ಉಗ್ರರಿಗೆ ಹಣಕಾಸು ನೆರವು, ಸಂಪರ್ಕ ಸೇರಿ ಹಲವು ಆರೋಪಗಳನ್ನು ಹೊದಿರುವ ನಾಲ್ವರು ಸರ್ಕಾರಿ ಉದ್ಯೋಗಿಗಳನ್ನು ಜಮ್ಮು ಕಾಶ್ಮೀರ ಸರ್ಕಾರ ಶನಿವಾರ ವಜಾಗೊಳಿಸಿದೆ. 

ಜಮ್ಮು ಕಾಶ್ಮೀರ ಸರ್ಕಾರ ಶನಿವಾರ ನಾಲ್ವರು ಸರ್ಕಾರಿ ಉದ್ಯೋಗಿಗಳನ್ನು ವಜಾ ಮಾಡಿದೆ. ಭಾರತದ ವಿರುದ್ಧ ಕೆಲಸ ಮಾಡುವ ಮತ್ತು ದುರುದ್ದೇಶಪೂರಿತ ಪ್ರಚಾರವನ್ನು ಹರಡುವ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಎಲ್ಲಾ ನಾಲ್ವರನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಾಲ್ವರಲ್ಲಿ ಉಗ್ರನ ಪುತ್ರ ಹಾಗೂ ಪ್ರತ್ಯೇಕಾವಾದಿಯ ಪತ್ನಿಯೂ ಸೇರಿದ್ದಾರೆ.

Add Asianetnews Kannada as a Preferred SourcegooglePreferred

ಜಮ್ಮು ಕಾಶ್ಮೀರ ಸರ್ಕಾರ ಶನಿವಾರ ನಾಲ್ವರು ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ನಾಲ್ವರ ಪೈಕಿ ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನ ಸ್ವಯಂಘೋಷಿತ ಮುಖ್ಯಸ್ಥ ಸಯ್ಯದ್‌ ಸಲಾಹುದ್ದೀನ್‌ನ ಮಗ ಹಾಗೂ ಪ್ರತ್ಯೇಕವಾದಿಯ ಪತ್ನಿ ಹಾಗೂ ಉಗ್ರರಿಗೆ ಹಣಕಾಸು ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ಜೈಲಿನಲ್ಲಿರುವ ಫಾರೂಕ್‌ ಅಹ್ಮದ್‌ ದರ್‌ ಅಲಿಯಾಸ್‌ ಬಿಟ್ಟ ಕರಾಟೆಯ ಪತ್ನಿ ಸಹ ಸೇರಿದ್ದಾರೆ ಎಂದು ತಿಳಿದುಬಂದಿದೆ. ಬಿಟ್ಟಾ ಕರಾಟೆ ಜಮ್ಮು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಮಾರಣಾಂತಿಕ ದಾಳಿಯಲ್ಲೂ ಭಾಗಿಯಾಗಿದ್ದ ಎಂದೂ ಹೇಳಲಾಗಿದೆ.

ಪಾಕ್‌ ಆಕ್ರಮಿತ ಕಾಶ್ಮೀರವನ್ನು 'ಆಜಾದ್‌ ಕಾಶ್ಮೀರ' ಎಂದ ಕೇರಳ ಶಾಸಕ ಜಲೀಲ್

ಭಾರತದ ವಿರುದ್ಧ ಕೆಲಸ ಮಾಡುವ ಮತ್ತು ದುರುದ್ದೇಶಪೂರಿತ ಪ್ರಚಾರವನ್ನು ಹರಡುವ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಈ ನಾಲ್ವರು ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಸಂವಿಧಾನದ ಆರ್ಟಿಕಲ್ 311 ಪ್ರಕಾರ ಯಾವುದೇ ವಿಚಾರಣೆ ಇಲ್ಲದೆ ತನ್ನ ಉದ್ಯೋಗಿಗಳನ್ನು ವಜಾ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗಿದೆ. 

