*  ತೆರವುಗೊಳಿಸಲು ಯಾಕೆ ಹೆದರುತ್ತೀರಿ?*  ಮುಲಾಜಿಲ್ಲದೆ ಕಾನೂನು ಕ್ರಮಕ್ಕೆ ವಿಭಾಗೀಯ ಪೀಠ ತಾಕೀತು*  ಪ್ರಭಾವಿಗಳ ಒತ್ತಡ ಇದೆಯೆ? 

ಬೆಂಗಳೂರು(ಅ.28): ನಗರದಲ್ಲಿನ(Bengaluru) ಅನಧಿಕೃತ ಕಟ್ಟಡ ತೆರವುಗೊಳಿಸುವ ವಿಚಾರದಲ್ಲಿ ಕೋರ್ಟ್‌ ಆದೇಶ ಪಾಲಿಸದ ಬಗ್ಗೆ ಗರಂ ಆದ ಹೈಕೋರ್ಟ್‌, ಯಾವುದಕ್ಕೂ ಹೆದರದೆ ಅಕ್ರಮ ಕಟ್ಟಡಗಳನ್ನು ಗುರುತಿಸಿ, ಮುಲಾಜಿಲ್ಲದೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಫೋಟೋ ಸಹಿತ ವರದಿ ಸಲ್ಲಿಸುವಂತೆ ಬಿಬಿಎಂಪಿ(BBMP)ಮುಖ್ಯ ಆಯುಕ್ತರಿಗೆ ತಾಕೀತು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಕ್ರಮ ಕಟ್ಟಡ ತೆರವು ಸಂಬಂಧ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯಪೀಠ ಬುಧವಾರ ಈ ಸೂಚನೆ ನೀಡಿತು.
ಇದಕ್ಕೂ ಮುನ್ನ, ನಗರದಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸಲು ಹೈಕೋರ್ಟ್‌(Highcourt) ಹೊರಡಿಸಿರುವ ಆದೇಶವನ್ನು(Order) ಏಕೆ ಪಾಲಿಸುತ್ತಿಲ್ಲ. ತೆರವುಗೊಳಿಸಲು ಏಕೆ ಹೆದರುತ್ತಿದ್ದೀರಿ, ಏನಾದರೂ ಭಯವೇ, ಪ್ರಭಾವಿಗಳ ಒತ್ತಡ ಇದೆಯೇ, ಎಷ್ಟು ಅಕ್ರಮ ಕಟ್ಟಡ(Illegal Building)ನೆಲಸಮ ಮಾಡಲಾಗಿದೆ ಎಂದು ವಿಚಾರಣೆಗೆ ಖುದ್ದು ಹಾಜರಿದ್ದ ಬಿಬಿಎಂಪಿ ಮುಖ್ಯ ಆಯುಕ್ತರನ್ನು ನ್ಯಾಯಪೀಠ ಪ್ರಶ್ನಿಸಿತು.

ಗಡಿನಾಡ ಸಂಚಾರ ತಡೆದ ಕರ್ನಾಟಕ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ತರಾಟೆ

ಪಾಲಿಕೆ ಪರ ವಕೀಲರು(Advocate) ಪ್ರಮಾಣಪತ್ರ ಸಲ್ಲಿಸಿ, ನಗರದಲ್ಲಿ ಅಕ್ರಮ ಕಟ್ಟಡದ ನಿರ್ಮಾಣದಲ್ಲಿ ಎರಡು ರೀತಿ ಇದೆ. ಒಂದು ಪಾಲಿಕೆಯಿಂದ ನಕ್ಷೆ ಪಡೆದು ನಿಯಮ ಉಲ್ಲಂಘಿಸಿ(violate) ನಿರ್ಮಾಣ ಮಾಡಿದ ಕಟ್ಟಡಗಳು, ಮತ್ತೊಂದು ಪಾಲಿಕೆಯಿಂದ ನಕ್ಷೆ ಅನುಮೋದನೆ ಪಡೆಯದೇ ಕಟ್ಟಡ ನಿರ್ಮಿಸಿದ ಪ್ರಕರಣಗಳಿವೆ. 2020ರ ನಂತರ ನಿರ್ಮಾಣವಾದ 5,905 ಕಟ್ಟಡ ಸಮೀಕ್ಷೆ ನಡೆಸಲಾಗಿದೆ. ಆ ಪೈಕಿ 4,279 ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿದೆ. ಅವುಗಳಿಗೆ ನೋಟಿಸ್‌ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇನ್ನೂ 2,591 ಕಟ್ಟಡಗಳ ಸರ್ವೇ ನಡೆಸಬೇಕಿದೆ. ನಕ್ಷೆಯಿಲ್ಲದೇ ನಿರ್ಮಾಣವಾದ ಕಟ್ಟಡಗಳ ಸರ್ವೇಯನ್ನು ಶೀಘ್ರ ಸಮೀಕ್ಷೆ(Survey) ಆರಂಭಿಸಲಾಗುವುದು ಎಂದು ವಿವರಿಸಿದರು.

ಬಿಬಿಎಂಪಿ ಪ್ರಮಾಣಪತ್ರವನ್ನು ಪರಿಶೀಲಿಸಿದ ನ್ಯಾಯಪೀಠ, 2019ರಲ್ಲಿ ಈ ಅರ್ಜಿ ಸಲ್ಲಿಕೆಯಾಗಿದೆ. ಆ ನಂತರವೂ ಕ್ರಮ ಕೈಗೊಂಡಿಲ್ಲ. ನಕ್ಷೆ ಪಡೆದು ನಿಯಮ ಉಲ್ಲಂಘಿಸಿರುವ ಕಟ್ಟಡಗಳ ಸಮೀಕ್ಷೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಈಗಾಗಲೇ ಗುರುತಿಸಿರುವ ಅನ​ಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಈ ಆದೇಶದ ಅನುಪಾಲನಾ ವರದಿಯನ್ನು ಡಿ.9ರೊಳಗೆ ಸಲ್ಲಿಸಬೇಕು. ಮುಂದಿನ ವಿಚಾರಣೆಗೆ ಮುಖ್ಯ ಆಯುಕ್ತರು ಖುದ್ದು ಹಾಜರಿರಬೇಕು. ಕೋರ್ಟ್‌ ಆದೇಶ ಪಾಲನೆ ಮಾಡಿರುವುದನ್ನು ತೋರಿಸಿದರೆ ಮಾತ್ರ ಹಾಜರಿಯಿಂದ ವಿನಾಯ್ತಿ ನೀಡಲಾಗುವುದು ಎಂದು ನ್ಯಾಯಪೀಠ ಕಟುವಾಗಿ ನುಡಿಯಿತು.