Asianet Suvarna News Asianet Suvarna News

ಮಹಾಲಕ್ಷ್ಮಿ ಕೊಲೆಗೆ ಭೀಕರ ಟ್ವಿಸ್ಟ್ ಬಿಚ್ಚಿಟ್ಟ ಡೆತ್ ನೋಟ್: ದೇಹ ಕತ್ತರಿಸಲು ಆಕ್ಸಲ್ ಬ್ಲೇಡ್ ಬಳಕೆ!

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದ ನೇಪಾಳ ಕನ್ನಡತಿ ಮಹಾಲಕ್ಷ್ಮಿ ಕೊಲೆ ಪ್ರಕರಣದ ಆರೋಪಿ ಮುಕ್ತಿ ರಂಜನ್ ಸಾಯುವ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ಕೇಸಿನ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾನೆ.

Bengaluru Mahalakshmi murder case get big twist by Odisha mukti Ranjan death note sat
Author
First Published Sep 26, 2024, 11:03 AM IST | Last Updated Sep 26, 2024, 11:03 AM IST

ಬೆಂಗಳೂರು (ಸೆ.26): ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದ ನೇಪಾಳ ಕನ್ನಡತಿ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸಾಯುವ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿದ್ದ ಸತ್ಯಾಂಶವನ್ನು ಬೆಂಗಳೂರು ಪೊಲೀಸರು ಬಹಿರಂಗಪಡಿಸಿದ್ದಾರೆ. ಆರೋಪಿ ಮುಕ್ತಿ ರಂಜನ್ ರಾಯ್, ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ ನಂತರ ಆಕ್ಸೆಲ್ ಬ್ಲೇಡ್ (hacksaw blade)‌ ಬಳಸಿ ಆಕೆಯ ದೇಹವನ್ನು ಸುಮಾರು 50ಕ್ಕೂ ಅಧಿಕ ತುಂಡುಗಳನ್ನಾಗಿ ಕತ್ತರಿಸಿ, ಫ್ರಿಜ್‌ನಲ್ಲಿಟ್ಟಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ ನಂತರ ಒಡಿಶಾ ರಾಜ್ಯದ ತಮ್ಮ ಸ್ವಗ್ರಾಮಕ್ಕೆ ತೆರಳಿದ ಮುಕ್ತಿ ರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಇದಕ್ಕೂ ಮುನ್ನ ವಿವರವಾದ ಡೆತ್ ನೋಟ್ ಬರೆದಿಟ್ಟಿದ್ದಾನೆ. ಮುಕ್ತಿ ರಂಜನ್ ಕೆಲಸ ಮಾಡುತ್ತಿದ್ದ ಮಾಲ್‌ನಲ್ಲಿ ಸ್ಟೋರ್ ಮ್ಯಾನೇಜರ್ ಆಗಿದ್ದ ಮಹಾಲಕ್ಷ್ಮಿ, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆದಿದೆ. ಇನ್ನು ಕೆಲಸದ ಸ್ಥಳದಲ್ಲಿ ಯಾವುದೇ ಮಹಿಳೆಯರೊಂದಿಗೆ ಮಾತನಾಡಬೇಡ ಎಂದು ಮುಕ್ತಿ ರಂಜನ್‌ಗೆ ಮಹಾಲಕ್ಷ್ಮಿ ಎಚ್ಚರಿಕೆ ನೀಡುತ್ತಿದ್ದಳು. ಅವಳ ಕೆಲಸದ ಸ್ಥಳದಲ್ಲಿ ಯಾರಾದರೂ ಅವನ ಬಗ್ಗೆ ಮಾತನಾಡಿದರೆ  ಕೋಪಗೊಳ್ಳುತ್ತಿದ್ದಳು. ಅವಳ ನಡವಳಿಕೆ ಮತ್ತು ಬಯಕೆಗಳಿಂದ ಮುಕ್ತಿ ರಂಜನ್ ಬೇಸತ್ತಿದ್ದನು ಎಂದು ತಿಳಿದುಬಂದಿದೆ.

ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣದಲ್ಲಿ ಟ್ವಿಸ್ಟ್, ಶಂಕಿತ ಆರೋಪಿ ಮೃತದೇಹ ಒಡಿಶಾದಲ್ಲಿ ಪತ್ತೆ!

ಒಡಿಶಾದ ಭುಯಿನ್‌ಪುರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ, ಮುಕ್ತಿ ರಂಜನ್ ಮಹಾಲಕ್ಷ್ಮಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಸೆ.3 ರಂದು ನಡೆದ ತೀವ್ರ ವಾಗ್ವಾದದ ಸಮಯದಲ್ಲಿ, ಮಹಾಲಕ್ಷ್ಮಿ ಮುಕ್ತಿ ರಂಜನ್‌ನನ್ನು ಅಪಮಾನ ಮಾಡಿದ್ದಳು. ಇದರಿಂದ ಕೋಪಗೊಂಡು ಕೊಲೆ ಮಾಡಿದ್ದಾಗಿ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ. ಮಹಾಲಕ್ಷ್ಮಿ ಜೊತೆಗಿನ ತನ್ನ ಆತ್ಮೀಯ ಸಂಬಂಧದ ಬಗ್ಗೆ ವಿವರಿಸಿ, ಅಪರಾಧಕ್ಕೆ ವಿಷಾದ ವ್ಯಕ್ತಪಡಿಸಿದ್ದಾನೆ. ಕೊಲೆಗೆ ಬಳಸಿದ ಆಯುಧ, ಹರಿತವಾದ ಬ್ಲೇಡ್ ಬಳಸಿದ್ದಾಗಿ ಡೆತ್ ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾನೆ.

