Asianet Suvarna News Asianet Suvarna News

ಪ್ರವೀಣ್‌ ನೆಟ್ಟಾರ್‌ ಹತ್ಯೆಗೆ 2 ತಿಂಗಳಿಂದಲೇ ಸ್ಕೆಚ್‌!

ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಗೆ ಆರೋಪಿಗಳು ಕಳೆದ ಎರಡು ತಿಂಗಳಿಂದಲೇ ಸಂಚು ರೂಪಿಸಿರುವುದು ಪೊಲೀಸ್‌ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಎರಡು ತಿಂಗಳು ಕಾಲ ಕೇವಲ ವಾಟ್ಸ್‌ಆ್ಯಪ್‌ ಕಾಲ್‌ನಲ್ಲೇ ಮಾತನಾಡಿದ್ದ ಆರೋಪಿಗಳು, ಅದರಲ್ಲೇ ಮೆಸೇಜ್‌ ಕೂಡ ಮಾಡುತ್ತಿದ್ದರು ಎಂಬುದು ಬಯಲಿಗೆ ಬಂದಿದೆ. 

dakshina kananda bjp youth leader praveen nettaru murder case inside details gvd
Author
Bangalore, First Published Jul 31, 2022, 5:05 AM IST

ಮಂಗಳೂರು (ಜು.31): ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಗೆ ಆರೋಪಿಗಳು ಕಳೆದ ಎರಡು ತಿಂಗಳಿಂದಲೇ ಸಂಚು ರೂಪಿಸಿರುವುದು ಪೊಲೀಸ್‌ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಎರಡು ತಿಂಗಳು ಕಾಲ ಕೇವಲ ವಾಟ್ಸ್‌ಆ್ಯಪ್‌ ಕಾಲ್‌ನಲ್ಲೇ ಮಾತನಾಡಿದ್ದ ಆರೋಪಿಗಳು, ಅದರಲ್ಲೇ ಮೆಸೇಜ್‌ ಕೂಡ ಮಾಡುತ್ತಿದ್ದರು ಎಂಬುದು ಬಯಲಿಗೆ ಬಂದಿದೆ. ಪ್ರವೀಣ್‌ ಹತ್ಯೆಗೆ ಸಂಬಂಧಿಸಿ ಈಗಾಗಲೇ ಬಂಧನದಲ್ಲಿರುವ ಆರೋಪಿಗಳಾದ ಝಾಕಿರ್‌ ಮತ್ತು ಶಫೀಕ್‌ ಪೊಲೀಸ್‌ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ. ಹತ್ಯೆಯ ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರಿಗೆ ಒಂದೊಂದೇ ಸಂಗತಿಗಳು ಪತ್ತೆಯಾಗುತ್ತಿವೆ. 

ಹೆಚ್ಚುವರಿ ಜಿಲ್ಲಾ ಎಸ್ಪಿ ಕುಮಾರ್‌ ಚಂದ್ರ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಬೆಳ್ಳಾರೆ ಸುತ್ತಮುತ್ತಲಿನ 20ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಅದರಲ್ಲಿ ಆರೋಪಿಗಳ ಚಲನವಲನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳ ಪೋನ್‌ ವಶಕ್ಕೆ ಪಡೆದು ಅದರಲ್ಲಿರುವ ಎಲ್ಲ ಅಂಶಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕರೆಯ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳು ಯಾರಿಗೆ ಹೆಚ್ಚು ಕರೆ ಮಾಡಿದ್ದಾರೆ, ಆ ನಂಬರ್‌ಗಳನ್ನು ಪತ್ತೆ ಮಾಡಲಾಗುತ್ತಿದೆ.

