⦁ ಆಲಮಟ್ಟಿ ಡ್ಯಾಂಗಾಗಿ ಭೂಮಿ ತ್ಯಾಗ ಮಾಡಿದವ್ರಿಗೆ ಸಿಗ್ತಿಲ್ವಂತೆ ನೀರು..!⦁ ATM ನಂತೆ ATW ಮಾದರಿಯಲ್ಲಿ ನೀರು ಕೊಡಿ ಏನ್ತಿರೋ ರೈತರು..!⦁ ಏನೀ ATW ಮಾದರಿಯಲ್ಲಿ ನೀರು ನೀಡುವ ಪ್ಲಾನ್..!?

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

Add Asianetnews Kannada as a Preferred SourcegooglePreferred

ವಿಜಯಪುರ (ಏ.08): ವಿಜಯಪುರ (Vijayapura) ಜಿಲ್ಲೆಯನ್ನ ಪಂಚನದಿಗಳ ಬೀಡು ಎಂದು ಕರೆಯಲಾಗುತ್ತೆ. 5 ನದಿಗಳ ಜೊತೆಗೆ ಏಷ್ಯಾಖಂಡದ ಅತಿದೊಡ್ಡ ಡ್ಯಾಂ ಇರೋದು ವಿಜಯಪುರ ಜಿಲ್ಲೆಯಲ್ಲಿ. ಆದರೆ ಜಿಲ್ಲೆಯಲ್ಲಿ ಜನರು ನೀರಿಗಾಗಿ ಪರದಾಡೋದು (Water Problem) ತಪ್ಪಿಲ್ಲ. ಅದರಲ್ಲು ಬೇಸಿಗೆ ಬಂದ್ರೆ ಸಾಕು ನೀರಿಗಾಗಿ ಹಾಹಾಕಾರ ಶುರುವಾಗುತ್ತೆ. ರೈತರ (Farmers) ಜಮೀನುಗಳಿಗೆ ನೀರು ಹಾಗಿರಲಿ ಕುಡಿಯೋ ನೀರಿಗು ತತ್ವಾರ ಶುರುವಾಗುತ್ತೆ. ಬೇಸಿಗೆ (Summer) ಸಮಯದಲ್ಲಿ ಬೆಳೆಗಳಿಗೆ ಶುರುವಾಗೋ ನೀರಿನ ಸಮಸ್ಯೆಯನ್ನ ಹೋಗಲಾಡಿಸಲು ರೈತರು ಹೊಸದೊಂದು ಮಾದರಿಯ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದ್ದಾರೆ. ರೈತ ಮುಖಂಡ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಎಂಟಿಎಂನಂತೆ ಎಟಿಡಬ್ಲೂ ಮಾದರಿಯಲ್ಲಿ ನೀರು ನೀಡಿ ಎಂದು ರೈತರು ಮನವಿ ಮಾಡಿದ್ದಾರೆ.

ATM ಗೊತ್ತು ಏನೀದು ATW..?: ATM ನಲ್ಲಿ ಎನೀ ಟೈಂ ಮನಿ ಸಿಗುವ ಹಾಗೇ ಆಲಮಟ್ಟಿ ಡ್ಯಾಂ ನಿಂದ ಎನಿ ಟೈಂ ವಾಟರ್‌ ಸಿಗುವ ಸೌಲಭ್ಯ ಕಲ್ಪಿಸಬೇಕು ಅನೋ ಆಗ್ರಹ ಮುಂದಿಟ್ಟಿದ್ದಾರೆ. ಇದನ್ನೆ ATW ಮಾದರಿಯಲ್ಲಿ ನೀರು ನೀಡಿ ಎಂದು ರೈತರು ಆಗ್ರಹ ಪಡೆಸುತ್ತಿದ್ದಾರೆ. ಆಲಮಟ್ಟಿ ಅಣೆಕಟ್ಟೆ ವ್ಯಾಪ್ತಿಯ ಅನ್ನದಾತರು ಕಾಲುವೆ ಮೂಲಕ ಎನಿ ಟೈಂ ವಾಟರ್ ಕೊಡಿ ಅಂತಿದ್ದಾರೆ. ಆಲಮಟ್ಟಿ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯದ ನಿರ್ಮಾಣಕ್ಕಾಗಿ ಬಾಗಲಕೋಟೆ ವಿಜಯಪುರ ಅವಳಿ ಜಿಲ್ಲೆಯ ರೈತರು ಜಮೀನುಗಳನ್ನು ತ್ಯಾಗ ಮಾಡಿದ್ದಾರೆ. ಆದ್ರೆ ಈ ಭಾಗದ ರೈತರ ಜಮೀನುಗಳಿಗೆ ನೀರು ಸಿಗ್ತಿಲ್ಲ‌‌. ಹೋರಾಟದ ಮೂಲಕ ನೀರು ಪಡೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಆದ್ರೆ ಅಧಿಕಾರಿಗಳು ಜನಪ್ರತಿನಿಧಿಗಳು ಆಂಧ್ರ, ಜಿಂದಾಲ್,ಎನ್ ಟಿಪಿಸಿ ಘಟಕಕ್ಕೆ ನೀರು ಮಾರಾಟ ಮಾಡ್ತಾರೆ ಅಂತ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಆಲಿಕಲ್ಲು ಮಳೆ ತಂದ ಆಪತ್ತು: 'ಕೈಗೆ ಬಂದ ತುತ್ತು ಬಾಯಿಗೆ ಬಾರದೆ' ಕಂಗಾಲಾದ ಅನ್ನದಾತ..!

ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ..!: ಅನ್ನನೀಡುವ ರೈತರ ಜಮೀನುಗಳಿಗೆ ನೀರು ಕೊಡ್ತಿಲ್ಲ. ಮುಳವಾಡ ಏತ ನೀರಾವರಿಯ 3ನೇ ಹಂತದ ಕಾಲುವೆಗಳಿಗೆ ಹಾಗೂ ಚಿಮ್ಮಲಗಿ ಏತ ನೀರಾವರಿಯ ಪೂರ್ವ ಕಾಲುವೆಗೆ ನೀರು ಹರಿಸಿ ಜಮೀನಿಗೆ ಹಾಗೂ ಜಾನುವಾರುಗಳಿಗೆ ಕುಡಿಯೋ ನೀರಿನ ಅನುಕೂಲತೆಗಾಗಿ ಕೆರೆಗಳನ್ನು ಭರ್ತಿ ಮಾಡಿ, ಎಟಿಎಂ ಮಾದರಿಯಂತೆ ಎಟಿಡಬ್ಲೂ ಮೂಲಕ ರೈತರ ಜಮೀನುಗಳಿಗೆ ನೀರು ಬೇಕೆಂದಾಗ ಹರಿಸಿ ಅಂತ ಜಿಲ್ಲಾಧಿಕಾರಿ ಕಚೇರಿ ಎದುರು ನೆತ್ತಿಸುಡುಬಿಸಿಲಿನಲ್ಲೂ ನೆಲದ ಮೇಲೆ ಕುಳಿತು ರೈತರು ಪ್ರತಿಭಟಿಸಿ ಮನವಿ ಸಲ್ಲಿಸಿದ್ದಾರೆ. ಪ್ರಮುಖವಾಗಿ ಆಲಮಟ್ಟಿ ಡ್ಯಾಂ ಗಾಗಿ ತಮ್ಮ ಜಮೀನುಗಳನ್ನ ತ್ಯಾಗ ಮಾಡಿದ ರೈತರಿಗೆ ಈಗ ನೀರು ಸಿಗ್ತಿಲ್ಲ ಅಂತಾ ರೈತ ಮುಖಂಡ ಅರವಿಂದ ಕುಲಕರ್ಣಿ ಆಕ್ರೋಶ ಹೊರಹಾಕಿದ್ದಾರೆ.

