Asianet Suvarna News Asianet Suvarna News

'ಘರ್‌ ಮೆ ಗುಸ್‌ ಕೆ ಮಾರೇಂಗೆ..' ಮೋದಿ ಹೇಳಿದ್ದನ್ನು ನಿಜ ಮಾಡಿತಾ ಭಾರತದ RAW?

Narendra Modi Hum Ghar mein ghus ke marenge Statement ಪುಲ್ವಾಮಾ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಮಾರಂಭದಲ್ಲಿ ಹೇಳಿದ್ದ ಮಾತು ಸಾಕಷ್ಟು ವೈರಲ್‌ ಆಗಿತ್ತು. ಇದು ಹಿಂದಿನ ಸರ್ಕಾರವಲ್ಲ. ನಮ್ಮ ಸರ್ಕಾರ, ಇದು ನಮ್ಮ ಸಿದ್ಧಾಂತ, ನಾವು ಅವರ ಮನೆ ಹೊಕ್ಕು ಸಾಯಿಸುತ್ತೇವೆ (ಯೇ ಹಮಾರಾ ಸಿದ್ಧಾಂತ್‌ ಹೇ, ಹಮ್‌ ಘರ್‌ ಮೇ ಗುಸ್‌ ಕೆ ಮಾರೇಂಗೆ) ಎಂದಿದ್ದರು.

Guardian report citing intel sources says  Indian Government organised killings in Pakistan to eliminate terrorists san
Author
First Published Apr 5, 2024, 1:41 PM IST

ನವದೆಹಲಿ (ಏ.5): ಪ್ರಧಾನಿ ನರೇಂದ್ರ ಮೋದಿ ಈ ಮಾತನ್ನು ಸಾಕಷ್ಟು ಸಾರ್ವಜನಿಕ ಸಮಾರಂಭದಲ್ಲಿ ಹೇಳಿದ್ದರು. ಪುಲ್ವಾಮಾ ದಾಳಿಯ ಬೆನ್ನಲ್ಲೇ ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 'ನಾನು ಹೆಚ್ಚು ದಿನ ಕಾಯೋದಕ್ಕೆ ಹೋಗೋದಿಲ್ಲ. ಒಬ್ಬೊಬ್ಬೊರನ್ನು ಗುರುತಿಸಿ, ಸೇಡು ತೀರಿಸಿಕೊಳ್ಳುತ್ತೇವೆ. ಇದು ನಮ್ಮ ಸಿದ್ಧಾಂತ, ನಾವು ಅವರ ಮನೆ ಹೊಕ್ಕು ಸಾಯಿಸುತ್ತೇವೆ (ಯೇ ಹಮಾರಾ ಸಿದ್ಧಾಂತ್‌ ಹೇ, ಹಮ್‌ ಘರ್‌ ಮೇ ಗುಸ್‌ ಕೆ ಮಾರೇಂಗೆ) ಎಂದಿದ್ದರು. ಪ್ರಧಾನಿ ಮೋದಿ ಹೇಳಿದ್ದ ಈ ಮಾತನ್ನು ಭಾರತದ ಗುಪ್ತಚರ ವಿಭಾಗ ಮಾಡಿ ತೋರಿಸಿದೆ ಎಂದು ಇಂಗ್ಲೆಂಡ್‌ನ ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ. ದೇಶ ವಿದೇಶಗಳಿಗೆ ಕಂಟಕವಾಗಿರುವ ಪಾಕಿಸ್ತಾನದ ಭಯೋತ್ಪಾದಕರನ್ನು ಭಾರತದ ಸರ್ಕಾರವೇ ಕೊಲೆ ಮಾಡಿಸಿದೆ ಎಂದು ಗಾರ್ಡಿಯನ್‌ ಪತ್ರಿಕೆ ಗುಪ್ತಚರ ಇಲಾಖೆಯ ಮೂಲಗಳನ್ನು ಉದ್ದೇಶಿಸಿ ವರದಿ ಮಾಡಿದೆ. ಆದರೆ, ಭಾರತ ಮಾತ್ರ ಈ ಸುದ್ದಿಯನ್ನು ನಿರಾಕರಿಸಿದೆ. 

