ಹಲವು ವರ್ಣಗಳ ಸಮಾಗಮ ಗೋಕರ್ಣ

By Suvarna NewsFirst Published Feb 13, 2020, 6:03 PM IST
Highlights

ಹಿಪ್ಪೀಗಳ ಸ್ವರ್ಗವೆಂದೇ ಹೆಸರು ಪಡೆದಿದೆ ಗೋಕರ್ಣ. ಫೋಟೋಗ್ರಫಿಯಲ್ಲಿ ಆಸಕ್ತಿ ಇರುವ ಹಲವಾರು ಮಂದಿ ಹಾಗೂ ಪ್ರವಾಸಿಗರು ಇಲ್ಲಿಗೆ ಬರುವುದೇ ಬೊಹಾಮಿಯನ್ ಜೀವನಶೈಲಿ ಹೇಗಿರುತ್ತದೆ ನೋಡಿ, ಹಿಪ್ಪೀಗಳನ್ನು ಮಾತನಾಡಿಸಲು.

ಕರ್ನಾಟಕ- ಗೋವಾ ಬಾರ್ಡರ್‌ಗೆ ಹತ್ತಿರವಾಗಿ, ನ್ಯಾಷನಲ್ ಹೈವೇ 17ರ ಪಕ್ಕದಲ್ಲಿ ತಣ್ಣಗೆ ಮಲಗಿರುವಂಥ ಪಟ್ಟಣ ಗೋಕರ್ಣ. ಗೋವಾಗಿಂತ ಹೆಚ್ಚು ಶಾಂತಿಯುತವಾಗಿದೆ ಎಂದು ಹಿಪ್ಪೀಗಳು 70, 80ರ ದಶಕದಲ್ಲಿ ಇಲ್ಲಿ ಬರತೊಡಗಿದ ಮೇಲೆ ಇದ್ದಕ್ಕಿದ್ದಂತೆ ಗೋಕರ್ಣದ ಫೇಸ್‌ವ್ಯಾಲ್ಯೂ ಹೆಚ್ಚಿತು. ಅಲ್ಲಿಯವರೆಗೂ ಕೇವಲ ಮಹಾಬಲೇಶ್ವರ ದೇವಾಲಯದ ಕಾರಣಕ್ಕೆ ಹೆಸರಾಗಿದ್ದ ಗೋಕರ್ಣವನ್ನು ಜನರು ಪ್ರವಾಸಿ ತಾಣವಾಗಿ ನೋಡಲಾರಂಭಿಸಿದರು. ಟೂರಿಸ್ಟ್‌ಗಳು, ವಿದೇಶಿ ಹಿಪ್ಪೀಗಳ ಸಂಖ್ಯೆ ಹೆಚ್ಚಾದಂತೆಲ್ಲ ಓಂ ಬೀಚ್ ಹಾಗೂ ಕುಡ್ಲೆ ಬೀಚ್ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿ ಸ್ಥಾನ ಪಡೆಯಿತು. ಜೀವನದ ಏಕತಾನತೆ ಮುರಿದುಕೊಳ್ಳಲು, ರಿಲ್ಯಾಕ್ಸ್ ಮಾಡಲು ಗೋಕರ್ಣ ಒಂದು ಪರ್ಫೆಕ್ಟ್ ತಾಣ. ಎಲ್ಲ ಮನಸ್ಥಿತಿಯವರಿಗೂ ಗೋಕರ್ಣ ಒಂದಿಲ್ಲೊಂದು ರೀತಿಯಲ್ಲಿ ಸಮಾಧಾನ, ಸಂತೋಷ ನೀಡುತ್ತದೆ. ಮುಂದಿನ ಬಾರಿ ಗೋಕರ್ಣ ಟ್ರಿಪ್ ಯೋಜಿಸಿದಾಗ ಅಲ್ಲಿ ಏನೇನು ಮಾಡಬಹುದು ಗೊತ್ತಾ?

