Asianet Suvarna News Asianet Suvarna News

ಅನಾರೋಗ್ಯ ಪೀಡಿತ ಅಪ್ಪನನ್ನು 7 ದಿನ ಸೈಕಲ್ ತುಳಿದು ಮನೆಗೆ ಕರೆತಂದ 13ರ ಮಗಳು!

ದೇಶವ್ಯಾಪಿ ಲಾಕ್‌ಡೌನ್| ಬಾಡಿಗೆ ನೀಡುವಂತೆ ಮಾಲೀಕರ ಒತ್ತಾಯ| ಹಣವಿಲ್ಲದೆ ಕಾರ್ಮಿಕರ ಪರದಾಟ| ಸಂಚರಿಸಲು ಬಸ್‌ಗಳಿಲ್ಲ| ಅಪ್ಪನನ್ನು 1200 ಕಿ. ಮೀಟರ್ ದೂರ, 7 ದಿನ ಸೈಕಲ್ ತುಳಿದು ಮನೆಗೆ ಕರೆತಂದ 13ರ ಮಗಳು!

13 year old girl cycles 1200 KMs with injured father from Delhi to Bihar
Author
Bangalore, First Published May 19, 2020, 5:25 PM IST

ಪಾಟ್ನಾ(ಮೇ.19) ಕೊರೋನಾದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ಅನೇಕ ಮಂದಿ ಕಾರ್ಮಿಕರು ತಾವಿದ್ದಲ್ಲೇ ಸಿಲುಕಿಕೊಂಡಿದ್ದಾರೆ. ಸರ್ಕಾರ ಇವರೆಲ್ಲರ ಪ್ರಯಾಣಕ್ಕಾಗಿ ಶ್ರಮಿಕ್ ಸ್ಪೆಷಲ್ ರೈಲು ವ್ಯವಸ್ಥೆ ಮಾಡಿದೆ. ಹೀಗಿದ್ದರೂ ಅನೇಕ ಮಂದಿ ಕಾರ್ಮಿಕರು ಕಾಲ್ನಡಿಗೆ, ಸೈಕಲ್ ತುಳಿಯುತ್ತಲೇ ತಮ್ಮೂರಿಗೆ ಪ್ರಯಾಣ ಆರಂಭಿಸಿದ್ದಾರೆ. ಈಗಿರುವಾಗ ಬಿಹಾರದಲ್ಲಿ ಬೆಳಕಿಗೆ ಬಂದ ಘಟನೆಯೊಂದು ಎಲ್ಲರನ್ನೂ ಭಾವುಕರನ್ನಾಗಿಸಿದೆ, ಅನಾರೋಗ್ಯ ಪಿಡಿತ ತಂದೆಯ ಜವಾಬ್ದಾರಿ ಹೊತ್ತ ಮಗಳು ಸಾವಿರ ಮೈಲಿ ದೂರ ಸೈಕಲ್ ತುಳಿದುಕೊಂಡೇ ತಂದೆಯೊಂದಿಗೆ ತನ್ನ ಮನೆ ಸೇರಿದ್ದಾಳೆ.

ಕಾಲ್ನಡಿಗೆಯಲ್ಲಿ ಮನೆ ಕಡೆ ಹೊರಡ ಕಾರ್ಮಿಕರಿಗೆ ಚಪ್ಪಲಿ, ಆಹಾರ ವಿತರಿಸಿದ ಪೊಲೀಸ್!

ಹೌದು ಬಿಹಾರದ ದರ್‌ಭಂಗಾದಲ್ಲಿ ಹದಿಮೂರು ವರ್ಷದ ಬಾಲಕಿ ಜ್ಯೋತಿ ಕುಮಾರಿ, ಅನಾರೋಗ್ಯ ಪೀಡಿತ ತನ್ನ ತಂದೆಯನ್ನು ಸೈಕಲ್‌ನಲ್ಲಿ ಕುಳ್ಳಿರಿಸಿ, ಒಂದು ಸಾವಿರಕ್ಕೂ ಅಧಿಕ ಕಿಲೋ ಮೀಟರ್ ದೂರವನ್ನು ಕ್ರಮಿಸಿದ್ದಾಳೆ. ಈ ಬಾಲಕಿ ತನ್ನ ತಂದೆ ಮೋಹನ್ ಪಾಸ್ವಾನ್‌ರನ್ನು ಸೈಕಲ್‌ನಲ್ಲಿ ಕುಳ್ಳಿರಿಸಿ, ಹರ್ಯಾಣದ ಗುರುಗ್ರಾಮದಿಂದ ಪ್ರಯಾಣ ಆರಂಭಿಸಿದ್ದಾಳೆ. ಹೀಗಿರುವಾಗ ಹಾದಿಯಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಗಟ್ಟಿಗಿತ್ತಿಎಲ್ಲವನ್ನೂ ಎದುರಿಸಿದ್ದಾಳೆ. ಅನೇಕ ಬಾರಿ ಹಸಿವಾದಾಗ ಈಕೆಗೆ ಊಟವೂ ಸಿಕ್ಕಿಲ್ಲ. ಇನ್ನು ಕೆಲವೆಡೆ ಹೃದಯ ಶ್ರೀಮಂತಿಕೆಯುಳ್ಳವರು ಊಟ, ನೀರು ಕೊಟ್ಟು ಸಹಕರಿಸಿದ್ದಾರೆ. ಈ ಮೂಲಕ ಕೊನೆಗೂ ಈ ರಾಜಕುಮಾರಿ ತನ್ನ ಅಪ್ಪನನ್ನು ಸುರಕ್ಷಿತವಾಗಿ ಮನೆಗೆ ಕರೆತಂದಿದ್ದಾಳೆ. 