ಸಲಾಹುದ್ದೀನ್ ಅಲಿಯಾಸ್‌ ಸಯ್ಯದ್‌ ಮೊಹಮ್ಮದ್‌ ಯೂಸುಫ್‌ ಪುತ್ರ ಸಯ್ಯದ್‌ ಅಬ್ದುಲ್‌ ಮುಯೀದ್‌ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯಲ್ಲಿ ಮ್ಯಾನೇಜರ್ (ಮಾಹಿತಿ ಹಾಗೂ ತಂತ್ರಜ್ಞಾನ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಇವರನ್ನು ಸಹ ವಜಾಗೊಳಿಸಲಾಗಿದೆ. ಇನ್ನು, ಈ ಹಿಂದೆಯೇ ಇಬ್ಬರು ಹಿಜ್ಬುಲ್‌ ಮುಖ್ಯಸ್ಥನ ಮಕ್ಕಳನ್ನು ವಜಾಗೊಳಿಸಲಾಗಿತ್ತು. ಈಗ ಹಿಜ್ಬುಲ್‌ ಮುಖ್ಯಸ್ಥನ ಮೂರನೇ ಪುತ್ರನನ್ನು ಸಹ ವಜಾಗೊಳಿಸಲಾಗಿದೆ. ಈ ಹಿಂದೆ ಸಯ್ಯದ್ ಅಹ್ಮದ್‌ ಶಕೀಲ್‌ ಹಾಗೂ ಶಾಹಿದ್‌ ಯೂಸುಫ್‌ ಅವರನ್ನು ಕಳೆದ ವರ್ಷವೇ ಸೇವೆಯಿಂದ ಕಿತ್ತುಹಾಕಲಾಗಿತ್ತು. ಪಾಂಪೋರ್‌ನ ಸೆಂಪೊರಾದಲ್ಲಿರುವ ಜಮ್ಮು ಮತ್ತು ಕಾಶ್ಮೀರ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (ಜೆಕೆಇಡಿಐ) (Jammu and Kashmir Entrepreneurship Development Institute ) ಸಂಕೀರ್ಣದ ಮೇಲಿನ ಮೂರು ಭಯೋತ್ಪಾದಕ ದಾಳಿಗಳಲ್ಲಿ ಮುಯೀದ್ ಪಾತ್ರವಿದೆ ಎಂದು ಹೇಳಲಾಗಿದೆ ಮತ್ತು ಸಂಸ್ಥೆಯಲ್ಲಿ ಆತನ ಉಪಸ್ಥಿತಿಯು ಪ್ರತ್ಯೇಕತಾವಾದಿ ಶಕ್ತಿಗಳೊಂದಿಗೆ ಸಹಾನುಭೂತಿಯನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಇನ್ನೊಂದೆಡೆ, ಫಾರೂಕ್ ಅಹ್ಮದ್ ದರ್ ಅಲಿಯಾಸ್ 'ಬಿಟ್ಟಾ ಕರಾಟೆ'ಯ ಪತ್ನಿ ಅಸ್ಸಾಬಾ-ಉಲ್-ಅರ್ಜಮಂದ್ ಖಾನ್, ಮತ್ತು 2011ರ ಬ್ಯಾಚ್‌ನ ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವಾ ಅಧಿಕಾರಿ (JKAS), ಪಾಸ್‌ಪೋರ್ಟ್‌ ಪಡೆಯಲು ತಪ್ಪು ಮಾಹಿತಿ ನೀಡುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜತೆಗೆ, "ಭಾರತೀಯ ಭದ್ರತೆ ಮತ್ತು ಗುಪ್ತಚರರು ISI ವೇತನದಾರರ ಪಟ್ಟಿಯಲ್ಲಿರುವ ವಿದೇಶಿ ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ" ಎಂದು ಆರೋಪಿಸಲಾಗಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ-ವಿರೋಧಿ ಚಟುವಟಿಕೆಗಳಿಗೆ ಧನಸಹಾಯಕ್ಕಾಗಿ ಹಣ ಸಾಗಿಸುವಲ್ಲಿ ಆಕೆ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಬಿಟ್ಟಾ ಕರಾಟೆ' 2017 ರಿಂದ ಭಯೋತ್ಪಾದಕ ನಿಧಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದಾರೆ. 1990 ರ ದಶಕದ ಆರಂಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಲವಾರು ಸದಸ್ಯರ ಹತ್ಯೆಗಳಲ್ಲಿ ಅವರು ಭಾಗಿಯಾಗಿದ್ದರು.

‘ರಾಷ್ಟ್ರ ಧ್ವಜ ಕೊಂಡುಕೊಳ್ಳಲು ಜಮ್ಮು - ಕಾಶ್ಮೀರದಲ್ಲಿ ಒತ್ತಾಯ’

ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ವಿಭಾಗದಲ್ಲಿ ವಿಜ್ಞಾನಿಯಾಗಿ ನೇಮಕಗೊಂಡಿರುವ ಡಾ. ಮುಹೀತ್ ಅಹ್ಮದ್ ಭಟ್ ಹಾಗೂ ಕಾಶ್ಮೀರ ವಿಶ್ವವಿದ್ಯಾನಿಲಯದ ಹಿರಿಯ ಸಹಾಯಕ ಪ್ರಾಧ್ಯಾಪಕ ಮಜೀದ್ ಹುಸೇನ್ ಖಾದ್ರಿ ಅವರನ್ನು ಸಹ ಸರ್ಕಾರ ವಜಾಗೊಳಿಸಿದೆ. ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ ಇದುವರೆಗೆ ಸುಮಾರು 40 ನೌಕರರನ್ನು ಸರ್ಕಾರಿ ಸೇವೆಗಳಿಂದ ವಜಾಗೊಳಿಸಲಾಗಿದೆ ಎಂದೂ ತಿಳಿದುಬಂದಿದೆ.