ಮಹಾಬಲೇಶ್ವರ ದೇವಾಲಯ
ಶತಶತಮಾನಗಳಿಂದಲೂ ಗೋಕರ್ಣಕ್ಕೆ ಹೆಸರು ತಂದುಕೊಟ್ಟಿರುವುದು ಇಲ್ಲಿನ ಮಹಾಬಲೇಶ್ವರ ದೇವಾಲಯ. ಮುಖ್ಯ ಬೀಚ್ ಹತ್ತಿರದಲ್ಲೇ ಇರುವ ಈ ದೇವಾಲಯಕ್ಕೆ ವರ್ಷವಿಡೀ ಭಕ್ತರ ಬರವಿಲ್ಲ. ಗಣಪತಿಯು ಉಪಾಯದಿಂದ ರಾವಣನ ಕೈಯಿಂದ ಆತ ವರವಾಗಿ ಪಡೆದ ಶಿವನ ಆತ್ಮಲಿಂಗವನ್ನು ಪಡೆದು ನೆಲಕ್ಕೆ ಬಿಟ್ಟ ಕತೆ ಗೊತ್ತೇ ಇದೆ. ಹಾಗೆ ನೆಲಕ್ಕಿಳಿದ ಲಿಂಗವನ್ನು ಮತ್ತೆ ಅಲ್ಲಿಂದ ಬೇರ್ಪಡಿಸಲಾಗದ ಕಾರಣಕ್ಕೆ ಈ ಲಿಂಗಕ್ಕೆ ಮಹಾಬಲ ಎಂಬ ಹೆಸರು ಬಂದಿದೆ. ಭಗವದ್ಗೀತಾ ಪುರಾಣದಲ್ಲಿ ಕೂಡಾ ಗೋಕರ್ಣವು ಗೋಕರ್ಣ ಹಾಗೂ ಧುಂಧಕರಿ ಎಂಬ ಸಹೋದರರ ತವರಾದ ವಿಷಯವಿದೆ. ಶಿವನ ಆತ್ಮಲಿಂಗ ಶಾಶ್ವತವಾಗಿ ನೆಲೆ ಕಂಡಿರುವ ಪ್ರದೇಶವಾದ್ದರಿಂದ ಹಿಂದೂ ಭಕ್ತರಿಗೆ ಇದು ಬಹಳ ಕಾರಣಿಕ ಸ್ಥಳವಾಗಿದೆ. 

ಸ್ಲೋ ಟ್ರಾವೆಲ್ ಮಾಡಿ, ಪ್ರವಾಸದ ಪ್ರತಿ ಕ್ಷಣವನ್ನು ಆನಂದಿಸಿ...

ಹಿಪ್ಪೀಗಳು ಹಾಗೂ ಹಾಲಕ್ಕಿಯವರು
ಹಿಪ್ಪೀಗಳ ಸ್ವರ್ಗವೆಂದೇ ಹೆಸರು ಪಡೆದಿದೆ ಗೋಕರ್ಣ. ಹಲವಾರು ಫೋಟೋಗ್ರಫಿಯಲ್ಲಿ ಆಸಕ್ತಿ ಇರುವವರು ಹಾಗೂ ಪ್ರವಾಸಿಗರು ಇಲ್ಲಿಗೆ ಬರುವುದೇ ಬೊಹಾಮಿಯನ್ ಜೀವನಶೈಲಿ ಹೇಗಿರುತ್ತದೆ ನೋಡಿ, ಹಿಪ್ಪೀಗಳನ್ನು ಮಾತನಾಡಿಸಲು. ಓಂ ಆಕಾರದಲ್ಲಿರುವ ಓಂ ಬೀಚ್ ಹಿಪ್ಪಿಗಳಿಗೆ ಇಲ್ಲಿ ಬರಲು ಮತ್ತೊಂದು ಕಾರಣವಾಗಿದೆ. ಅವರನ್ನು ಮಾತನಾಡಿಸಿದರೆ ಆಸಕ್ತಿಕರ ವಿಷಯಗಳು ಸಿಗುತ್ತವೆ. ಇಷ್ಟೇ ಅಲ್ಲದೆ ಹಲವಾರು ದಶಕಗಳಿಂದಲೂ ಗೋಕರ್ಣದಲ್ಲಿ ಹಾಲಕ್ಕಿ ಜನಾಂಗ ವಾಸಿಸುತ್ತಿದ್ದು, ಹೆಚ್ಚೇನು ಬದಲಾಗದ ಅವರ ಜೀವನಶೈಲಿ ಕೂಡಾ ಕುತೂಹಲದಿಂದ ನೋಡಿಸಿಕೊಳ್ಳುತ್ತದೆ. ಗೋಕರ್ಣದ ಎಲ್ಲೆಡೆಯೂ ಕಾಣಸಿಗುವ ಹಾಲಕ್ಕಿಯವರನ್ನು ಕೂಡಾ ಮಾತನಾಡಿಸಲು ಮರೆಯದಿರಿ.