ವಿದೇಶಿ ನೆಲದಲ್ಲಿ ಉಗ್ರ ಕೃತ್ಯಗಳನ್ನು ನಡೆಸುತ್ತಿರುವ ಭಯೋತ್ಪಾದಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ಭಾರತ ಸರ್ಕಾರದ ನೇತೃತ್ವದಲ್ಲಿಯೇ ಸಂಘಟಿತ ಕೊಲೆಗಳು ನಡೆದಿವೆ ಎಂದು ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ. ಭಾರತ ಹಾಗೂ ಪಾಕಿಸ್ತಾನದ ಗುಪ್ತಚರ ಇಲಾಖೆಯ ಅನಾಮಿಕ ಅಧಿಕಾರಿಗಳು ಹೇಳಿರುವ ಮಾತನ್ನು ಗಾರ್ಡಿಯನ್‌ ದಾಖಲಿಸಿದೆ.

ವಿದೇಶಿ ನೆಲದಲ್ಲಿ ಕಾರ್ಯನಿರ್ವಹಿಸುವ ರಿಸರ್ಚ್‌ & ಅನಾಲಿಸಿಸ್‌ ವಿಂಗ್‌ (ರಾ) ಮಾಡಿರುವ ಕಾರ್ಯಚಾರಣೆಯ ಬಗ್ಗೆ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ದಾಖಲೆಗಳನ್ನು ನೀಡಿದ್ದಾರೆ. ಇನ್ನು ಎರಡೂ ದೇಶದ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದಲೇ ನೇರ ನಿಯಂತ್ರಣ ಹೊಂದಿರುವ ರಾ, 2019ರಿಂದ ಪಾಕಿಸ್ತಾನದ ನೆಲದಲ್ಲಿ ಇಂಥ ಕೊಲೆಗಳನ್ನು ಮಾಡುತ್ತಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಆರೋಪಿಸಿದ್ದಾರೆ.

ಆರೋಪಗಳು ಪ್ರಾಥಮಿಕವಾಗಿ ಗಂಭೀರವಾದ ಭಯೋತ್ಪಾದನಾ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಸಂಬಂಧಿಸಿವೆಯಾದರೂ, ಕೆನಡಾದಲ್ಲಿ ಖಲಿಸ್ತಾನಿ ಹೋರಾಟಗಾರನ ಕೊಲೆಯ ಬಳಿಕ ಅಮೆರಿಕ ಹಾಗೂ ಕೆನಡಾ ದೇಶಗಳು ನೇರವಾಗಿ ಭಾರತದ ವಿರುದ್ಧವೇ ಈ ಆರೋಪ ಮಾಡಿದ್ದವು. ಕಳೆದ ವರ್ಷ ಅಮೆರಿಕದಲ್ಲೂ ಖಲಿಸ್ತಾನಿ ಬೆಂಬಲಿಗನ ವಿಫಲ ಹತ್ಯೆ ನಡೆಸಲಾಗಿತ್ತು. ಇದಕ್ಕೆ ಅಮೆರಿಕ ಕೂಡ ಭಾರತ ಸರ್ಕಾರವನ್ನು ಟಾರ್ಗೆಟ್‌ ಮಾಡಿತ್ತು.

ಪಾಕಿಸ್ತಾನದಲ್ಲಿ 2020 ರಿಂದ ಸುಮಾರು 20 ಹತ್ಯೆಗಳನ್ನು ಅಪರಿಚಿತ ಬಂದೂಕುದಾರಿಗಳು ನಡೆಸಿದ್ದಾರೆ ಎಂದು ವರದಿಯು ಹೇಳಿದೆ. ಇದರಲ್ಲಿ ಭಾರತದ ಗುಪ್ತಚರ ಇಲಾಖೆಯ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಈ ಕಾರ್ಯಾಚರಣೆಗಳು ಪಾಕಿಸ್ತಾನದ ಒಳಗೆ ಮತ್ತು ವಿದೇಶಗಳಲ್ಲಿ ಖಾಲಿಸ್ತಾನ್ ಚಳವಳಿಗೆ ಸಂಬಂಧಿಸಿದ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡಿವೆ.  ಪಾಕಿಸ್ತಾನಿ ತನಿಖಾಧಿಕಾರಿಗಳ ಪ್ರಕಾರ, ಪ್ರಧಾನವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗುಪ್ತಚರ ಸ್ಲೀಪರ್ ಸೆಲ್‌ಗಳು ಈ ಹತ್ಯೆಗಳನ್ನು ಆಯೋಜಿಸಿವೆ.