ಗುರುಗ್ರಾಮದಲ್ಲಿ ಇ-ರಿಕ್ಷಾ ಚಲಾಯಿಸುತ್ತಿದ್ದರು ಜ್ಯೋತಿ ತಂದೆ

ಇನ್ನು ದರ್‌ಭಂಗಾ ತಲುಪಿದ ಜ್ಯೋತಿ ತನ್ನ ತಂದೆ ಗುರುಗ್ರಾಮದಲ್ಲಿ ಆಡಿಗೆ ಇ-ರಿಕ್ಷಾ ಚಲಾಯಿಸುತ್ತಿದ್ದರು ಎಂದಿದ್ದಾಳೆ. ಆದರೆ ಕೆಲ ತಿಂಗಳ ಹಿಂದೆ ಅವರಿಗೆ ಅಪಘಾತವಾಗಿದ್ದು, ಆರೋಗ್ಯ ಹದಗೆಡಲಾರಂಭಿಸಿದೆ. ಹೀಗಿರುವಾಗಲೇ ಕೊರೋನಾದಿಂದಾಗಿ ಲಾಕ್‌ಡೌನ್ ಹೇರಲಾಗಿದೆ. ಇ-ರಿಕ್ಷಾ ಕೂಡಾ ಚಲಾಯಿಸದಿರುವುದರಿಂದ ಆರ್ಥಿಕವಾಗಿಯೂ ಸಮಸ್ಯೆ ಎದುರಾಗಿದೆ. ಅತ್ತ ಬಾಡಿಗೆ ರಿಕ್ಷಾದ ಮಾಲಿಕ ಹಣ ನೀಡುವಂತೆ ಪೀಡಿಸಲಾರಂಭಿಸಿದ್ದ. ಇತ್ತ ಮನೆ ಮಾಲೀಕ ಕೂಡಾ ಬಾಡಿಗೆಗೆ ಒತ್ತಾಯಿಸುತ್ತಿದ್ದ. ಹೀಗಾಗಿ ಮನೆಗೆ ಮರಳಿದ್ದೇವೆ ಎಂದಿದ್ದಾಳೆ.

ಸಾವಿನ ನೋವಿನ ಯಾಕೂಬ್- ಅಮೃತ್ ಸ್ನೇಹ ವೈರಲ್‌!

ಆರು ಸಾವಿರ ಕೇಳಿದ್ದ ಟ್ರಕ್ ಚಾಲಕ

ಇಂತಹ ಸ್ಥಿತಿಯಲ್ಲಿ ಸೈಕಲ್ ಬಿಟ್ಟು ಬೇರಾವ ಹಾದಿಯೂ ಇರಲಿಲ್ಲ. ಇನ್ನು ಬಿಹಾರಕ್ಕೆ ಕರೆದುಕೊಂಡು ಹೋಗಲು ತಂದೆ ಟ್ರಕ್‌ ಚಾಲಕನ ಬಳಿ ಮಾತುಕತೆ ನಡೆಸಿದ್ದರು. ಆದರೆ ಇಬ್ಬರನ್ನು ತಲುಪಿಸಲು ಆರು ಸಾವಿರ ರೂಪಾಯಿ ಕೊಡಬೇಕೆಂದು ಆತ ಬೇಡಿಕೆ ಇಟ್ಟಿದ್ದ. ತಂದೆಯ ಬಳಿ ಇಷ್ಟು ಹಣ ಇರಲಿಲ್ಲ. ಹೀಗಾಗಿ ಜ್ಯೋತಿ ತಂದೆಯೊಂದಿಗೆ ಸೈಕಲ್‌ನಲ್ಲೇ ಊರಿಗೆ ತೆರಳಲು ನಿರ್ಧರಿಸಿದ್ದಾಳೆ. ಅಪ್ಪ ಕೂಡಾ ಮಗಳ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಈ ಹಾದಿ ಬಹಳ ಕಠಿಣವಾಗಿತ್ತಾದರೂ, ಇವರ ಬಳಿ ಬೆರೆ ಆಯ್ಕೆ ಇರಲಿಲ್ಲ.

ಮೇ 10 ರಂದು ಗುರುಗ್ರಾಮದಿಂದ ಪ್ರಯಾಣ ಆರಂಭ

ಮೇ 10 ರಂದು ಜ್ಯೋತಿ ಗುರುಗ್ರಾಮದಿಂದ ತನ್ನ ತಂದೆಯೊಂದಿಗೆ ಪ್ರಯಾಣ ಆರಂಭಿಸಿದ್ದು, ಮೇ16 ಸಂಜೆ ಬಿಹಾರದ ತನ್ನ ಮನೆ ತಲುಪಿದ್ದಾಳೆ. ಇನ್ನು ಮನೆ ತಲುಪಿದ ಬಳಿಕ ಜ್ಯೋತಿಯ ಸಾಧನೆ ಕೇಳಿ ಹಳ್ಳುಇಯ ಜನ ಆಕೆಯನ್ನು ಶ್ಲಾಘಿಸಿದ್ದಾರೆ.
 

Follow Us:
Download App:
  • android
  • ios