ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ಆರ್. ಅಶ್ವಿನ್ಗೆ ಪ್ರಧಾನಿ ಮೋದಿ ಶುಭ ಹಾರೈಸಿ ಪತ್ರ ಬರೆದಿದ್ದಾರೆ. ಅಶ್ವಿನ್ರ 14 ವರ್ಷಗಳ ಕ್ರಿಕೆಟ್ ಬದುಕಿನ ಸಾಧನೆಗಳನ್ನು ಶ್ಲಾಘಿಸಿದ್ದು, ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದಿದ್ದಾರೆ. ಅಶ್ವಿನ್ರ ತ್ಯಾಗ, ಬದ್ಧತೆಯನ್ನು ಪ್ರಶಂಸಿಸಿದ್ದಾರೆ. ಕುಟುಂಬದವರ ಪ್ರೋತ್ಸಾಹವನ್ನು ಸ್ಮರಿಸಿದ್ದಾರೆ.
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತದ ಆರ್.ಅಶ್ವಿನ್ಗೆ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಪತ್ರ ಬರೆದು, ಶುಭ ಹಾರೈಸಿದ್ದಾರೆ. ಅಶ್ವಿನ್ರನ್ನು ಕ್ರೀಡೆಯ ರಾಯಭಾರಿ ಎಂದು ಬಣ್ಣಿಸಿರುವ ಪ್ರಧಾನಿ, ನೀವು ಕುಟುಂಬ ಹಾಗೂ ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಶ್ಲಾಘಿಸಿದ್ದಾರೆ.ಪತ್ರದಲ್ಲಿ ಅಶ್ವಿನ್ರ 14 ವರ್ಷಗಳ ಕ್ರಿಕೆಟ್ ಬದುಕಿನ ಪ್ರಮುಖ ಕ್ಷಣ, ಸಾಧನೆಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಅಶ್ವಿನ್ ಕ್ರಿಕೆಟ್ ಆಡಿದ್ದ ಘಟನೆಯನ್ನು ಉಲ್ಲೇಖಿಸಿ ಅವರ ತ್ಯಾಗ ಮತ್ತು ಬದ್ಧತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ಕ್ರಿಕೆಟ್ನಿಂದ ನಿವೃತ್ತರಾಗುವ ದಿಢೀರ್ ನಿರ್ಧಾರ ಜಗತ್ತಿನೆಲ್ಲೆಡೆಯ ನಿಮ್ಮ ಅಭಿಮಾನಿಗಳಿ ಅಚ್ಚರಿ ತಂದಿದೆ. ನಿಮ್ಮಿಂದ ಎಲ್ಲರೂ ಮತ್ತಷ್ಟು ಆಫ್ ಬ್ರೇಕ್ ಬೌಲಿಂಗ್ ನಿರೀಕ್ಷೆಯಲ್ಲಿದ್ದಾಗ, ನೀವು ನಿವೃತ್ತಿಯ ಕೇರಮ್ ಬಾಲ್ ಎಸೆದು ಎಲ್ಲರನ್ನೂ ಚಕಿತಗೊಳಿಸಿದ್ದೀರಿ. ಭಾರತಕ್ಕೆ ಇಷ್ಟು ವರ್ಷಗಳ ಕಾಲ ಅದ್ಭುತ ಪ್ರದರ್ಶನ ನೀಡಿದ್ದೀರಿ. ಇದೀಗ ಈ ನಿರ್ಧಾರ ತಳೆಯುವುದು ಬಹಳ ಕಠಿಣ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ; ಆರ್ಸಿಬಿ ಮೂರು ಆಟಗಾರರಿಗೆ ಸ್ಥಾನ!
ಈ ಸಂದರ್ಭ ನಾನು ನಿಮ್ಮ ಹೆತ್ತವರು, ನಿಮ್ಮ ಪತ್ನಿ ಪ್ರೀತಿ ಮತ್ತು ಪುತ್ರಿಗೂ ಶುಭಾಶಯ ತಿಳಿಸುತ್ತೇನೆ. ಅವರ ಪ್ರೋತ್ರಾಹ ಮತ್ತು ತ್ಯಾಗ ನಿಮ್ಮನ್ನು ಒಬ್ಬ ಉತ್ತಮ ಕ್ರಿಕೆಟರ್ ಮತ್ತು ವ್ಯಕ್ತಿಯನ್ನಾಗಿ ಬೆಳೆಸಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
2010ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಅಶ್ವಿನ್, 14 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಈ ವರೆಗೂ 116 ಏಕದಿನ ಪಂದ್ಯದಲ್ಲಿ 156 ವಿಕೆಟ್, 65 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 72 ಹಾಗೂ 106 ಟೆಸ್ಟ್ನಲ್ಲಿ 537 ವಿಕೆಟ್ ಕಬಳಿಸಿದ್ದಾರೆ. ಟೆಸ್ಟ್ನಲ್ಲಿ 6 ಶತಕಗಳೊಂದಿಗೆ 3503 ರನ್ ಕಲೆಹಾಕಿರುವ ಅವರು, ಏಕದಿನದಲ್ಲಿ 707, ಅಂ.ರಾ. ಟಿ20ಯಲ್ಲಿ 184 ರನ್ ಸಿಡಿಸಿದ್ದಾರೆ.
ದಿಢೀರ್ ನಿವೃತ್ತಿಯ ಬೆನ್ನಲ್ಲೇ ತಮ್ಮ ತಂದೆಯನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದಿದ್ದೇಕೆ ಅಶ್ವಿನ್?
ಅಶ್ವಿನ್ 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡದಲ್ಲಿದ್ದರು. 2022ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಪಂದ್ಯದ ಮೂಲಕ ಭಾರತ ಪರ ಕೊನೆ ಟಿ20 ಆಡಿರುವ ಅವರು, ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಕೊನೆ ಬಾರಿ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.
