Asianet Suvarna News Asianet Suvarna News

ಆಹಾರ ಪದಾರ್ಥಗಳ ಧೀರ್ಘಾಯಸ್ಸಿಗೆ ಸಾಂಪ್ರದಾಯಿಕ ವಿಧಾನಗಳು

ಉಪ್ಪಿನಕಾಯಿ ಹಾಕಿಡುವುದು, ಒಣಗಿಸುವುದು, ಹುದುಗು ಬರಿಸುವುದು, ಹೊಗೆ ಹಾಕುವುದು- ಹೀಗೆ ಆಹಾರ ಪದಾರ್ಥಗಳನ್ನು ಕೆಡದಂತೆ ನೋಡಿಕೊಳ್ಳಲು ನಮ್ಮ ಹಿರಿಯರು ಹಲವಾರು ಮಾರ್ಗಗಳನ್ನು ಅನುಸರಿಸುತ್ತಿದ್ದರು. ಈ ಲಾಕ್‌ಡೌನ್ ಸಂದರ್ಭದಲ್ಲಿ ಈ ಮಾರ್ಗಗಳು ನಗರ ನಿವಾಸಿಗಳ ಸಹಾಯಕ್ಕೆ ಬರಬಹುದು. 

Traditional food preservation techniques
Author
Bangalore, First Published Apr 4, 2020, 4:29 PM IST

17ನೇ ಶತಮಾನದಲ್ಲಿ ಮೊಘಲ್ ಸೇನೆ ವಿರುದ್ಧ ಹೋರಾಡಿದ ಸಾವಿರಾರು ಆಹೋಂ ಸೈನಿಕರ ಹೊಟ್ಟೆ ತುಂಬಿಸುವುದರಿಂದ ಹಿಡಿದು, ಅಸ್ಸಾಂ ರೈತರ ಮುಖ್ಯಬೆಳೆಯಾಗಿ ರೂಪುಗೊಳ್ಳುವುದರ ತನಕ ಬೇಯಿಸುವುದನ್ನೇ ಬೇಡದ ಅಕ್ಕಿ - ಬೋಕಾ ಸಾಲ್ ಬಗ್ಗೆ ಹಲವರಿಗೆ ತೀರಾ ಇತ್ತೀಚಿನವರೆಗೂ ತಿಳಿದಿರಲಿಲ್ಲ. ಯಾವಾಗ 2018ರಲ್ಲಿ ಈ ಅಕ್ಕಿಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಸಿಕ್ಕಿತೋ ಆಗ ಈ ಬಗ್ಗೆ ಹಲವು ಚರ್ಚೆಗಳಾದವು. ಹಾಗಿದ್ದರೂ, ಅಸ್ಸಾಂನ ಈ ಮ್ಯಾಜಿಕ್ ರೈಸ್ ಬಗ್ಗೆ ಹಲವರಿಗೆ ತಿಳಿದಿಲ್ಲ. ನೀರಿನಲ್ಲಿ 10 ನಿಮಿಷ ನೆನೆಸಿದರೆ ಸಾಕು ಊದಿಕೊಳ್ಳುವ ಈ ಅಕ್ಕಿಯ ವೈಶಿಷ್ಠ್ಯತೆ ಆಶ್ಚರ್ಯವೇ ಸರಿ. ಸ್ವಿಗ್ಗಿ, ಝೋಮ್ಯಾಟೋಗಳ ತಲೆಮಾರಿನಲ್ಲಿ ಬಯಸಿದ್ದೆಲ್ಲ ಅಲ್ಪಕಾಲದಲ್ಲಿ ಮನೆಗೆ ಬಂದು ಇಳಿವಾಗ ಇದನ್ನು ತಿಳಿದುಕೊಳ್ಳುವ ಕುತೂಹಲವೂ ಇರಲಿಕ್ಕಿಲ್ಲ. ಆದರೆ, ಈ ಲಾಕ್‌ಡೌನ್ ಸಮಯ ಇಂಥ ಸಾಂಪ್ರದಾಯಿಕ ಆಹಾರ ಹಾಗೂ ಅವುಗಳ ಧೀರ್ಘಕಾಲಿಕ ಸಂರಕ್ಷಣೆ ಕುರಿತು ನಗರ ನಾಗರಿಕರು ಮರುಯೋಚಿಸುವಂತೆ ಮಾಡಿದೆ. 