ಆಂಧ್ರ, ಕೂಡಗಿ ಘಟಕಕ್ಕೆ ನೀರು ನಿಲ್ಲಿಸಿ, ನಮಗೆ ಕೊಡಿ..!: ಮುಳವಾಡ ಏತ ನೀರಾವರಿಯ 3ನೇ ಹಂತದ ಕಾಲುವೆಗಳಿಗೆ ಸದ್ಯ ನೀರು ಹರಿಸಲು ಅನುಮತಿ ಕೊಟ್ಟಿಲ್ಲ. ಆಣೆಕಟ್ಟಿನ ನೀರಿನಮಟ್ಟವನ್ನು 524.256ಕ್ಕೆ ನಿಲ್ಲಿಸಿದಾಗ ಮಾತ್ರ 3ನೇ ಹಂತದ ಕಾಲುವೆಗಳಿಗೆ ನೀರು ಹರಿಸಲು ಬರುತ್ತದೆ. ಇದು ನಮ್ಮ ವ್ಯಾಪ್ತಿಗೆ ಇಲ್ಲಂತ ನೀರಾವರಿ ಅಧಿಕಾರಿಗಳು ಸಬೂಬು ಹೇಳ್ತಿದ್ದಾರಂತೆ. ಜಿಲ್ಲಾಧಿಕಾರಿಗಳು ಅನುಮತಿ ಕೊಟ್ಟರೆ ನೀರು ಹರಿಸ್ತೀವಿ ಅಂತಾರೆ.. ಆಂಧ್ರ ರಾಜ್ಯಕ್ಕೆ ನೀರು ಕೊಡುವುದನ್ನು ನಿಲ್ಲಿಸಲಿ, ನಮ್ಮ ಜಿಲ್ಲೆಯ ರೈತರಿಗೆ ನೀರು ಕೊಡಿ. ಕೂಡಗಿ ಥರ್ಮಲ್ ಘಟಕಕ್ಕೆ ನೀರು ಕೊಡುವುದು ಸ್ದಗಿತಗೊಳಸಿ ಎಂದು ಆಗ್ರಹಿಸಿದ್ದಾರೆ.

ಅಪ್ಪು ಫೋಟೋ ಸಮೇತ ಕೆಂಡ ಹಾಯ್ದ ಅಭಿಮಾನಿ: ಕೋಲ್ಹಾರ ವೀರಭದ್ರೇಶ್ವರ ಜಾತ್ರೆಯಲ್ಲೂ ಪುನೀತ್‌ ಹವಾ!

ಅಂದು ಆಣೆಕಟ್ಟಿಗಾಗಿ ತ್ಯಾಗ ಮಾಡಿದ ರೈತರಿಗೆ ಇಂದು ಸಿಗ್ತಿಲ್ವಂತೆ ನೀರು.!: ಅಂದು ಆಲಮಟ್ಟಿ ಡ್ಯಾಂಗಾಗಿ ಸಾಕಷ್ಟು ರೈತರು ಜಮೀನುಗಳನ್ನ ತ್ಯಾಗ ಮಾಡಿದ್ದರು. ಆದ್ರೆ ಇಂದು ಅದೇ ರೈತರ ಜಮೀನುಗಳಿಗೆ ಬೇಕೆಂದಾಗ ನೀರು ಸಿಗ್ತಿಲ್ಲವಂತೆ.. ಜಲಾಶಯದಲ್ಲಿ ಸದ್ಯ ಒಟ್ಟು 45.890ಟಿಎಮ್‌ಸಿ ನೀರು ಸಂಗ್ರಹವಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ, ಬಾಷ್ಪೀಕರಣ, ಜಲಚರ ಹಾಗೂ ಕುಡಿಯೋ ನೀರಿಗಾಗಿ 11.620 ಟಿಎಮ್ ಸಿ ನೀರು ಕಾಯ್ದಿರಿಸಿದ್ರೂ,ಇನ್ನು 28.270 ಟಿಎಂಸಿ ನೀರು ಉಳಿಯುತ್ತೆ. ಈಗ ಏಪ್ರೀಲ್ 10 ರಿಂದ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸ್ತಾರೆ. ಇದ್ರಿಂದ ರೈತರ ಬೆಳೆಗಳಿಗೆ ತೊಂದರೆಯಾಗುತ್ತದೆ. ಏಪ್ರೀಲ್ 30 ರವರೆಗೂ ನೀರು ಹರಿಸೋದನ್ನು ವಿಸ್ತರಿಸಿ, ಇಲ್ಲವಾದ್ರೆ ಜಿಲ್ಲಾಡಳಿತ ಕಚೇರಿ ಹಾಗೂ ಆಲಮಟ್ಟಿಯ ಕೆಬಿಜೆಎನ್ ಮುಖ್ಯ ಅಭಿಯಂತರದ ಕಚೇರಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.