ಸ್ವರ್ಣಗೌರಿ ಮತ್ತು ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಆದ್ದರಿಂದ ಕುಂಬಾರಬೀದಿಯಲ್ಲಿ ಸುತ್ತಾಡಿದಾಗ ಅಲ್ಲಿ ಕಂಡುಬಂದ ಚಿತ್ರಣವೇ ಬೇರೆಯಾಗಿತ್ತು. ಚೌತಿ ಸಮಯದಲ್ಲಿ ಪ್ರತಿವರ್ಷ ಕೈತುಂಬಾ ಕೆಲಸವಿದ್ದು, ಊಟ ಮಾಡಲು ಪುರುಷೋತ್ತಿಲ್ಲದೆ ಕಲಾವಿದರು ಗಣಪತಿಗಳ ತಯಾರಿಸಿ, ಮೂರ್ತಿಗಳಿಗೆ ರಂಗುರಂಗಿನ ಬಣ್ಣಗಳ ಬಳಿಯುವಲ್ಲಿ ತಲ್ಲೀನರಾಗಿರುತ್ತಿದ್ದರು. ಆದರೆ ಕೊರೋನಾ ವೈರಸ್‌ ಹಾವಳಿಯಿಂದಾಗಿ ಅವರಿಗೆಲ್ಲ ಈಗ ಕೆಲಸವೇ ಇಲ್ಲವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಆ.04): ಕೊರೋನಾ ಬಿಸಿ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ, ಜನರ ಆರೋಗ್ಯದ ಮೇಲೆ ಮಾತ್ರವಲ್ಲ, ಭಕ್ತರ ಆರಾಧ್ಯ ದೈವ ವಿಘ್ನವಿನಾಶಕನಿಗೂ ತಟ್ಟಿದೆ.

Add Asianetnews Kannada as a Preferred SourcegooglePreferred

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಸೋಂಕು ಅಧಿಕಗೊಳ್ಳುತ್ತಿದೆ. ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಇದರಿಂದಾಗಿ ಗಣಪತಿಮೂರ್ತಿ ತಯಾರಕರು, ಶಾಮಿಯಾನದವರು, ಡೆಕೊರೇಷನ್‌ನವರು ಮತ್ತು ನಾಸೀಕ್‌ ಡೋಲು ಸೇರಿದಂತೆ ವಾದ್ಯದವರು, ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಕೆಲಸ ಮಾಡುತ್ತಿದ್ದ ಬಾಣಸಿಗರು ಕೆಲಸವಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾಗಿದೆ.

ಈ ಬಾರಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಇದರಿಂದ ನಗರದ ಆಜಾದ್‌ ಪಾರ್ಕ್ ಸಾರ್ವಜನಿಕ ಗಣಪತಿ ಸೇವಾ ಸಮಿತಿಯವರು ಸಂಪ್ರದಾಯ ಬಿಡಬಾರದು ಎನ್ನುವ ಕಾರಣಕ್ಕೆ ಬೋಳರಾಮೇಶ್ವರ ಆವರಣದ ಸಾರ್ವಜನಿಕ ಗಣಪತಿ ಪೆಂಡಾಲಿನಲ್ಲಿ ನಾಲ್ಕೂವರೆ ಅಡಿ ಗಣಪತಿ ಪ್ರತಿಷ್ಠಾಪಿಸಿ ವಿಸರ್ಜಿಸಲು ತೀರ್ಮಾನಿಸಿದ್ದಾರೆ.

ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಯೋಧ ನಾಪತ್ತೆ; ಉಗ್ರಗಾಮಿಗಳಿಂದ ಕಿಡ್ನಾಪ್?

ಸ್ವರ್ಣಗೌರಿ ಮತ್ತು ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಆದ್ದರಿಂದ ಕುಂಬಾರಬೀದಿಯಲ್ಲಿ ಸುತ್ತಾಡಿದಾಗ ಅಲ್ಲಿ ಕಂಡುಬಂದ ಚಿತ್ರಣವೇ ಬೇರೆಯಾಗಿತ್ತು. ಚೌತಿ ಸಮಯದಲ್ಲಿ ಪ್ರತಿವರ್ಷ ಕೈತುಂಬಾ ಕೆಲಸವಿದ್ದು, ಊಟ ಮಾಡಲು ಪುರುಷೋತ್ತಿಲ್ಲದೆ ಕಲಾವಿದರು ಗಣಪತಿಗಳ ತಯಾರಿಸಿ, ಮೂರ್ತಿಗಳಿಗೆ ರಂಗುರಂಗಿನ ಬಣ್ಣಗಳ ಬಳಿಯುವಲ್ಲಿ ತಲ್ಲೀನರಾಗಿರುತ್ತಿದ್ದರು. ಆದರೆ ಕೊರೋನಾ ವೈರಸ್‌ ಹಾವಳಿಯಿಂದಾಗಿ ಅವರಿಗೆಲ್ಲ ಈಗ ಕೆಲಸವೇ ಇಲ್ಲವಾಗಿದೆ. ಗಿರಾಕಿಗಳ ಆರ್ಡರ್‌ಗಳೂ ಇಲ್ಲದೇ ಅವರೆಲ್ಲ ಉದ್ಯೋಗದ ನಿರೀಕ್ಷೆಯಲ್ಲಿದ್ದುದು ಕಂಡುಬಂತು. ಹಾಗಂತ ಗಣಪತಿಗೆ ರೂಪುಕೊಡುವುದನ್ನು ಸಂಪೂರ್ಣ ನಿಲ್ಲಿಸಿದ್ದಾರೆ ಎಂದರ್ಥವಲ್ಲ. ಅವರಿಗೆ ಸಂಘಸಂಸ್ಥೆಗಳ, ಸಮಿತಿಗಳ, ಗ್ರಾಮೀಣರಿಂದ ಎಂದಿನಂಥ ವಿಭಿನ್ನ, ದೊಡ್ಡ ಗಣಪತಿಗಳ ನಿರ್ಮಾಣಕ್ಕೆ ಆರ್ಡರ್‌ಗಳು ಬಂದಿಲ್ಲ. ಆದ್ದರಿಂದ ಚಿಕ್ಕಪುಟ್ಟಗೌರಿ-ಗಣಪತಿಗಳ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.

