ಬೂದಿ ಮುಚ್ಚಿದ ಕೆಂಡವನ್ನು ಮತ್ತೆ ಕೆದಕಿದ್ದೇಕೆ ಸಿದ್ದು ಸೈನ್ಯ..? ದಂಡು ಕಟ್ಟಿದ ಶಾಸಕರಿಂದ ದೆಹಲಿ ದಂಡಯಾತ್ರೆ..!

Jun 26, 2024, 5:42 PM IST

ಕಾಂಗ್ರೆಸ್(Congress) ಪಾಳೆಯದಲ್ಲಿ ಮತ್ತೆ ಶುರುವಾಗಿದೆ ಅಂತರ್ಯುದ್ಧ. ಸಿಎಂ ಸಿದ್ದರಾಮಯ್ಯನವರ (Siddaramaiah) ಆಪ್ತ ಮಂತ್ರಿಗಳಿಂದ ಮತ್ತೊಮ್ಮೆ ಡಿಸಿಎಂ ದಂಗಲ್. ಸಿದ್ದು ಬಣದ ಮುಂಚೂಣಿಯ ದಂಡನಾಯಕನ ವಿರುದ್ಧ ಶಾಸಕರ ದೆಹಲಿ (Delhi) ಪರೇಡ್. ಕರ್ನಾಟಕದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಸರ್ಕಾರಕ್ಕೆ ಯಾರ ಭಯವೂ ಇಲ್ಲ.. ಬಿಜೆಪಿಯ (BJP) ಆಪರೇಷನ್ ಆತಂಕವೂ ಇಲ್ಲ, ಸರ್ಕಾರ ಉರುಳಿಸೋ ದಳಪತಿಯ ತಂತ್ರಗಾರಿಕೆಯ ಅಂಜಿಕೆಯೂ ಇಲ್ಲ. ಕಾರಣ, ಸರ್ಕಾರಕ್ಕಿರೋ ಶಾಸಕರ ಪ್ರಚಂಡ ಬಲ. ಇದು 136 ಕಾಂಗ್ರೆಸ್ ಶಾಸಕರ ಬಲದಿಂದ ಎದ್ದು ನಿಂತಿರೋ ಸರ್ಕಾರ. ಈ ಸರ್ಕಾರಕ್ಕೆ ಭಯ ಅಂತ ಏನಾದ್ರೂ ಇದೆ, ಅದು ಅಂತರ್ಯುದ್ಧದ ಭಯ, ದಾಯಾದಿ ಕಲಹದ ಭಯ. ಈಗ ಶುರುವಾಗಿರೋದು ಅಂಥದ್ದೇ ಒಂದು ಅಂತರ್ಯುದ್ಧ, ದಾಯಾದಿ ಕಲಹ. ಲೋಕಸಭಾ ಚುನಾವಣೆ ಮುಗೀತು, ಕದನ ವಿರಾಮವೂ ಮುಗೀತು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಅಂತರ್ಯುದ್ಧದ ಸಮಯ. ಇದು ಬೂದಿ ಮುಚ್ಚಿದ್ದ ಹಳೆಯ ಕೆಂಡದಿಂದ ಭುಗಿಲೆದ್ದು ಬಂದಿರೋ ಅಂತರ್ಯುದ್ಧ. ಇಲ್ಲಿ ಸಿಎಂ ಬಣ ಮತ್ತು ಡಿಸಿಎಂ ಬಣಗಳ ಮಧ್ಯೆ ತಿಕ್ಕಾಟ ಶುರುವಾಗಿದೆ. ಮತ್ತದೇ ಡಿಸಿಎಂ ದಂಗಲ್'ಗೆ ಕಿಚ್ಚು ಹೊತ್ತಿಸಿರೋ ಸಿಎಂ ಬಣದ ಸಚಿವರುಗಳು ಹೊಸ ಆಟ ಶುರು ಮಾಡಿದ್ದಾರೆ. ಅದಕ್ಕೆ ಟಕ್ಕರ್ ಎಂಬಂತೆ ಸೂಪರ್ ಸಿಎಂ ಅಸ್ತ್ರ ಹಿಡಿದು ನಿಂತಿದ್ದಾರೆ ಡಿಸಿಎಂ ಬಣದ ರಣಕಲಿಗಳು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಂ.2 ಅಂದ್ರೆ ಅದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar). ಉಪಮುಖ್ಯಮಂತ್ರಿ ಪಟ್ಟವನ್ನು ಪಟ್ಟು ಹಿಡಿದು ದಕ್ಕಿಸಿಕೊಂಡವರು ಡಿಕೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್'ಗೆ ಪ್ರಚಂಡ ಬಹುಮತ ಸಿಕ್ಕಾಗ ಸಿಎಂ ಸ್ಥಾನಕ್ಕೆ ಡಿಕೆಶಿ ಹಕ್ಕೊತ್ತಾಯ ಮಾಡಿದ್ದರು. ಆದ್ರೆ ಸಿದ್ದರಾಮಯ್ಯನವರನ್ನು ಪಕ್ಕಕ್ಕೆ ಸರಿಸಿ ಡಿಕೆ ಶಿವಕುಮಾರ್ ಅವ್ರಿಗೆ ಪಟ್ಟ ಕಟ್ಟುವ ಧೈರ್ಯ ಕಾಂಗ್ರೆಸ್ ಹೈಕಮಾಂಡ್'ಗೆ ಇರ್ಲಿಲ್ಲ. ಹೀಗಾಗಿ ಡಿಕೆಶಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ರು.

ಇದನ್ನೂ ವೀಕ್ಷಿಸಿ:  ಡೆವಿಲ್ ಗ್ಯಾಂಗ್‌ನ ಖೇಲ್ ಖತಂ..ಏನಿದರ ಒಳಮರ್ಮ..? ಆ ಆರೋಪಿಯ ಮೇಲಿದೆ ವಂಚನೆ ಕೇಸ್!