Asianet Suvarna News Asianet Suvarna News

ಬಳ್ಳಾರಿ ಮೂಲದ ಸ್ವಾಮೀಜಿ ಮಹಾರಾಷ್ಟ್ರದಲ್ಲಿ ಭೀಕರ ಹತ್ಯೆ!

ಮಹಾರಾಷ್ಟ್ರದಲ್ಲಿ ರುದ್ರಪಶುಪತಿ ಶಿವಾಚಾರ್ಯರ ಕೊಲೆ| ಮೂಲತಃ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರದವರು| ದೊಡ್ಡ ಬಸವೇಶ್ವರ ಮಠದ ಮಹೇಶ್ವರ ಸ್ವಾಮೀಜಿಗಳ ಸಹೋದರ| 

Maharashtra After Palghar lynching, two Sadhus brutally killed inside ashram in Nanded
Author
Bangalore, First Published May 25, 2020, 7:11 AM IST

ಮುಂಬೈ((ಮೇ.25): ಮೂಲತಃ ತಾಲೂಕಿನ ನಂದಿಪುರದವರಾದ, ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ಸ್ವಾಮೀಜಿಯಾಗಿದ್ದ ರುದ್ರಪಶುಪತಿ ಶಿವಚಾರ್ಯರನ್ನು (35) ದುಷ್ಕರ್ಮಿಗಳು ಶನಿವಾರ ರಾತ್ರಿ ಅಮಾನುಷವಾಗಿ ಹತ್ಯೆಗೈದಿದ್ದಾರೆ.

ದೇಗುಲ ಆವರಣದಲ್ಲಿ ಇಬ್ಬರು ಸಾಧುಗಳ ಹತ್ಯೆ: ಆರೋಪಿ ಅರೆಸ್ಟ್!

ರುದ್ರಪಶುಪತಿ ಶಿವಾಚಾರ್ಯರು ಶನಿವಾರ ರಾತ್ರಿ ಎಂದಿನಂತೆ ಧರ್ಮಸಭೆಗೆ ಹೋಗಿ ಮಠಕ್ಕೆ ಹಿಂದಿರುಗಿದ್ದರು. ಶಿಷ್ಯಂದಿರು ಮಹಡಿಯಲ್ಲಿ ಮಲಗಿದ್ದು, ಇವರು ಕೆಳಗಿರುವ ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮಧ್ಯರಾತ್ರಿಯ ನಂತರ ಬಂದ ದುಷ್ಕರ್ಮಿಗಳು ಸ್ವಾಮೀಜಿ ಹಾಗೂ ಅವರ ಶಿಷ್ಯರೊಬ್ಬರ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾರೆ. ಮೊಬೈಲ್‌ ಚಾರ್ಜರ್‌ನ್ನು ಅವರು ಕುತ್ತಿಗೆಗೆ ಬಿಗಿಯಾಗಿ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅವರ ಶವವನ್ನು ಕಾರಿನಲ್ಲಿ ಹಾಕಿಕೊಂಡು ಹೋಗುವಾಗ ಕಾರು ಇದ್ದಕ್ಕಿದ್ದಂತೆ ಕೆಟ್ಟು ನಿಂತ ಪರಿಣಾಮ ಅಲ್ಲಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಈ ಕುರಿತಂತೆ ಮಠದ ಶಿಷ್ಯಂದಿರು, ಶ್ರೀಗಳ ಸಹೋದರರೂ ಆಗಿರುವ ಇಲ್ಲಿಯ ನಂದಿಪುರ ದೊಡ್ಡ ಬಸವೇಶ್ವರ ಮಠದ ಮಹೇಶ್ವರ ಸ್ವಾಮೀಜಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.

ಶ್ರೀ ಮಹೇಶ್ವರ ಸ್ವಾಮೀಜಿ, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಕೊಟ್ಟೂರಿನ ಚಾನುಕೋಟಿ ಸ್ವಾಮೀಜಿ, ಹನಸಿ ಮಠದ ಶಂಕರ ಸ್ವಾಮೀಜಿ ಸೇರಿದಂತೆ ಹತ್ತಾರು ಸ್ವಾಮೀಜಿಗಳು ಮಹಾರಾಷ್ಟ್ರಕ್ಕೆ ತೆರಳಿದರು.

ಕಳ್ಳರೆಂಬ ವದಂತಿ: ಇಬ್ಬರು ಸಾಧು ಸೇರಿ ಮೂವರು ಗುಂಪು ಥಳಿತಕ್ಕೆ ಬಲಿ!

ಈ ಘಟನೆ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ನಂದಿಪುರದ ಶ್ರೀದೊಡ್ಡ ಬಸವೇಶ್ವರ ಮಠದ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಈಗ ಮಠದಲ್ಲಿ ಸ್ಮಶಾನ ಮೌನ ಆವರಿಸಿದೆ.

ಶ್ರೀ ರುದ್ರಪಶುಪತಿ ಶಿವಾಚಾರ್ಯ ಶ್ರೀಗಳು ತಾಲೂಕಿನ ನಂದಿಪುರ ಗ್ರಾಮದವರು. ಇವರ ಮೂಲ ಹೆಸರು ನಂದೇಶ. ನಂದಿಪುರ ಮಠದ ಲಿಂಗೈಕ್ಯ ಶ್ರೀ ಚರಂತೇಶ್ವರ ಸ್ವಾಮೀಜಿಗಳ ಪುತ್ರರು. ಇವರ ಸಹೋದರ ಮಹೇಶ್ವರ ಸ್ವಾಮೀಜಿ ಸದ್ಯ ನಂದಿಪುರ ದೊಡ್ಡ ಬಸವೇಶ್ವರ ಮಠದ ಶ್ರೀಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಬಳಿಕ, ಸಂಸ್ಕೃತ, ಪಾಠ ಪ್ರವಚನಗಳನ್ನು ಕಾಶಿ ಪೀಠದಲ್ಲಿ ಮುಗಿಸಿ, ಕಳೆದ 12 ವರ್ಷಗಳ ಹಿಂದೆ ಕೇದಾರ ಪೀಠದ ಶಾಖಾ ಮಠವಾದ ಮಹಾರಾಷ್ಟ್ರದ ನಾಗಠಾಣದ ನಿರ್ವಾಣಿ ಮಠಕ್ಕೆ ಪಟ್ಟಾಧಿಕಾರ ಹೊಂದಿದ್ದರು. ಮಹಾರಾಷ್ಟ್ರ ಹಾಗೂ ಕರ್ನಾಟಕದ ಅಪಾರ ಭಕ್ತರನ್ನು ಹೊಂದಿದ್ದು, ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದರು ಎಂದು ಅವರ ನಿಕಟವರ್ತಿಗಳಾದ ಪತ್ರೇಶ್‌ ಹಿರೇಮಠ್‌ ಹೇಳುತ್ತಾರೆ.

Follow Us:
Download App:
  • android
  • ios