ಭಾರತೀಯರು ಪ್ಲೇಗ್, ಮಲೇರಿಯಾ ಮುಂತಾದ ಹಲವಾರು ಪ್ಯಾಂಡೆಮಿಕ್ ಕಾಯಿಲೆಗಳನ್ನು ನೋಡಿದ್ದಾರೆ. ಬಡತನದ ಹಾದಿಯನ್ನು ಸುಧೀರ್ಘವಾಗಿ ಸವೆಸಿದ್ದಾರೆ. ಹಾಗಾಗಿ, ಭಾರತೀಯರಿಗೆ ಬಹಳ ಹಿಂದಿನಿಂದಲೇ ಮನೆಯಲ್ಲಿರುವದರಲ್ಲೇ ಬಹಳಷ್ಟು ಕಾಲ ಮ್ಯಾನೇಜ್ ಮಾಡುವ ಕಲೆ ಒಲಿದುಬಂದಿದೆ. ಕಷ್ಟಕಾಲದಲ್ಲಿ ಮನೆಯಲ್ಲಿರುವ ದಿನಸಿಯನ್ನೇ ಹೆಚ್ಚು ಕಾಲ ಬಾಳಿಕೆ ಬರುವಂತೆ ಉಳಿಸಿಕೊಂಡು ಅದರಿಂದ ಹಲವಾರು ಆಹಾರಗಳನ್ನು ತಯಾರಿಸುವುದು ಎರಡು ತಲೆಮಾರಿನ ಹಿಂದಿನ ಬಹುತೇಕ ಎಲ್ಲರಿಗೂ ಚೆನ್ನಾಗಿಯೇ ಗೊತ್ತು. ಈ ಲಾಕ್‌ಡೌನ್ ದಿನಗಳಲ್ಲಿ ಈ ಬಗ್ಗೆ ತಿಳಿದುಕೊಳ್ಳುವುದು ಒಂದು ಅತ್ಯುತ್ತಮ ಪಾಠವಾಗಬಲ್ಲದು. 

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ ಅಂದಿದೆ ಆಯುಷ್‌ ಇಲಾಖೆ

ಹಿಂದಿನಿಂದಲೂ ಆಹಾರ ಶೇಖರಣೆ ಹಾಗೂ ಅದು ಕೆಡದಂತೆ ಕಾಪಾಡುವುದು ನಮ್ಮ ಜೀವನಶೈಲಿಯ ಭಾಗವೇ ಆಗಿದೆ. ಬೇಸಿಗೆಯಲ್ಲಿ ಮನೆಗೆ ತಂದ ದಿನಸಿಯನ್ನು ಚಳಿಗಾಲದವರೆಗೂ ಕೆಡದಂತೆ ಉಳಿಸಿಕೊಳ್ಳುವುದು ಹಿಂದಿನವರಿಗೆ ಗೊತ್ತಿದೆ. ಇದಕ್ಕಾಗಿ ಅವರು ಯಾವೆಲ್ಲಾ ಮಾರ್ಗಗಳನ್ನು ಅನುಸರಿಸುತ್ತಿದ್ದರು ನೋಡೋಣ. 

ಸೂರ್ಯನ ಬಿಸಿಲು
ಬಿಸಿಲಲ್ಲಿ ಒಣಗಿಸುವುದು ಅಂಥ ತಂತ್ರಗಳಲ್ಲಿ ಒಂದು. ಬಿಸಿಲು ಎಂದರೆ ಗೊಣಗುವವರು, ಅದು ಎಷ್ಟು ಒಳ್ಳೆಯ ಪ್ರಿಸರ್ವೇಟಿವ್ ಎಂಬುದನ್ನು ಅರಿಯಬೇಕು. ಹಿಂದಿನವರು ಮಳೆಗಾಲ ಹಾಗೂ ಚಳಿಗಾಲದ ತಿಂಡಿಯಾಗಿ ಬಳಸಲು ಬೇಸಿಗೆಯಲ್ಲಿಯೇ ಅಕ್ಕಿ, ರಾಗಿ ಇತ್ಯಾದಿಗಳನ್ನು ನೆನೆಸಿ ತಿರಿಸಿ ಬಿಸಿಲಲ್ಲಿ ಒಣಗಿಸಿ ಹಪ್ಪಳ ಸಂಡಿಗೆಗಳನ್ನು ಮಾಡಿಟ್ಟುಕೊಳ್ಳುತ್ತಿದ್ದರು. ಇವನ್ನು ವರ್ಷಗಟ್ಟಲೆ ಇಡಲು ಸಾಧ್ಯ. ರೆಫ್ಯೂಜಿ ಕ್ಯಾಂಪ್‌ಗಳಲ್ಲಿ ಕೂಡಾ ಇವುಗಳನ್ನು ಹೇರಳವಾಗಿ ಬಳಸಲಾಗುತ್ತಿತ್ತು. 


