯಲಬುರ್ಗಾ(ಮೇ.30): ಹಣ್ಣುಗಳ ರಾಜ ಮಾವು ಪಟ್ಟಣಕ್ಕೆ ತಡವಾಗಿ ಲಗ್ಗೆ ಇಟ್ಟಿದ್ದು, ಗ್ರಾಹಕರು ಪ್ರತಿವರ್ಷ ಈ ಸಂದರ್ಭದಲ್ಲಿ ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಖರೀದಿಸಿ ರುಚಿ ಸವಿಯುತ್ತಿದ್ದರು. ಆದರೆ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಯಾರು ಹೆಚ್ಚು ಖರೀದಿಗೆ ಮುಂದಾಗುತ್ತಿಲ್ಲ.

ಪಟ್ಟಣದ ಮಾರುಕಟ್ಟೆಯಲ್ಲಿ ಅಪೂಸ್‌, ಮಲ್ಲಿಕಾ, ಮಲಗೋವಾ, ರಸಪುರಿ ಹಾಗೂ ಬಾದಾಮಿ ಹೀಗೆ ವಿವಿಧ ಜಾತಿಯ ಹಣ್ಣುಗಳನ್ನು ಸವಿಯುವ ಅವಕಾಶ ಸಾರ್ವಜನಿಕರಿಗೆ ದೊರೆತಿದೆ. ಬಾದಾಮಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಇಳುವರಿ ಮತ್ತು ಫಸಲು ತೀರಾ ಕಡಿಮೆ ಆಗಿದೆ. ಆದರೆ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ ಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಗಂಗಾವತಿ: ಲಾಕ್‌ಡೌನ್‌ ಉಲ್ಲಂಘನೆ, ರೆಸಾರ್ಟ್‌ ಮಾಲೀಕನ ವಿರುದ್ಧ ದೂರು

ವಿವಿಧ ಜಾತಿಯ ಹಣ್ಣುಗಳು

ಪಟ್ಟಣದ ಬಸ್‌ ನಿಲ್ದಾಣ ಹತ್ತಿರ, ಕನಕದಾಸ ವೃತ್ತ, ಖಾದಿಗ್ರಾಮೋದ್ಯೋಗ ಜಾಗ, ಕನ್ನಡಕ್ರಿಯಾ ಸಮಿತಿ ವೃತ್ತ, ವಿಜಯದುರ್ಗಾ ದೇವಸ್ಥಾನ, ಚನ್ನಮ್ಮ ವೃತ್ತದ ಕೂಟಗಳಲ್ಲಿ ವಿವಿಧ ಜಾತಿಯ ಮಾವಿನ ಹಣ್ಣುಗಳು ಜನರನ್ನು ಕೈ ಬಿಸಿ ಕರೆಯುತ್ತಿವೆ. ಮಲಗೋವಾ 1 ಕೆಜಿಗೆ 70 ರಿಂದ 80, ಕಲ್ಮಿ 90, ಅಪೋಸ್‌ 110 ದರದಲ್ಲಿ ಲಭ್ಯವಿದೆ.

ತಾಲೂಕಿನಲ್ಲಿ ಹೆಚ್ಚು ಮಾವು

ಪಟ್ಟಣದ ಮಾರುಕಟ್ಟೆಗೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗದಗ, ಹೊಸಪೇಟೆ, ಬಳ್ಳಾರಿ, ವಿಜಯಪುರ, ಕೊಪ್ಪಳ ಸೇರಿದಂತೆ ಬೇರೆ ಜಿಲ್ಲೆಗಳಿಂದ ಹಣ್ಣುಗಳನ್ನು ಬಹಳಷ್ಟು ತಡವಾಗಿ ತರಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಮಳೆಗೆ ಮಾವಿನ ಫಸಲು ಹಾನಿಯಾಗಿದ್ದು, ಇಳುವರಿಯೂ ಕಡಿಮೆ ಆಗಿದೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಸಾಕಷ್ಟು ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಜೊತೆಗೆ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ಹೆಚ್ಚು ಮಾವು ಬೆಳೆಯಲಾಗುತ್ತಿರುವುದು ವಿಶೇಷ.

ತರಹೇವಾರಿ ಸೇರಿದಂತೆ ಸಾಕಷ್ಟುವಿವಿಧ ತರಹದ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಜನರನ್ನು ನಿತ್ಯ ಆಕರ್ಷಿಸುತ್ತಿವೆ. ಆದರೆ ಅವುಗಳು ಎಲ್ಲಿಂದ ಬಂದಾವೋ ಏನೋ, ಅವುಗಳಲ್ಲಿ ಕೊರೋನಾ ಅಡಗಿದೆಯೋ ಏನೋ ಎನ್ನುವ ಭಯಭೀತಿಯಿಂದ ನನ್ನನ್ನು ಸೇರಿದಂತೆ ಅನೇಕ ಗ್ರಾಹಕರಲ್ಲಿ ಈ ಅನುಮಾನ ಕಾಡುತ್ತಿದೆ. ಹೀಗಾಗಿ ಹಣ್ಣುಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ಯಲಬುರ್ಗಾದ ನಿವೃತ್ತ ಪ್ರಾಚಾರ್ಯಜಿ.ಎಂ. ನಿಂಗೋಜಿ ಅವರು ಹೇಳಿದ್ದಾರೆ.

ಕಳೆದ ವರ್ಷ ಮಾರುಕಟ್ಟೆಗೆ ಮಾವಿನ ಹಣ್ಣು ಬೇಗ ಬಂದಿದ್ದರಿಂದ ವ್ಯಾಪಾರ ಚೆನ್ನಾಗಿತ್ತು. ಈ ಬಾರಿ ಉರಿಬಿಸಿಲು ಜೊತೆಗೆ ಹವಾಮಾನ ವೈಪರಿತ್ಯದಿಂದ ಮಳೆ, ಗಾಳಿಗೆ ಫಸಲು ನಾಶವಾಗಿದೆ. ಇನ್ನೊಂದೆಡೆ ದೇಶದೆಲ್ಲೆಡೆ ಕೊರೋನಾ ವೈರಸ್‌ ಮಹಾಮಾರಿ ಹರಡಿರುವುದರಿಂದ ಜನರು ಮಾವಿನ ಹಣ್ಣು ಸೇರಿದಂತೆ ಯಾವ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿಲ್ಲ. ಇದರಿಂದ ನಷ್ಟವೇ ಹೆಚ್ಚಾಗುತ್ತಿದೆ ವಿನಃ ಲಾಭ ದೂರದ ಮಾತು ಎಂದು ಯಲಬುರ್ಗಾದ ಹಣ್ಣಿನ ವ್ಯಾಪಾರಿ ಹನುಮಂತಪ್ಪ ಹರಿಜನ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios