Asianet Suvarna News Asianet Suvarna News

ತ್ರಿಭಾಷಾ ಶಿಕ್ಷಣ ಸೂತ್ರ ಮತ್ತು ಕರುನಾಡಿನ ಕನ್ನಡ ಮಂತ್ರ!

ಕೇಂದ್ರದ ಹೊಸ ಶಿಕ್ಷಣ ನೀತಿಗೆ ದಕ್ಷಿಣ ಭೂಭಾಗದಲ್ಲಿ ವಿರೋಧದ ಕೂಗು| ಒತ್ತಾಯದ ಹಿಂದಿ ಹೇರಿಕೆಯನ್ನು ವಿರೋಧಿಸಿದ ದಕ್ಷಿಣ ಭಾರತ| ತ್ರಿಭಾಷಾ ಶಿಕ್ಷಣ ಸೂತ್ರಕ್ಕೆ ತಮಿಳುನಾಡಿನಲ್ಲಿ ಭಾರೀ ವಿರೋಧ| ಉತ್ತರ ಮತ್ತು ದಕ್ಷಿಣ ಭಾಷಾ ಯುದ್ಧಕ್ಕಿದೆ ಶತಮಾನಗಳ ಇತಿಹಾಸ| ಒತ್ತಾಯದ ಹಿಂದಿ ಹೇರಿಕೆಗೆ ಕರ್ನಾಟಕದ ಪ್ರತಿಕ್ರಿಯೆ ಏನು?| ಸಂಘರ್ಷ ತಣಿಸುವ ಮಧ್ಯಮ ಮಾರ್ಗ ಆಯ್ದುಕೊಂಡ ಕರ್ನಾಟಕ| ಉತ್ತರ-ದಕ್ಷಿಣವನ್ನು ಬೆಸೆಯಬಲ್ಲದಾ ತ್ರಿಭಾಷಾ ಶಿಕ್ಷಣ ಸೂತ್ರ?|

Central Govt Draft Education Policy and Its Impact in Karnataka
Author
Bengaluru, First Published Jun 2, 2019, 3:21 PM IST

ಬೆಂಗಳೂರು(ಜೂ.02): ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಲು ಮುಂದಾಗಿದೆ.

ತ್ರಿಭಾಷಾ ಸೂತ್ರದನ್ವಯ ಎಲ್ಲಾ ರಾಜ್ಯಗಳಲ್ಲಿ ಮಾತೃಭಾಷೆ, ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಅಳವಡಿಸಲಾಗುತ್ತದೆ. ಇದಕ್ಕೆ ದೇಶದ ಬಹುತೇಕ ಭಾಗಗಳಿಂದ ವಿರೋಧ ಕೇಳಿ ಬಂದಿದೆ.

ದಕ್ಷಿಣದ ರಾಜ್ಯಗಳು ಅದರಲ್ಲೂ ಪ್ರಮುಖವಾಗಿ ತಮಿಳುನಾಡಿನಲ್ಲಿ ಕೇಂದ್ರದ ತ್ರಿಭಾಷಾ ಸೂತ್ರದ ಶಿಕ್ಷಣ ನೀತಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಆಡಳಿತ ಪಕ್ಷ, ವಿರೋಧ ಪಕ್ಷ, ಸಾಮಾಜಿಕ ಸಂಘಟನೆಗಳು ಹೀಗೆ ಇಡೀ ತಮಿಳು ಸಮಾಜ ಒತ್ತಾಯದ ಹಿಂದಿ ಹೇರಿಕೆಯನ್ನು ಒಕ್ಕೊರಲಿನಿಂದ ಖಂಡಿಸಲಾರಂಭಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಆಡಳಿತಾರೂಢ ಎಐಎಡಿಎಂಕೆ ಕೂಡ ಕೇಂದ್ರದ ಪ್ರಸ್ತಾವನೆಯನ್ನು ವಿರೋಧಿಸಿದೆ. ಪ್ರತಿಪಕ್ಷ ಡಿಎಂಕೆ ಸೇರಿದಂತೆ ಎಲ್ಲಾ ಪ್ರಮುಖ ವಿರೋಧ ಪಕ್ಷಗಳೂ ದ್ವಿಭಾಷಾ ಸೂತ್ರವನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿವೆ.