ಕ್ಯಟಮರಾನ್ ರೈಡ್
ನೋಡಿದಷ್ಟೂ ಮುಗಿಯದ ನೀಲ ಸಮುದ್ರ ಎಷ್ಟು ಹೊತ್ತು ನೋಡಿದರೂ ಕಣ್ಣಿಗೆ ಹಬ್ಬವೇ. ಇನ್ನು ಅದರೊಳಗೆ ಕ್ಯಾಟಮೆರಾನ್ ರೈಡ್ ಹೋಗುತ್ತ, ಆಗಾಗ ಚಿಮ್ಮುವ ನೀರಿನಿಂದ ರಿಫ್ರೆಶ್ ಆಗುವ ಸುಖ ಅನುಭವಿಸಿಯೇ ತೀರಬೇಕು. ಗೋಕರ್ಣದ ಮೀನುಗಾರರು ಪ್ರವಾಸಿಗರನ್ನು ಕ್ಯಾಟಮೆರಾನ್ ರೈಡ್ ಕರೆದುಕೊಂಡು ಹೋಗಲು ಉತ್ಸುಕರಾಗಿ ಕಾಯುತ್ತಿರುತ್ತಾರೆ. ಬೋಟ್ ರೈಡ್‌ಗಿಂತ ಇದು ಬಹಳ ವಿಭಿನ್ನವಾದುದು. 



ಬೀಚ್ ಟ್ರೆಕ್
ಗೋಕರ್ಣವನ್ನು ಸರಿಯಾಗಿ ನೋಡಬೇಕೆಂದರೆ ಚಾರಣ ಮಾಡಬೇಕು. ಇಲ್ಲಿನ ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್ ಹಾಗೂ ಪ್ಯಾರಡೈಸ್ ಬೀಚ್‌ಗಳ ನಡುವೆ ಕೆಲವಕ್ಕೆ ಚಾರಣ ಮಾಡಿದರೆ ಮತ್ತೆ ಕೆಲವಕ್ಕೆ ಬೋಟ್ ರೈಡ್‌ನ ಮೂಲಕವಷ್ಟೇ ಹೋಗಬೇಕು. ಒಂದು ಬದಿ ಬೀಚ್, ಮತ್ತೊಂದು ಬದಿ ಹಸಿರಿನಿಂದ ಕಂಗೊಳಿಸುವ ಈ ಹಾದಿಯ ಟ್ರೆಕ್ಕಿಂಗ್ ಮರೆಯುವಂಥದ್ದಲ್ಲ.

ಯಾಣ 
ಇಲ್ಲಿನ ಬೀಚ್‌ಗಳನ್ನು ಮನದಣಿವವರೆಗೆ ನೋಡಿದ ಮೇಲೆ ಸ್ವಲ್ಪ ಬದಲಾವಣೆ ಬೇಕೆನಿಸುವುದು ಸಹಜ. ಆಗ ಇಲ್ಲಿಂದ 1 ಗಂಟೆ ದೂರದಲ್ಲಿರುವ ಯಾಣದತ್ತ ಮುಖ ಮಾಡಿ. ವಿಶಿಷ್ಠವಾದ ಕಲ್ಲುಗಳ ರಚನೆಗೆ ಹೆಸರಾದ ಯಾಣ, ಪಶ್ಚಿಮಘಟ್ಟದ ಕಾಡಿನ ನಡುವೆ ನಿಂತು ಕೈಬೀಸಿ ಕರೆಯುತ್ತದೆ. ಭೈರವೇಶ್ವರ ಹಾಗೂ ಮೋಹಿನಿ ಶಿಖರಗಳೆಂಬ ಹೆಸರಿನಿಂದ ಬೃಹತ್ ಎತ್ತರಕ್ಕೆ ನಿಂತ ಅವಳಿ ಕಲ್ಲುಗಳತ್ತ ಕಾಡಿನಲ್ಲಿ ಸ್ವಲ್ಪ ದೂರ ಚಾರಣ ಮಾಡುವ ಅವಕಾಶವೂ ಇದೆ. ಈ ಕಲ್ಲುಗಳ ನಡುವೆ ಗುಹೆ ಇದ್ದು, ಅಲ್ಲಿ ಹಲವಾರು ದೇವರ ಕಲ್ಲುಗಳನ್ನಿಡಲಾಗಿದೆ. ಈ ಗುಹೆಯಿಂದ ನೀರು ಹರಿದುಬಂದು ಅಘನಾಶಿನಿ ನದಿಯನ್ನು ಸೇರುತ್ತದೆ. 

click me!