Asianet Suvarna News Asianet Suvarna News

ಬೆಂಗಳೂರು: ಕೋರಮಂಗಲ ಪಿಜಿಯಲ್ಲಿದ್ದ ಬಿಹಾರ ಯುವತಿ ಕೃತಿ ಕುಮಾರಿ ಕೊಲೆ ಕೇಸ್‌ಗೆ ಮೇಜರ್ ಟ್ವಿಸ್ಟ್!

ಬೆಂಗಳೂರಿನ ಮಹಿಳಾ ಪಿಜಿಯಲ್ಲಿದ್ದ ಬಿಹಾರ ಮೂಲದ ಕೃತಿ ಕುಮಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಟ್ವಿಸ್ಟ್ ಸಿಕ್ಕಿದೆ..

Bengaluru Koramangala ladies PG living bihar Girl krithi Kumari Murder Case get Major Twist sat
Author
First Published Jul 25, 2024, 12:17 PM IST | Last Updated Jul 25, 2024, 12:17 PM IST

ಬೆಂಗಳೂರು (ಜು.25): ಬೆಂಗಳೂರಿನ ಕೋರಮಂಗಲದ ಪಿಜಿಯಲ್ಲಿ ವಾಸವಿದ್ದ ಬಿಹಾರ ರಾಜ್ಯದ ಯುವತಿಯೊಬ್ಬಳನ್ನು ಭೀಕರವಾಗಿ ಕತ್ತು ಸೀಳಿ ಕೊಲೆ ಮಾಡಿದ ಘಟನೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ಯುವತಿಯ ಪ್ರಿಯಕರನೇ ಬಂದು ಆಕೆಯನ್ನು ಕೊಲೆ ಮಾಡಿದ್ದಾಗಿ, ಪೊಲೀಸರು ಪ್ರಾಥಮಿಕ ವರದಿಯಲ್ಲಿ ಹೇಳಿದ್ದರು. ಆದರೆ, ಈ ಯುವತಿಗೂ ಕೊಲೆ ಮಾಡಿದವನಿಗೂ ಸಂಬಂಧವೇ ಇಲ್ಲ. ಹಾಗಾದ್ರೆ, ಕೊಲೆಯಾದ ಯುವತಿಗೂ ಕೊಲೆಗಾರನಿಗೂ ಸಂಬಂಧವೇನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ...

ಹೌದು, ಕೋರಮಂಗಲದ ಮೊನ್ನೆ ತಡರಾತ್ರಿ 11.10 ರಿಂದ 11.30ರ ಸುಮಾರಿಗೆ ಚಾಕು ಹಿಡಿದು ಪಿ.ಜಿ.ಯೊಳಗೆ ನುಗ್ಗಿದ ಆರೋಪಿ ಅಭಿಷೇಕ್ , ಮೂರನೇ ಮಹಡಿಯಲ್ಲಿನ ರೂಮಿನ ಸಮೀಪದಲ್ಲೇ ಯುವತಿ ಮೇಲೆ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದು ಪರಾರಿಯಾಗಿದ್ದಾನೆ. ಇದರಿಂದ ಬಿಹಾರ ಮೂಲದ ಯುವತಿ ಕೃತಿ ಕುಮಾರಿ‌ (24) ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಿಚಯಸ್ಥ ವ್ಯಕ್ತಿಯಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪಿ.ಜಿಯಲ್ಲಿನ ಭದ್ರತಾ ವೈಫಲ್ಯವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಂಗಳೂರಿನ ಲೇಡಿಸ್ ಪಿಜಿಗಳು ಸೇಫ್ ಅಲ್ವಾ?: ತಲ್ಲಣ ಸೃಷ್ಟಿಸಿದ ರಾಜಧಾನಿಯ ಪಿಜಿ ಮರ್ಡರ್!