ಮಹಾಲಕ್ಷ್ಮಿ ಕೊಲೆಯ ನಂತರ, ಮುಕ್ತಿ ರಂಜನ್ ಬೆಂಗಳೂರಿನಿಂದ ಪರಾರಿಯಾಗಿದ್ದನು. ಸೆ.3ರಂದು ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನಂತರ ಬೆಂಗಳೂರು ಬಿಟ್ಟು ಹೋಗಿ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಪೊಲೀಸರು ಆರೋಪಿ ಪಶ್ಚಿಮ ಬಂಗಾಳಕ್ಕೆ ತೆರಳಿ ನಂತರ ಒಡಿಶಾಗೆ ಹೋಗಿರುವುದನ್ನು ಪತ್ತೆಹಚ್ಚಿದರು. ಪೊಲೀಸರು ಆತನನ್ನು ಹುಡುಕಿಕೊಂಡು ಸ್ಥಳಕ್ಕೆ ಹೋಗುವ ವೇಳೆಗೆ ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಂಡರು. ಇದರಿಂದಾಗಿ ತನಿಖೆಯ ಹಲವು ಅನುಮಾನಗಳಿಗೆ ಉತ್ತರವೇ ಸಿಗದೇ ಪೊಲೀಸರು ಪರದಾಡುತ್ತಿದ್ದಾಎ. ಅದರಲ್ಲೂ ಮಹಾಲಕ್ಷ್ಮಿಯ ದೇಹವನ್ನು ಹೇಗೆ ಕತ್ತರಿಸಲಾಯಿತು? ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಏಕೆ ಪತ್ತೆಯಾಗಿಲ್ಲ? ಮಹಾಲಕ್ಷ್ಮಿ ದೇಹ ಕತ್ತರಿಸುವ ಮೊದಲು ರಕ್ತವನ್ನು ಹರಿಸಿದ್ದಾನೆಯೇ? ಎಂಬ ಇತ್ಯಾದಿ ಮಾಹಿತಿಗೆ ಫೋರೆನ್ಸಿಕ್ ತಂಡ ಪರಿಶೀಲನೆ ಮಾಡುತ್ತುದೆ. ಈ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ವೈಯಾಲಿಕಾವಲ್ ನೇಪಾಳಿ ಕನ್ನಡತಿ ಮಹಾಲಕ್ಷ್ಮಿ ಕೊಲೆ ಆರೋಪಿ ಇವನೇ ನೋಡಿ..!

ಮಹಾಲಕ್ಷ್ಮಿ ಪ್ರಕರಣಕ್ಕೆ ಮುಕ್ತಿ ರಂಜನ್‌ ಡೆತ್ ನೋಟ್ ಪ್ರಕರಣಕ್ಕೆ ಕೇಂದ್ರ ಬಿಂದುವಾಗಿದೆ. ಮುಕ್ತಿ ರಂಜನ್ ದೇಹದ ಬಳಿ ಪತ್ತೆಯಾದ ಸಣ್ಣ ಡೈರಿಯಲ್ಲಿ ಬರೆಯಲಾದ ಡೆತ್ ನೋಟ್, ಕೊಲೆಗೆ ಕಾರಣವಾದ ಘಟನೆಗಳ ಕುರಿತು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದೆ. ಡೆತ್ ನೋಟ್‌ನಲ್ಲಿ, ಮುಕ್ತಿ ರಂಜನ್ ವೈಯಕ್ತಿಕ ಸಮಸ್ಯೆಗಳು ಮತ್ತು ಮಹಾಲಕ್ಷ್ಮಿಯ ಕಿರುಕುಳದಿಂದಾಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದನ್ನು ಒಪ್ಪಿಕೊಂಡ ನಂತರ ಮಹಾಲಕ್ಷ್ಮಿಯನ್ನು ಕೊಲೆ ಮಾಡಿರುವುದು ಮುಕ್ತಿ ರಂಜನ್ ಎಂದು ತೀರ್ಮಾನಿಸಿದ್ದಾರೆ.

ಪ್ರಸ್ತುತ ಒಡಿಶಾದಲ್ಲಿರುವ ಬೆಂಗಳೂರು ಪೊಲೀಸ್ ತಂಡವು ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಕ್ತಿ ರಂಜನ್‌ ವಸ್ತುಗಳು, ಅವರ ಬ್ಯಾಗ್, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಸೇರಿ ಇನ್ನಿತರೆ ವಸ್ತುಗಳು ಆತ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪತ್ತೆಯಾಗಿವೆ. ಪೊಲೀಸರು ಈಗ ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿಯನ್ನು ಸಂಗ್ರಹಿಸುವತ್ತ ಗಮನಹರಿಸುತ್ತಿದ್ದಾರೆ. ಜೊತೆಗೆ ಅವರ ಕುಟುಂಬ ಮತ್ತು ಸ್ಥಳೀಯ ಅಧಿಕಾರಿಗಳಿಂದ ಹೆಚ್ಚುವರಿ ಮಾಹಿತಿ ಸಂಗ್ರಹಿಸಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.

Latest Videos
Follow Us:
Download App:
  • android
  • ios