2019ರಲ್ಲಿ ಪುಲ್ವಾಮಾ ದಾಳಿಯ ಬಳಿಕ, ಇಂಥ ಭಯೋತ್ಪಾದಕರನ್ನು ಹುಡುಕು ಹುಡುಕಿ ಕೊಲ್ಲುವ  ಪರಿಪಾಠ ಆರಂಭವಾಗಿದೆ ಎಂದು ಭಾರತೀಯ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬರ್‌, ಅರೆಸೇನಾ ಪಡೆಯ ಬೆಂಗಾವಲಿನ ಮೇಲೆ ದಾಳಿ ಮಾಡಿದ್ದ. ಇದರಲ್ಲಿ 40 ಸೈನಿಕರು ಸಾವು ಕಂಡಿದ್ದರು. ಇದರ ಹೊಣೆಯನ್ನು ಪಾಕಿಸ್ತಾನದ ಮೂಲದ ಭಯೋತ್ಪಾದಕ ಗುಂಪು ಜೈಶ್‌-ಎ-ಮೊಹಮದ್‌ ಇದರ ಹೊಣೆ ಹೊತ್ತುಕೊಂಡಿತ್ತು.

ಐಪಿಎಸ್‌ ಅಧಿಕಾರಿ ರವಿ ಸಿನ್ಹಾ, ದೇಶದ ಅತ್ಯುನ್ನತ ಸ್ಪೈ ಏಜೆನ್ಸಿ 'RAW' ಮುಂದಿನ ಚೀಫ್‌!

ಆದರೆ, ಭಾರತದ ವಿದೇಶಾಂಗ ಇಲಾಖೆ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ. ವಿದೇಶದಲ್ಲಿ ನಡೆದಿರುವ ಈ ಘಟನೆಗಳಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ. ಗಾರ್ಡಿಯನ್‌ ಮಾಡಿರುವ ವರದಿಯ ಪ್ರಕಾರ, ಈ ಎಲ್ಲಾ ಕೃತ್ಯಗಳನ್ನು ಯುಎಇಯಿಂದ ನಡೆಸಲಾಗಿದೆ. ಇಲ್ಲಿ ರಾ ತನ್ನ ಸ್ಲೀಪರ್‌ ಸೆಲ್‌ಗಳನ್ನು ಸ್ಥಾಪನೆ ಮಾಡುವ ಮೂಲಕ ಕಾರ್ಯಾಚರಣೆಗಳ ವಿವಿಧ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಪರಿಚಿತ ಬಂದೂಕುಧಾರಿಗಳನ್ನು ನೇಮಕ ಮಾಡಿತ್ತು. ಇದಕ್ಕೆ ಹಣವನ್ನು ದುಬೈನಿಂದ ಸಾಗಿಸಲಾಗಿದೆ. ಇತರ ದೇಶಗಳಲ್ಲಿ ಸಹ ಸಮನ್ವಯ ಸಭೆಗಳು ನಡೆದಿವೆ ಎಂದು ಆರೋಪಿಸಲಾಗಿದೆ.

ಬಾಲಾಕೋಟ್ ವಾಯುದಾಳಿ ರೂವಾರಿ ಇದೀಗ ‘ರಾ’ ಮುಖ್ಯಸ್ಥ!

ಪಾಕಿಸ್ತಾನವು ಹತ್ಯೆಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಹಿಂಜರಿಯುತ್ತಿದೆ.  ಏಕೆಂದರೆ ಹೆಚ್ಚಿನ ಗುರಿಗಳು ತಿಳಿದಿರುವ ಭಯೋತ್ಪಾದಕರು ಮತ್ತು ನಿಷೇಧಿತ ಉಗ್ರಗಾಮಿ ಗುಂಪುಗಳ ಸಹಚರರಾಗಿದ್ದಾರೆ. ಇವರು ಪಾಕಿಸ್ತಾನದಲ್ಲಿ ವಾಸವಾಗಿದ್ದಾರೆ ಎನ್ನುವ ವಿಚಾರವನ್ನು ಪಾಕ್‌ ಸರ್ಕಾರ ನಿರಾಕರಿಸಿತ್ತು.

Follow Us:
Download App:
  • android
  • ios