ವಿಗ್ರಹ ಶಿಲ್ಪಿ ಏಕಾಂತರಾಮು ಮಾತನಾಡಿ, ಯಾವುದೇ ಹೊಸ ಮಾದರಿಯ ಗಣಪತಿಯನ್ನು ತಯಾರಿಸುತ್ತಿಲ್ಲ ಮಾಮೂಲಿ ದರ್ಬಾರ್‌ ಗಣಪತಿಯನ್ನು ಮಾಡಿದ್ದೇನೆ. ಎರಡೂವರೆ, ಎರಡೂಮುಕ್ಕಾಲು ಅಡಿ ಗಣಪತಿಯನ್ನು ತಯಾರಿಸುತ್ತಿದ್ದೇವೆ. ಸಂಪ್ರದಾಯ ಬಿಡಬಾರದು ಎನ್ನುವ ಕಾರಣಕ್ಕೆ ದೇವಾಲಯದಲ್ಲಿ ಗಣಪತಿ ಪ್ರತಿಷ್ಠಾಪಿಸಿ ವಿಸರ್ಜಿಸಲು ನಲ್ಲೂರು, ಮುಗುಳುವಳ್ಳಿ ಸೇರಿದಂತೆ ನಾಲ್ಕೈದು ಗ್ರಾಮದವರು ಗಣಪತಿ ತಯಾರಿಸಲು ಹೇಳಿದ್ದಾರೆ. ಕಳೆದ ವರ್ಷ 250 ಗಣಪತಿ ಮೂರ್ತಿಗಳಿಗೆ ರೂಪಕೊಡಲಾಗಿತ್ತು. ಈ ವರ್ಷ 125 ಗಣಪತಿಳಷ್ಟೇ ಮಾಡಿರುವುದಾಗಿ ತಿಳಿಸಿದ್ದಾರೆ. ಅವರ ಮಾರುಕಟ್ಟೆಮಾತಿನಲ್ಲಿ ಕೊರೋನಾ ಹಾವಳಿಯ ಪರಿಣಾಮವೂ ಇದೆ.

ಕೊರೋನಾ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಲು ಸಂಘಟನೆಗಳು, ಯುವಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಕೆಲವು ಮನೆಗಳಲ್ಲಿ ಈ ವರ್ಷ ಬೆಳ್ಳಿ ಗಣಪತಿಯನ್ನು ಪ್ರತಿಷ್ಠಾಪಿಸಿ, ಸಂಪ್ರದಾಯ ನೆರವೇರಿಸಲು ನಿರ್ಧರಿಸಿದ್ದಾರೆ. ಒಟ್ಟಾರೆಯಾಗಿ ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಕೊರೋನಾ ಕಾಟದ ದಟ್ಟಕಾರ್ಮೋಡವೇ ಕವಿದಂತಾಗಿದೆ.

ದೇವಾಲಯಗಳಲ್ಲಿ ಪೂಜೆಗೆ ಅವಕಾಶ ಮಾಡಿಕೊಡುತ್ತಿದ್ದಂತೆ ಇನ್ನೇನು ಗಣಪತಿ ಪ್ರತಿಷ್ಠಾಪನೆಗೂ ಅವಕಾಶ ಸಿಗಬಹುದೆಂಬ ಆಶಾಭಾವನೆಯಿಂದ 2 ಲೋಡು ಜೇಡಿಮಣ್ಣು ತರಿಸಿಕೊಂಡಿದ್ದೆ. ಈ ವರ್ಷ ಸಾರ್ವಜನಿಕರ ಗಣಪತಿ ಪ್ರತಿಷ್ಠಾಪನೆಗೆ ಅವಕಾಶವೇ ಇಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಂತೆ ಆಕಾಶವೇ ಕಳಚಿ ತಲೆಮ್ಯಾಲೆ ಬಿದ್ದಂಗಾಯ್ತು. ಹಬ್ಬದ ಸಂದರ್ಭ ಪ್ರತಿವರ್ಷ ಕೈ ತುಂಬ ಕೆಲಸಗಳು ಇರುತ್ತಿದ್ದವು. ಈ ವರ್ಷ ಈಗಾಗಲೇ ಸಿದ್ಧಪಡಿಸಿರುವ ಗಣಪತಿಗಳು ಮಾರಾಟವಾಗುತ್ತವೆಯೋ ಇಲ್ಲವೋ ತಿಳಿಯದಾಗಿದೆ. ಗಣಪತಿ ತಯಾರಿಕೆಗೆ ಆರ್ಡರ್‌ಗಳು ಬಂದಿಲ್ಲ. ಕೆಲಸವಿಲ್ಲದೇ ನಿರುದ್ಯೋಗಿಯಾಗಿದ್ದೇನೆ. ಮಣ್ಣಿಗೆ ಹಾಕಿರುವ ಬಂಡವಾಳ, ಕೆಲಸದ ಖರ್ಚು ದೊರೆಯುತ್ತದೆಯೋ, ನಷ್ಟವಾಗುವುದೋ ಎಂಬ ಆತಂಕ ಮನೆ ಮಾಡಿದೆ -  ಮನೋಜ್‌, ಗಣಪತಿ ತಯಾರಕ