ಅಲ್ಪಸಂಖ್ಯಾತ ಗೂಂಡಗಳನ್ನು ಎನ್‌ಕೌಂಟರ್ ಮಾಡಬೇಕು: ಶಾಸಕ ರೇಣುಕಾಚಾರ್ಯ

ಒಂದು ತಿಂಗಳಿಂದ ಬೆದರಿಕೆ ಕರೆ ಬಂದಿತ್ತು ಎಂದು ಪ್ರವೀಣ್‌ ತನ್ನ ಸ್ನೇಹಿತರಲ್ಲಿ ಹೇಳಿದ್ದ ಎಂದು ತಿಳಿಯಲಾಗಿದೆ. ಅಲ್ಲದೆ ಬೆಳ್ಳಾರೆ ಠಾಣೆ ಸಿಬ್ಬಂದಿ ಒಬ್ಬರಿಗೆ ಮೌಖಿಕವಾಗಿ ಪ್ರವೀಣ್‌ ಹೇಳಿದ್ದ ಎನ್ನಲಾಗಿದ್ದು, ಆ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ. ಪ್ರವೀಣ್‌ಗೆ ಬಂದಿರುವ ಕರೆಯ ನಂಬರುಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಆರೋಪಿಗಳು ಮಾಡಿದ ವಾಟ್ಸ್‌ಆ್ಯಪ್‌ ಕರೆ, ಯಾರಿಗೆಲ್ಲ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಈ ಮೂಲಕ ಪ್ರಮುಖ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಮಗ್ರ ತನಿಖೆಗೆ ಎಸ್‌ಐಟಿ ರಚನೆಗೆ ಹಿಂದೂ ಸಂಘಟನೆಗಳ ಆಗ್ರಹ: ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರವೀಣ್‌ ನೆಟ್ಟಾರ್‌ ಪ್ರಕರಣವನ್ನು ವಿಶೇಷ ಪೊಲೀಸ್‌ ತನಿಖಾ ದಳಕ್ಕೆ (ಎಸ್‌ಐಟಿ) ಒಪ್ಪಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಸರ್ಕಾರವನ್ನು ಒತ್ತಾಯಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್‌ ಕೆ.ಆರ್‌., ಪ್ರವೀಣ್‌ ಹತ್ಯೆ ಯೋಜಿತ ಕೃತ್ಯವಾಗಿದೆ. ಇದರ ಹಿಂದಿರುವ ಆರೋಪಿಗಳನ್ನು ಶೀಘ್ರ ಬಂಧಿಸಲು ಎಸ್‌ಐಟಿ ರಚನೆ ಮಾಡಬೇಕು. ಓರ್ವ ದಕ್ಷ ಪೊಲೀಸ್‌ ಅಧಿಕಾರಿಯನ್ನು ನೇಮಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Chikkamagaluru: ಕರಾವಳಿಯಲ್ಲಿ ಪ್ರವೀಣ್ ಹತ್ಯೆ ಪ್ರಕರಣ: ಇಸ್ಲಾಮಿಕ್ ರಾಷ್ಟ್ರ ಮಾಡಲು ಸಂಚು

ಸರ್ಕಾರ ಎನ್‌ಐಎ ಮೂಲಕ ತನಿಖೆ ಮಾಡಿದರೂ ಸ್ವಾಗತ. ಆದರೆ ಆದಷ್ಟುಶೀಘ್ರ ಆರೋಪಿಗಳ ಬಂಧನವಾಗಬೇಕು. ಹಿಂದೂ ನಾಯಕರ ಹತ್ಯೆಯ ಮೂಲಕ ಸಮಾಜ ತುಂಡರಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲೇಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವ ಮೂಲಕ ಮುಂದೆಂದೂ ಇಂತಕ ಕೃತ್ಯಗಳು ಮರುಕಳಿಸಬಾರದು. ಆಡಳಿದಲ್ಲಿ ಪಕ್ಷ ಯಾವುದೇ ಇರಲಿ, ಹಿಂದುತ್ವ ಮರೆತಾಗ ಎಚ್ಚರಿಸುವ ಕೆಲಸ ಮಾಡಿಯೇ ಮಾಡುತ್ತೇವೆ. ಪ್ರವೀಣ್‌ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು. ಬಜರಂಗದಳ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಮಂಗಳೂರು ವಿಭಾಗ ಸಂಯೋಜಕ ಭುಜಂಗ, ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ, ಪುತ್ತೂರು ವಿಭಾಗ ಸಂಚಾಲಕ ಭರತ್‌ ಕುಮ್ಡೇಲು ಇದ್ದರು.

Follow Us:
Download App:
  • android
  • ios