Asianet Suvarna News Asianet Suvarna News

ಮನಸ್ಸೆಂಬ ಮನೆಯಲ್ಲಿ ದುಃಸ್ವಪ್ನದ ಉತ್ಖನನ ‘ತ್ರಯಂಬಕಂ’!

‘ಆಕರಾಳ ರಾತ್ರಿ’ ನಂತರದ 9 ತಿಂಗಳಲ್ಲಿ ನನಗಾದ ಮೂರನೇ ಹೆರಿಗೆ ಇದು!
- ‘ತ್ರಯಂಬಕಂ’ ಚಿತ್ರದ ಬಿಡುಗಡೆಯ ಮುನ್ನ ನಿರ್ದೇಶಕ ದಯಾಳ್ ಕೊಟ್ಟ ಹೇಳಿಕೆಯೊಂದು ಹೇಗಿತ್ತು. ಒಂಬತ್ತು ತಿಂಗಳು, ಜತೆಗೆ ಮೂರನೇ ಹೆರಿಗೆ ಅಂದ್ರೆ ಅದು ಆರೋಗ್ಯಕರವೋ, ಅನಾರೋಗ್ಯವೋ?ಉತ್ತರ ನಿಮಗೂ ಗೊತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ, ‘ತ್ರಯಂಬಕಂ’ ಅದಕ್ಕಿಂತ ಭಿನ್ನವಾಗೇನು ಇಲ್ಲ. 

 

Kannada movie Trayambakam  film review
Author
Bangalore, First Published Apr 20, 2019, 9:34 AM IST

ದೇಶಾದ್ರಿ ಹೊಸ್ಮನೆ

ವಿಟಮಿನ್‌ಗಳ ಕೊರತೆಯಲ್ಲಿ ಒಂದಷ್ಟು ಊನವಾದ ಕೂಸು ಇದು. ಹೊಸತೆನಿಸುವ ‘ನವ ಪಾಷಾಣ’ದ ಕತೆ, ಪ್ರೇಕ್ಷಕರನ್ನು ತುಸು ರಂಜಿಸುವ, ಚಿಂತನೆಗೆ ಹಚ್ಚುವ ಒಂದಷ್ಟು ಅಂಶಗಳ ಚಿತ್ರವೂ ಹೌದು. ಆ ಕಾರಣಕ್ಕಾದರೂ ನೋಡಬಹುದಾದ ಸಿನಿಮಾ. ಇನ್ನು ಮರ್ಡರ್ ಮಿಸ್ಟ್ರಿಯ ಸಸ್ಪೆನ್ಸ್-ಥ್ರಿಲ್ಲರ್ ಜಾನರ್ ಅಂದ್ರೆ, ಸದ್ಯಕ್ಕೆ ದಯಾಳ್‌ಗೆ ಫೆವರಿಟ್ ಸಬ್ಜೆಕ್ಟ್. 

ಪ್ರಾಚ್ಯವಸ್ತು ಸಂಗ್ರಹಾಲಯದ ಉದ್ಯೋಗಿ ಗಮನಾ ಆ್ಯಕ್ಸಿಡೆಂಟ್ ಪ್ರಕರಣದೊಂದಿಗೆ ಚಿತ್ರದ ಕತೆ ತೆರೆದುಕೊಳ್ಳುತ್ತದೆ. ಮುಂದೆ ಭ್ರಮೆ ಮತ್ತು ವಾಸ್ತವದ ಮನೋ ಸಂಘರ್ಷ ಶುರುವಾಗುತ್ತದೆ. ಅದು ಪ್ರೇಕ್ಷಕರಲ್ಲಿ ಒಂದಷ್ಟು ರೋಚಕತೆ ಮೂಡಿಸುತ್ತದೆ. ಪತ್ರಕರ್ತೆ ಯಾದ ಮಗಳು ನಮನ(ಅನುಪಮಾ)ಳನ್ನು ಗಾಢವಾಗಿ ಪ್ರೀತಿಸುವ ಶಿವರುದ್ರಯ್ಯ (ರಾಘಣ್ಣ), ಆಕೆಯ ಸಾವಿನ ಕನಸುಗಳ ಮೂಲಕ ಕಂಗಾಲಾಗುತ್ತಾರೆ. ಮಗಳು ಮನೆಯಿಂದ ಆಚೆ ಹೊರಟರೆ, ಅಪಘಾತ, ಆಸ್ಪತ್ರೆ, ಸಾವಿನ ದುಃಸ್ವಪ್ನಗಳಲ್ಲಿ ಮುಳುಗಿ ಹೋಗುತ್ತಾರೆ. ಅದಕ್ಕೆ ಕಾರಣವೂ ನೀಡುತ್ತಾರೆ ನಿರ್ದೇಶಕರು. ಮೈಂಡ್ ಸ್ಟ್ರೋಕ್ ಆದವರಿಗೆ ಆ ರೀತಿಯ ಕನಸು ಬರುತ್ತವೆ ಎನ್ನುವುದು ಮನೋರೋಗ ತಜ್ಞರು ನೀಡಿದ
ಸಲಹೆ. ಅಲ್ಲಿಂದ ಭ್ರಮೆ ಮತ್ತು ವಾಸ್ತವದ ಕತೆಗೆ ಇನ್ನೊಂದು ಟ್ವಿಸ್ಟ್ ಸಿಗುತ್ತದೆ. ಶಿವರುದ್ರಯ್ಯ ಕಾಣುವ ಕನಸು ನಿಜವೂ ಹೌದು, ಭ್ರಮೆಯೂ ಹೌದು. ಅದು ಹೇಗೆ, ಯಾಕೆ ಎನ್ನುವುದು ಚಿತ್ರದ ಸಸ್ಪೆನ್.

ಅಕ್ಕಾ ಖ್ಯಾತಿಯ ’ಅನುಪಮಾ’ ಸುಂದರಿ; ಏನ್ ಚಂದಾರಿ!

ಪ್ರಾಚ್ಯವಸ್ತು ಇಲಾಖೆ ಅಂದ್ರೆ ಬರೀ ಅಗೆದು, ತೆಗೆಯುವುದಷ್ಟೇ ಎನ್ನುವುದು ಲೋಕರೂಢಿ ಮಾತು. ಆದರೆ, ಗಮನಾ ಆ ಇಲಾಖೆಯ ಸಂವೇದನಾಶೀಲ ಉದ್ಯೋಗಿ. ಆಕೆ ಸಂಶೋಧಿಸಲು ಹೊರಟ ನವ ಪಾಷಾಣದ ಶಿವಲಿಂಗದ ಕತೆಯೇ ಈ ಚಿತ್ರದ ಪ್ರಧಾನ ಅಂಶ. ‘ಸರ್ವರೋಗಂ ನಿವಾರಣಂ, ನವ ಪಾಷಾಣ ಲಿಂಗಂ’ ಎನ್ನುವುದು ಇದರ ತಿರುಳು.

ಕಲಾವಿದರ ಅಭಿನಯದಲ್ಲಿ ಅನುಪಮಾ ಹೈಲೈಟ್. ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಅವರ ನಟನೆ ಇತರರ ದೋಷಗಳನ್ನು ಸರಿದೂಗಿಸಿಕೊಂಡು ಸಾಗುತ್ತದೆ. ರಾಘವೇಂದ್ರ ರಾಜ್‌ಕುಮಾರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಡಿಟೆಕ್ಟಿವ್ ಓಂ ಆಗಿ ರೋಹಿತ್ ಅಭಿನಯದಲ್ಲಿ ಲವಲವಿಕೆಯಿದೆ. ಅನುಪಮಾ ಬಿಟ್ಟರೆ ಶಿವಮಣಿ ಹಾಗೂ ಸುಂದರ್ ಇಲ್ಲಿನ ಮತ್ತೊಂದು ಆಕರ್ಷಣೆ. ನೆಗೆಟಿವ್ ಶೇಡ್‌ನ ಪಾತ್ರಗಳು ತಣ್ಣನೆಯ ಕ್ರೌರ್ಯವನ್ನು ಮನಸ್ಸಿಗೆ ನಾಟುವಂತೆ ತೋರಿಸುತ್ತವೆ. ಉಳಿದಂತೆ, ವಿಜಯನಗರ ಕಾಲದ ನರಸಿಂಹ ವರ್ಮ ಬರೆದಿಟ್ಟ ಶಾಸನದ ಮೂಲಕ ನವಪಾಷಾಣ ಶಿವಲಿಂಗ ಪತ್ತೆಗಾಗಿ ನಿರ್ದೇಶಕರು ನಡೆಸಿದ ಶೋಧನೆ, ಬೆಟ್ಟದ ಅಗೆದು ಇಲಿ ಹುಡುಕುವ ಪ್ರಸಂಗದಂತಾಗಿರುವುದು ವಾಸ್ತವ.

 

Follow Us:
Download App:
  • android
  • ios