"ಈಗ ವರ್ಷದ ಯಾವುದೇ ಸಮಯದಲ್ಲಿ ಬಯಸಿದ್ದು ಸಿಗುತ್ತದೆ ನಿಜ, ಆದರೆ, ಹಿಂದೆ ಮನೆಯಲ್ಲಿ ಏನಿದೆಯೋ ಅದನ್ನು ಬಳಸಿ ವರ್ಷಪೂರ್ತಿ ಉಳಿಸಿಕೊಳ್ಳಲು ಯೋಜಿಸಬೇಕಾಗುತ್ತಿತ್ತು," ಎನ್ನುತ್ತಾರೆ ದಕ್ಷಿಣ್ ಡೈರೀಸ್ ಕಾರ್ಯಕ್ರಮದ ನಿರೂಪಕ ರಾಕೇಶ್ ರಘುನಾಥನ್. 

ತಮಿಳುನಾಡಿನ ಚೆಟ್ಟಿಯಾರ್‌ ಸಮುದಾಯದವರು ಮಾಂಸದಿಂದ ಹಿಡಿದು ಬೀನ್ಸ್‌ವರೆಗೆ ಎಲ್ಲವನ್ನೂ ಉಪ್ಪು ಹಾಕಿ ಬಿಸಿಲಲ್ಲಿ ಒಣಗಿಸಿ ವರ್ಷಗಳ ಕಾಲ ಕೆಡದಂತೆ ಸಂರಕ್ಷಿಸಿ ಬಳಸುತ್ತಿದ್ದರು. ತರಕಾರಿಗಳನ್ನು ಕೂಡಾ ಸೂರ್ಯನ ಬಿಸಿಲಲ್ಲಿ ಒಣಗಿಸಿ ಬಳಸುವುದು ಇಂದಿಗೂ ಅವರ ಸಂಸ್ಕೃತಿಯ ಭಾಗವೇ ಆಗಿದೆ. ಬೇಳೆಕಾಳುಗಳು, ಒಣಮೆಣಸು ಇತ್ಯಾದಿಯನ್ನು ಕೂಡಾ ಬಿಸಿಲಲ್ಲಿ ಒಣಗಿಸಿ ತೆಗೆದಿಟ್ಟುಕೊಂಡರೆ ಹಲವು ತಿಂಗಳ ಕಾಲ ಅವು ಹುಳುವಾಗದೆ ತಾಜಾವಾಗಿರುತ್ತವೆ. 

ತರಕಾರಿ ಸಂರಕ್ಷಣೆ
ಈಶಾನ್ಯ ರಾಜ್ಯಗಳ ಬಹುತೇಕ ಮನೆಗಳ ಮಹಡಿಯು ಮೂಲಂಗಿ, ಬೂದುಗುಂಬಳ ಇತ್ಯಾದಿ ತರಕಾರಿಗಳನ್ನು ಒಣಗಿಸಲು ಸದಾ ಮೈಯೊಡ್ಡಿರುತ್ತವೆ. ಅಸ್ಸಾಂನಲ್ಲಿ ಕೆಲ ಸೀಸನ್‌ನಲ್ಲಿ ಮಾತ್ರ ಬೆಳೆವಂಥ ಹೂವುಗಳು ಹಾಗೂ  ಎಲೆಗಳನ್ನು ಕೂಡಾ ಕಾಟನ್ ಬಟ್ಟೆಯ ಮೇಲೆ ಹರಡಿ ಒಣಗಿಸಿ ತಿಂಗಳ ಕಾಲ ಬಳಸಲು ಯೋಗ್ಯವಾಗಿ ಇಟ್ಟುಕೊಳ್ಳುತ್ತಾರೆ. ಬೇಕಾದಾಗ ಇವುಗಳನ್ನು ಫ್ರೈ ಮಾಡಿ ಅನ್ನ ಅಥವಾ ಮೊಟ್ಟೆಯೊಂದಿಗೆ ಬಳಸಿ ಸೇವಿಸುತ್ತಾರೆ. ಇದು ಕೊಡುವ ಫ್ಲೇವರ್‌ನ ಮಜಾವೇ ಬೇರೆ ಎನ್ನುವುದು ಸ್ಥಳೀಯರ ಮಾತು. 

ಉಪ್ಪಿನಕಾಯಿ
ಪೋರ್ಚುಗೀಸರು ಭಾರತಕ್ಕೆ ಬಂದಾಗ ಅವರೊಂದಿಗೆ ಬಂದದ್ದು ವಿನೆಗರ್. ಗುಜರಾತಿಗಳಿಗಂತೂ ಇದೊಂದು ವರವೇ ಆಗಿ ಪರಿಣಮಿಸಿತು. ಒಂದು ರಾತ್ರಿಯೂ ಉಳಿಯದಂಥ ಪದಾರ್ಥಗಳನ್ನು ಅವರು ವಿನೆಗರ್ ಬಳಸಿ ಉಪ್ಪಿನಕಾಯಿಯ ರೀತಿಯಾಗಿ ವರ್ಷಗಟ್ಟಲೆ ಸ್ಟೋರ್ ಮಾಡಬಲ್ಲರು. ಪಾರ್ಸಿಗಳು ಹಿಲ್ಸಾ, ಪಾಲ ಮೀನುಗಳಿಂದ, ಮೀನಿನ ಮೊಟ್ಟೆಗಳಿಂದ ಪಿಕಲ್ ತಯಾರಿಸಿ ಇಟ್ಟುಕೊಳ್ಳುತ್ತಾರೆ. ಇನ್ನು ಮಾವಿನಕಾಯಿ ಹಾಗೂ ಲಿಂಬೆಯನ್ನು ಉಪ್ಪಿನಲ್ಲಿ ಹಾಕಿಡುವುದು ಬಹುತೇಕ ಭಾರತೀಯರು ಅನುಸರಿಸುವ ವಿಧಾನ. ಇದು ಹಳೆಯದಾದಷ್ಟೂ ರುಚಿ ಹೆಚ್ಚು. ಅಷ್ಟೇ ಅಲ್ಲ, ಹೊಟ್ಟೆ ಕೆಟ್ಟಾಗ ಔಷಧಿಯಂತೆಯೂ ಕೆಲಸ ಮಾಡುತ್ತದೆ. 

ಆಹಾರದೊಂದಿಗೆ ಅಲೆದಾಟ
ಪಾರ್ಸಿಗಳು ತಿಂಗಳುಗಟ್ಟಲೆ, ವರ್ಷಗಟ್ಟಲೆ ಅಲೆದಾಟಕ್ಕೆ ಹೊರಟರೆಂದರೆ ಭಾಟಿಯಾ ನಿ ಮುರ್ಗಿ ಎಂಬ ಆಹಾರ ಪದಾರ್ಥ ಫ್ರೈಡ್ ಆನಿಯನ್ ಹಾಗೂ ಫ್ರೈಡ್ ಆಲೂಗಡ್ಡೆಗಳೊಂದಿಗೆ ಅವರ ಅಲೆದಾಟಕ್ಕೆ ಜೊತೆಯಾಗುತ್ತದೆ.  ಇದರೊಂದಿಗೆ ತುಪ್ಪದಲ್ಲಿ ರೋಸ್ಟ್ ಮಾಡಿದ ರೋಟಿಗಳೂ ಪಯಣದ ಸಂದರ್ಭದಲ್ಲಿ ಹೊಟ್ಟೆ ತುಂಬಿಸಲು ಸಜ್ಜಾಗುತ್ತವೆ. ಇಲ್ಲಿ ಯಾವ ಪದಾರ್ಥಕ್ಕೂ ನೀರಿನ ಹನಿ ತಾಗಿಸದ ಕಾರಣ ಅವು ಕೆಡದಂತೆ ಬಾಳಿಕೆ ಬರುತ್ತವೆ.  

Expiry ಆದ ಔಷಧಿ ತಗೊಂಡ್ರೆ ಏನಾಗುತ್ತೆ?

ಸ್ಮೋಕಿಂಗ್
ಈಶಾನ್ಯ ರಾಜ್ಯಗಳಲ್ಲಿ ಪ್ರವಾಸಕ್ಕಾಗಿ ಮಾಂಸ ಸಂರಕ್ಷಿಸಲು ಸ್ಮೋಕಿಂಗ್ ಹಾಗೂ ಕ್ಯೂರಿಂಗ್ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಇಲ್ಲಿ ಇದೇ ಮಾರ್ಗದಲ್ಲಿ ಯಾಮ್ ಎಲೆಗಳ ಪೇಸ್ಟ್ ಹುದುಗು ಬರಿಸಲಾಗುತ್ತದೆ. ನಂತರ ಬೇಯಿಸಿ ಸಣ್ಣ ಕೇಕ್‌ಗಳಾಗಿ ಕತ್ತರಿಸಲಾಗುತ್ತದೆ. ಇದನ್ನು ಸೂರ್ಯನ ಬಿಸಿಲಲ್ಲಿ ಒಣಗಿಸಿಟ್ಟುಕೊಂಡರೆ ವರ್ಷದ ಕಾಲ ಬಳಸಲು ಯೋಗ್ಯವಾಗಿರುತ್ತದೆ. 

"

Follow Us:
Download App:
  • android
  • ios