Asianet Suvarna News Asianet Suvarna News

ದಲಿತ ಯುವತಿ ಮನೆ ಸೊಸೆಯಾದಳೆಂದು, ಹಂದಿಗೂಡಿನಲ್ಲಿಟ್ಟು ವಿಷವಿಕ್ಕಿ ಕೊಂದರಾ ಪಾಪಿಗಳು!

ದಲಿತ ಯುವತಿಯೊಬ್ಬಳು ಪ್ರೀತಿಸಿ ಮದುವೆಯಾದರೂ ಗಂಡನ ಮನೆಯಲ್ಲಿ ಅಸ್ಪೃಶ್ಯತೆ ಎದುರಿಸಿ, ಹಂದಿ ಗೂಡಿನಲ್ಲಿ ವಾಸಿಸುವಂತಾಯಿತು. ವಿಷ ಸೇವಿಸಿ ಸಾವನ್ನಪ್ಪಿದ್ದು, ಗಂಡನ ಮನೆಯವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

Koppal Dalit Community newly Married young woman honor killed by husband family sat
Author
First Published Sep 4, 2024, 4:25 PM IST | Last Updated Sep 4, 2024, 4:25 PM IST

ಕೊಪ್ಪಳ (ಸೆ.04): ದಲಿತಳಾಗಿ ಹುಟ್ಟಿದ್ದೇ ತಪ್ಪಾ.? ಮಗನನ್ನು ಮದುವೆಯಾದರೂ ಮನೆಯ ಹೊರಗೆ ಹಂದಿ ಗೂಡಿನಲ್ಲಿ ಜೀವನ. ಮಗನಿಗೆ ದೈಹಿಕ ಸುಖ ಕೊಡಲು ಬೇಕಿದ್ದವಳು ಮನೆಯ ಒಳಗೆ ಬರುವಂತಿಲ್ಲ. ಸ್ವಾತಂತ್ರ ಸಿಕ್ಕು 77 ವರ್ಷಗಳು, ಸಂವಿಧಾನ ಸಿಕ್ಕು 74 ವರ್ಷಗಳು ಕಳೆದರೂ ಸ್ವತಃ ಪ್ರೀತಿಸಿ ಮದುವೆಯಾದ ಗಂಡನ ಮನೆಯವರಿಂದಲೇ ಜಾತೀಯತೆ, ಅಸ್ಪೃಶ್ಯತೆ ಆಚಣೆಯಿಂದ ತೀರಾ ಜರ್ಜಿತರವಾಗಿದ್ದ ಯುವತಿಗೆ ಇಂದು ವಿಷವನ್ನಾಕಿ ಕೊಲೆಗೈದು ಇಹಲೋಕವನ್ನೇ ಬಿಟ್ಟು ಕಳಿಸಿದ್ದಾರೆ. 

ಪ್ರೀತಿಸಿ ವಿವಾಹವಾದ ಮಹಿಳೆಯ ಕೊಲೆ ಆರೋಪ ಪ್ರಕರಣವನ್ನು ನೋಡಿದರೆ ಎಂಥ ಕಲ್ಲು ಹೃದಯದವರೂ ಮರುಗುವಂತಹ ದುರಂತ ಘಟನೆ ಎಂದುಕೊಳ್ಳುತ್ತಾರೆ. ಈಕೆ ಹುಟ್ಟಿದ್ದು, ದಲಿತ ಕುಟುಂಬದಲ್ಲಿ ಆದರೂ, ಮನೆಯಲ್ಲಿ ಆಕೆಯ ಸ್ವಾತಂತ್ರ್ಯ, ಸೌಂದರ್ಯ, ಶಿಕ್ಷಣ ಹಾಗೂ ಕುಟುಂಬದವರ ಪ್ರೀತಿಗೇನೂ ಕಡಿಮೆ ಇರಲಿಲ್ಲ. ಆದರೆ, ಯುವತಿಯ ಹಿಂದೆ ನಾಯಿ ಬೆನ್ನತ್ತಿದ ಹಾಗೆ ಪ್ರೀತಿಸುವುದಾಗಿ ಬೆಂಬಿದ್ದ ಯುವಕನ ಪ್ರೀತಿಯ ನಾಟಕಕ್ಕೆ ಮನಸೋತ ಯುವತಿ, ಪ್ರೀತಿಯನ್ನು ನಂಬಿಕೊಂಡು ಆತನನ್ನು ಮದುವೆ ಮಾಡಿಕೊಂಡಿದ್ದಾಳೆ. ಮದುವೆಯಾಗಿ ಗಂಡನ ಮನೆಗೆ ಹೋದರೆ, ಆಕೆಗೆಮನೆಯೊಳಗೆ ಪ್ರವೇಶವೇ ಸಿಕ್ಕಿಲ್ಲ. ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಕ್ಕೆ ಕಷ್ಟ ಎದುರಿಸಬೇಕು, ಮುಂದೊಂದು ದಿನ ಎಲ್ಲವೂ ಸರಿ ಹೋಗುತ್ತದೆ ಎಂಬ ಭರವಸೆಯಲ್ಲಿಯೇ ಇದ್ದಳು. ಆದರೆ, ಜೀವನ ತೆರೆದುಕೊಳ್ಳುವುದಕ್ಕೂ ಮುನ್ನವೇ ಆಕೆಯ ಜೀವವನ್ನೇ ಚೆಲ್ಲಿದ ದುರಂತ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ನಡೆದಿದೆ.

ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳಲ್ಲಿ ಸಾಮ್ಯತೆ ಇದೆ: ಪಂಡಿತಾರಾದ್ಯ ಸ್ವಾಮೀಜಿ

ಎಸ್‌ಟಿ ವರ್ಗದ ಯುವಕನನ್ನು ಮದುವೆ ಮಾಡಿಕೊಂಡು ಬಂದಿದ್ದ ದಲಿತ ಯುವತಿಯ ವಾಸದ ಸ್ಥಳ ನೋಡಿದ್ರೆ ಎಂತಹವರಿಗೂ ಕರುಳು ಚುರ್ ಎನ್ನತ್ತದೆ. ಹೀನಾಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ಮಹಿಳೆ ಮರಿಯಮ್ಮ. ವಿಠಲಾಪೂರ ಗ್ರಾಮದಲ್ಲಿ ಜೀವನ ಸಾಗಿಸುತ್ತಿದ್ದ ಮೃತ ಯುವತಿ ಮರಿಯಮ್ಮ, ಮನೆ ಎದುರು ಕೋಳಿ ಗೂಡಿನಲ್ಲಿ ವಾಸ ಮಾಡುತ್ತಿದ್ದಳು. ನೀನು ಕೀಳು ಜಾತಿಯವಳು ಎಂದು ಗಂಡನ ಮನೆಯವರಿಂದ ನಿರಂತರ ಕಿರುಕುಳ ನೀಡುತ್ತಿದ್ದರು. ಮನೆಯ ಹೊರಗೆ ಬಯಲಲ್ಲೆ ಮರಿಯಮ್ಮನ ವಾಸ ಮಾಡುತ್ತಿದ್ದು, ಬಯಲಿನಲ್ಲಿಯೇ ಸ್ನಾನ ಮಾಡುತ್ತಿದ್ದಳು. ಹಸು, ಮೇಕೆ, ಹಂದಿಗಳಿಗೂ ಒಂದು ಸ್ವಚ್ಛ ಗೂಡೆಂಬುದು ಇರುತ್ತದೆ. ಆದರೆ, ದಲಿತ ಯುವತಿ ಮನೆಗೆ ಸೊಸೆಯಾಗಿ ಬಂದಿದ್ದಾಳೆಂದು ಆಕೆಯನ್ನು ಎಲ್ಲೆಂದರಲ್ಲಿ ತೂತು ಬಿದ್ದಿದ್ದ ತಗಡಿನ ಶೆಡ್‌ನಲ್ಲಿಟ್ಟಿದ್ದರು.

ಮಗನಿಗೆ ಹೆಂಡತಿಯಾದ ಮಾತ್ರಕ್ಕೆ ಆಕೆಯೊಂದಿಗೆ ಮಗನೊಂದಿಗೆ ಸಂಸಾರ ಮಾಡಬಹುದು, ಮಗ ಮನೆಯೊಳಗೂ ಬರಬಹುದು. ಆದರೆ, ಮಗನಿಗೆ ದೈಹಿಕ ಸುಖ ಕೊಡುವ ಸೊಸೆ ಕೀಳು ಜಾತಿಯವಳೆಂಬ ಕಾರಣಕ್ಕೆ ಮನೆಯೊಳಗೆ ಬರುವಂತಿಲ್ಲ ಎಂಬ ನಿಯಮ ಹಾಕಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 77 ವರ್ಷಗಳು, ಸಂವಿಧಾನ ಜಾರಿಯಾಗಿ 74 ವರ್ಷಗಳು ಕಳೆದರೂ ಜಾತೀಯತೆ, ಅಸ್ಪೃಶ್ಯತೆ ಆಚರಣೆ ಮಾತ್ರ ಇನ್ನೂ ನಿಂತಿಲ್ಲವೆಂದ ಕೊರಗಿನಿಂದಲೇ ಎಲ್ಲ ನೋವನ್ನು ಅದುಮಿಟ್ಟುಕೊಂಡು ಜೀವನ ಮಾಡುತ್ತಿದ್ದಳು. ಆದರೆ, ಇಂದು ಗಟ್ಟಿಗಿತ್ತಿ ದಲಿತ ಯುವತಿಯ ಒಡಲಿಗೆ ವಿಷವನ್ನಾಕಿದ ಗಂಡನ ಮನೆಯವರು ಆಕೆಯ ಉಸಿರನ್ನೇ ನಿಲ್ಲಿಸಿದ್ದಾರೆ. ಈಗ ಮನೆ, ಊರು ಮಾತ್ರವಲ್ಲ ಭೂಮಿಯ ಮೇಲಿಂದಲೇ ಆಚೆ ಹಾಕಿದ್ದಾರೆ.

ತುಮಕೂರು: ತಂದೆಯಿಂದಲೇ ನಿರಂತರ ಅತ್ಯಾಚಾರ, ಗರ್ಭ ಧರಿಸಿದ 14 ವರ್ಷದ ಮಗಳು..!

ಘಟನೆಯ ಸ್ಥಳ ಮತ್ತು ಹಿನ್ನೆಲೆ ಇಲ್ಲಿದೆ ನೋಡಿ: ಈ ಘಟನೆ ನಡೆದಿರುವುದು ಕೊಪ್ಪಳ ಜಿಲ್ಲೆ ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತೊಯ ವಿಠಲಾಪೂರ ಗ್ರಾಮದಲ್ಲಿ. ಕಳೆದ ತಿಂಗಳ ಆಗಸ್ಟ್ 29ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವತಿ ಮರಿಯಮ್ಮ(21) ಆಗಿದ್ದಾಳೆ. ಈಕೆ ಮಾದಿಗ ಸಮುದಾಯಕ್ಕೆ ಸೇರಿದವಳಾಗಿದ್ದಳು. ಮರಿಯಮ್ಮ- ಹನುಮಯ್ಯ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಎಸ್ಟಿ ಸಮುದಾಯಕ್ಕೆ ಸೇರಿದ ಹನುಮಯ್ಯ, ಈಕೆಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರೂ ಮನೆಯವರನ್ನು ಒಪ್ಪಿಸಿ 2023ರ ಎಪ್ರಿಲ್‌ನಲ್ಲಿ ಮದುವೆಯಾಗಿದ್ದರು. ಹೆಸರಿಗೆ ಮಾತ್ರ ಮಗನಿಗೆ ಈಕೆಯನ್ನು ಮದುವೆ ಮಾಡಿಕೊಂಡು ಬಂದಿದ್ದರೂ, ಮನೆಯಿಂದ ಹೊರಗಿಟ್ಟು ಸೊಸೆಯನ್ನು ಪ್ರಾಣಿಗಿಂತಲೂ ಕೀಳಾಗಿ ಕಂಡಿದ್ದಾರೆ. ಕೇವಲ ಮಾದಿಗ ಸಮುದಾಯದವಳು ಎಂನ ಕಾರಣಕ್ಕೆ ಯವತಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಮೃತ ಯುವತಿ ಮರಿಯಮ್ಮ ಕುಟುಂಬಸ್ಥರು ತಮ್ಮ ಮಗಳಿಗೆ ಆಗಸ್ಟ್ 29ರಂದು ಹಿಂಸೆ ನೀಡಿ ವಿಷ ಉಣಿಸಿ ಕೊಲೆ ಮಾಡಿದ್ದಾರೆ ಆರೋಪಿಸಿದ್ದಾರೆ. ಯುವಕನ ಕುಟುಂಬದ 13 ಜನರ ವಿರುದ್ಧ ದೂರು ನೀಡಲಾಗಿದೆ. ಈ ಘಟನೆ ಸಂಬಂಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Latest Videos
Follow Us:
Download App:
  • android
  • ios