ಭಾಷಾ ಬಡಿದಾಟದ ಇತಿಹಾಸ:

ಹಾಗೆ ನೋಡಿದರೆ ಭಾಷಾ ಸಾರ್ವಭೌಮತೆಗೆ ಸಂಬಂಧಿಸಿದಂತೆ ದಕ್ಷಿಣ ಮತ್ತು ಉತ್ತರದ ನಡುವಿನ ಜಟಾಪಟಿಗೆ ಶತಮಾನಗಳ ಇತಿಹಾಸವೇ ಇದೆ. ಆರಂಭದಿಂದಲೂ ಉತ್ತರದ ಒತ್ತಾಯದ ಹಿಂದಿ ಹೇರಿಕೆಯನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತಲೇ ಬಂದಿವೆ.

ಅದರಲ್ಲೂ ದ್ರಾವಿಡ ಅಸ್ಮಿತೆಯನ್ನು ಇಂದಿಗೂ ಉಸಿರಾಡುವ ತಮಿಳುನಾಡು, ಉತ್ತರದೊಂದಿಗಿನ ಭಾಷಾ ಯುದ್ಧದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದೆ.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಉತ್ತರ ಭಾರತದ ಪ್ರಭಾವ ಅಧಿಕವಿರುವ ಕೇಂದ್ರ ಸರ್ಕಾರ, ತಮ್ಮ ನೆಲದಲ್ಲಿ ಭಾಷಾ ಪ್ರಭಾವ ಬೀರಲು ಪ್ರಯತ್ನಿಸಿದಾಗಲೆಲ್ಲಾ ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ವಿರೋಧದ ಕೂಗೆಬ್ಬಿಸಿವೆ.

ಇದೇ ಕಾರಣಕ್ಕೆ ಆಡಳಿತದಲ್ಲಿ ಹಿಂದಿ ಭಾಷಾ ಪ್ರಯೋಗ, ಸರ್ಕಾರಿ ಕಡತಗಳಲ್ಲಿ ಹಿಂದಿ ಭಾಷೆ ಬಳಕೆ, ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಅಳವಡಿಯೆಂತ ಪ್ರಯತ್ನಗಳನ್ನು ದಕ್ಷಿಣದ ರಾಜ್ಯಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದವು.

ಕರ್ನಾಟಕದ ಸ್ಪಂದನೆ:

ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕ(ತೆಲಂಗಾಣ ಕೂಡ)ದಲ್ಲಿ ಮಾತ್ರ ತ್ರಿಭಾಷಾ ಸೂತ್ರಕ್ಕೆ ಅಷ್ಟೇನು ವಿರೋಧ ವ್ಯಕ್ತವಾಗಿಲ್ಲ ಎನ್ನಬಹುದು. ರಾಜ್ಯದ ದಕ್ಷಿಣ ಭಾಗ ಮತ್ತು ಕರಾವಳಿ ಭಾಗಗಳಲ್ಲಿ ಮಾತ್ರ ಬಲವಂತದ ಹಿಂದಿ ಹೇರಿಕೆಯನ್ನು ವಿರೋಧಿಸಲಾಯಿತೇ ಹೊರತು ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ಈ ಚಳವಳಿ ಅಷ್ಟೇನು ಪ್ರಭಾವಿಯಾಗಿರಲಿಲ್ಲ.

ಇದಕ್ಕೆ ಭೌಗೋಳಿಕ ಕಾರಣಗಳೂ ಉಂಟು. ರಾಜ್ಯದ ಉತ್ತರ ಮತ್ತು ಈಶಾನ್ಯ ಭಾಗಗಳು ಮಹಾರಾಷ್ಟ್ರ, ಗೋವಾ, ತೆಲಂಗಾಣ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದ್ದು, ಸಹಜವಾಗಿ ಮರಾಠಿ ಹಿಂದಿ ಮತ್ತು ಬಹುತೇಕವಾಗಿ ಉರ್ದು ಭಾಷೆಯ ಪ್ರಭಾವ ಕಂಡುಬರುತ್ತದೆ.

ರಾಜ್ಯದ ದಕ್ಷಿಣ ಭೂಭಾ ಮತ್ತು ಮಲೆನಾಡು ಭಾಗಗಳು ತಮಿಳುನಾಡು, ಕೇರಳ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡ ಪರಿಣಾಮ ಗಡಿ ಬಾಗದಲ್ಲಿರುವ ಭಾಷಾ ಪರಿಣಾಮಗಳಂತೆಯೇ, ಉತ್ತರ ಮತ್ತು ಈಶಾನ್ಯ ಭಾಗದಲ್ಲೂ ಭಾಷಾ ಪರಿಣಾಮಗಳು ಗೋಚರವಾಗುತ್ತವೆ.

ಅಲ್ಲದೇ ತನ್ನ ಹಿಂದಿ ಹರಡುವಿಕೆ ನೀತಿಯ ಭಾಗವಾಗಿ ಕೇಂದ್ರ ಸರ್ಕಾರ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಗಳಂತ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದು, ಕರ್ನಾಟಕದಲ್ಲಿ ಅವು ಬಹುತೇಕವಾಗಿ ಯಶಸ್ವಿಯಾಗಿಯೇ ಮುನ್ನಡೆದಿವೆ.

ಇನ್ನು ಕರ್ನಾಟಕದಲ್ಲಿರುವ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳು ಒತ್ತಾಯದ ಹಿಂದಿ ಹೇರಿಕೆಯನ್ನು ವಿರೋಧಿಸಿತ್ತಲೇ ಬಂದಿದ್ದು, ಅವುಗಳ ತೀವ್ರತೆ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವುದು ಸುಳ್ಳಲ್ಲ.

ರಾಜ್ಯದ ಜನಮಾಸದಲ್ಲೂ ಒತ್ತಾಯದ ಹಿಂದಿ ಹೇರಿಕೆ ಕುರಿತು ವಿರೋಧವಿದೆಯಾದರೂ, ಹಿಂದಿಯನ್ನು ಒಂದು ಭಾಷೆಯನ್ನಾಗಿ ಕಲಿಯುವ ಕುರಿತು ಯಾವುದೇ ಆಕ್ಷೇಪ ಇಲ್ಲದೇ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಬಹುಶಃ ಇದೇ ಕಾರಣಕ್ಕೆ ದಕ್ಷಿಣ ಮತ್ತು ಉತ್ತರದ ಭಾಷಾ ಸಂಘರ್ಷವನ್ನು ಸಂದರ್ಭಕ್ಕೆ ಅನುಗುಣವಾಗಿ ತಣ್ಣಗಿಡುವ ಮಧ್ಯಮ ಮಾರ್ಗವನ್ನು ಕರ್ನಾಟಕ ಆಯ್ಕೆ ಮಾಡಿಕೊಂಡಿದೆ. ಇದು ಜಾಣೆ ನಡೆ ಕೂಡ ಹೌದು.

ಕೇವಲ ದಕ್ಷಿಣ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲೂ ಒತ್ತಾಯದ ಹಿಂದಿ ಹೇರಿಕೆಯನ್ನು ವಿರೋಧಿಸಲಾಗುತ್ತಿದೆ. ದೇಶದ ಈಶಾನ್ಯ ರಾಜ್ಯಗಳಲ್ಲಿ ಆಗಾಗ ಹಿಂದಿ ಹೇರಿಕೆಯ ವಿರೋಧಿ ಧ್ವನಿ ಮೊಳಗಿವೆ.

ಕರುನಾಡಿನ ನಡೆಯಲ್ಲಿದೆ ಪರಿಹಾರ?:

ಹಿಂದಿ ಭಾಷೆಗೆ ಸಂವಿಧಾನದಲ್ಲಿ ರಾಷ್ಟ್ರಭಾಷೆಯ ಸ್ಥಾನ ನೀಡಲಾಗಿದೆ ಎಂಬ ಕಲ್ಪನೆಯೇ ತಪ್ಪಿದ್ದು, ಹಿಂದಿ ಭಾಷೆ ಕಲಿಕೆ ಕಡ್ಡಾಯವಲ್ಲ ಎಂಬುದು ದಕ್ಷಿಣದ ರಾಜ್ಯಗಳ ವಾದವಾಗಿದೆ. ಇದೇ ಕಾರಣಕ್ಕೆ ಶಾಲೆಗಳಲ್ಲಿ ತ್ರಿಭಾಷಾ ಶಿಕ್ಷಣ ಸೂತ್ರಕ್ಕೆ ದಕ್ಷಿಣ ಭಾರದ ವಿರೋಧಿಸುತ್ತಿದೆ. ಆದರೆ ಭಾಷಾವಾರು ಪ್ರಾಂತ್ಯ ರಚೆಯಾದಾಗ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜಹಾವರಲಾಲ್ ನೆಹರೂ ನೀಡಿದ್ದ 'ಮುಂದೊಂದು ದಿನ ಇದು ಭಾರತದ ವಿಘಟನೆಗೆ ಕಾರಣವಾಗಬಲ್ಲದು..' ಎಂಬ ಎಚ್ಚರಿಕೆಯನ್ನೂ ನಾವು ಮರೆಯಬಾರದು.

Follow Us:
Download App:
  • android
  • ios