Bagalkot: ಬಾದಾಮಿಯಲ್ಲೊಂದು ಅಪರೂಪದ ದೈವಿ ಕಾರ್ಯ..!

Feb 5, 2022, 12:51 PM IST

ಬಾಗಲಕೋಟೆ(ಫೆ.05): ಕಳೆದ ಎರಡು ವರ್ಷದಿಂದ ಎಲ್ಲೆಡೆ ಕೊರೋನಾ ಮಹಾಮಾರಿ ಕಾಟ ಜೋರಾಗಿತ್ತು, ಇವುಗಳ ಮಧ್ಯೆ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿತ್ತು. ಈ ಸಮಯದಲ್ಲಿ ಯಾರೂ ಸಹ ಊರು ಬಿಟ್ಟು ಹೋಗೋ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಗ್ರಾಮದಲ್ಲಿ ಹಿರಿಯರು ಕುಳಿತು ಚರ್ಚೆ ಮಾಡಿ, ಊರ ಗುಡಿಗೆ ಜಾಗೆ ಮಾಡಲು ನಿರ್ಧರಿಸಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ನಡೆದಿತ್ತು. 

ದೇಗುಲ ಪಕ್ಕದಲ್ಲೇ ಇದ್ದ ನಾಲ್ಕೈದು ಮನೆಗಳೊಂದಿಗೆ ಮಾತುಕತೆ ನಡೆಸಿದ್ರು. ಹಿರಿಯರ ಮಾತಿನಂತೆ ನಾಲ್ಕೈದು ಕುಟುಂಬಗಳು ದೇವರ ಗುಡಿಗಾಗಿ ತಮ್ಮ ಜಾಗೆ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದರು. ಇದ್ರಿಂದ ಅವರಿಗೆ ಪರಿಹಾರ ನೀಡಿ ಬೇರೆಡೆ ಸ್ಥಳಾವಕಾಶ ಮಾಡಲು ನಿರ್ಧರಿಸಿದ್ರು. ಇಡೀ ಊರಿಗೆ ಊರೇ ಒಕ್ಕಟ್ಟಾಗಿ ಇದೇ ಸಮಯದಲ್ಲಿ ಊರಲ್ಲಿ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದರು. ದೇವರ ಕಾರ್ಯಕ್ಕೆ ಗ್ರಾಮಸ್ಥರೆಲ್ಲಾ ಸೇರಿಸಿದ್ದು ಬರೋಬ್ಬರಿ 1 ಕೋಟಿ ದೇಣಿಗೆ ಸಂಗ್ರಹಿಸಿದ್ದಾರೆ. ಈ ದೇಣಿಗೆ ಮೂಲಕ ಲಾಕ್‌ಡೌನ್‌ ಸಮಯದಲ್ಲಿ ದೇಗುಲ ಅಭಿವೃದ್ಧಿನ ಕಾರ್ಯಕ್ಕೆ ಮುಂದಾದೆವು ಅಂತಾರೆ ಗ್ರಾಮಸ್ಥರು.

Bidar: ಪ್ರತಿಷ್ಠಿತ ಆಸ್ಪತ್ರೆಗಳನ್ನೂ ಮೀರಿಸುತ್ತೇ ಇಲ್ಲಿನ ಸರಕಾರಿ ಆಯುರ್ವೇದ ಆಸ್ಪತ್ರೆ..!

ಇನ್ನು ಪ್ರತಿವರ್ಷ ಕಾರ್ತಿಕೋತ್ಸವ ವೇಳೆ ನಡೆಯೋ ಕಾಯಿಜಾತ್ರೆಗೆ ಹೊರ ರಾಜ್ಯವಲ್ಲದೆ ರಾಜ್ಯದ ಬೆಂಗಳೂರು, ಮೈಸೂರು, ಗುಲ್ಬರ್ಗಾ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ನೆಲೆಸಿದ್ದ ಭಕ್ತರೆಲ್ಲಾ ಆಗಮಿಸುತ್ತಿದ್ರು, ಆದ್ರೆ ಜಾಗ ಇಕ್ಕಟ್ಟಾಗಿರುತ್ತಿತ್ತು. ಇನ್ನು ಈ ದೇಣಿಗೆ ಸಂಗ್ರಹಿಸಿ ಅಂದುಕೊಂಡಂತೆ ಗುಡಿಯ ಪಕ್ಕದ ನಾಲ್ಕೈದು ಮನೆಗಳಿಗೆ ಪರಿಹಾರ ರೂಪದಲ್ಲಿ ಹಣ ನೀಡಲಾಯಿತು. ದೇಗುಲಕ್ಕೆ ಅಗತ್ಯವಾಗಿರೋದನ್ನ ಗ್ರಾಮಸ್ಥರಿಂದ ಕೂಡಿಸಿದ ದೇಣಿಗೆ ಹಣದಿಂದಲೇ ಖರ್ಚು ವೆಚ್ಚ ಮಾಡಲಾಯಿತು. ಯಾವ ಹಣವೂ ದುರಪಯೋಗವಾಗದಂತೆ ನೋಡಿಕೊಳ್ಳಲಾಯಿತು. ಇನ್ನು ದೇಗುಲದ ಅಭಿವೃದ್ದಿ ಕಾರ್ಯದಲ್ಲಿ ಗ್ರಾಮದ ಯುವಕರು ಸಹ ಸಾಥ್ ನೀಡಿದ್ರು ಅಲ್ಲದೆ ದೇಗುಲ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲು ಟಿಪ್ಪರ್, ಟ್ರ್ಯಾಕ್ಟರ್, ಬಂಡಿ ಹೀಗೆ ಎಲ್ಲವನ್ನೂ ಸಹ ಗ್ರಾಮಸ್ಥರು ತಮ್ಮ ಮನಸಾರೆ ನೀಡಿದ್ರು. ಹೀಗಾಗಿ ಇಂದು ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಈ ದೇವರ ಕಾರ್ಯ ನಡೆಸಲು ಅನುಕೂಲವಾಯ್ತು ಅಂತಾರೆ ಗ್ರಾಮದ ಹಿರಿಯರು.