ಇನ್ನು ಕೊಲೆ ಮಾಡಿದ ಯುವಕ ಆಕೆಯ ಪ್ರಿಯತಮ ಅಥವಾ ಪರಿಚಯಸ್ಥ ಎಣದು ಹೇಳಲಾಗುತ್ತಿತ್ತು. ಆದರೆ, ಇವರಿಬ್ಬರಿಗೂ ಈಗ ಸಂಬಂಧವೇ ಇಲ್ಲ ಎನ್ನುವುದು ದೃಢಪಟ್ಟಿದೆ. ಅಷ್ಟಕ್ಕೂ ಈ ಕೃತಿ ಕುಮಾರಿ ಕೊಲೆಯಾಗಲು ಕಾರಣವೇನು ಗೊತ್ತಾ? ಇಲ್ಲಿ ನೋಡಿ ಪೂರ್ಣ ಮಾಹಿತಿ...

ಕೃತಿ ಕುಮಾರಿಯನ್ನ ಕೊಲೆ ಮಾಡಿದ ಯುವಕ ಭೂಪಾಲ್ ಮೂಲದ ಅಭಿಷೇಕ್. ಈ ಅಭಿಷೇಕ್ ಕೆಲವು ವರ್ಷಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸಹೋದ್ಯೋಗಿ ಆಗಿದ್ದ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಹೀಗಾಗಿ, ಇಬ್ಬರೂ ಒಂದೇ ಪಿಜಿಯಲ್ಲಿ ಲಿವಿಂಗ್ ಟುಗೆದರ್ ರೀತಿಯಲ್ಲಿ ವಾಸವಾಗಿದ್ದರು. ಆದರೆ, ಕಳೆದ ಕೆಲವು ತಿಂಗಳ ಹಿಂದೆ ಅಭಿಷೇಕ್ ಕೆಲಸ ಬಿಟ್ಟು ಭೋಪಾಲ್‌ಗೆ ಹೋಗಿದ್ದನು. ಜೊತೆಗೆ, ಆಗಾಗ ಬೆಂಗಳೂರಿಗೆ ಬಂದು ಪ್ರೇಯಸಿಯನ್ನು ಭೇಟಿ ಮಾಡಿ ಹೋಗುತ್ತಿದ್ದನು. ಆದರೆ, ಯಾವುದೇ ಕೆಲಸ ಮಾಡದೇ ನಿರಿದ್ಯೋಗಿಯಾಗಿ ಅಲೆದಾಡುತ್ತಿದ್ದ ಅಭಿಷೇಕ್‌ಗೆ ಬೆಂಗಳೂರಿನಲ್ಲಿಯೇ ಕೆಲಸಕ್ಕೆ ಸೇರಿಕೊಳ್ಳುವಂತೆ ಹೇಳಿದ್ದಾಳೆ. ಆದರೆ, ಆತ ಕೆಲಸಕ್ಕೆ ಸೇರಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಪುನಃ ಈತ ಭೇಟಿ ಮಾಡಲು ಬಂದಾಗ ಸುಳ್ಳು ಹೇಳಿರುವುದು ತಿಳಿದು ಆತನಿಂದ ದೂರವಿರಲು ಪ್ರಯತ್ನ ಮಾಡಿದ್ದಾಳೆ. ಆಗ ಪ್ರೇಯಸಿ ವಾಸವಿದ್ದ ಪಿಜಿಯ ಬಳಿ ಬಂದು ಗಲಾಟೆಯನ್ನೂ ಮಾಡಿ ಹೋಗಿದ್ದನು.

