ಪ್ರವೀಣ್‌ ನೆಟ್ಟಾರು ಹತ್ಯೆ ಬಗ್ಗೆ ಎನ್‌ಐಎ ಪ್ರಾಥಮಿಕ ತನಿಖೆ

By Govindaraj SFirst Published Aug 1, 2022, 3:45 AM IST
Highlights

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ. ಇಬ್ಬರು ಅಧಿಕಾರಿಗಳನ್ನು ಒಳಗೊಂಡ ತಂಡ ಶನಿವಾರ ಮಂಗಳೂರಿಗೆ ಆಗಮಿಸಿದ್ದು, ಭಾನುವಾರ ಪುತ್ತೂರು, ಬೆಳ್ಳಾರೆ ಮತ್ತಿತರ ಕಡೆಗಳಿಗೆ ತೆರಳಿ ಹತ್ಯೆ ಘಟನೆಗೆ ಸಂಬಂಧಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. 

ಮಂಗಳೂರು (ಆ.01): ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ. ಇಬ್ಬರು ಅಧಿಕಾರಿಗಳನ್ನು ಒಳಗೊಂಡ ತಂಡ ಶನಿವಾರ ಮಂಗಳೂರಿಗೆ ಆಗಮಿಸಿದ್ದು, ಭಾನುವಾರ ಪುತ್ತೂರು, ಬೆಳ್ಳಾರೆ ಮತ್ತಿತರ ಕಡೆಗಳಿಗೆ ತೆರಳಿ ಹತ್ಯೆ ಘಟನೆಗೆ ಸಂಬಂಧಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. ಪ್ರವೀಣ್‌ ಹತ್ಯೆ ಘಟನೆಗೆ ಕೇರಳದ ಸಂಘಟನೆಗಳ ಸಂಪರ್ಕ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎನ್‌ಐಎ ತನಿಖೆಗೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. 

ಈ ಹಿನ್ನೆಲೆಯಲ್ಲಿ ಶಿಫಾರಸು ಮಾಡಿದ ಎರಡೇ ದಿನದಲ್ಲಿ ತನಿಖಾ ತಂಡ ಆಗಮಿಸಿ, ಪ್ರಾಥಮಿಕ ತನಿಖೆ ಶುರು ಮಾಡಿದೆ. ತನಿಖಾ ತಂಡ ಪ್ರವೀಣ್‌ ಹತ್ಯೆಯಾದ ಸ್ಥಳ, ಆತನ ಅಂಗಡಿ ವ್ಯವಹಾರ, ಸ್ನೇಹಿತರ ಸಂಪರ್ಕ, ಹಿಂದು- ಮುಸ್ಲಿಂ ಸಂಘಟನೆಗಳು ಹಾಗೂ ಆತನ ಕುಟುಂಬದ ಜತೆ ಮಾತನಾಡಿ ವಿವರವಾದ ಮಾಹಿತಿ ಸಂಗ್ರಹಿಸಲಿದೆ. ಅಲ್ಲದೆ ಪೊಲೀಸ್‌ ತನಿಖಾ ತಂಡದ ಜತೆ ಮಾತನಾಡಲಿದ್ದು, ಬಂಧಿತ ಆರೋಪಿಗಳನ್ನೂ ವಿಚಾರಣೆಗೆ ಒಳಪಡಿಸಲಿದೆ. ಈ ಎಲ್ಲ ಪ್ರಾಥಮಿಕ ಮಾಹಿತಿ ಸಂಗ್ರಹ ಪ್ರಕ್ರಿಯೆ ಮುಕ್ತಾಯಗೊಳಿಸಿದ ಬಳಿಕವೇ ಕ್ರಮ ಕೈಗೊಳ್ಳಲಿದೆ.

ಪ್ರವೀಣ್‌ ನೆಟ್ಟಾರ್‌ ಹತ್ಯೆಗೆ 2 ತಿಂಗಳಿಂದಲೇ ಸ್ಕೆಚ್‌!

ಸಾಮಾನ್ಯವಾಗಿ ದೇಶದ ಹಿತಾಸಕ್ತಿಗೆ ಧಕ್ಕೆ ತರುವಂತಹ, ಉಗ್ರವಾದ ಕೃತ್ಯಗಳಲ್ಲಿ ಎನ್‌ಐಎ ತನಿಖೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ದುಷ್ಕರ್ಮಿಗಳಿಂದ ನಡೆದ ಹತ್ಯೆ ಘಟನೆಯಾದರೂ ಕೇರಳದ ನಿಷೇಧಿತ ಅಥವಾ ಸಮಾಜದ್ರೋಹಿ ಸಂಘಟನೆಗಳ ಪಾತ್ರದ ಬಗ್ಗೆ ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.

ಕೇರಳದಲ್ಲೇ ಶಂಕಿತ ಆರೋಪಿ ವಿಚಾರಣೆ: ಪ್ರವೀಣ್‌ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಶಂಕಿತ ಆರೋಪಿ ಕೇರಳದ ತಲಶ್ಶೇರಿ ನಿವಾಸಿ ಅಬೀದ್‌ನನ್ನು ಶನಿವಾರ ವಿಶೇಷ ತಂಡ ವಶಕ್ಕೆ ತೆಗೆದುಕೊಂಡರೂ ಇನ್ನೂ ಆತನನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಕರೆತಂದಿಲ್ಲ. ಈ ಘಟನೆಯಲ್ಲಿ ಅಬೀದ್‌ನ ಪಾತ್ರದ ಬಗ್ಗೆ ಮತ್ತಷ್ಟುಮಾಹಿತಿ ಸಂಗ್ರಹಕ್ಕೆ ಪೊಲೀಸ್‌ ತಂಡ ಮುಂದಾಗಿರುವ ಹಿನ್ನೆಲೆಯಲ್ಲಿ ಆತನನ್ನು ಕೇರಳ ಪೊಲೀಸರ ಸಹಕಾರದಲ್ಲಿ ಅಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಹತ್ಯೆ ಘಟನೆಗೆ ಸಂಬಂಧಿಸಿ ಈಗಾಗಲೇ ಸವಣೂರಿನ ಝಾಕೀರ್‌ ಮತ್ತು ಬೆಳ್ಳಾರೆಯ ಶಫೀಕ್‌ ಎಂಬಿಬ್ಬರನ್ನು ಪೊಲೀಸ್‌ ತಂಡ ಬಂಧಿಸಿದ್ದು, ಬಂಧಿತರಿಗೆ ಶನಿವಾರ ಐದು ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ. ಜಿಲ್ಲಾ ಎಸ್ಪಿ ಋುಷಿಕೇಷ್‌ ಸೋನೆವಾಣೆ ನೇತೃತ್ವದಲ್ಲಿ ಹಂತಕರ ಪತ್ತೆ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಆರು ತಂಡಗಳನ್ನು ರಚಿಸಲಾಗಿದ್ದು, ಪ್ರಮುಖ ಆರೋಪಿಗಳಿಗೆ ಬಲೆ ಬೀಸಲಾಗಿದೆ.

ಕಾರ್ಕಳ ಯುವ ಕಾಂಗ್ರೆಸ್‌ ಖಂಡನೆ: ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು, ಸಂಘಟನಾ ಕಾರ್ಯದರ್ಶಿಗಳು , ಕ್ಷೇತ್ರ ಗೆಜ್ಜೆಗಿರಿಯ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರವೀಣ್‌ ನೆಟ್ಟಾರು ಅಗಲುವಿಕೆ ತೀರಾ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದವರಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಕಾರ್ಕಳ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಯೋಗೀಶ್‌ ಆಚಾರ್ಯ ಇನ್ನಾ ಹೇಳಿದ್ದಾರೆ.

ಪ್ರವೀಣ್‌ ಹತ್ಯೆ ಬಳಿಕ 2 ದಿನ ನನಗೆ ಊಟ ಸೇರಲಿಲ್ಲ: ಗೃಹ ಸಚಿವ ಆರಗ

ಕೊಲೆಗಡುಕರನ್ನ ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು, ಕೊಲೆ ಸಮರ್ಥನಿಯವೂ ಅಲ್ಲ, ಅನುಕರಣೀಯವೂ ಅಲ್ಲ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್‌ ಕುಮಾರು ತರಾತುರಿಯಿಂದ ಕಾರು ಹತ್ತಿ ಒಂದು ರೀತಿ ಪಲಾಯನಗೈದಂತೆ ಹೋಗುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿಯಾಗಿ ಆಕ್ರೋಶಿತ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ವಾತಾವರಣ ತಿಳಿಗೊಳಿಸುವ ಜವಾಬ್ದಾರಿಯುತ ನಡೆಯನ್ನು ಸುನೀಲ್‌ ಅವರು ತೋರಬೇಕಿತ್ತು ಎಂದು ಅವರು ಹೇಳಿದರು.

click me!