ಆಗ, ಅಭಿಷೇಕ್‌ನ ಪ್ರೇಯಸಿಗೆ ಈಗ ಕೊಲೆಯಾಗಿರುವ ಕೃತಿ ಕುಮಾರಿ ಸಹಾಯ ಮಾಡಿದ್ದಾಳೆ. ಇಬ್ಬರೂ ಸ್ನೇಹಿತರಾಗಿದ್ದರಿಂದ ಕೃತಿ ಕುಮಾರಿ ತನ್ನ ಸ್ನೇಹಿತೆ ವಾಸವಿದ್ದ ಪಿಜಿಯಿಂದ ತಾನಿರುವ ಪಿಜಿಗೆ ಬಂದು ಉಳಿದುಕೊಳ್ಳುವಂತೆ ಸಲಹೆ ನೀಡಿದ್ದಾಳೆ. ಕೂಡಲೇ ತಾನಿರುವ ಪಿಜಿ ಬಿಟ್ಟು ಕೃತಿ ಕುಮಾರಿ ಇರುವ ಮಹಿಳಾ ಪಿಜಿಗೆ ಅಭಿಷೇಕ್‌ನ ಪ್ರೇಯಸಿ ಬಂದು ಉಳಿದುಕೊಂಡಿದ್ದಾಳೆ. ಇನ್ನು ಅಭಿಷೇಕ್ ಕಳೆದೊಂದು ವಾರದ ಹಿಂದೆ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಬಂದಾಗ ಪಿಜಿ ಬದಲಾಯಿಸಿದ್ದಾಗಿ, ತಾನು 3ನೇ ಮಹಡಿಯ ರೂಮಿನಲ್ಲಿ ಇರುವುದಾಗಿ ತಿಳಿಸಿದ್ದಾಳೆ.

ಕವಿತಾಳ ಆಸ್ಪತ್ರೆಯ ಸ್ಟಾಫ್ ನರ್ಸ್ ಜೊತೆ ಅಕ್ರಮ ಸಂಬಂಧ, ಪತ್ನಿ ಕೈಗೆ ಸಿಕ್ಕಿಬಿದ್ದ ಪೊಲೀಸಪ್ಪ!

ಇನ್ನು ಅಭಿಷೇಕ್ ಹಾಗೂ ಆತನ ಪ್ರೇಯಸಿ ನಡುವೆ ಕೆಲಸಕ್ಕೆ ಸೇರಿಕೊಳ್ಳದ ವಿಚಾರಕ್ಕೆ ಜಗಳವಾಗಿದೆ. ಇದರಿಂದ ಕೋಪಗೊಂಡು ಆತನೊಂದಿಗೆ ಮಾತನಾಡುವುದನ್ನೂ ಬಿಟ್ಟಿದ್ದಾಳೆ. ಆಗ ಅಭಿಷೇಕ್‌ ನನ್ನನ್ನು ಅವೈಡ್ ಮಾಡುವವಳಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಆಕೆ ಇರುವ ಪಿಜಿ ಒಳಗೆ ನುಗ್ಗಿ ಕೊಲೆ ಮಾಡಲು ನಿರ್ಧರಿಸಿದ್ದಾನೆ. ಪಿಜಿಯ ಬಳಿ ಸೆಕ್ಯೂರಿಟಿ ಗಾರ್ಡ್‌ ಇಲ್ಲದ ಸಮಯವನ್ನು ನೋಡಿಕೊಂಡು ಒಳಗೆ ನುಗ್ಗಿ 3ನೇ ಮಹಡಿಗೆ ಹೋಗಿದ್ದಾನೆ. ಅಲ್ಲಿ ತನ್ನ ಪ್ರೇಯಸಿ ಕೊಲ್ಲಬೇಕೆಂದು ನಿರ್ಧಿಸಿ ಬಾಗಿಲು ಬಡಿದಿದ್ದಾನೆ. ಅಲ್ಲಿ ಪ್ರೇಯಸಿ ಬರುವ ಬದಲು ಕೃತಿ ಕುಮಾರಿ ಬಂದು ಬಾಗಿಲು ತೆಗೆದಿದ್ದಾಳೆ. ಆಗ ಬಾಗಿಲು ತೆಗೆದವರು ಯಾರೆಂಬುದನ್ನೂ ನೋಡದೇ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ ಎಂಬ ಶಂಕೆಯಿದೆ. ಕೂಡಲೇ ಯುವತಿ ಕೃತಿ ಕುಮಾರಿ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾಳೆ. ಸದ್ಯ ಕೋರಮಂಗಲ ಪೊಲೀಸರು ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios